ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಕಪ್ಪು ಮಸಿ ಬಳಿಸಿಕೊಂಡ ಬೆಂಗಳೂರು

ಹದಿನೆಂಟು ವರ್ಷದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕಪ್ ಗೆದ್ದ ಆರ್‌ಸಿಬಿ ತಂಡದ ಆಟಗಾರರನ್ನು ಮತ್ತು ವಿಶೇಷವಾಗಿ ಕೊಹ್ಲಿ ಮೊದಲಾದ ಜನಪ್ರಿಯ ಆಟಗಾರರನ್ನು ನೋಡ ಲೆಂದು ಹರಿದು ಬಂದ ಜನಸಾಗರವು, ಅಂಕೆ ಮೀರಿ ವರ್ತಿಸಿತು, ಕಾಲ್ತುಳಿತ ಸಂಭವಿಸಿತು, ಅದರಿಂದಾಗಿ ಹಲವರು ಸತ್ತರು; ಇನ್ನಷ್ಟು ಜನ ಗಾಯಗೊಂಡರು.

ಕಪ್ಪು ಮಸಿ ಬಳಿಸಿಕೊಂಡ ಬೆಂಗಳೂರು

ಶಶಾಂಕಣ

ಕಪ್ಪು ಬೇಕು, ಕಪ್ಪು ನಮಗೇ ಬೇಕು’ ಎಂದು ಕಳೆದ ಹಲವು ವಾರಗಳಿಂದ ಕಿರುಚಾಡಿ, ಕೂಗಾಡಿ, ಉತ್ಸಾಹದಿಂದ ಘೋಷಣೆ ಮಾಡಿದ ಕರ್ನಾಟಕದ ಜನರು, ಕೊನೆಗೆ ಆ ‘ಕಪ್ಪು’ ದೊರೆತ ಪರಿಣಾಮ ವಾಗಿಯೋ ಎಂಬಂತೆ ನಡೆದ ಭೀಕರ ದುರಂತದಿಂದ, ಇಂದು ಅಕ್ಷರಶಃ ಆಘಾತಕ್ಕೆ ಒಳಗಾಗಿದ್ದಾರೆ.

ಐಪಿಎಲ್ ಎಂಬ ಅತಿ ಉನ್ಮಾದಕಾರಿ ಕ್ರಿಕೆಟ್ ಸರಣಿಯ ಫೈನಲ್‌ನಲ್ಲಿ ಆರ್‌ಸಿಬಿ ತಂಡದವರು ಜಯ ಗಳಿಸಿ, ‘ಕಪ್ಪು ನಮ್ಮದು’ ಎಂದು ಕುಣಿದಾಡುತ್ತಾ, ಟಿವಿಗಳಲ್ಲಿ ತಮ್ಮ ವಿಚಿತ್ರ ವರ್ತನೆಯನ್ನು ತೋರುತ್ತಾ, ಜನಸಾಮಾನ್ಯರನ್ನು ಹುಚ್ಚೆಬ್ಬಿಸಿದರು. ಆದರೆ, ಅದರ ಮರುದಿನ (ನಿಜ ಮರುದಿನ; ಸಂಭ್ರಮಾಚರಣೆಗೆ ಅಷ್ಟೊಂದು ಅವಸರವೇಕೆ? ರಕ್ಷಣಾ ಸಿದ್ಧತೆ ಮಾಡಿಕೊಳ್ಳಬೇಡವೆ?) ಸಂಭ್ರಮಾ ಚರಣೆ ನಡೆಸಲೆಂದು ದೂರದ ಅಹಮದಾಬಾದ್‌ನಿಂದ ಬೆಂಗಳೂರಿಗೆ ಹಾರಿಬಂದ ಕ್ರಿಕೆಟ್ ಆಟಗಾರರನ್ನು ನೋಡಲೆಂದು ಜಮಾವಣೆಗೊಂಡ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಉನ್ಮಾದದ ನಡುವೆ, ಭೀಕರ ಕಾಲ್ತುಳಿತ ಸಂಭವಿಸಿದೆ.

ಹನ್ನೊಂದು ಜನ ಯುವ ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟ ಘಟನೆಯು, ಇಡೀ ನಾಡನ್ನು ಆಘಾತಕ್ಕೆ ದೂಕಿದೆ. ಈ ಆಘಾತದಿಂದ ನಮ್ಮ ರಾಜ್ಯದ ಜನರು, ಕ್ರಿಕೆಟ್ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ.

