Viral Video: ದಂಗೆ ಏಳುವಂತೆ ನೇಪಾಳದ ಯುವ ಜನತೆಗೆ ಕರೆ ನೀಡಿದ ವಿದ್ಯಾರ್ಥಿಯ ಹಳೆ ವಿಡಿಯೊ ಮತ್ತೆ ಮುನ್ನೆಲೆಗೆ
ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಇದೀಗ ಶಾಲಾ ಮುಖ್ಯೋಪಾಧ್ಯಾಯನ ಹಳೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ಮುಖ್ಯೋಪಾಧ್ಯಾಯ, ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದಂಗೆ ಏಳುವಂತೆ ಯುವಕರಿಗೆ ಕರೆ ನೀಡಿದ್ದಾನೆ.

-

ಕಠ್ಮಂಡು: ನಿರುದ್ಯೋಗದ ಸರಪಳಿಗಳಿಂದ ಬಂಧಿಸಲ್ಪಟ್ಟಿದ್ದೇವೆ, ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದಂಗೆ ಏಳಬೇಕು ಎಂದು ನೇಪಾಳದಲ್ಲಿ ವಿದ್ಯಾರ್ಥಿಯೊಬ್ಬ (Viral Speech) ಹೇಳಿರುವ ಹಳೆಯ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ನೇಪಾಳದಲ್ಲಿ (Neapal) ನಡೆಯುತ್ತಿರುವ ಪ್ರತಿಭಟನೆಯ ನಡುವೆ ಈ ವಿಡಿಯೊ ಈಗ ಭಾರಿ ಸದ್ದು ಮಾಡುತ್ತಿದೆ. ಶಾಲಾ ವಾರ್ಷಿಕ ಸಮಾರಂಭದ ಈ ವಿಡಿಯೊದಲ್ಲಿ ಹೋಲಿ ಬೆಲ್ ಇಂಗ್ಲಿಷ್ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಬಿಸ್ಕರ್ ರಾವುತ್ ಕೂಡ ಇದ್ದು, ಅವರು ಹೊಸ ನೇಪಾಳವನ್ನು ನಿರ್ಮಿಸುವ ಕನಸನ್ನು ರಾವುತ್ ಹಂಚಿಕೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ನೇಪಾಳದಲ್ಲಿ ರಾಜಕೀಯ ಅಶಾಂತಿ ಉಂಟಾಗಿದೆ. ಜೆನ್ ಝಿ ಪ್ರತಿಭಟನಾಕಾರರು ವಿವಿಧ ಬೇಡಿಕೆಯನ್ನು ಇರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ಪ್ರತಿಭಟನಾಕಾರರು, ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ರಾಜಿನಾಮೆಗೆ ಒತ್ತಾಯಿಸಿದರು. ಇದು ನೇಪಾಳವನ್ನು ಮಂಡಿಯೂರುವಂತೆ ಮಾಡಿತು.
ವೈರಲ್ ವಿಡಿಯೊ ಇಲ್ಲಿದೆ:
THROWBACK: Nepalese Student Abiskar Raut SLAMS Corruption & Political Leadership In Fiery Viral Speech [March 2025]#Nepal #Kathmandu #KPSharmaOli pic.twitter.com/fGxWUX2d7u
— RT_India (@RT_India_news) September 9, 2025
ಈ ನಡುವೆಯೇ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದಂಗೆ ಏಳುವಂತೆ ಯುವಕರಿಗೆ ಕರೆ ನೀಡುವ ಶಾಲಾ ಬಾಲಕನ ಹಳೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಂದು ನಾನು ಇಲ್ಲಿ ನಿಂತಿದ್ದೇನೆ, ಹೊಸ ನೇಪಾಳವನ್ನು ನಿರ್ಮಿಸುವ ಕನಸಿನೊಂದಿಗೆ, ನನ್ನೊಳಗೆ ಭರವಸೆ ಮತ್ತು ಉತ್ಸಾಹದ ಬೆಂಕಿಯೊಂದಿಗೆ ಉರಿಯುತ್ತಿದ್ದೇನೆ. ಆದರೆ ಈ ಕನಸು ಜಾರಿಹೋಗುತ್ತಿರುವಂತೆ ಕಾಣುತ್ತಿರುವುದರಿಂದ ನನ್ನ ಹೃದಯ ಭಾರವಾಗಿದೆ. ಈ ಮುಂಬರುವ ಸಾಮ್ರಾಜ್ಯಶಾಹಿ ಸಾಮ್ರಾಜ್ಯದ ಭವಿಷ್ಯವೇ, ಎದ್ದೇಳಿ ಮತ್ತು ಬೆಳಗಿರಿ ಎಂದು ಅಬಿಸ್ಕರ್ ರಾವುತ್ ಹೇಳಿದರು.
