Shashidhara Halady Column: ಪ್ರವಾಸಿ ಪ್ರಪಂಚದಲ್ಲೊಂದು ಸುತ್ತು
ಸೃಜನಶೀಲ ಚಟುವಟಿಕೆಗಳಿಗೆ, ಪ್ರವಾಸವು ಅದಾವ ಉನ್ನತ ಸ್ತರದಲ್ಲಿ ವೇಗೋತ್ಕರ್ಷಕವಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಈ ಮಾತಿನಿಂದ ಸ್ಥೂಲವಾಗಿ ಗ್ರಹಿಸಬಹುದು. ನಮ್ಮ ನಾಡಿನ ಇನ್ನೊಬ್ಬ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರು, ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದ್ದರು!


ಶಶಾಂಕಣ
shashidhara.halady@gmail.com
ಪ್ರವಾಸದಿಂದ ನಮ್ಮ ಬದುಕು ಶ್ರೀಮಂತಗೊಳ್ಳುತ್ತದೆ- ಇದರಲ್ಲಿ ಎರಡು ಮಾತಿಲ್ಲ. ಇಷ್ಟು ಹೇಳಿದ ಮಾತ್ರಕ್ಕೆ ಪ್ರವಾಸದಿಂದ ದೊರಕುವ ವಿವಿಧ ಲಾಭಗಳನ್ನು ಪೂರ್ತಿ ಹೇಳಿದಂತಾಗದು. ಪ್ರವಾಸವು ಆಧುನಿಕ ಬದುಕಿಗೆ ಸರ್ವಾಂಗೀಣ ಬೆಂಬಲವನ್ನು, ಒತ್ತಾಸೆಯನ್ನು ನೀಡಬಲ್ಲದು. ಎಷ್ಟರ ಮಟ್ಟಿಗೆ ಎಂದರೆ, ಪೂರ್ತಿ ಮುನಿಸಿಕೊಂಡ ದಂಪತಿ, ಪ್ರವಾಸಕ್ಕೆ ಹೋಗಿ ಬಂದ ನಂತರ, ಪ್ರೀತಿ ವಿಶ್ವಾಸ ವನ್ನು ಮರುಗಳಿಸುತ್ತಾರೆ!
ಇದನ್ನು ಮನೋವಿಜ್ಞಾನಿಗಳೂ ಗುರುತಿಸಿದ್ದು, ಕುಟುಂಬದ ಸ್ವಾಸ್ಥ್ಯಕ್ಕಾಗಿ ಆಗಾಗ ಪ್ರವಾಸ ಮಾಡಬೇಕು ಎಂದು ಶಿಫಾರಸು ಮಾಡುತ್ತಾರೆ! ಎಲ್ಲಾ ವರ್ಗದ ಜನರಿಗೆ ಪ್ರವಾಸದಿಂದ ಲಾಭವಿದೆ. ಪ್ರವಾಸ ಹೋಗಿ ಬಂದ ನಂತರ, ಅವರು ಗಳಿಸಿದ ಅಪಾರ ಅನುಭವವು ದಿನನಿತ್ಯದ ಬದುಕನ್ನು ಸುಲಭ, ಸುಗಮಗೊಳಿಸಬಲ್ಲದು. ಸಾಹಿತಿ, ಕಲಾವಿದರಿಗಂತೂ ಪ್ರವಾಸವೇ ಜೀವ, ಅವರ ಜೀವಾಳ.
ಒಂದು ಉದಾಹರಣೆಯನ್ನು ಗಮನಿಸುವುದಾದರ, ಕಾದಂಬರಿಕಾರರಾದ ಎಸ್. ಎಲ್.ಭೈರಪ್ಪ ನವರನ್ನು ವರದಿಗಾರರು ಒಮ್ಮೆ ಕೇಳಿದರು (ಸುಮಾರು ನಾಲ್ಕು ವರ್ಷಗಳ ಹಿಂದೆ): “ಸರ್, ತಮ್ಮ ಮುಂದಿನ ಕಾದಂಬರಿ ಯಾವುದು? ಅದಕ್ಕೆ ಸಿದ್ಧತೆ ನಡೆದಿದೆಯೇ?" ಅಂತ. ಅದಕ್ಕೆ ಭೈರಪ್ಪನವರು, ಆಗಿನ ಕೋವಿಡ್ ತಂದ ಲಾಕ್ ಡೌನ್ನಿಂದಾಗಿ ಎಲ್ಲೂ ಪ್ರವಾಸ ಹೋಗಲು ಸಾಧ್ಯವಾಗುತ್ತಿಲ್ಲ; ಹೊಸ ಹೊಸ ಜಾಗಗಳಿಗೆ ಪ್ರವಾಸ ಮಾಡಿದಾಗಲೇ, ನವನವೀನ ಯೋಚನೆಗಳು ಮೂಡಿಬರುತ್ತವೆ ಎಂದರು (ಇದೇ ಅರ್ಥದಲ್ಲಿ ಅವರು ಹೇಳಿದರು ಎಂದು ನೆನಪು).