ಹದಿನೆಂಟು ವರ್ಷದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕಪ್ ಗೆದ್ದ ಆರ್‌ಸಿಬಿ ತಂಡದ ಆಟಗಾರರನ್ನು ಮತ್ತು ವಿಶೇಷವಾಗಿ ಕೊಹ್ಲಿ ಮೊದಲಾದ ಜನಪ್ರಿಯ ಆಟಗಾರರನ್ನು ನೋಡ ಲೆಂದು ಹರಿದು ಬಂದ ಜನಸಾಗರವು, ಅಂಕೆ ಮೀರಿ ವರ್ತಿಸಿತು, ಕಾಲ್ತುಳಿತ ಸಂಭವಿಸಿತು, ಅದರಿಂದಾಗಿ ಹಲವರು ಸತ್ತರು; ಇನ್ನಷ್ಟು ಜನ ಗಾಯಗೊಂಡರು.

ಇದನ್ನೂ ಓದಿ: Shashidhara Halady Column: ಸ್ಪೂರ್ತಿ ತುಂಬುವ ಬರಹಗಳು

ಆ ಮೂಲಕ ‘ಕಪ್ಪು ನಮ್ಮದೇ’ ಎನ್ನುವ ಕೂಗಿನ ಕ್ರೂರ ಪ್ರತಿಧ್ವನಿಯೋ ಎಂಬಂತೆ, ಬೆಂಗಳೂರಿನ ಮುಖಕ್ಕೇ ಕಪ್ಪು ಬಣ್ಣ ಬಳಿದಂತಾಯಿತು. ಸಜ್ಜನರ ನಗರ ಎಂದು ಹೆಸರು ಗಳಿಸಿರುವ ಬೆಂಗಳೂರು, ಇದೇ ಮೊದಲ ಬಾರಿಗೆ ಕಾಲ್ತುಳಿತದಂಥ ಭೀಕರ ಘಟನೆಗೆ ಸಾಕ್ಷಿಯಾಯಿತು. ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕದಲ್ಲಿ ನಡೆದಿರುವ ಈ ದುರ್ಘಟನೆಯು, ಬೆಂಗಳೂರಿನ ಘನತೆಗೇ ಮಸಿ ಬಳಿದದ್ದು ಒಂದೆಡೆಯಾದರೆ, ಐಪಿಎಲ್‌ನಂಥ ಅತಿ ಉನ್ಮಾದ ತರುವ ಕ್ರಿಕೆಟ್ ಪಂದ್ಯಾ ವಳಿಯು, ಅಮಾಯಕ ಜನರನ್ನು ಅದಾವ ಮಟ್ಟದ ದುಸ್ಥಿತಿಗೆ, ಉನ್ಮಾದಕ್ಕೆ ತಳ್ಳಬಲ್ಲದು ಎಂದು ಇನ್ನೊಂದೆಡೆ ತೋರಿಸಿಕೊಟ್ಟಿದೆ ಮತ್ತು ಆ ಮೂಲಕ ಎಚ್ಚರಿಕೆಯ ಗಂಟೆಯನ್ನೂ ಬಡಿದಿದೆ: ಭವಿಷ್ಯದಲ್ಲಿ ಇಂಥ ದುರ್ಘಟನೆ ನಡೆಯದಂತೆ ಮಾಡಲು, ಒಂದು ಪ್ರಜ್ಞಾವಂತ ಸಮಾಜ ಮತ್ತು ಅಧಿಕಾರಶಾಹಿಯು ಏನೇನು ಮಾಡಬೇಕು, ಮಾಡಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

