Shashidhara Halady Column: ಆಷಾಢದ ಗಾಳಿಯ ನಡುವೆ ನಲುಗುವ ಬದುಕು
ಆಷಾಢ ಮಾಸ ಎಂದರೆ ಬಹುಪಾಲು ಗ್ರಾಮೀಣರಿಗೆ, ಕೃಷಿಕರಿಗೆ ಸಣ್ಣಗೆ ಬೆದರಿಕೆ ಹುಟ್ಟಿಸುವ ಶಬ್ದ! ನಗರ, ಪಟ್ಟಣಗಳಲ್ಲಿರುವ, ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ಇತರ ಆದಾಯ ಮೂಲ ಗಳಿರುವ ಜನರಿಗೆ ಆಸಾಡಿ ಅಥವಾ ಆಷಾಢ ಮಾಸ ತರುವ ತೀವ್ರ ಸಂಕಷ್ಟಗಳ ಸರಮಾಲೆಯ ಅರಿವಿಲ್ಲ ಎಂದೇ ಹೇಳಬಹುದು.


ಶಶಾಂಕಣ
shashidhara.halady@gmail.com
ಆಷಾಢ ಎಂಬ ಶಿಷ್ಟ ಪದವನ್ನು ನಾನು ಮೊದಲು ಕೇಳಿದ್ದು ಒಂದು ಜನಪದ ಗೀತೆಯಲ್ಲಿ: ‘ಆಷಾಢ ಮಾಸ ಬಂದಿತವ್ವ, ಅಣ್ಣ ಬರಲಿಲ್ಲ ಕರಿಯಾಕ!’ ಎಂಬ ಆ ಹಾಡಿನಲ್ಲೊಂದು ಆರ್ತದನಿ ಇತ್ತು. ಅದೇ ವರ್ಷ ಮದುವೆಯಾದ ತಂಗಿಯನ್ನು ಆಷಾಢದಲ್ಲಿ ತವರಿಗೆ ಕರೆದೊಯ್ಯಲು, ಆಕೆಯ ಅಣ್ಣ ಇನ್ನೂ ಬರಲಿಲ್ಲ ಎಂದು ನಿರೀಕ್ಷಿಸುವ ತಂಗಿಯ ದನಿ ಅದು.
ಬಹುದಿನಗಳಿಂದ ತವರನ್ನು ಕಾಣುವ ಆಸೆ ಆ ತಂಗಿಯದ್ದು. ಜತೆಗೆ, ಆಷಾಢದಲ್ಲಿ ನವ ದಂಪತಿ ಗಳು ಒಟ್ಟಿಗೆ ಇರಬಾರದು ಎಂಬ ನಂಬಿಕೆಯೂ ಇದ್ದು, ಅದನ್ನು ಪಾಲಿಸುವ ಆಕೆಯ ತವಕವೂ ಆ ಹಾಡಿನಲ್ಲಿ ದನಿಯಾಗಿದೆ. ಆದರೆ, ಆಷಾಢದಲ್ಲಿ ನವದಂಪತಿಗಳು ಏಕೆ ದೂರಾಗ ಬೇಕು, ಆ ನಂಬಿಕೆ ಯನ್ನು ಏಕೆ ಈ ಆಧುನಿಕ ಯುಗದಲ್ಲೂ ಆಚರಿಸಬೇಕು ಎಂಬುದಕ್ಕೆ ನಾನಾ ತರ್ಕ, ವಾದಗಳಿವೆ.
ಆ ವಾದವನ್ನು ಬದಿಗಿಟ್ಟು ನೋಡಿದರೆ, ಆಷಾಢ ಮಾಸವು ಇಂಥ ಹಲವು ಆಚರಣೆಗಳ, ಕೆಲವು ನೋವುಗಳ ಸಂಗಮ ಎನ್ನಬಹುದು. ಆಷಾಢ ಮಾಸವನ್ನು ನಮ್ಮ ಹಳ್ಳಿಯಲ್ಲಿ ‘ಆಸಾಡಿ’ ಅಥವಾ ‘ಆಟಿ’ ಎಂದು ಕರೆಯುತ್ತಿದ್ದರು. ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಸೌರಮಾನ ಪದ್ಧತಿ ಆಚರಿಸು ವುದರಿಂದ, ಈ ತಿಂಗಳುಗಳ ವ್ಯಾಪ್ತಿಯಲ್ಲಿ ಕೆಲವು ದಿನಗಳ ವ್ಯತ್ಯಯವೂ ಉಂಟು!