ಇದನ್ನೂ ಓದಿ: Shashidhara Halady Column: ಕಪ್ಪು ಮಸಿ ಬಳಿಸಿಕೊಂಡ ಬೆಂಗಳೂರು
ಸೃಜನಶೀಲ ಚಟುವಟಿಕೆಗಳಿಗೆ, ಪ್ರವಾಸವು ಅದಾವ ಉನ್ನತ ಸ್ತರದಲ್ಲಿ ವೇಗೋತ್ಕರ್ಷಕವಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಈ ಮಾತಿನಿಂದ ಸ್ಥೂಲವಾಗಿ ಗ್ರಹಿಸಬಹುದು. ನಮ್ಮ ನಾಡಿನ ಇನ್ನೊಬ್ಬ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರು, ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದ್ದರು! ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಓಡಾಡಿ, ಅಲ್ಲಿನ ಅಂತಃಸತ್ವವನ್ನು ಗ್ರಹಿಸಿದ್ದರು ಮತ್ತು ಅವುಗಳನ್ನು ತಮ್ಮ ಕಾದಂಬರಿಯಲ್ಲೂ ತಂದಿದ್ದರು.
ಒಂದು ಉದಾಹರಣೆಯನ್ನು ನೋಡುವುದಾದರೆ, ಅವರ ‘ಮೊಗ ಪಡೆದ ಮನ’ ಕಾದಂಬರಿಯಲ್ಲಿ, ಬಯಲು ಸೀಮೆಯ ನವಿಲುಗಳ ನೃತ್ಯದ ಸನ್ನಿವೇಶವನ್ನು ತಂದಿದ್ದು (ಬಂಕಾಪುರ), ಮಳೆ ಹನಿಯುವ ಸಂದರ್ಭದ ನವಿಲುಗಳ ನರ್ತನವು ಯಾವ ರೀತಿಯಲ್ಲಿ ಆ ಕಾದಂಬರಿಯ ನಾಯ ಕನಿಗೆ ಸ್ಪೂರ್ತಿ ತುಂಬಿತು ಎಂಬುದನ್ನು ಗಮನಸಿದಾಗ, ಅವರು ಕೈಗೊಂಡ ಪ್ರವಾಸಗಳ ಮಹತ್ವ ವನ್ನು ಅರಿಯಬಹುದು.
ಚಾಲುಕ್ಯ ದೇವಾಲಯಗಳ ಕುರಿತಾದ ಅವರ ಪುಸ್ತಕ, ‘ಚಿತ್ರಮಯ ದಕ್ಷಿಣ ಕನ್ನಡ’ ಎಂಬ ಮಕ್ಕಳ ಭೂಗೋಳದ ಪುಸ್ತಕ (1934) ಮೊದಲಾದವು ಅವರ ವ್ಯಾಪಕ ಪ್ರವಾಸಗಳಿಗೆ ನಿದರ್ಶನ; ವಿದೇಶ ಗಳಲ್ಲೂ ಹಲವು ಬಾರಿ ಸುತ್ತಾಡಿ, ಕನ್ನಡಕ್ಕೇ ವಿಶಿಷ್ಟ ಎನಿಸುವ ಪ್ರವಾಸ ಕಥನಗಳನ್ನು ಅವರು ರಚಿಸಿದ್ದಾರೆ (ಪೂರ್ವದಿಂದ ಅತ್ಯಪೂರ್ವ, ಅರಸಿಕರಲ್ಲ, ಅಬುವಿಂದ ಬರಾಮಕ್ಕೆ, ಅಪೂರ್ವ ಪಶ್ಚಿಮ, ಪಾತಾಳಕ್ಕೆ ಪಯಣ ಇತ್ಯಾದಿ). ಪ್ಯಾರಿಸ್, ಅಮೆರಿಕ ಮೊದಲಾದ ದೇಶಗಳ ಬೃಹತ್ ಕಲಾ ಮ್ಯೂಸಿಯಂಗಳನ್ನು ಅವರು ನೋಡಿದ ಪರಿ, ನಂತರ ಆ ಕುರಿತು ಮೂಡಿ ಬಂದ ಅವರ ಬರಹ ಗಳು, ಪ್ರವಾಸ ಕಥನಗಳು ಅನನ್ಯ; ಕನ್ನಡದ ಮತ್ಯಾವ ಲೇಖಕರೂ ಅಂಥ ಅಪಾರ ಒಳನೋಟಗಳ ನ್ನೊಳಗೊಂಡ ಪ್ರವಾಸ ಕಥನಗಳನ್ನು ಬರೆದಿಲ್ಲ!