ಹಾಗೆ ನೋಡಿದರೆ, ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ಐಪಿಎಲ್ ಪಂದ್ಯಾವಳಿಯು ಸಾಂಪ್ರ ದಾಯಿಕ ಕ್ರಿಕೆಟ್‌ನಿಂದ ಹೊರತಾದ ಒಂದು ಸ್ಪರ್ಧೆ; ಮುಖ್ಯವಾಗಿ ಆಟಗಾರರಲ್ಲಿ, ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ಉನ್ಮಾದ ತುಂಬಬಲ್ಲ, ಹುಚ್ಚು ರೋಚಕತೆಯನ್ನು ನೀಡಬಲ್ಲ, ಅಡ್ರಿನಲ್ ಸ್ರಾವದ ಗರಿಷ್ಠ ಹಾನಿಯನ್ನು ಮಾಡಬಲ್ಲ ಪಂದ್ಯಾವಳಿ. ಐಪಿಎಲ್ ಆರಂಭಗೊಂಡ ಸಮಯದಲ್ಲಿ, ಇದೆಂಥ ಅಸಂಬದ್ಧ ನಿಯಮಗಳು ಎಂದು ಗೊಣಗಿದವರ ಸಂಖ್ಯೆ ಕಡಿಮೆಯಿ ರಲಿಲ್ಲ.

ಕ್ರಿಕೆಟ್ ಎಂಬುದು ಸಜ್ಜನರ ಆಟ ಎಂದೇ ಶತಶತಮಾನಗಳಿಂದ ಹೆಸರಾಗಿತ್ತು. ಸಿರಿವಂತರ ಆಟ, ವಸಾಹತು ದೊರೆಗಳ ಆಟ ಎಂದೂ ವಿಶ್ಲೇಷಣೆ ಮಾಡಲಾಗಿತ್ತು. ಹನ್ನೊಂದು ಜನ ಮೂರ್ಖರು ಒಂದು ಪುಟ್ಟ ಬಾಲಿನ ಹಿಂದೆ ಓಡಾಡುತ್ತಾ, ಐದು ದಿನಗಳನ್ನು ಕಳೆದು, ಕೊನೆಯಲ್ಲಿ ಡ್ರಾ ಮಾಡಿ ಕೊಳ್ಳುವಂಥ ಶತ ಸೋಮಾರಿಗಳ ಆಟ ಎಂಬ ಹಾಸ್ಯಮಿಶ್ರಿತ ಟೀಕೆಯೂ ಕ್ರಿಕೆಟ್ ಮೇಲೆ ಇತ್ತು.

ಆದರೆ, ಒಂದು ದಿನದ ಸೀಮಿತ ಓವರ್‌ಗಳ ಕ್ರಿಕೆಟ್ ಬಂದ ನಂತರ, ಆಟದಲ್ಲಿ ರೋಚಕತೆ ತುಂಬಿತು. ಫಲಿತಾಂಶ ಖಚಿತ ಎಂದಾದಾಗ, ಸಹಜವಾಗಿ ಜನರಲ್ಲಿ ಕುತೂಹಲವೂ ಹೆಚ್ಚು. ನಂತರದ ದಿನಗಳಲ್ಲಿ 20-20 ಕ್ರಿಕೆಟ್ ಇನ್ನಷ್ಟು ಜನಪ್ರಿಯಗೊಂಡ ನಂತರ, ಕ್ರಿಕೆಟ್‌ನಲ್ಲಿ ಉನ್ಮಾದ, ಹುಚ್ಚು ಆವೇಶ ಜಾಸ್ತಿಯಾಯಿತು. ಜತೆಜತೆಗೇ ಹುಚ್ಚು ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಾಯಿತು. ಐಪಿಎಲ್ ಪಂದ್ಯಾವಳಿಯಲ್ಲಿ ತಂಡಗಳನ್ನು ರೂಪಿಸುವಾಗ ಮಾಡಿಕೊಂಡ ನಿಯಮಾವಳಿಗಳು, ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಎಲ್ಲವೂ, ಈ ಕಿರು ಕ್ರಿಕೆಟ್ ಆವೃತ್ತಿಗೆ ಉನ್ಮಾದ ತುಂಬು ವತ್ತಲೇ ಗಮನ ಹರಿಸಿವೆ.