ಆಷಾಢ ಮಾಸ ಎಂದರೆ ಬಹುಪಾಲು ಗ್ರಾಮೀಣರಿಗೆ, ಕೃಷಿಕರಿಗೆ ಸಣ್ಣಗೆ ಬೆದರಿಕೆ ಹುಟ್ಟಿಸುವ ಶಬ್ದ! ನಗರ, ಪಟ್ಟಣಗಳಲ್ಲಿರುವ, ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ಇತರ ಆದಾಯ ಮೂಲ ಗಳಿರುವ ಜನರಿಗೆ ಆಸಾಡಿ ಅಥವಾ ಆಷಾಢ ಮಾಸ ತರುವ ತೀವ್ರ ಸಂಕಷ್ಟಗಳ ಸರಮಾಲೆಯ ಅರಿವಿಲ್ಲ ಎಂದೇ ಹೇಳಬಹುದು.
ನಮ್ಮ ಹಳ್ಳಿಯ ಕೃಷಿ ಕುಟುಂಬಗಳಿಗೆ, ಕೃಷಿಕ ಕಾರ್ಮಿಕರಿಗೆ ಆಸಾಡಿ ತಿಂಗಳು ಎಂದರೆ ಹಲವು ಕಷ್ಟ, ನೋವುಗಳನ್ನು ಎದುರಿಸುವ ಕಾಲ; ಆ ಒಂದು ತಿಂಗಳ ಕಾಲವನ್ನು ಸವಾಲು ಎಂದೇ ಸ್ವೀಕರಿಸಿ, ಎದುರಿಸಿ ಕಳೆದರೆ, ಆ ವರ್ಷವನ್ನೇ ಗೆದ್ದ ಭಾವ ಹಲವರದ್ದು!
ಇದಕ್ಕೆ ಒಂದು ಕಾರಣವೆಂದರೆ, ಆಷಾಢ ಮಾಸದ ಥಂಡಿ ವಾತಾವರಣವು ಎಲ್ಲರಲ್ಲಿ ಮೂಡಿಸುವ ಅನಾರೋಗ್ಯ, ಜಡ್ಡು, ಜ್ವರ, ಕೆಮ್ಮು, ನೆಗಡಿ ಇತ್ಯಾದಿ. ನಮ್ಮ ಹಳ್ಳಿಯಲ್ಲಿ ಆಸಾಡಿ ತಿಂಗಳಿನ ಸುರಿಮಳೆ ಯನ್ನು ನೋಡಿ, ನೋಡಿ, ಜನರಿಗೆ ಬೇಸರ ಬಂದುಬಿಡುತ್ತದೆ! ಒಂದೇ ಸಮನೆ ಎಡೆಬಿಡದೇ ಸುರಿಯುವ ಮಳೆ ಈ ಕಾಲದಲ್ಲಿ ಸಾಮಾನ್ಯ. ಕೆಲವು ಸಂದರ್ಭಗಳಲ್ಲಿ ಸೂರ್ಯನ ಬಿಸಿಲು ಕಾಣದೇ ಒಂದು ವಾರವೂ ಮಳೆಬರಬಹುದು! ಜತೆಗೆ, ನಿಧಾನವಾಗಿ ಕೆಳಗಿಳಿಯುವ ದಿನದ ಉಷ್ಣತೆಯು, ಮಳೆಯೊಂದಿಗೆ ಸಂಚು ಮಾಡಿ, ಮನೆಯೊಳಗೆಲ್ಲಾ ಥಂಡಿಯನ್ನೇ ತುಂಬಿಬಿಡುತ್ತದೆ.