ಪ್ರವಾಸವು ಮನೋಲ್ಲಾಸಗೊಳಿಸುವುದರ ಜತೆಯಲ್ಲೇ, ಪ್ರವಾಸ ಕೈಗೊಂಡವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಮನೋತಜ್ಞರು, ಪರ್ಸನಾಲಿಟಿ ಡೆವಲಪ್ಮೆಂಟ್ ತಜ್ಞರು ಗುರುತಿಸಿದ್ದಾರೆ. ವೈಯಕ್ತಿಕ ಅನುಭವವನ್ನೇ ಆಧರಿಸಿ ಹೇಳುವುದಾದರೆ, ನಾನು ಎರಡು ಬಾರಿ ಹಿಮಾಲಯದ ಪರ್ವತಗಳ ನಡುವೆ ಚಾರಣ ಮಾಡಿದ್ದೇನೆ ಮತ್ತು ಒಂದು ವಿದೇಶ ಪ್ರವಾಸ (ಅಮೆರಿಕ) ಕೈಗೊಂಡಿ ದ್ದೇನೆ.
ಜತೆಗೆ ದೇಶದೊಳಗೆ ಹಲವು ಪ್ರವಾಸ, ಚಾರಣ ಮಾಡಿದ್ದೇನೆ. ಇವುಗಳ ಅನುಭವದಲ್ಲಿ ಹೇಳುವು ದಾದರೆ, ಅಲ್ಲೆಲ್ಲಾ ನೋಡಿದ ವಿಚಾರಗಳು ನಮ್ಮ ಜ್ಞಾನವನ್ನು ಹೆಚ್ಚಿಸುವುದು ಮೊದಲ ಲಾಭ; ಇದಕ್ಕಿಂತ ಮಿಗಿಲಾಗಿ, ಹೊಸ ಮತ್ತು ಅಪರಿಚಿತ ಜಾಗಗಳಲ್ಲಿ ಓಡಾಡಿ, ಅಲ್ಲಿನ ಸನ್ನಿವೇಶಗಳನ್ನು ನಿಭಾಯಿಸಿ, ಕ್ಷೇಮವಾಗಿ ವಾಪಸಾದ ನಂತರ, ಭವಿಷ್ಯದಲ್ಲಿ ಅಂಥ ಪ್ರವಾಸಗಳನ್ನು ಕೈಗೊಳ್ಳುವ ವಿಶ್ವಾಸ ಅಧಿಕವಾಗಿದೆ.
