ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Manjunath Bhandary Column: ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

ಜಾತಿಯೆಂಬುದು ಕೇವಲ ಶ್ರಮ ವಿಭಜನೆಯಲ್ಲ, ಅದು ಶ್ರಮಿಕರ ವಿಭಜನೆ ಎಂದೂ, ರಾಜಕೀಯ ಸುಧಾರಣೆಗಿಂತ ಮೊದಲು ಜಾತಿಯೆಂಬ ದೈತ್ಯನನ್ನು ಸಂಹರಿಸಬೇಕೆಂದೂ ಅಂಬೇಡ್ಕರ್ ಪದೇಪದೆ ಒತ್ತಿಹೇಳಿದ್ದರು. ಹಲ್ದ್ವಾನಿಯ ಘಟನೆ, ಆ ದೈತ್ಯ ಇನ್ನೂ ಸತ್ತಿಲ್ಲ ಎಂಬುದನ್ನು ನೋವಿನಿಂದ ನೆನಪಿಸು ತ್ತದೆ. ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಮೇಲಿನ ಕಳಂಕವೆಂದೇ ಪರಿಗಣಿಸಿದ್ದರು. ಅದನ್ನು ದೇವರು ಮತ್ತು ಮಾನವೀಯತೆಯ ವಿರುದ್ಧದ ಪಾಪ ಎಂದು ಬಣ್ಣಿಸಿ, ಹರಿಜನೋದ್ಧಾರವನ್ನು ತಮ್ಮ ಜೀವಮಾನದ ಸಂಕಲ್ಪವನ್ನಾಗಿಸಿಕೊಂಡಿದ್ದರು

ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

-

Profile
Ashok Nayak Aug 17, 2026 7:11 AM

ಸಮ ಸಮಾಜ

ಮಂಜುನಾಥ್‌ ಭಂಡಾರಿ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಆ ವೇದಿಕೆಯನ್ನು ಶುದ್ಧೀಕರಣ ಮಾಡಲಾಯಿತು ಎಂಬ ವರದಿ ಕೇಳಿ ಬಂದಾಗ, ಇಡೀ ದೇಶದ ಆತ್ಮಸಾಕ್ಷಿಯೇ ತಲ್ಲಣಗೊಂಡಿತು.

ಒಬ್ಬ ವ್ಯಕ್ತಿ ಎಂಬ ಕಾರಣಕ್ಕಾಗಿ ಅಲ್ಲ, ಒಬ್ಬ ದಲಿತ ಎಂಬ ಕಾರಣಕ್ಕಾಗಿ ಒಂದು ವೇದಿಕೆ ಅಪವಿತ್ರ ವಾಯಿತೆಂಬ ಭಾವನೆ ಮೂಡಿಸಿದ ಈ ಘಟನೆ, ಕೇವಲ ಒಬ್ಬ ಹಿರಿಯ ನಾಯಕರಿಗೆ ಮಾಡಿದ ಅವಮಾನವಲ್ಲ; ಅದು ಭಾರತದ ಸಂವಿಧಾನದ ಆತ್ಮಕ್ಕೇ ಮಾಡಿದ ಆಘಾತ. ಸಂವಿಧಾನ ಅಸ್ಪೃಶ್ಯತೆಯನ್ನು ಕೊಂದಿದ್ದರೆ, ಜಾತಿ ಮನಸ್ಥಿತಿ ಅದನ್ನು ಇನ್ನೂ ಬದುಕಿಸುತ್ತಿದೆ. ಈ ಘಟನೆಯನ್ನು ನಾನು ಅತ್ಯಂತ ತೀವ್ರ ಪದಗಳಲ್ಲಿ ಖಂಡಿಸುತ್ತೇನೆ.