ನಿರಂತರ ಸುರಿವ ಮಳೆಯಿಂದಾಗಿ, ವಾತಾವರಣದಲ್ಲಿ ತೇವಾಂಶ ಅಧಿಕ. ಇಂಥ ವಾತಾವರಣವನ್ನೇ ಕಾಯುತ್ತಿರುವ ವೈರಸ್, ಬ್ಯಾಕ್ಟೀರಿಯಾಗಳು ನಿಧಾನವಾಗಿ ದಾಳಿ ಮಾಡತೊಡಗುತ್ತವೆ, ಜ್ವರ, ಕೆಮ್ಮು, ನೆಗಡಿಯನ್ನು ತಂದಿಡುತ್ತವೆ. ದೈಹಿಕವಾಗಿ ಬಲಶಾಲಿಗಳು, ಪ್ರತಿರೋಧ ಶಕ್ತಿ ಹೊಂದಿರು ವವರು ಇವಕ್ಕೆಲ್ಲಾ ಹೆದರದೇ ಇರಬಹುದು; ಮಕ್ಕಳು, ವಯಸ್ಸಾದವರು, ದುರ್ಬಲರು ಇಂಥ ಥಂಡಿ ದಿನಗಳಲ್ಲಿ ಸಾಕಷ್ಟು ಜರ್ಜರಿತರಾಗುತ್ತಾರೆ.
ನಮ್ಮ ಹಳ್ಳಿಯಲ್ಲಿ ಹಿಂದೆ ಒಂದು ನುಡಿಗಟ್ಟು ಇತ್ತು: ‘ಈ ವರ್ಷದ ಮಳೆಗಾಲವನ್ನು ಒಬ್ಬ ವ್ಯಕ್ತಿ ಜಯಿಸಿದರೆ, ಇನ್ನಷ್ಟು ವರ್ಷ ಬದುಕಿಯಾನು’ ಎಂದು! ಅಂದರೆ, ಅನಾರೋಗ್ಯ ಕಾಡಿದ ವ್ಯಕ್ತಿಯ ದುಮ್ಮಾನವನ್ನು ಹೇಳುವ ಮಾತು ಇದೆ. ಮಳೆಗಾಲದಲ್ಲಿ ಕಾಯಿಲೆ ಅಮರಿಕೊಂಡರೆ, ಹಿಂದೆ ಅದು ವಾಸಿಯಾಗುವುದು ಬಲು ಕಷ್ಟ. ಹಂಗಾರ ಕೆತ್ತೆ ಕಷಾಯ, ಮೆಣಸು, ಶುಂಠಿ ಕಷಾಯಗಳ ಬಳಕೆ; ಆಹಾರದಲ್ಲಿ ನಾನಾ ರೀತಿಯ ಪಥ್ಯ; ಅದು ತಿನ್ನಬಾರದು, ಇದು ತಿನ್ನಬಾರದು ಎಂಬ ನಂಬಿಕೆ.
ಇದರ ಜತೆಯಲ್ಲೇ, ಕಡಿಮೆ ಆದಾಯವಿರುವ ಕೃಷಿ ಕುಟುಂಬಗಳವರು, ಆಹಾರದ ಆಯ್ಕೆಯಲ್ಲೂ ಬಿಕ್ಕಟ್ಟನ್ನು ಎದುರಿಸಬೇಕಾದ ಸನ್ನಿವೇಶ; ಹಲವು ಮನೆಗಳಲ್ಲಿ ಊಟಕ್ಕೆ ಕಷ್ಟವಾಗುವ ದಿನಗಳು ಆಷಾಢ. ಇಂಥ ಸಂಕಟಮಯ ಸನ್ನಿವೇಶವು ದೂರಾಗಬೇಕಾದರೆ, ಮಳೆಗಾಲ ಮುಗಿಯಬೇಕು, ದೀಪಾವಳಿಯ ತನಕ ಕಾಯಬೇಕು, ಹೊಸ ಬೆಳೆ ಬರಬೇಕು. ಆದ್ದರಿಂದ, ವಯಸ್ಸಾದವರು, ಜಡ್ಡಾ ದವರು ಆ ಮಳೆಗಾಲವನ್ನು ಕಳೆದರೆ, ಕನಿಷ್ಠ ಒಂದು ವರ್ಷ ಹೆಚ್ಚು ಬದುಕಿಯಾರು ಎಂಬ ಆಶಾವಾದ.