ಮಾತ್ರವಲ್ಲ, ಬದುಕಿನ ಬೇರೆ ಬೇರೆ ಸವಾಲುಗಳನ್ನು ಎದುರಿಸುವಾಗಲೂ, ಹೆಚ್ಚಿನ ಆತ್ಮವಿಶ್ವಾಸ ದಿಂದ ಯೋಚಿಸಿ, ನಿರ್ಣಯ ಕೈಗೊಳ್ಳಲು ಇಂಥ ಪ್ರವಾಸಗಳು ಸಹಾಯ ಮಾಡಿವೆ. ತಜ್ಞರು ಹೇಳು ವುದು ಇದನ್ನೇ: ಉದಾಹರಣೆಗೆ, ಹಿಮಾಲಯದ ಅದಾವುದೋ ಹಳ್ಳಿಗಳ ಮೂಲಕ ಸಾಗುವ ದಾರಿ ಯಲ್ಲಿ ಆರೆಂಟು ದಿನ ಚಾರಣ ಮಾಡಿದ ವ್ಯಕ್ತಿಗೆ, ಅಲ್ಲೆಲ್ಲಾ ಪ್ರತಿ ದಿನವೂ ಸಣ್ಣ ಪುಟ್ಟ ಸವಾಲು ಗಳು, ತೊಡಕುಗಳು ಎದುರಾಗುತ್ತವೆ ಮತ್ತು ಅನಿವಾರ್ಯವಾಗಿ, ಆ ಸನ್ನಿವೇಶವನ್ನು ಎದುರಿಸಿ, ಸವಾಲು ಸಣ್ಣದೇ ಇರಲಿ ಅದಕ್ಕೆ ಪರಿಹಾರವನ್ನು ಹುಡುಕಿ, ನಿಭಾಯಿಸಿಕೊಂಡು, ಮರುದಿನದ ಚಾರಣವನ್ನು ಆ ವ್ಯಕ್ತಿ ಮಾಡಲೇಬೇಕು.
ಇಂಥ ಹಲವು ಅನುಭವಗಳೇ, ‘ಸಮಸ್ಯೆ ಪರಿಹಾರ’ದ ಕೌಶಲವನ್ನು ಆ ವ್ಯಕ್ತಿಯಲ್ಲಿ ಬೆಳೆಸುತ್ತವೆ ಮತ್ತು ಆ ಮೂಲಕ ಪರ್ಸನಾಲಿಟಿ ಡೆವಲಪ್ಮೆಂಟ್ಗೆ ದಾರಿ ಮಾಡಿಕೊಡುತ್ತವೆ. ನೀವೇ ಗಮನಿಸಿ ನೋಡಿ, ಹೆಚ್ಚು ಹೆಚ್ಚು ಪ್ರವಾಸ ಮಾಡಿದ ಜನರು, ಧೈರ್ಯವಾಗಿ, ಸಮಚಿತ್ತದಿಂದ ಇರುತ್ತಾರೆ, ಎಂಥದ್ದೇ ಸನ್ನಿವೇಶ ಎದುರಾದರೂ, ಅದರಿಂದ ಪಾರಾಗುವ ದಾರಿ ಹುಡುಕುತ್ತಾರೆ. ಈ ನಿಟ್ಟಿನಲ್ಲಿ ಪ್ರವಾಸಾನುಭವದ, ಪ್ರವಾಸೋದ್ಯಮದ ಪ್ರಾಮುಖ್ಯವನ್ನು ಗುರುತಿಸಬೇಕು.
21ನೇ ಶತಮಾನದ ಆಧುನಿಕ ವ್ಯವಸ್ಥೆಗಳು, ಸಂಪರ್ಕ ಸೌಲಭ್ಯಗಳು, ಉತ್ತಮ ರಸ್ತೆಗಳು ಪ್ರವಾಸಕ್ಕೆ ಹೊಸದೊಂದೇ ಆಯಾಮವನ್ನು ಒದಗಿಸಿವೆ. ಆನ್ಲೈನ್ ಮೂಲಕ ಹೋಟೆಲ್, ಹೋಮ್ಸ್ಟೇ ಕಾಯ್ದಿರಿಸುವ ಸೌಲಭ್ಯವಂತೂ ಅದೆಷ್ಟು ಅನುಕೂಲವೆಂದರೆ, ಯಾವ ಊರಿಗೆ ಯಾವ ಹೊತ್ತಿನಲ್ಲಿ ಬೇಕಾದರೂ, ಯಾರು ಬೇಕಾದರೂ ಹೋಗುವ ಧೈರ್ಯ ಮಾಡಬಹುದು ಮತ್ತು ಅದನ್ನು ಎಲ್ಲರೂ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಕುಟುಂಬದವರು, ಹಿರಿಯ ನಾಗರಿಕರು, ಏಕಾಂಗಿ ಮಹಿಳಾ ಪ್ರವಾಸಿಗರು ಸಹ ಎಲ್ಲೆಂದರಲ್ಲಿ ಸುತ್ತಾಡುವುದು ಇಂದು ತೀರಾ ಸಾಮಾನ್ಯ, ಇದಕ್ಕೆ ಇಂಥ ಸೌಲಭ್ಯಗಳ ಕೊಡುಗೆಯೂ ಇದೆ. ಪ್ರವಾಸೋದ್ಯಮದ ಆರೋಗ್ಯಕರ ಉತ್ಕರ್ಷದ ಈ ದಿನಮಾನಗಳಲ್ಲಿ, ‘ಪ್ರವಾಸಿ ಪ್ರಪಂಚ’ ಎಂಬ ಹೊಸ ವಾರಪತ್ರಿಕೆ ಆರಂಭಗೊಂಡಿರುವುದು ಒಂದು ವಿಶೇಷ ಸುದ್ದಿ.
ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರ ಕನಸಿನ ಕೂಸು ‘ಪ್ರವಾಸಿ ಪ್ರಪಂಚ’. ಈಗ ಅದು ಬಣ್ಣ ಬಣ್ಣದ ಪುಟಗಳೊಂದಿಗೆ ಹೊರ ಬಂದು, ಕನಸು ನನಸಾಗಿದೆ, ನಾಡಿನ ಪ್ರವಾಸಿಗರ, ಆಸಕ್ತರ ಮನ ಗೆದ್ದಿದೆ! ಅದಕ್ಕೆ ಎಷ್ಟು ಡಿಮಾಂಡ್ ಎಂದರೆ, ಮಳೆಗಾಲದಲ್ಲಿ ಬೆಚ್ಚನೆ ಮನೆಯಲ್ಲೇ ಕುಳಿತು ಪ್ರವಾಸದ ಅನುಭವ ಪಡೆಯಬಹುದೆಂಬ ಕಾರಣಕ್ಕಾಗಿ, ದೂರದ ಊರುಗಳಿಂದ ಆ ಪತ್ರಿಕೆ ತಮಗೆ ಕಳಿಸಿ ಎಂಬ ಒತ್ತಡ, ಒತ್ತಾಸೆ, ವರಾತ ಶುರುವಾಗಿದೆ!
‘ಪ್ರವಾಸಿ ಪ್ರಪಂಚ’ವನ್ನು ಹೊರತಂದವರಿಗೆ, ಅದರ ಬೇಡಿಕೆಯನ್ನು ಪೂರ್ತಿಯಾಗಿ ಪೂರೈಸ ಲಾಗುತ್ತಿಲ್ಲ! ಬ್ರಾಡ್ಶೀಟ್ ಗಾತ್ರದ (ದಿನಪತ್ರಿಕೆ ಗಾತ್ರ), 20ಕ್ಕೂ ಅಧಿಕ ವರ್ಣಮಯ ಪುಟಗಳಲ್ಲಿ, ಪುಟಪುಟಗಳಲ್ಲೂ ದೇಶ ವಿದೇಶದ ಪ್ರವಾಸಿ ತಾಣಗಳ ವಿವರಗಳನ್ನು ಓದುಗರಿಗೆ ನೀಡುತ್ತಿರುವುದು ಈ ಪತ್ರಿಕೆಯ ಹೆಗ್ಗಳಿಕೆ. ಜತೆಯಲ್ಲೇ ಹತ್ತಾರು ಹೋಮ್ಸ್ಟೇಗಳು, ವಸತಿ ಗೃಹಗಳು, ಜಂಗಲ್ ಲಾಡ್ಜ್ ನಂಥ ವ್ಯವಸ್ಥೆಗಳ ಸಂಪರ್ಕ ವಿವರ, ಕಾಯ್ದಿರಿಸುವ ಮಾಹಿತಿ, ಗ್ರೂಪ್ ಟೂರ್ ನಡೆಸುವ ಸಂಸ್ಥೆ ಗಳು ಏರ್ಪಡಿಸುವ ಪ್ರವಾಸಗಳ ವಿವರ- ಇವೆಲ್ಲವೂ ಒಬ್ಬ ಪ್ರವಾಸಿಯ ಆಸಕ್ತಿಯನ್ನು ಮತ್ತಷ್ಟು ತಣಿಸಬಲ್ಲವು.
ಇಂದು ವಿದೇಶ ಪ್ರವಾಸ ಮಾಡುವ ಭಾರತೀಯರ ಸಂಖ್ಯೆ ಗಣನೀಯ. ನಿಮ್ಮ ಸುತ್ತಮುತ್ತ ಲಿನವರನ್ನು ಒಮ್ಮೆ ಗಮನಿಸಿದರೆ, ಅವರು ಅಥವಾ ಅವರ ಬಂಧುಗಳು ವಿದೇಶಕ್ಕೆ ಒಮ್ಮೆಯಾ ದರೂ ಹೋಗಿರುತ್ತಾರೆ, ಅಥವಾ ಅವರ ಬಂಧುಗಳೋ, ಸ್ನೇಹಿತರೋ ವಿದೇಶದಲ್ಲಿ ಇದ್ದೇ ಇರುತ್ತಾರೆ!