ಮಲ್ಲಿಕಾರ್ಜುನ ಖರ್ಗೆ ಅವರು ಬರೀ ಒಂದು ಪಕ್ಷದ ಅಧ್ಯಕ್ಷರಲ್ಲ; ಅವರು ಐದು ದಶಕಗಳ ಸಾರ್ವಜನಿಕ ಸೇವೆಯ ಮೂಲಕ ದೇಶದ ಗೌರವಕ್ಕೆ ಪಾತ್ರರಾದ ಹಿರಿಯ ರಾಜಕಾರಣಿ. ಬಡತನದಿಂದ ಎದ್ದು ಬಂದು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ, ಸಂಸತ್ತಿನ ಅತ್ಯುನ್ನತ ಸ್ಥಾನಗಳಿಗೇರಿದ ಅವರ ಬದುಕೇ ಒಂದು ಸ್ಪೂರ್ತಿಗಾಥೆ. ಅಂತಹ ವ್ಯಕ್ತಿಯ ಸ್ಪರ್ಶವನ್ನೂ ಸಹಿಸಲಾಗದ ಮನಸ್ಥಿತಿ ಇನ್ನೂ ನಮ್ಮ ಸಮಾಜದ ಒಂದು ವರ್ಗದಲ್ಲಿ ಜೀವಂತವಾಗಿದೆಯೆಂದರೆ, ನಾವು 1947ರಿಂದ ಇಂದಿನವರೆಗೆ, ಅಂದರೆ ಸ್ವಾತಂತ್ರ್ಯದ ಸುಮಾರು 80 ವರ್ಷಗಳ ನಂತರವೂ, ನಿಜವಾದ ಅರ್ಥದಲ್ಲಿ ಸ್ವತಂತ್ರರಾಗಿಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು.

ಸಮಾಜ ಈಡೇರಿಸದ ಹೊಣೆ ಸ್ವಾತಂತ್ರ್ಯ ಬಂದಾಗ ನಾವು ರಾಜಕೀಯ ಪ್ರಜಾಪ್ರಭುತ್ವವನ್ನಷ್ಟೇ ಪಡೆದುಕೊಂಡಿರಲಿಲ್ಲ; ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಭರವಸೆಯನ್ನೂ ನೀಡಿತ್ತು. ಸಂವಿಧಾನ ಸಭೆಯಲ್ಲಿ ಬಾಬಾಸಾಹೇಬರು ಎಚ್ಚರಿಸಿದ್ದ ಮಾತು ಇಂದಿಗೂ ಪ್ರಸ್ತುತ: ರಾಜಕೀಯ ಸಮಾನತೆಯನ್ನು ನಾವು ಗಳಿಸಿದ್ದೇವೆ, ಆದರೆ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಅಸಮಾನತೆ ಮುಂದುವರಿದರೆ, ಈ ವಿರೋಧಾಭಾಸವನ್ನು ನಾವು ಎಷ್ಟು ದಿನ ಹೊತ್ತುಕೊಂಡು ಹೋಗುತ್ತೇವೆ ಎಂದು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ: Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ಜಾತಿಯೆಂಬುದು ಕೇವಲ ಶ್ರಮ ವಿಭಜನೆಯಲ್ಲ, ಅದು ಶ್ರಮಿಕರ ವಿಭಜನೆ ಎಂದೂ, ರಾಜಕೀಯ ಸುಧಾರಣೆಗಿಂತ ಮೊದಲು ಜಾತಿಯೆಂಬ ದೈತ್ಯನನ್ನು ಸಂಹರಿಸಬೇಕೆಂದೂ ಅಂಬೇಡ್ಕರ್ ಪದೇಪದೆ ಒತ್ತಿಹೇಳಿದ್ದರು. ಹಲ್ದ್ವಾನಿಯ ಘಟನೆ, ಆ ದೈತ್ಯ ಇನ್ನೂ ಸತ್ತಿಲ್ಲ ಎಂಬುದನ್ನು ನೋವಿನಿಂದ ನೆನಪಿಸುತ್ತದೆ. ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಮೇಲಿನ ಕಳಂಕ ವೆಂದೇ ಪರಿಗಣಿಸಿದ್ದರು. ಅದನ್ನು ದೇವರು ಮತ್ತು ಮಾನವೀಯತೆಯ ವಿರುದ್ಧದ ಪಾಪ ಎಂದು ಬಣ್ಣಿಸಿ, ಹರಿಜನೋದ್ಧಾರವನ್ನು ತಮ್ಮ ಜೀವಮಾನದ ಸಂಕಲ್ಪವನ್ನಾಗಿಸಿ ಕೊಂಡಿದ್ದರು.