ಈಚಿನ ದಶಕಗಳಲ್ಲಿ ಈ ನುಡಿಗಟ್ಟಿನ ಹಿಂದಿನ ನೋವು, ಭಾವ ತನ್ನ ಮೊನಚನ್ನು ಕಳೆದು ಕೊಂಡಿದೆ ಎನ್ನಬಹುದು. ವಿವಿಧ ರೀತಿಯ ವೈದ್ಯಕೀಯ ಸೌಲಭ್ಯಗಳು, ರಸ್ತೆ ಸಂಪರ್ಕ, ಮನೆಗೆ ಸಾಕಷ್ಟು ಹತ್ತಿರದಲ್ಲೇ ವೈದ್ಯರ ಲಭ್ಯತೆ ಮೊದಲಾದವುಗಳಿಂದ, ಮಳೆಗಾಲದ ಅನಾರೋಗ್ಯವನ್ನು ಬೇಗನೆ ವಾಸಿಮಾಡಿಕೊಳ್ಳಲು ಜನರಿಗೆ ಸಾಧ್ಯ. ಇದರ ಜತೆಯಲ್ಲೇ, ಈಚಿನ ದಶಕಗಳಲ್ಲಿ ಸರಕಾರವು ಅನುಕೂಲ ಮಾಡಿಕೊಟ್ಟಿರುವ ಒಂದು ವ್ಯವಸ್ಥೆಯಿಂದಾಗಿ, ಮಳೆಗಾಲದ ತೀವ್ರ ಆಹಾರದ ಕೊರತೆಯೂ ನೀಗಿದೆ.
ಆ ಸೌಲಭ್ಯವೇ- ಪಡಿತರ ವ್ಯವಸ್ಥೆಯ ಮೂಲಕ ಹಳ್ಳಿಹಳ್ಳಿಗಳಲ್ಲೂ ಅಕ್ಕಿ ಮೊದಲಾದ ಧಾನ್ಯಗಳ ಲಭ್ಯತೆ. ಕೆಲವು ದಶಕಗಳ ಹಿಂದೆ, ಕೂಲಿ ಕೆಲಸ ಮತ್ತು ಯಾವುದೇ ಕೆಲಸ ದೊರಕದ ದಿನಗಳೆಂದರೆ ಮಳೆಗಾಲ. ಮಳೆ ಆರಂಭವಾಗಿ, ಕೆಲವು ವಾರಗಳಲ್ಲಿ ನಾಟಿ ಕೆಲಸ ಮುಗಿದ ನಂತರ, ಮುಂದಿನ ಬೆಳೆ ಬರುವ ತನಕ, ಜನರಿಗೆ ಕೆಲಸವಿಲ್ಲ!
ದಿನನಿತ್ಯದ ಕೆಲಸ ಮತ್ತು ಕೂಲಿಯನ್ನೇ ನಂಬಿಕೊಂಡಿರುವವರಿಗಂತೂ, ಇಂಥ ದಿನಗಳು ಬಹು ಭೀಕರ; ಕೂಲಿ ಮಾಡಿ ಊಟ ಸಂಪಾದನೆ ಮಾಡೋಣವೆಂದರೆ, ನಿರಂತರ ಸುರಿವ ಮಳೆಯ ದಿನಗಳಲ್ಲಿ ಯಾವುದೇ ಕೆಲಸ ದೊರಕದು! ಜತೆಗೆ, ಸಣ್ಣ ಮಟ್ಟದ ಕೃಷಿಕರಿಗೂ, ಈ ದಿನಗಳು ಸಂಕಷ್ಟದ ಕಾಲವೇ ಸರಿ.