ಅಷ್ಟು ಸುಲಭ ಎನಿಸಿದೆ ವಿದೇಶಯಾನ; ಆದರೂ, ಹೊಸದಾಗಿ ವಿದೇಶಕ್ಕೆ ಹೊರಟವರಿಗೆ ಸಾಕಷ್ಟು ಮಾರ್ಗದರ್ಶನ ಬೇಕಾದೀತು. ಅಂಥವರಿಗೆಂದೇ ‘ಪ್ರವಾಸಿ ಪ್ರಪಂಚ’ ಪತ್ರಿಕೆಯಲ್ಲಿ ವಿಶೇಷ ಅಂಕಣ ಗಳಿವೆ. ವೀಸಾಗಳ ವಿವರ, ಆನ್ ಅರೈವಲ್ ವೀಸಾ ವಿವರ, ಪಾಸ್ಪೋರ್ಟ್ ಜಾಗ್ರತೆಯ ಕುರಿತು ಮಾಹಿತಿ ಇಂಥ ಹಲವು ವಿವರಗಳು ಈ ಪತ್ರಿಕೆಯಲ್ಲಿವೆ.
ಇನ್ನೂ ಹೆಚ್ಚಿನ ವಿವರ ಬೇಕೆಂದರೆ, ಸಂಪಾದಕರಿಗೆ ನೇರವಾಗಿ ಪತ್ರ ಬರೆದು, ವಿವರ ಕೇಳಬಹುದು! ಇದಕ್ಕೆ ಉತ್ತರಗಳನ್ನು ‘ಆಸ್ಕ್ ದ ಎಡಿಟರ್’ ಅಂಕಣದಲ್ಲಿ ಸ್ವತಃ ಸಂಪಾದಕರೇ ನೀಡುತ್ತಾರೆ! ಈಗಾಗಲೇ ಮುನ್ನೂರಕ್ಕೂ ಹೆಚ್ಚು ವಿದೇಶ ಪ್ರವಾಸಗಳನ್ನು ಕೈಗೊಂಡಿರುವ ಸಂಪಾದಕರು, ಇಂಥ ಪ್ರಶ್ನೆಗಳಿಗೆ ಉತ್ತರ ನೀಡಲು ಸಮರ್ಥರು ಮತ್ತು ಅನುಭವಿಗಳು!
ನಿಜ ಹೇಳಬೇಕೆಂದರೆ, ‘ಪ್ರವಾಸಿ ಪ್ರಪಂಚ’ ಪತ್ರಿಕೆಯ ಆಸ್ಕ್ ದ ಎಡಿಟರ್ ಅಂಕಣವನ್ನು ಓದುವುದೇ ಇನ್ನೊಂದು ಅನನ್ಯ ಅನುಭವ! ನೂರಾರು ಪ್ರವಾಸ ಮಾಡಿರುವ ಸಾಹಿತಿಯೊಬ್ಬರು ಉತ್ತರಿಸುವ ರೀತಿಯನ್ನು ಗಮನಿಸುವುದೇ ಒಂದು ಖುಷಿ! ವಿದೇಶಕ್ಕೆ ಹೋಗದೇ ಇರುವವರೂ ಈ ಅಂಕಣವನ್ನು ಓದಿ, ಆನಂದಿಸಬಲ್ಲರು, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಲ್ಲರು!