ದೊಡ್ಡ ದೊಡ್ಡ ಉದ್ಯಮಪತಿಗಳು ಕ್ರಿಕೆಟ್ ತಂಡವನ್ನು ಪ್ರಾಯೋಜಿಸಿ, ಆರಂಭಿಸಲು ಬಂಡವಾಳ ಹೂಡಿದ್ದು ಐಪಿಎಲ್‌ನ ಭಾಗವೇ ಆಗಿಬಿಟ್ಟಿದೆ. ಮದ್ಯ ಮತ್ತು ಇತರ ಆಲ್ಕೋಹಾಲ್ ಮಿಶ್ರಿತ ಪಾನೀಯಗಳನ್ನು ತಯಾರಿಸುವ ವಿಜಯ್ ಮಲ್ಯ ಸೇರಿದಂತೆ, ಹಲವು ಉದ್ಯಮಪತಿಗಳು ತಂಡಗಳನ್ನು ಕಟ್ಟಿದರು. ಅದರಲ್ಲಿ ಒಂದು ತಂಡವೇ ಆರ್‌ಸಿಬಿ. ಹೆಸರಿನಲ್ಲೇ ರೋಚಕ ಎನಿಸುವ ಮಾದಕತೆಯನ್ನು ತುಂಬಿಕೊಂಡಿದೆ ಆರ್ ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು).

ಆ ಹೆಸರಿನ ಕೊನೆಯ ಪದವು ಬೆಂಗಳೂರು ಆಗಿರುವುದರಿಂದ, ಬೆಂಗಳೂರಿನವರಿಗೆ, ಕರ್ನಾಟಕ ದವರಿಗೆ ಇದು ತಮ್ಮ ತಂಡ ಎಂಬ ಅಭಿಮಾನ. ಇಲ್ಲಿ ಅಂಧ ಅಭಿಮಾನವೂ ಸೇರಿದೆ! ಏಕೆಂದರೆ, ಆರ್‌ಸಿಬಿ ತಂಡದಲ್ಲಿ ಅದೆಷ್ಟೋ ಬಾರಿ ಕರ್ನಾಟಕದ ಆಟಗಾರರೇ ಇರುತ್ತಿರಲಿಲ್ಲ; ಕರ್ನಾಟಕದ ಹಲವು ಉತ್ತಮ ಆಟಗಾರರು ಬೇರೆ ಬೇರೆ ತಂಡಗಳಿಗೆ ಆಡುತ್ತಿದ್ದಾರೆ!

ಈ ರೀತಿ ಆಗಲು, ಐಪಿಎಲ್ ಆಟಗಾರರ ಆಯ್ಕೆ ಪ್ರಕ್ರಿಯೆಯೇ ಕಾರಣ. ಇಲ್ಲಿ ಆಟಗಾರರನ್ನು ಹರಾಜು ಹಾಕಿ ‘ಕೊಂಡುಕೊಳ್ಳಲಾಗುತ್ತದೆ’! ಈ ರೀತಿ, ಹರಾಜಿನ ಮೂಲಕ ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಪದ್ಧತಿ ಆರಂಭವಾದಾಗ, ನಮ್ಮ ದೇಶದ ಹಿರಿಯ ಕ್ರಿಕೆಟ್ ವಿಶ್ಲೇಷಕರು, ಆಟಗಾರರು ಅದನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದುಂಟು.

ಎಮ್ಮೆ ಕೋಣಗಳನ್ನು ಹರಾಜಿನಲ್ಲಿ ಖರೀದಿಸುವ ರೀತಿ, ಕ್ರಿಕೆಟ್ ಆಟಗಾರರನ್ನು ಅತಿ ಹೆಚ್ಚು ಹಣ ನೀಡಿ ಆಯ್ಕೆ ಮಾಡುವುದು ಇದೆಂಥ ಹುಚ್ಚುತನ ಎಂದು ಆರಂಭದಲ್ಲಿ ಟೀಕಿಸಿದವರು ಹಲವರು. ಆದರೆ, ಐಪಿಎಲ್ ಪಂದ್ಯಾವಳಿಯು ಇಂಥ ನೂರಾರು ಟೀಕೆಗಳನ್ನು ಜಯಿಸಿ, ಕಳೆದ ಹದಿನೆಂಟು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ ಎಂಬುದೂ ಅಷ್ಟೇ ಸತ್ಯ.