ಏಕೆಂದರೆ, ಮನೆಯಲ್ಲಿದ್ದ ಅಕ್ಕಿ ಮೊದಲಾದ ಸಾಮಗ್ರಿಗಳು ಬಹುಬೇಗನೆ ಖರ್ಚಾಗುವ ದಿನಗಳಿವು; ಅದಕ್ಕೆ ಪೂರಕವಾಗಿ, ಬೆಳೆ ಬರಲು ದೀಪಾವಳಿಯ ತನಕ ಕಾಯಬೇಕಾದ ಅನಿವಾರ್ಯತೆ. ಮಳೆಗಾಲಕ್ಕೆಂದೇ, ಆಹಾರಧಾನ್ಯಗಳನ್ನು ಸಾಕಷ್ಟು ಸಂಗ್ರಹಿಸಿಕೊಂಡಿದ್ದವರಿಗೆ ತೊಂದರೆಯಿಲ್ಲ. ಮಿಕ್ಕ ಬಡ ಮತ್ತು ಮಧ್ಯಮ ವರ್ಗದವರಿಗೆ, ಮಳೆಗಾಲದಲ್ಲಿ ಊಟಕ್ಕೇ ಕಷ್ಟವಾಗುವ ಸನ್ನಿವೇಶ ವಿತ್ತು.
ಅದೆಷ್ಟೋ ಕುಟುಂಬಗಳು, ಬಗನಿ ಮರದ ತಿರುಳು, ಕ್ಯಾನೆಗೆಂಡೆ, ಹಲಸಿನ ಬೀಜ ಮೊದಲಾದವು ಗಳನ್ನು ಸೇವಿಸಿ ಹಸಿವನ್ನು ತಣಿಸಿಕೊಳ್ಳಬೇಕಾದ ಸನ್ನಿವೇಶ. ಬೇಸಗೆಯಲ್ಲಿ ಕಡಿಮೆ ಬೆಲೆಗೆ ದೊರಕುವ ಗೆಣಸನ್ನು ಒಣಗಿಸಿಟ್ಟುಕೊಂಡು, ಮಳೆಗಾಲದಲ್ಲಿ ಒಂದು ಹೊತ್ತಿನ ಆಹಾರವನ್ನಾಗಿ ಬಳಸಬೇಕಾದ ಅನಿವಾರ್ಯತೆ.
ಇಂಥ ತೀವ್ರ ಸಂಕಷ್ಟದ ಸನ್ನಿವೇಶವು ಇಂದು ಬಹುಮಟ್ಟಿಗೆ ದೂರವಾಗಿದ್ದರೆ, ಅದಕ್ಕೆ ಮುಖ್ಯ ಕಾರಣವೆಂದರೆ, ಪಡಿತರ ಚೀಟಿಯ ಮೂಲಕ ದೊರಕುತ್ತಿರುವ ಅಕ್ಕಿ ಮೊದಲಾದ ಆಹಾರಧಾ ನ್ಯಗಳು. ಹಲವು ಬಡ ಕುಟುಂಬಗಳಿಗೆ ಉಚಿತವಾಗಿ ಪ್ರತಿತಿಂಗಳು ದೊರಕುತ್ತಿರುವ ಅಕ್ಕಿಯು, ಮಳೆಗಾಲದಲ್ಲಿ ಮತ್ತು ಕೂಲಿ ಕೆಲಸ ದೊರಕದೇ ಇರುವ ಸಂದರ್ಭಗಳಲ್ಲಿ ಬಹಳ ಮಟ್ಟಿಗೆ ಉಪಯೋಗಕ್ಕೆ ಬರುತ್ತಿದೆ.