ಈಗಾಗಲೇ ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆಯ ಎರಡು ಸಂಚಿಕೆಗಳು ಹೊರಬಂದಿವೆ. ಮೂರನೆಯ ಸಂಚಿಕೆ ಇನ್ನೇನು ಹೊರಬರಲು ಸಿದ್ಧವಾಗಿದೆ. ಪ್ರತಿ ಪುಟವೂ ವರ್ಣಮಯ ವಾಗಿರುವುದು ಈ ಪತ್ರಿಕೆಯ ಒಂದು ವಿಶೇಷ. ಜತೆಗೆ, ಹೊಸ ಹೊಸ ಪ್ರವಾಸಿ ತಾಣಗಳ ಪರಿಚಯವನ್ನು ಮಾಡಿ ಕೊಡುವ ರೀತಿ ಓದುಗರಿಗೆ ಇಷ್ಟವಾದೀತು. ನಮ್ಮ ದೇಶದ ಪ್ರವಾಸಿ ತಾಣಗಳ ಜತೆಯಲ್ಲೇ, ವಿದೇಶಿ ಪ್ರವಾಸಿ ತಾಣಗಳ ಪರಿಚಯ, ಆ ಸ್ಥಳಗಳನ್ನು ನೋಡಿದ ಕನ್ನಡಿಗ ಪ್ರವಾಸಿಗರ ಅನುಭವ ಎಲ್ಲವೂ, ಓದು ಗರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದರಲ್ಲಿ ಸಂಶಯವಿಲ್ಲ. ‘ಪ್ರವಾಸಿ ಪ್ರಪಂಚ’ ಪತ್ರಿಕೆಯಲ್ಲಿ, ಬೇರೆ ಬೇರೆ ತಾಣಗಳ ಪ್ರವಾಸಾನುಭವಗಳನ್ನು ಅನುಭವಿ ಲೇಖಕರು ಹಂಚಿಕೊಂಡಿರುವುದರ ಜತೆಯಲ್ಲೇ,
ಹಲವು ಪುಟ್ಟ ಪುಟ್ಟ ಬರಹಗಳಿವೆ. ಈ ಬರಹಗಳ ವೈಶಿಷ್ಟ್ಯವೆಂದರೆ, ಸ್ವಾರಸ್ಯಕರ ವಿಚಾರಗಳನ್ನ ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ರೀತಿ. ಪ್ರತಿ ಪುಟದಲ್ಲೂ ಇಂಥ ನಾಲ್ಕಾರು ಪುಟ್ಟ ಬರಹಗಳಿದ್ದು, ಚೂರು ಚೂರೇ ಓದುವ ಅಭ್ಯಾಸ ಇರುವವರಿಗೂ ಓದಿನ ಅನುಭವ ನೀಡುತ್ತವೆ, ಜತೆಗೆ ಮಾಹಿತಿಯನ್ನು ಒದಗಿಸುತ್ತವೆ. ಪ್ರವಾಸದ ಸಮಯದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ, ಅಪರೂಪದ ತಾಣಗಳ ಕಿರು ಪರಿಚಯ, ಅಪರೂಪದ ಪೋಟೋಗಳು ಇವನ್ನೆಲ್ಲಾ ಒದಗಿಸುವ ಈ ಕಿರು ಬರಹಗಳು ಒಂದು ರೀತಿಯಲ್ಲಿ ಮಾಹಿತಿಯ ಕಣಜ ಎನ್ನಬಹುದು.
‘ಪ್ರವಾಸಿ ಪ್ರಪಂಚ’ದ ಎರಡನೆಯ ಸಂಚಿಕೆಯಲ್ಲಿ, ಇಂಥ ಸುಮಾರು 20ಕ್ಕೂ ಅಧಿಕ ಕಿರುಬರಹ ಗಳಿದ್ದು, ಪ್ರತಿಯೊಂದು ಪುಟದ ಎಡಭಾಗದಲ್ಲೋ, ತಳಭಾಗದಲ್ಲಿ ಕಾಣಿಸಿಕೊಳ್ಳುವ ಇವುಗಳನ್ನು ಓದುವುದೇ ಖುಷಿ! ಜತೆಗೆ, ಈಗಾಗಲೇ ಪ್ರಸಿದ್ಧವಾಗಿರುವ ಪ್ರವಾಸಿ ತಾಣಗಳ ಜತೆಯಲ್ಲೇ, ನಮ್ಮ ದೇಶದಲ್ಲಿರುವ, ಇನ್ನೂ ಹೆಚ್ಚು ಪ್ರಚಾರಕ್ಕೆ ಬಾರದಿರುವ ಸುಂದರ ಜಾಗಗಳ ಪರಿಚಯವನ್ನೂ ಇಲ್ಲಿ ನೋಡಬಹುದು.