ಸ್ವರಾಜ್ಯಕ್ಕಿಂತ ಮೊದಲು ಅಸ್ಪೃಶ್ಯತೆಯ ನಿವಾರಣೆಯಾಗಬೇಕೆಂದು ಅವರು ಪದೇಪದೆ ಒತ್ತಾಯಿ ಸಿದ್ದರು; ಏಕೆಂದರೆ ಒಳಗೊಳಗೇ ಅಸಮಾನತೆಯನ್ನು ಪೋಷಿಸುವ ಸಮಾಜಕ್ಕೆ ನಿಜವಾದ ಸ್ವಾತಂತ್ರ್ಯದ ಅರ್ಥವೇ ತಿಳಿಯದು ಎಂಬುದು ಅವರ ನಿಲುವಾಗಿತ್ತು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ಮಾರ್ಗಗಳ ಬಗ್ಗೆ ಭಿನ್ನಾಭಿಪ್ರಾಯ ವಿದ್ದರೂ, ಅಸ್ಪೃಶ್ಯತೆಯೆಂಬುದು ನಾಗರಿಕ ಸಮಾಜಕ್ಕೊಂದು ಕಳಂಕ ಎಂಬ ವಿಷಯದಲ್ಲಿ ಇಬ್ಬರೂ ಒಂದೇ ದನಿಯಲ್ಲಿ ಮಾತನಾಡಿ ದ್ದರು ಎಂಬುದನ್ನು ನಾವು ಮರೆಯಬಾರದು.

ಕರ್ನಾಟಕದ ನೆಲದ ಧ್ವನಿ ನಮ್ಮ ಕರ್ನಾಟಕದ ನೆಲದಲ್ಲಿಯೇ, ಎಂಟುನೂರು ವರ್ಷಗಳ ಹಿಂದೆಯೇ, ಬಸವಣ್ಣನವರು ಜಾತಿರಹಿತ, ಸಮಾನತೆಯ ಸಮಾಜದ ಕನಸು ಕಂಡಿದ್ದರು. ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ’ ಎಂಬ ಅವರ ವಚನ, ಜಾತಿ-ಮತ-ಪಂಥಗಳ ಗೋಡೆಗಳನ್ನು ಒಡೆದು, ಪ್ರತಿಯೊಬ್ಬ ಮನುಷ್ಯನನ್ನೂ ನಮ್ಮವನೆಂದು ಸ್ವೀಕರಿಸಬೇಕೆಂಬ ಕರೆಯನ್ನು ಕೊಡುತ್ತದೆ.

ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗಗಳ ಶರಣರನ್ನು ಒಟ್ಟುಗೂಡಿಸಿ, ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನವರ ಕ್ರಾಂತಿ, ಜಗತ್ತಿಗೇ ಸಮಾನತೆಯ ಪಾಠ ಕಲಿಸಿದ ಚಳುವಳಿ. ಅಂತಹ ಶ್ರೀಮಂತ ಪರಂಪರೆಯ ನಾಡಿನ ಪ್ರತಿನಿಧಿಯಾಗಿ, ಬಸವಣ್ಣನವರ ಆದರ್ಶಗಳನ್ನು ನಂಬಿ ಬೆಳೆದ ನನಗೆ, ಇಂತಹ ಘಟನೆಗಳು ಆಳವಾದ ನೋವು ಮತ್ತು ಆಕ್ರೋಶ ಮೂಡಿಸುತ್ತವೆ. ಈ ಘಟನೆಯನ್ನು ಯಾವುದೇ ಪಕ್ಷ ರಾಜಕೀಯದ ಚೌಕಟ್ಟಿನಲ್ಲಿ ನೋಡುವುದು ತಪ್ಪಾಗುತ್ತದೆ. ಇದು ಎಲ್ಲ ಪಕ್ಷ, ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನೂ ಆತ್ಮಾವ ಲೋಕನ ಮಾಡಿಕೊಳ್ಳಬೇಕಾದ ಸಂದರ್ಭ.

ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ಸ್ಪಷ್ಟವಾಗಿ ನಿಷೇಧಿಸಿ, ಅದನ್ನು ಆಚರಿಸುವುದು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ ದಶಕಗಳೇ ಕಳೆದಿವೆ. ಆದರೂ, ಸಾರ್ವಜನಿಕ ವೇದಿಕೆ ಯೊಂದನ್ನು ಒಬ್ಬ ದಲಿತ ಮುಟ್ಟಿದನೆಂಬ ಕಾರಣಕ್ಕೆ ಶುದ್ಧೀಕರಣ ಮಾಡಬೇಕೆಂಬ ಮನಸ್ಥಿತಿ ಜೀವಂತವಿದೆಯೆಂದರೆ, ಕಾನೂನು ಬರೆದ ಮಾತ್ರಕ್ಕೆ ಮನಸ್ಸುಗಳು ಬದಲಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಒಬ್ಬ ಹಿರಿಯ ರಾಷ್ಟ್ರೀಯ ನಾಯಕನಿಗೇ ಈ ಪರಿಸ್ಥಿತಿಯಿದ್ದರೆ, ಹಳ್ಳಿ-ಹಳ್ಳಿಗಳಲ್ಲಿ, ಬಾವಿ-ಕೆರೆಗಳ ಬಳಿ, ದೇವಸ್ಥಾನಗಳ ಬಾಗಿಲಲ್ಲಿ ಇಂದಿಗೂ ಅವಮಾನ ಅನುಭವಿಸು ತ್ತಿರುವ ಸಾಮಾನ್ಯ ದಲಿತ ಬಾಂಧವರ ಸ್ಥಿತಿ ಏನಿರಬಹುದೆಂದು ನಾವು ಊಹಿಸಿಕೊಳ್ಳಲೂ ಬೆಚ್ಚಿಬೀಳಬೇಕು.

ಕರ್ನಾಟಕ ಸರ್ಕಾರದ ಬದ್ಧತೆ ಕರ್ನಾಟಕ ಆಡಳಿತದ ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ಸರಕಾರ ಸಾಮಾಜಿಕ ನ್ಯಾಯದ ಪರಂಪರೆಯನ್ನು ಎತ್ತಿಹಿಡಿಯುವ ಬದ್ಧತೆಯನ್ನು ಹೊಂದಿದೆ. ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಆದರ್ಶಗಳನ್ನು ಕೇವಲ ಭಾಷಣಗಳಲ್ಲಿ ಉಲ್ಲೇಖಿಸದೆ, ಶಿಕ್ಷಣ, ಆಡಳಿತ ಮತ್ತು ಸಾಮಾಜಿಕ ಸುಧಾರಣೆಯ ಪ್ರತಿಯೊಂದು ಹೆಜ್ಜೆಯಲ್ಲೂ ಅವುಗಳನ್ನು ಆಚರಣೆಗೆ ತರುವುದೇ ನಮ್ಮ ಗುರಿ.

ಇಂತಹ ಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ಸಮಾಜದ ಮನಸ್ಥಿತಿಯನ್ನೇ ಬದಲಾಯಿಸುವ ದೀರ್ಘಕಾಲೀನ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ. ಇದಕ್ಕಾಗಿಯೇ ನಮ್ಮ ಸರಕಾರ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಕಾಯ್ದೆ ಎಂಬ ಐತಿಹಾಸಿಕ ಕಾಯ್ದೆಯನ್ನು ಜಾರಿ ಮಾಡಿದೆ. ಯಾವುದೇ ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1 ಲಕ್ಷ ರೂಪಾಯಿ ವರೆಗೂ ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದು ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಬದ್ಧತೆಗೆ ಜೀವಂತ ಸಾಕ್ಷಿ. ಉತ್ತರಾಖಂಡದಲ್ಲಿ ನಡೆದಂತಹ ಘಟನೆಗಳನ್ನು ಕಂಡು ಮೌನವಾಗಿರುವುದು ಅಪರಾಧಕ್ಕೆ ಪರೋಕ್ಷ ಸಮ್ಮತಿ ನೀಡಿದಂತೆ. ಆದ್ದರಿಂದ, ಪಕ್ಷಭೇದ ಮರೆತು, ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರೂ ಈ ಘಟನೆಯ ವಿರುದ್ಧ ದನಿಯೆತ್ತ ಬೇಕೆಂದು ನಾನು ಕರೆ ನೀಡುತ್ತೇನೆ.