ಉಚಿತವಾಗಿ ಅಥವಾ ರಿಯಾಯತಿ ದರದಲ್ಲಿ ದೊರಕುವ ಅಕ್ಕಿಯು, ಲಕ್ಷಾಂತರ ಅರ್ಹ ಕುಟುಂಬ ಗಳ ಹಸಿವನ್ನು ನೀಗಿಸುತ್ತಿರುವುದಂತೂ ಸತ್ಯ. ಇದರ ಜತೆಯಲ್ಲೇ, ಇಂಥ ಜನೋಪಯೋಗಿ ಸೌಲಭ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ವಿಚಾರವು ಕಳವಳಕಾರಿ ಎನಿಸಿದರೂ, ಆ ಸೌಲಭ್ಯದ ಉತ್ತಮ ಅಂಶಗಳನ್ನು ಮರೆಯುವಂತಿಲ್ಲ.
ಈಚಿನ ದಶಕಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿಗೆ ಬಂದ ಒಂದು ಉತ್ತಮ ಸೌಲಭ್ಯ ಇದು ಎಂಬುದು ಸ್ಪಷ್ಟ; ಜನಸಾಮಾನ್ಯರ ಮತ್ತು ಬಡವರ ಮಳೆಗಾಲದ ಬವಣೆ ನೀಗಿಸುವಲ್ಲಿ ಈ ವ್ಯವಸ್ಥೆಯ ಕೊಡುಗೆ ಅಪಾರ. ಮಳೆಗಾಲದಲ್ಲಿ ಪ್ರವಾಸ!
ಈಚಿನ ವರ್ಷಗಳಲ್ಲಿ, ಮಳೆಗಾಲ ಮತ್ತು ಆಷಾಢದ ಸೊಗಡನ್ನು ನೋಡಲು, ಮಲೆನಾಡಿಗೆ ಮತ್ತು ಕರಾವಳಿಗೆ ಪ್ರವಾಸ ಹೋಗುವ ಒಂದು ಹವ್ಯಾಸ (ಬೇಕಿದ್ದರೆ ಹುಚ್ಚು ಎಂದೂ ಕರೆಯಬಹುದು) ಚಾಲ್ತಿಗೆ ಬರುತ್ತಿದೆ. ಪ್ರವಾಸವು ಇಂದು ಹಲವು ಆಯಾಮಗಳ ಚಟುವಟಿಕೆ; ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗುವ ಅನುಭವ ಪಡೆಯಲು, ಘಾಟಿ ರಸ್ತೆಗಳು, ಕಾಡಿನ ನಡುವಿನ ರಸ್ತೆಗಳು ಮಳೆ ಸುರಿದಾಗ ಪಡೆದುಕೊಳ್ಳುವ ವಿಭಿನ್ನ ಸ್ವರೂಪವನ್ನು ನೋಡಲು, ಬೆಟ್ಟ ಗುಡ್ಡಗಳ ತುದಿಯಿಂದ ಸುರಿವ ಜಲಪಾತಗಳನ್ನು ನೋಡಿ ಕಣ್ತುಂಬಿಕೊಳ್ಳಲು- ಇಂಥ ಹಲವು ಆಯಾಮಗಳನ್ನು ಹೊಂದಿದೆ, ಮಳೆಗಾಲದ ಪ್ರವಾಸ.
ಜತೆಗೆ, ಸುರಿವ ಮಳೆಯ ದೃಶ್ಯಗಳನ್ನು, ಮಳೆಗಾಲದಲ್ಲಿ ಹಸಿರಿನಿಂದ ತುಂಬುವ ಭೂರಮೆಯ ನೋಟವನ್ನು ರೀಲ್ಸ್ ಮಾಡಿ, ಅದನ್ನು ಅಪ್ಲೋಡ್ ಮಾಡಿ, ಅವುಗಳಿಗೆ ಬರುವ ‘ಲೈಕ್ಸ್’ ಅನ್ನು ಗಮನಿಸುವ ಇನ್ನೊಂದು ಆಯಾಮವೂ, ಮಳೆಗಾಲದ ಪ್ರವಾಸಕ್ಕೆ ಇದೆ. ಮಳೆಗಾಲದಲ್ಲಿ ಪ್ರವಾಸ ಮಾಡಿ ಎಂದು ಆಹ್ವಾನಿಸುವ ಹಲವು ರೆಸಾರ್ಟ್ಗಳು, ಮಳೆಸುರಿವ ದಿನಗಳಲ್ಲಿ ವಿಶೇಷ ರಿಯಾಯತಿಯನ್ನೂ ಘೋಷಿಸುವುದುಂಟು.