2007ರಲ್ಲಿ ಆರಂಭಗೊಂಡ ಐಪಿಎಲ್ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ ಟೀಕೆಗಳನ್ನು ಜಯಿಸಿ, ಯಶಸ್ವಿಯಾಗಿ ನಡೆಯುತ್ತಲೂ ಇದೆ, ಕೋಟ್ಯಂತರ ವೀಕ್ಷಕರನ್ನು ಹೋಂದಿದೆ; ಅಂದ ಮೇಲೆ, ಆರಂಭಿಕ ಟೀಕೆಗಳು, ಈಗಲೂ ಎದುರಾಗುವ ಕೆಲವು ಟೀಕೆಗಳು ಎಲ್ಲವನ್ನೂ ಐಪಿಎಲ್ ಜಯಿಸಿಕೊಂಡಿದೆ ಎಂದೇ ಅರ್ಥ.

ಆದರೆ, ಆಟಗಾರರನ್ನು ಹರಾಜಿನಲ್ಲಿ ಕೊಳ್ಳುವುದು, ಸೀಮಿತ ಸಂಖ್ಯೆಯ ಆಟಗಾರರನ್ನು ವಿದೇಶ ದಿಂದ ತರಿಸುವುದು ಮೊದಲಾದ ನಿಯಮಗಳು, ಈ ಪಂದ್ಯಾವಳಿಯ ಖದರನ್ನೇ ಬದಲಿಸಿದವು; ಕ್ರಿಕೆಟ್ ಎಂಬ ಸಾಂಪ್ರದಾಯಿಕ ಆಟಕ್ಕಿಂತ ಭಿನ್ನ ಈ ಐಪಿಎಲ್ ಪಂದ್ಯಾವಳಿ ಎಂಬುದು ಎಂದೋ ಸಾಬೀತಾಗಿದೆ. ಅದೆಷ್ಟೋ ಕೋಟಿಗಳನ್ನು ಆಯ್ದ ಕೆಲವು ಆಟಗಾರರಿಗೆ ನೀಡಿ, ಅವರನ್ನು ತಮ್ಮ ತಂಡದಲ್ಲಿ ಆಡುವಂತೆ ಮಾಡುವ ನಿಯಮವು ಮಾತ್ರ, ಒಟ್ಟಾರೆ ತಂಡಗಳ ಸ್ವರೂಪವನ್ನೇ ಬದಲಿಸಿತು.

ಆದ್ದರಿಂದಲೇ, ಅತಿ ಹೆಚ್ಚು ದುಡ್ಡು ಹೂಡಲು ಶಕ್ತಿ ಇರುವ ಉದ್ಯಮಪತಿಗಳು, ಬಂಡವಾಳಗಾರರು (ಅವರು ಬೇಕಾದರೆ ಮದ್ಯದ ದೊರೆಗಳೇ ಆಗಿರಲಿ), ಹೆಚ್ಚು ಹಣ ನೀಡಿ ಉತ್ತಮ ಆಟಗಾರರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ. ಹೆಚ್ಚು ಸಿಕ್ಸರ್ ಹೊಡೆಯಬಲ್ಲ, ಎದುರಿಸಿದ ಮೊದಲ ಕೆಲವು ಬಾಲ್‌ಗಳಲ್ಲೇ ರನ್‌ಗಳನ್ನು ಚಚ್ಚುವ ಸಾಮರ್ಥ್ಯ ಹೊಂದಿರುವ ಬ್ಯಾಟರುಗಳಿಗೆ ಹೆಚ್ಚು ಬೇಡಿಕೆ.

ಅತಿ ಕಡಿಮೆ ರನ್ ನೀಡಿ ಬೌಲ್ ಮಾಡುವ ಸಾಮರ್ಥ್ಯ ಇರುವ ಬೌಲರ್‌ಗಳನ್ನು, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ಮಾಡಬಲ್ಲವರನ್ನು ಹೆಚ್ಚು ದುಡ್ಡುಕೊಟ್ಟು ಹರಾಜಿನಲ್ಲಿ ಕೊಂಡು ಕೊಳ್ಳುತ್ತಿದ್ದಾರೆ. ಮತ್ತು, ಈ ಪದ್ಧತಿ ಆರಂಭವಾದಾಗ, ಹಿರಿಯ ಕ್ರಿಕೆಟ್ ಪಂಡಿತರು ತಲೆ ಚಚ್ಚಿ ಕೊಂಡಿದ್ದುಂಟು!

