Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ
ನಾವು ಯಾರಿಗಾದರೂ ಸಹಾಯ ಮಾಡಿದ್ದೀವಿ ಎಂದು ಹೇಳಿಕೊಳ್ಳುವುದು, ಕ್ಷಮಿಸಿದ್ದೀವಿ ಎಂದು ಸಮಾಧಾನ ಮಾಡುವುದು ಎಲ್ಲವೂ ನಾವು ಮಾಡಿದ ಕೆಲಸವನ್ನ ಮತ್ತೆ ಎತ್ತಿ ಹಿಡಿಯುವಂತಹವು. ಇಂತಹ ಕ್ರಿಯೆಗಳಿಂದ ಮಾಡಿದ ಕೆಲಸದ ಮಹತ್ವ ಕೂಡ ಕಳೆದು ಹೋಗುತ್ತದೆ. ಬದುಕನ್ನು ಅರ್ಥ ಮಾಡಿಕೊಂಡು ಮಾಗಿದಷ್ಟೂ ಹೆಚ್ಚು ಜಾಗೃತರಾಗುತ್ತಾ ಹೋಗುತ್ತೇವೆ.


ಒಂದೊಳ್ಳೆ ಮಾತು
rgururaj628@gmail.com
ಒಂದು ದಿನ ಬುದ್ಧ ತನ್ನ ಶಿಷ್ಯರ ಜೊತೆ ಕುಳಿತಿದ್ದಾಗ, ಸಿಟ್ಟಿನಿಂದ ಆಗಮಿಸಿದ ಒಬ್ಬ ಮನುಷ್ಯ ಬುದ್ಧನ ಮೇಲೆ ಉಗುಳಿ ಬಿಟ್ಟ. ಬುದ್ಧನ ಶಿಷ್ಯರು ಕೆಂಡಾಮಂಡಲರಾದರು, ಪ್ರಧಾನ ಶಿಷ್ಯ ಆನಂದನ ಸಿಟ್ಟು ನೆತ್ತಿಗೇರಿತು, “ಗುರುವೇ ಆಜ್ಞೆ ಮಾಡು, ನಾನು ಈ ಮನುಷ್ಯನಿಗೆ ಬುದ್ಧಿ ಕಲಿಸು ತ್ತೇನೆ" ಆನಂದ ಬುದ್ಧ ಗುರುವನ್ನು ಬೇಡಿಕೊಂಡ.
ಆದರೆ ಬುದ್ಧ ಶಾಂತ ಚಿತ್ತದಿಂದ ತನ್ನ ಮುಖ ಒರೆಸಿಕೊಳ್ಳುತ್ತ ಮಾತನಾಡಿದ, “ಮಹಾಶಯ, ನಾನು ಇನ್ನೂ ಕೋಪವನ್ನು ಕಳೆದುಕೊಂಡಿದ್ದೆನೋ ಇಲ್ಲವೋ ಎನ್ನುವುದನ್ನ ಪರೀಕ್ಷೆ ಮಾಡಿಕೊಳ್ಳಲಿಕ್ಕೆ ಸಂದರ್ಭವೊಂದನ್ನು ಸೃಷ್ಟಿಸಿದ್ದಕ್ಕೆ ನಿಮಗೆ ಧನ್ಯವಾದ. ನಿಮ್ಮ ವರ್ತನೆ ನನ್ನಲ್ಲಿ ಸಿಟ್ಟು ಮೂಡಿಸ ಲಿಲ್ಲ, ನನಗೆ ಖುಶಿಯಾಗುತ್ತಿದೆ.
ಇಂಥದೇ ಒಂದು ಸಂದರ್ಭವನ್ನ ನೀವು ಆನಂದನಿಗೂ ಲಭ್ಯ ಮಾಡಿದಿರಿ, ಆನಂದ ಇನ್ನೂ ಸಾಧನೆ ಮಾಡಬೇಕು ಎನ್ನುವ ಸಂದೇಶ ಬಹುಶಃ ಈಗ ಅವನಿಗೆ ತಲುಪಿರಬೇಕು. ಹಾಗಾಗಿ ನಮ್ಮಿಬ್ಬರ ಪರವಾಗಿ ಧನ್ಯವಾದಗಳನ್ನು ಸ್ವೀಕರಿಸಿ. ನಿಮಗೆ ಮತ್ತೆ ಯಾವಾಗಲಾದರೂ ಇನ್ನೊಬ್ಬರ ಮೇಲೆ ಉಗುಳುವ ಮನಸ್ಸಾದರೆ, ನಮ್ಮ ಆಶ್ರಮದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತವೆ".