ಹಾಗೆ ನೋಡಿದರೆ, ಮಳೆಗಾಲದ ಸಮಯದಲ್ಲಿ ಕೈಗೊಳ್ಳುವ ಪ್ರವಾಸದಲ್ಲಿ ಸಾಕಷ್ಟು ರಿಸ್ಕ್ ಇದೆ, ಅಪಾಯ ಸಂಭಾವ್ಯತೆ ಇದೆ. ಜಲಪಾತದ ಸನಿ0ಹದಲ್ಲಿ ಹರಿವ ರಭಸದ ನೀರಿನಲ್ಲಿ ಸಿಕ್ಕಿಕೊಳ್ಳುವ ಅಪಾಯ, ರೀಲ್ಸ್ ಮಾಡುವಾಗ ಕಾಲುಜಾರಿ ನೀರಿಗೆ ಸಿಲುಕುವ ಅಪಾಯ, ವಿಪರೀತ ಮಳೆ ಸುರಿಯುವಾಗ ರಸ್ತೆ ಕುಸಿತದ ಸಾಧ್ಯತೆ, ಮಳೆಗೆ ಸಿಲುಕಿ ದೈಹಿಕ ಸಮಸ್ಯೆಗಳು ಎದುರಾಗುವ ಸಂಭಾವ್ಯತೆ ಇವೆಲ್ಲವೂ ಮಳೆಗಾಲದ ಪ್ರವಾಸದಲ್ಲಿ ಅಡಕವಾಗಿವೆ.
ಆದರೂ, ಅಂಥ ಅನುಭವವೂ ನಮಗೆ ಬೇಕು ಎಂದು ಹೇಳುವ ಯುವಜನರ ಉತ್ಸಾಹವೇ ಮಳೆಗಾಲದ ಪ್ರವಾಸವು ಇನ್ನಷ್ಟು ಚಟುವಟಿಕೆಯಿಂದ ಕೂಡುವಂತೆ ಮಾಡಿದೆ. ನಮ್ಮ ರಾಜ್ಯ ದಲ್ಲಾದರೆ, ಜೂನ್ ನಿಂದ ಸುಮಾರು ಅಕ್ಟೋಬರ್ ತನಕ ‘ಮಳೆಗಾಲದ ಪ್ರವಾಸ’ದ ಋತು ಎನ್ನಬಹುದು. ಅದರಲ್ಲೂ, ಆಷಾಢದಲ್ಲಿ ಪ್ರವಾಸ ಕೈಗೊಂಡರೆ, ನಿರಂತರ ಸುರಿವ ಮಳೆಯನ್ನು ನೋಡಬಹುದು, ಸುರಿವ ಮಳೆಯಲ್ಲೇ ಕಾರು ಡ್ರೈವ್ ಮಾಡುವ ಅನುಭವವನ್ನು ಪಡೆಯಬಹುದು.