ಸಜ್ಜನರ ಆಟವೆಂದೇ ಖ್ಯಾತವಾಗಿರುವ ಕ್ರಿಕೆಟ್‌ನಲ್ಲಿ, ಇಂಥ ಬದಲಾವಣೆ ತಂದು, ಆಟದ ಮೂಲ ಸ್ವರೂಪಕ್ಕೆ ಭಂಗ ತಂದಿದ್ದಾರೆ ಎಂದೂ ಹಲವರು ಟೀಕೆ ಮಾಡಿದರು. ಆದರೆ, ಹದಿನೆಂಟು ವರ್ಷ ದಿಂದ ಐಪಿಎಲ್ ನಡೆದಿದೆ, ಟೀಕೆಗಳನ್ನು ಮೀರಿ ಜನಪ್ರಿಯತೆಯನ್ನು ಗಳಿಸಿದೆ. ಬಹುಶಃ, ಇಪ್ಪತ್ತೊಂದನೆಯ ಶತಮಾನದ ಜಾಯಮಾನಕ್ಕೆ ಅನುಗುಣವಾಗಿ ಐಪಿಎಲ್‌ನ ಜನಪ್ರಿಯತೆ ಮತ್ತು ಹುಚ್ಚು ಅಭಿಮಾನವು ಬೆಳೆದಿದೆ ಎನ್ನಬಹುದೆ!

ಇಂದಿನ ಕಾಲ ಎಂದರೆ ಅವಸರದ ಕಾಲ, ಧಾವಂತದ ಕಾಲ, ಬೇಗಬೇಗನೆ ಹಣ ಗಳಿಸುವ ಕಾಲ, ಯುವಕರು ಬೇಗಬೇಗನೆ ಯಶಸ್ಸು ಗಳಿಸುವ ಕಾಲ: ಅದೆಷ್ಟೋ ಬಾರಿ, ಮಾರ್ಗ ಯಾವುದಾದರೇನು, ಹಣ ಬಂದರಾಯಿತು ಎಂದು ಕೆಲವರು ತಿಳಿದಿರುವ ಕಾಲ. ಹಿಂದಿನ ಶತಮಾನಗಳಂತೆ, ಇಂದು ಕೆಲವರಿಗೆ ಹಲವು ವರ್ಷಗಳ ಕಾಲ ಕಾಯುವ ತಾಳ್ಮೆ ಇಲ್ಲ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ, ಅಲ್ಲೇ ನಿಧಾನವಾಗಿ ಪದೋನ್ನತಿ ಹೊಂದಿ ಒಂದು ಉತ್ತಮ ಹಂತಕ್ಕೇರುವ ತಾಳ್ಮೆ ಇಲ್ಲ; ಬೇಗ ಬೇಗನೆ ಕೆಲಸ ಬದಲಿಸಿ, ಹೆಚ್ಚು ಹೆಚ್ಚು ಸಂಬಳ ತರುವ ವೃತ್ತಿ ಹಿಡಿದು, ಬಹುಬೇಗನೆ ಉತ್ಕರ್ಷ ವನ್ನು ಪಡೆಯುವ ಕಾಲವಿದು.

ಇಂಥ ಮನೋಭಾವವು, ಬಹುಶಃ ಐಪಿಎಲ್ ಜನಪ್ರಿಯತೆಗೂ ಹಾದಿ ಮಾಡಿಕೊಟ್ಟಿರಬಹುದು! ದಿನವಿಡೀ ಆಟವನ್ನು ನೋಡುವ ಬದಲು, ಇಪ್ಪತ್ತು ಓವರ್‌ಗಳಲ್ಲಿ ನಡೆಯುವ, ಬಾಲ್ ಅನ್ನು ಹೊಡಿ-ಬಡಿ-ಚಚ್ಚುವ ಮೂಲಕ ಹೆಚ್ಚು ರನ್ ಕಲೆ ಹಾಕಿ, ತಕ್ಷಣ ಎದುರಾಳಿಯೂ ಅದನ್ನು ಚೇಸ್ ಮಾಡಿ, ಫಲಿತಾಂಶ ನೀಡುವ ಕಾಲವಿದು. ಐದು ದಿನಗಳಿದ್ದ ಕ್ರಿಕೆಟ್ ಪಂದ್ಯಗಳು, ಒಂದು ದಿನಕ್ಕೆ ಇಳಿದು, ಈಗ ಇಪ್ಪತ್ತು ಓವರ್‌ಗಳಲ್ಲೇ ಫಲಿತಾಂಶ ನೀಡುವ ಕಾಲವಿದು.