ಖರ್ಗೆ ಅವರಿಗೆ ಆಗಿರುವ ಅವಮಾನ, ಅವರೊಬ್ಬರಿಗೆ ಸೀಮಿತವಾದುದಲ್ಲ; ಸಮಾನತೆ, ಘನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆಗಿರುವ ಅವಮಾನ. ಮುಂದಿನ ಹಾದಿ ಸ್ವಾತಂತ್ರ್ಯದ 80 ವರ್ಷಗಳ ಸಂಭ್ರಮದ ಈ ಹೊತ್ತಿನಲ್ಲಿ, ನಾವು ಆರ್ಥಿಕ ಪ್ರಗತಿ, ತಾಂತ್ರಿಕ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಿರುವಾಗಲೇ, ಸಾಮಾಜಿಕ ಪ್ರಗತಿಯ ವಿಷಯದಲ್ಲಿ ನಾವಿನ್ನೂ ಎಷ್ಟು ಹಿಂದುಳಿದಿದ್ದೇವೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ.

ಅಂಬೇಡ್ಕರ್ ಅವರು ಹೇಳಿದಂತೆ, ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ ಎಂಬ ಮಂತ್ರವನ್ನು ನಾವಿಂದು ಹೊಸ ಅರ್ಥದಲ್ಲಿ ಸ್ವೀಕರಿಸಬೇಕಿದೆ- ಶಿಕ್ಷಣದ ಮೂಲಕ ಮನಸ್ಥಿತಿ ಬದಲಾಯಿಸಿ, ಸಂಘಟಿತರಾಗಿ ಜಾಗೃತಿ ಮೂಡಿಸಿ, ಸಾಮಾಜಿಕ ಅಸಮಾನತೆಯ ವಿರುದ್ಧ ಎಡಬಿಡದೆ ಹೋರಾಡುವ ಅಗತ್ಯವಿದೆ. ಬಸವಣ್ಣನವರ ಕಲ್ಯಾಣ ರಾಜ್ಯ, ಗಾಂಧೀಜಿಯವರ ರಾಮರಾಜ್ಯ, ಅಂಬೇಡ್ಕರ್ ಅವರ ಸಂವಿಧಾನ- ಈ ಮೂರೂ ನಮಗೆ ಒಂದೇ ಸಂದೇಶ ಕೊಡುತ್ತವೆ: ಮನುಷ್ಯ ಮನುಷ್ಯನ ನಡುವಿನ ಗೋಡೆಗಳನ್ನು ಒಡೆಯುವುದೇ ನಿಜವಾದ ಸ್ವಾತಂತ್ರ್ಯ. ಆ ಗುರಿ ಇನ್ನೂ ಪೂರ್ಣಗೊಂಡಿಲ್ಲವೆಂಬುದನ್ನು ಒಪ್ಪಿಕೊಂಡು, ಹೊಸ ಸಂಕಲ್ಪದೊಂದಿಗೆ ಮುನ್ನಡೆಯುವುದೇ ಇಂದಿನ ತುರ್ತು ಅಗತ್ಯ.

ಸಮಾನತೆಯ ಸಮಾಜ ನಿರ್ಮಾಣದ ಈ ಹೋರಾಟದಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂಬ ಭರವಸೆಯನ್ನು ನಾನು ಎಲ್ಲರಿಗೂ ನೀಡುತ್ತೇನೆ.

(ಕಾರ್ಯಾಧ್ಯಕ್ಷರು, ಕೆಪಿಸಿಸಿ ಹಾಗೂ ಶಾಸಕರು, ವಿಧಾನಪರಿಷತ್)