ಅಂಥ ಸಂದರ್ಭದಲ್ಲಿ ತುಸು ರಿಸ್ಕ್ ಇದ್ದೇ ಇರುವುದಾದರೂ, ಮಳೆ ಬಂದ ನಂತರ ಹಸಿರಾಗುವ ಪ್ರಕೃತಿಯನ್ನು ನೋಡಲು ಇಂಥ ಸಾಹಸ ಕೈಗೊಂಡರೆ ಮಾತ್ರ ಸಾಧ್ಯ. ನಮ್ಮ ರಾಜ್ಯದ ಹಲವು ಜಲಪಾತಗಳು ಪೂರ್ತಿಯಾಗಿ ಮೈದುಂಬುವುದು ಆಷಾಢದಲ್ಲಿ! ನಮ್ಮ ದೇಶದಲ್ಲೇ ಹೆಸರು ಪಡೆದಿರುವ ಜೋಗ ಜಲಪಾತದಲ್ಲಿ ನೀರು ನೆಗೆಯಲು, ಆಷಾಢ ಮಾಸವೇ ಬರಬೇಕು; ಮಳೆಗಾಲ ಕಳೆದ ನಂತರ, ಅದಕ್ಕೆ ಹರಿದು ಬರುವ ನೀರನ್ನು ಲಿಂಗನಮಕ್ಕಿ ಅಣೆಕಟ್ಟು ತಡೆಹಿಡಿಯುವು ದರಿಂದ, ಸದಾ ಸುರಿವ ಮಳೆಯೇ ಜೋಗದ ಸೌಂದರ್ಯಕ್ಕೆ ಅವಶ್ಯವಾಗಿ ಬೇಕು. ನಮ್ಮ ರಾಜ್ಯದ ಇನ್ನೊಂದು ಸುಂದರ ಜಲಪಾತವಾದ ಗೋಕಾಕ ಜಲಪಾತದ ಕಥೆಯೂ ಇಷ್ಟೇ. ಅದರಲ್ಲಿ ನೀರು ನೆಗೆಯಲು ಅಣೆಕಟ್ಟು ತುಂಬಿ, ಹರಿಯಬೇಕು!
ಮಲೆನಾಡಿನುದ್ದಕ್ಕೂ ಇರುವ ಹಲವು ಜಲಪಾತಗಳು, ಆಷಾಢದಲ್ಲಿ ತುಂಬಿಹರಿಯುವುದರಿಂದ, ಅವುಗಳನ್ನು ನೋಡಲು ಇದೇ ಕಾಲ ಚಂದ. ಆದರೆ, ಸಹ್ಯಾದ್ರಿಯ ಕಿಬ್ಬದಿಗಳಲ್ಲಿ, ಬಹು ದೂರದ ಹಳ್ಳಿಗಳ ನಡುವಿನ ಪ್ರಪಾತದಂಚಿನಲ್ಲಿರುವ ಕೆಲವು ಜಲಪಾತಗಳನ್ನು ತಲುಪಲು ಆಷಾಢದಲ್ಲಿ ಮತ್ತು ಮಳೆಗಾಲದಲ್ಲಿ ತುಂಬಾ ಕಷ್ಟ. ಕೆಲವು ಜಲಪಾತಗಳ ಸನಿಹಕ್ಕೆ ರಸ್ತೆ ನಿರ್ಮಾಣ ವಾಗಿರುವುದರಿಂದ, ಮಳೆಗಾಲದ ಅಲ್ಲಿನ ದೃಶ್ಯವನ್ನು ನೋಡಲು ಸಾಧ್ಯ. ಆದರೆ, ಆಷಾಢದಲ್ಲೋ, ಮಳೆ ಸುರಿವ ಇನ್ನಾವ ಮಾಸದಲ್ಲೋ, ಸಹ್ಯಾದ್ರಿಯಲ್ಲಿ ಅಡಗಿರುವ ಜಲಪಾತಗಳನ್ನು ನೋಡಲು ಹೋಗುವವರು, ಮೈಯೆಲ್ಲಾ ಕಣ್ಣಾಗಿರಬೇಕು, ತಮ್ಮ ರಕ್ಷಣೆ ಮಾಡಿಕೊಳ್ಳಬೇಕು.
ಸೆಲ್ಫಿ ಅಥವಾ ರೀಲ್ಸ್ ಮಾಡುವಾಗ, ನೀರಿಗೆ ಜಾರದಂತೆ ಎಚ್ಚರ ವಹಿಸಬೇಕು. ಹಾಗಿದ್ದಲ್ಲಿ ಮಾತ್ರ ಆಷಾಢದಲ್ಲಿ ಜಲಪಾತದ ಅನುಭವ ಪಡೆಯಬಹುದು.