ಐಪಿಎಲ್‌ನಂಥ ಪಂದ್ಯಾವಳಿಯಲ್ಲಿ, ಈ ಕಿರು ರೋಚಕ ಪಂದ್ಯಗಳಲ್ಲೇ, ಬಹು ದೊಡ್ಡ ಮೊತ್ತದ ಹಣ ಹರಿಯುತ್ತಿದೆ. ಹರಾಜಿನಲ್ಲಿ ದೊರಕುವ ಹಣದ ಜತೆಗೆ, ಕೆಲವು ಬಾರಿ ಸಿಕ್ಸರ್‌ಗೆ ಇಂತಿಷ್ಟು ಹಣ, ವಿಕೆಟ್‌ಗೆ ಇಂತಿಷ್ಟು ಹಣ ಎಂಬ ಆಮಿಷದೊಂದಿಗೆ ಬ್ಯಾಟರುಗಳು ಆಡುತ್ತಿದ್ದರು. ಅದನ್ನು ಲಕ್ಷಾಂತರ ಜನ ಟಿವಿಗಳಲ್ಲಿ ನೋಡುತ್ತಿರುವಾಗ, ರೋಚಕತೆ, ಹುಚ್ಚು ಉನ್ಮಾದ ಹರಿದು ಬರದೇ ಇನ್ನೇನಾದೀತು!

ಈ ನಡುವೆ, ಇಂಥ ರೋಚಕ ಪಂದ್ಯಗಳನ್ನೇ ಆಧರಿಸಿ, ಜೂಜು ನಡೆಸುವ ವ್ಯವಸ್ಥಿತ ಜಾಲಗಳೇ ಇವೆ ಎಂದೂ ವರದಿಯಾಗಿವೆ. ಈ ರೀತಿ ಜೂಜಾಡುವ ಅಭಿಮಾನಿಗಳನ್ನು, ಕ್ರಿಕೆಟ್ ಆಟದ ಅಭಿಮಾ ನಿಗಳು ಎನ್ನಬೇಕೋ, ಐಪಿಎಲ್ ಆಟದ ಅಭಿಮಾನಿಗಳು ಎನ್ನಬೇಕೋ ಅಥವಾ ಅಪ್ಪಟ ಜೂಜುಕೋರರು ಎನ್ನಬೇಕೋ ತಿಳಿಯುತ್ತಿಲ್ಲ.

ಜಾಸ್ತಿ ಯೋಚಿಸುತ್ತಾ ಹೋದರೆ, ಇಂಥ ವಿಶ್ಲೇಷಣೆಯೇ, ಈ ದಿನಮಾನಗಳಲ್ಲಿ ಪ್ರಸ್ತುತವಲ್ಲ ಎನ್ನ ಲೂಬಹುದು! ಏಕೆಂದರೆ, ಆನ್‌ಲೈನ್‌ನಲ್ಲಿ ಇಸ್ಪೀಟು ಆಡುವ, ಮೊಬೈಲ್ ಮೂಲಕ ದೊಡ್ಡ ಮೊತ್ತವನ್ನು ಪಣಕ್ಕಿಡುವ ಅವಕಾಶ ಇರುವ, ಅದಕ್ಕೆ ಕಾನೂನಿನ ಮಾನ್ಯತೆಯೇ ಇರುವ, ಅಪ್ಪಟ ಜೂಜನ್ನು ‘ಸ್ಕಿಲ್ ಗೇಮ್’ ಎಂದು ಕರೆದು, ಇಡೀ ತಲೆಮಾರನ್ನು ದಾರಿ ತಪ್ಪಿಸುತ್ತಿರುವ ‘ಉದ್ಯಮಿ ಗಳು’ ಇರುವ ಕಾಲ ಇದು. ಇಂಥ ದಿನಗಳಲ್ಲಿ, ಕೆಲವರು ಕ್ರಿಕೆಟ್ ಪಂದ್ಯಗಳ ಮೇಲೆ ಹಣ ಕಟ್ಟಿ ಜೂಜಾಡುತ್ತಿರುವುದು, ಮೇಲ್ನೋಟಕ್ಕೆ ತಪ್ಪು ಎನಿಸಿದರೂ, ಅದು ಸಾರ್ವತ್ರಿಕವಾಗಿ ಮನ್ನಣೆ ಯನ್ನೂ ಪಡೆದು, ಸಜ್ಜನಿಕೆಯ ಹುಸಿ ಮುಖವಾಡವನ್ನು ತೊಟ್ಟಿದೆ!

