Viral News: ಮಾಂಸಾಹಾರಿಗಳಿಗೆ ಮನೆ ಬಾಡಿಗೆ ಇಲ್ಲವೆಂದ ಮಾಲೀಕ; ಮತ್ತೊಮ್ಮೆ ಮುನ್ನೆಲೆಗೆ ಬಂತು ಆಹಾರ ಆಯ್ಕೆ ಕುರಿತಾದ ಚರ್ಚೆ
ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬವರು ಮನೆ ಮಾಲೀಕರೊಬ್ಬರು ಮಾಂಸಾಹಾರಿಗಳಿಗೆ ಮನೆ ಕೊಡುವುದಿಲ್ಲ ಎಂದು ಕಳುಹಿಸಿದ ಸಂದೇಶದ ಸ್ಕ್ರೀನ್ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಹರಿದಾಡುತ್ತಿದ್ದು, ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಚೆನ್ನೈ: ಮೆಟ್ರೋ ನಗರಗಳಲ್ಲಿ ಬಾಡಿಗೆಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ದುಬಾರಿ ಬಾಡಿಗೆ, ಮನೆ ಮಾಲೀಕರ ಅಸಮಂಜಸ ಬೇಡಿಕೆಗಳು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮನೆ ಮಾಲೀಕ ಕಳುಹಿಸಿದ ಮೆಸೇಜ್ನ ಸ್ಕ್ರೀನ್ ಶಾಟ್ವೊಂದು ವೈರಲ್ (Viral News) ಆಗಿದೆ. ವೈರಲ್ ಆದ ಪೋಸ್ಟ್ನಲ್ಲಿ, ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬಾತ ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾನೆ. ಅದರಲ್ಲಿ, "ಕ್ಷಮಿಸಿ ಸರ್. ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಮನೆ ಬಾಡಿಗೆ ನೀಡುತ್ತೇವೆ” ಎಂದು ಬರೆದಿತ್ತು.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಆಹಾರ ಆಧಾರಿತ ತಾರತಮ್ಯದ ಬಗ್ಗೆ ಅನೇಕರು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. "ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವವರೂ ಇದ್ದಾರೆ. ಉದಾಹರಣೆಗೆ, ನೀವು ಮುಸ್ಲಿಮರಾಗಿದ್ದರೆ, ಅವರು ಹೀಗೆ ಹೇಳುತ್ತಾರೆ: ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ" ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
Eating non veg is injurious to finding flats for rent in Chennai . pic.twitter.com/MyWWYuJ0vB
— Prashanth Rangaswamy (@itisprashanth) June 26, 2025
ಇನ್ನು ಕೆಲವರು ಮನೆ ಮಾಲೀಕರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮನೆ ಮಾಲೀಕರು ತಮ್ಮ ಪ್ರಾಪರ್ಟಿಯಲ್ಲಿ ಯಾರು ವಾಸಿಸುತ್ತಾರೆ ಎಂಬುದರ ಕುರಿತು ನಿಯಮಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ವಾದಿಸಿದ್ದಾರೆ. ಒಬ್ಬರು, "ಅವರ ಮನೆ, ಅವರ ನಿಯಮಗಳು. ನಿಮ್ಮ ಸ್ವಂತ ಮನೆಯನ್ನು ಖರೀದಿಸಿ ಮತ್ತು ನೀವು ಬಯಸುವವರಿಗೆ ಅದನ್ನು ಬಾಡಿಗೆಗೆ ನೀಡಿ" ಎಂದಿದ್ದಾರೆ.
"ಮಾಂಸದ ವಾಸನೆಯು ಅಸಹ್ಯ ಹುಟ್ಟಿಸುತ್ತದೆ ಎಂದು ನನ್ನ ಸಸ್ಯಾಹಾರಿ ಸ್ನೇಹಿತರು ಹೇಳುತ್ತಾರೆ. ಹಾಗಾಗಿ ಅದು ನಿಜವಾಗಿಯೂ ಅವರ ಮೇಲೆ ಪರಿಣಾಮ ಬೀರಿದರೆ, ಕುರಿಮಾಂಸ ಮತ್ತು ಗೋಮಾಂಸ ಬೇಯಿಸಿ ತಿನ್ನುವವರ ಪಕ್ಕದಲ್ಲಿ ಇರಲು ಹೇಳುವುದು ಸರಿಯಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಭೂಕಂಪದಿಂದ ಎಲ್ಲರೂ ಮನೆಬಿಟ್ಟು ಓಡುತ್ತಿದ್ದರೆ, ಈ ಹುಡುಗ ಮಾತ್ರ ತಿನ್ನುವುದರಲ್ಲಿ ಬ್ಯುಸಿ!
"ನೀವು ಕೂಡ ನಿಮ್ಮ ಸ್ವಂತ ಮನೆಯನ್ನು ಪಡೆದುಕೊಂಡಾಗ ಅರ್ಥ ಮಾಡಿಕೊಳ್ಳುವಿರಿ. ಆದರೆ ಆಹಾರದ ಆಧಾರದ ಮೇಲೆ ಮನೆ ಬಾಡಿಗೆಗೆ ನೀಡದಿರುವುದು ಮತ್ತು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮನೆ ಬಾಡಿಗೆಗೆ ನೀಡದಿರುವುದನ್ನು ಒಂದೇ ರೀತಿ ನೋಡಲಾಗುವುದಿಲ್ಲ ಮತ್ತು ಅದನ್ನು ಸಮರ್ಥಿಸಬಾರದು” ಎಂದು ಇನ್ನೊಬ್ಬರು ಹೇಳಿದ್ದಾರೆ.