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಇತಿಹಾಸದ ಹಾದಿಯಲ್ಲಿ ಒಂದು ಮಹತ್ವದ ಬದಲಾವಣೆಯನ್ನು ಅಮರಗೊಳಿಸಲು ನಾನು ಇಂದು ಇಲ್ಲಿ ಹಾಜರಿದ್ದೇನೆ. ನೇಪಾಳ ನಮ್ಮ ತಾಯಿ. ಈ ದೇಶ ನಮಗೆ ಜನ್ಮ ನೀಡಿತು, ನಮ್ಮನ್ನು ಪೋಷಿಸಿತು. ಆದರೆ ಅದು ಪ್ರತಿಯಾಗಿ ಏನು ಕೇಳಿತು? ನಮ್ಮ ಪ್ರಾಮಾಣಿಕತೆ, ನಮ್ಮ ಕಠಿಣ ಪರಿಶ್ರಮ, ನಮ್ಮ ಕೊಡುಗೆ. ಆದರೆ ನಾವು ಏನು ಮಾಡುತ್ತಿದ್ದೇವೆ? ನಾವು ನಿರುದ್ಯೋಗದ ಸರಪಳಿಗಳಿಂದ ಬಂಧಿತರಾಗಿದ್ದೇವೆ, ಅವಕಾಶಗಳ ವಿಶಾಲ ಮೂಲವನ್ನು ನೋಡುತ್ತಿದ್ದೇವೆ. ರಾಜಕೀಯ ಪಕ್ಷಗಳ ಸ್ವಾರ್ಥ ಆಟಗಳಿಂದ ನಾವು ಸಿಕ್ಕಿಬಿದ್ದಿದ್ದೇವೆ. ನಮ್ಮ ಭವಿಷ್ಯದ ಬೆಳಕನ್ನು ನಂದಿಸುತ್ತಿರುವ ಜಾಲದಲ್ಲಿ ಭ್ರಷ್ಟಾಚಾರ ಬೆಳೆದಿದೆ ಎಂದು ಹೇಳಿದ್ದಾರೆ.
ನಮಗೆ ಈ ರಾಷ್ಟ್ರವನ್ನು ನೀಡಲು ತಮ್ಮ ರಕ್ತವನ್ನು ಹರಿಸಿದ ಪೂರ್ವಜರನ್ನು ನೆನಪಿಸಿಕೊಂಡ ರಾವತ್, ನಾವು ಅದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ನಾವು ಬೆಂಕಿ; ನಾವು ಪ್ರತಿಯೊಂದು ಹತಾಶೆಯನ್ನು ಸುಟ್ಟುಹಾಕುತ್ತೇವೆ ಎಂದು ತಿಳಿಸಿದರು.
ನೇಪಾಳ ನಮ್ಮದು, ಮತ್ತು ಅದರ ಭವಿಷ್ಯ ನಮ್ಮ ಕೈಯಲ್ಲಿದೆ. ಜೈ ಯುಗ! ಜೈ ನೇಪಾಳ!" ಎಂದು ತಮ್ಮ ಮಾತುಗಳನ್ನು ಕೊನೆಗೊಳಿಸಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.
ನೇಪಾಳದಲ್ಲಿ ಪ್ರತಿಭಟನೆಗಳು
ಫೇಸ್ಬುಕ್ ಮತ್ತು ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳ ಮೇಲಿನ ನಿಷೇಧವನ್ನು ವಿರೋಧಿಸಿ ಜೆನ್ ಝಿ ತಲೆಮಾರು ನೇಪಾಳದ ಬೀದಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು. ಪ್ರತಿಭಟನಾಕಾರರು ಪ್ರಧಾನಿ ಒಲಿ ಅವರ ಖಾಸಗಿ ನಿವಾಸ ಹಾಗೂ ದಲ್ಲುವಿನಲ್ಲಿರುವ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ನಿವಾಸಕ್ಕೂ ಬೆಂಕಿ ಹಚ್ಚಿದರು. ಸದ್ಯ ನೇಪಾಳ ಸೇನೆಯು ಕಠ್ಮಂಡು ವಿಮಾನ ನಿಲ್ದಾಣ ಮತ್ತು ಸಚಿವಾಲಯ ಕಟ್ಟಡವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ ಮತ್ತು ವಿಮಾನಗಳನ್ನು ಸ್ಥಗಿತಗೊಳಿಸಿದ್ದರಿಂದ ಅನೇಕ ಭಾರತೀಯ ಕೈಲಾಸ ಮಾನಸ ಸರೋವರ ಯಾತ್ರಿಕರು ಮತ್ತು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.ಕನಿಷ್ಠ 19 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ಶಾಂತಗೊಂಡಿದೆ.