Stray Dogs: ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೀದಿನಾಯಿಗಳ ದಾಳಿ; ಮುಂದೇನಾಯ್ತು?
ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಳು ಬೀದಿನಾಯಿಗಳ ಗುಂಪು ಏಕಾಏಕಿ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಆಘಾತಕಾರಿ ಘಟನೆಯ ದೃಶ್ಯ ಸೆರೆಯಾಗಿದೆ. ಸದ್ಯ ಈ ವಿಡಿಯೊ ಹಲವರನ್ನು ಬೆಚ್ಚಿ ಬೀಳಿಸಿದೆ.


ಮುಂಬೈ: ಮುಂಜಾನೆ ವೇಳೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಳು ಬೀದಿನಾಯಿಗಳ (Stray Dogs) ಗುಂಪು ಏಕಾಏಕಿ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ಪಿಂಪ್ರಿ ಚಿಂಚ್ವಾಡ್ನಲ್ಲಿ ನಡೆದಿದೆ. ಅದೃಷ್ಟವಶಾತ್ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಬೆಳಗ್ಗೆ 5 ಗಂಟೆ ಸುಮಾರಿಗೆ ಆ ವ್ಯಕ್ತಿ ಕೆಲಸಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಸುಮಾರು ಮೂರು ನಿಮಿಷಗಳ ಈ ವಿಡಿಯೊದಲ್ಲಿ, ಆ ವ್ಯಕ್ತಿ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಬಂದಿದೆ. ಆಗ ಏಳು ಬೀದಿ ನಾಯಿಗಳು ಅವನ ಕಡೆಗೆ ಓಡಿ ಬಂದು ಏಕಾಏಕಿ ದಾಳಿ ಮಾಡಿವೆ. ಶ್ವಾನಗಳು ಅವನನ್ನು ಕಚ್ಚಲು ಪ್ರಯತ್ನಿಸುತ್ತಿರುವುದು ಕೂಡ ಸೆರೆಯಾಗಿದೆ. ನಂತರ ಆ ವ್ಯಕ್ತಿ ಹಾರಿ ಒಂದು ಬೈಕಿನ ಹಿಂದೆ ನಿಂತಿದ್ದಾನೆ. ನಾಯಿಗಳು ಅವನ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದಾಗ, ಬೈಕ್ ಅನ್ನು ಅವುಗಳ ಕಡೆಗೆ ತಳ್ಳಿದ್ದಾನೆ.
ಆದರೂ ಆತನ ಮೇಲೆ ದಾಳಿ ಮಾಡಲು ಬೀದಿನಾಯಿಗಳು ಪ್ರಯತ್ನಿಸಿವೆ. ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಮರದ ಹಲಗೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಹತ್ತಿರದಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಮನೆಗಳಿಂದ ಹೊರಬಂದು ನಾಯಿಗಳನ್ನು ಓಡಿಸುವಲ್ಲಿ ಯಶಸ್ವಿಯಾದರು. ಆಗ ನಾಯಿಗಳು ಓಡಿಹೋದವು. ಶ್ವಾನಗಳ ದಾಳಿಯಲ್ಲಿ ಆ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
On Camera, 7 Stray Dogs Attack Maharashtra Man. Then A Dramatic Escapehttps://t.co/uTumzAiMQS pic.twitter.com/p8JCGFzXcj
— NDTV (@ndtv) August 23, 2025
ಘಟನೆಯ ನಂತರ, ಸ್ಥಳೀಯರು ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ನಗರಸಭೆಯನ್ನು ಒತ್ತಾಯಿಸಿದರು. ಬೀದಿ ನಾಯಿ ಕಡಿತದಿಂದ ರೇಬೀಸ್ ಸಾವು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ಕಂದು ಬಂದಿದೆ.
ಕಳೆದ ವಾರ ಸುಪ್ರೀಂ ಕೋರ್ಟ್ ದೆಹಲಿ-ಎನ್ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿನ ಎಲ್ಲ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ತೀರ್ಪು ನೀಡಿತ್ತು. ಇದು ಪ್ರಾಣಿಹಕ್ಕು ಹೋರಾಟಗಾರರನ್ನು ಕೆರಳಿಸಿತ್ತು. ದೆಹಲಿಯಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಿ, ಶ್ವಾನಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸದಂತೆ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ತಿದ್ದುಪಡಿ ಮಾಡಿ, ಚುಚ್ಚುಮದ್ದು ಮತ್ತು ರೋಗ ನಿರೋಧಕ ಶಕ್ತಿ ನೀಡಿದ ನಂತರ ಶ್ವಾನಗಳನ್ನು ಅದೇ ಪ್ರದೇಶಕ್ಕೆ ಮತ್ತೆ ಬಿಡಬೇಕೆಂದು ನಿರ್ದೇಶಿಸಿತು. ಆದರೆ ರೇಬೀಸ್ ಸೋಂಕಿತ ಅಥವಾ ರೇಬೀಸ್ ಸೋಂಕಿಗೆ ಒಳಗಾದ ಶಂಕಿತ ನಾಯಿಗಳು ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳಿಗೆ ಸ್ಥಳಾಂತರವು ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ತ್ರಿಸದಸ್ಯ ಪೀಠವು ಸ್ಪಷ್ಟಪಡಿಸಿತು.
ಇದನ್ನೂ ಓದಿ: Viral Video: ಭಾರತ ಕೊಳೆಗೇರಿ, ಕಸದ ರಾಶಿಗಳಿರುವ ದೇಶವಲ್ಲ; ಇಂಡಿಯಾ ಸುಂದರವಾಗಿದೆ ಎಂದ ವಿದೇಶಿ ವ್ಲಾಗರ್