ಪ್ರತಿ ದಿನ ಇಪ್ಪತ್ತು ಓವರುಗಳ ಆಟ, ವಾರಗಟ್ಟಲೆ ಅಂಥದೊಂದು ಅಡ್ರಿನಲ್ ತುಂಬಿದ ಸನ್ನಿವೇಶ, ಪ್ರತಿ ರಾತ್ರಿ ಹನ್ನೊಂದೂವರೆಯ ತನಕ ರನ್‌ಗಳ ಹೊಳೆ, ಅದನ್ನು ನೋಡುತ್ತಾ ವಿವಿಧ ಪಾನೀಯ ಗಳ ಹೊಳೆಯೂ ಕೆಲವೆಡೆ ಹರಿಯುವ ಸಾಧ್ಯತೆ- ಇವೆಲ್ಲಾ ಸನ್ನಿವೇಶವು, ಲಕ್ಷಾಂತರ ಅಭಿಮಾನಿ ಗಳ ಜತೆ, ಅಂಧಾಭಿಮಾನಿಗಳ ದಂಡನ್ನೇ ಸೃಷ್ಟಿಸಿಬಿಟ್ಟಿದೆ.

ಕರ್ನಾಟಕದ ಆಟಗಾರರ ಪ್ರಾಬಲ್ಯವೇ ಇಲ್ಲದ, ಬೆಂಗಳೂರಿನ ಹೆಸರನ್ನು ತನ್ನ ಭಾಗವನ್ನಾಗಿಸಿ ಕೊಂಡಿರುವ ಆರ್‌ಸಿಬಿ ತಂಡಕ್ಕೆ, ಕರ್ನಾಟಕದಲ್ಲಿ ಲಕ್ಷ ಲಕ್ಷ ಅಭಿಮಾನಿಗಳು ಸೃಷ್ಟಿಯಾಗಿದ್ದಕ್ಕೆ ಇಂಥ ಸಂಕೀರ್ಣ, ಇಂದಿನ ದಿನಮಾನದ ಜನಸಮೂಹದ ಮಾನಸಿಕ ಸ್ಥಿತಿಯನ್ನವಲಂಬಿಸಿದ ಕಾರಣಗಳಿವೆ.

ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ಗೆಲ್ಲುತ್ತಾ ಬಂದು, ಅದನ್ನೇ ನೋಡುತ್ತಾ ಬಂದ ಅಭಿಮಾನಿಗಳು, ಮೊನ್ನೆ ಫೈನಲ್‌ನಲ್ಲಿ ತಮ್ಮ ಅಭಿಮಾನದ ತುರೀಯಾವಸ್ಥೆ ತಲುಪಿದರು. ಆದ್ದರಿಂದಲೇ, ಫೈನಲ್ ಗೆದ್ದ ಮರುದಿನ ಕೊಹ್ಲಿ ಸೇರಿದಂತೆ, ಆಟಗಾರರು ಸಂಭ್ರಮಾಚರಣೆಗೆ ಬೆಂಗಳೂರಿಗೆ ಬಂದಾಗ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದರು. ದುರ್ದೈವವಶಾತ್ ಕಾಲ್ತುಳಿತ ಸಂಭವಿಸಿತು, ಹನ್ನೊಂದು ಜನ ಮೃತಪಟ್ಟರು, ಹಲವರು ಗಾಯಗೊಂಡರು.

ಇಲ್ಲಿ ಯಾರ ವೈಫಲ್ಯ ಎಂಬ ಚರ್ಚೆ ಬಹಳಷ್ಟು ನಡೆದಿದೆ; ಆದರೆ, ಯುವಜನರನ್ನೇ ಬಲಿ ಪಡೆದ ಇಂಥ ದುರ್ಘಟನೆ ನಡೆಯಬಾರದಿತ್ತು. ಬೆಂಗಳೂರಿನ ಈ ಭೀಕರ ದುರಂತದಲ್ಲಿ ಮಡಿದವರಿಗೆ ಅಶ್ರುತರ್ಪಣ...