ಅಂದರೆ, ಪ್ರವಾಸಿಗರಿಗೆ ಇಷ್ಟವಾಗುವ, ಹೆಚ್ಚು ಬೆಳಕಿಗೆ ಬಾರದೇ ಇರುವ, ‘ಪ್ರವಾಸಿ ಪೊಟೆನ್ಶಿಯಲ್’ ಇರುವ ಜಾಗಗಳನ್ನು ಗುರುತಿಸಿ, ಅವುಗಳ ಪರಿಚಯವನ್ನು ಓದುಗರಿಗೆ ಮಾಡಿಕೊಡುವ ಜತೆಯಲ್ಲೇ, ಅವುಗಳ ಅಭಿವೃದ್ಧಿಯ ಅವಶ್ಯಕತೆಯನ್ನೂ ಈ ಪತ್ರಿಕೆ ಹೇಳುತ್ತದೆ. ಈ ಅಜ್ಞಾತ ಪ್ರವಾಸಿ ತಾಣಗಳನ್ನು ಗುರುತಿಸುವ ಕೆಲಸ ಎಷ್ಟು ಮುಖ್ಯವಾದುದು ಎಂದರೆ, ಇಂಥ ವಿವರಗಳನ್ನು ಗಮನಿಸಿ, ಸರಕಾರದ ವಿವಿಧ ಇಲಾಖೆಗಳು ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬಹುದು ಮತ್ತು ಆ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು.
ಇದು ಒಟ್ಟಾರೆ ಪ್ರವಾಸೋದ್ಯಮದ ಬೆಳವಣಿಗೆಗೆ ದಾರಿ ಮಾಡಿಕೊಟ್ಟು, ಸ್ಥಳೀಯ ಜನರ ಆದಾಯ ವನ್ನು ಹೆಚ್ಚಿಸುತ್ತದೆ, ವಸತಿ ಗೃಹ, ರೆಸ್ಟೋರೆಂಟ್ ಮೊದಲಾದ ಉದ್ಯಮಗಳನ್ನು ಪ್ರೋತ್ಸಾಹಿಸು ತ್ತದೆ. ಇಂಥ ಹಲವು ತಾಣಗಳು ನಮ್ಮ ದೇಶದಲ್ಲಿವೆ, ನಮ್ಮ ರಾಜ್ಯದಲ್ಲೂ ಇವೆ. ಕನ್ನಡದಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ಪತ್ರಿಕೆ ಎಂದರೆ, ‘ಪ್ರವಾಸಿ ಪ್ರಪಂಚ’ ಮಾತ್ರ!
ಬಹು ಹಿಂದೆ ಒಂದೆರಡು ಪ್ರವಾಸಿ ಪತ್ರಿಕೆಗಳು ಕನ್ನಡದಲ್ಲೂ ಹೊರಬಂದಿದ್ದವಂತೆ; ಅವುಗಳ ಹೆಸರೇ ಇಂದು ಜನಮಾನಸದಿಂದ ಮರೆತುಹೋಗಿದೆ! ಏಷ್ಯನ್ ಟ್ರಾವೆಲ್ಸ್ನವರು 1980ರ ದಶಕದಲ್ಲಿ ಒಂದು ಪ್ರವಾಸಿ ಪತ್ರಿಕೆಯನ್ನು ತರುತ್ತಿದ್ದರೆಂದು ನೆನಪು. ಬ್ರಾಡ್ಶೀಟ್ ಗಾತ್ರದ, 20+ ಪುಟಗಳ ಸಮಗ್ರ ಪ್ರವಾಸಿ ಪತ್ರಿಕೆಯಾಗಿ ‘ಪ್ರವಾಸಿ ಪ್ರಪಂಚ’ ಹೊರ ಹೊಮ್ಮಿದ್ದು, ಪ್ರವಾಸದಲ್ಲಿ ಆಸಕ್ತಿ ಇರುವವರು, ಓದುವ ಆಸಕ್ತರೆಲ್ಲರಿಗೂ ಮೆಚ್ಚಿನ ಪತ್ರಿಕೆಯಾಗಿ ರೂಪುಗೊಳ್ಳುತ್ತಿದೆ.
ಇದಕ್ಕೆ ಪುರಾವೆ ಎಂದರೆ, ‘ಪ್ರವಾಸಿ ಪ್ರಪಂಚ’ ಪತ್ರಿಕೆಯನ್ನು ಓದಬೇಕು ಎನ್ನುವವರ ಬಹುದೊಡ್ಡ ಓದುಗರ ಬಳಗ!