ಇದನ್ನೂ ಓದಿ: Roopa Gururaj Column: ನಾಗರ ಪಂಚಮಿ ಹಬ್ಬದ ಐತಿಹ್ಯ
ಬುದ್ಧನ ಮಾತುಗಳಿಂದ ಆ ವ್ಯಕ್ತಿಗೆ ದಿಗ್ಭ್ರಮೆಯಾಯಿತು. ತನ್ನ ವರ್ತನೆಯಿಂದ ಬುದ್ಧ ಕೆರಳ ಬಹುದು ಎಂದು ನಿರೀಕ್ಷಿಸಿದವನಿಗೆ ಬುದ್ಧನ ಮಾತುಗಳನ್ನ ಕೇಳಿ ತನ್ನ ಕಿವಿಯನ್ನೇ ನಂಬಲಾಗ ಲಿಲ್ಲ. ಆ ಇಡೀ ರಾತ್ರಿ ಅವನಿಗೆ ನಿದ್ದೆ ಬರಲಿಲ್ಲ, ಹಾಸಿಗೆಯಲ್ಲಿ ಮಗ್ಗಲು ಬದಲಿಸುತ್ತಲೇ ಇದ್ದ. ಬುದ್ಧನ ಶಾಂತ ಮುಖ, ಅಂತಃಕರಣ ತುಂಬಿದ ಕಣ್ಣುಗಳು ಮತ್ತೆ ಮತ್ತೆ ಅವನ ಕಣ್ಣ ಮುಂದೆ ಬರತೊಡಗಿದವು.
ಬುದ್ಧ ಆ ವ್ಯಕ್ತಿಗೆ ಧನ್ಯವಾದ ಹೇಳಿದಾಗ, ಅದು ಕೇವಲ ಶಿಷ್ಟಾಚಾರವಾಗಿರಲಿಲ್ಲ, ಕೇವಲ ತನ್ನ ಸಿಟ್ಟನ್ನ ತೋರಿಸಿಕೊಳ್ಳದಿರುವ ತಂತ್ರವಾಗಿರಲ್ಲ, ಬುದ್ಧ ತನ್ನ ಸಮಗ್ರವನ್ನು ಒಂದಾಗಿಸಿಕೊಂಡು ತನ್ನ ಮನಸ್ಪೂರ್ತಿಯಿಂದ ಧನ್ಯವಾದ ಹೇಳಿದ್ದ, ಇದರಲ್ಲಿ ಯಾವ ತೋರಿಕೆಯೂ ಇರಲಿಲ್ಲ. ಆ ವ್ಯಕ್ತಿಗೆ ತನ್ನ ಮೇಲೆಯೇ ಅಸಹ್ಯವಾಗತೊಡಗಿತು, ಬುದ್ಧನಂಥ ಮನುಷ್ಯನ ಮೇಲೆ ಉಗುಳಿದ ತನ್ನ ವರ್ತನೆಗಾಗಿ ಆತ ತನ್ನನ್ನು ತಾನು ಕ್ಷಮಿಸಿಕೊಳ್ಳಲಾರದೇ ಹೋದ.
ಮರುದಿನ ಮುಂಜಾನೆ ಆ ವ್ಯಕ್ತಿ ಬುದ್ದನ ಬಳಿ ಹೋಗಿ, ಅವನ ಪಾದಗಳ ಮುಂದೆ ಅಡ್ಡ ಬಿದ್ದ, “ಕ್ಷಮಿಸು ಗುರುವೇ ನನ್ನಿಂದ ಮಹಾ ಅಪರಾಧವಾಗಿದೆ" ಬುದ್ಧನನ್ನು ಬೇಡಿಕೊಂಡ. “ಆಗಿ ಹೋದ ದ್ದನ್ನ ಮರೆತುಬಿಡು, ಕ್ಷಮೆ ಕೇಳುವ ಅವಶ್ಯಕತೆ ಏನಿಲ್ಲ" ಬುದ್ಧ ಆ ವ್ಯಕ್ತಿಯನ್ನು ಎಬ್ಬಿಸಿ ಮಾತನಾಡಿಸಿದ.
ಬುದ್ಧ ಗಂಗಾನದಿಯ ದಂಡೆಯ ಮೇಲೆ ಕುಳಿತಿದ್ದ. ತನ್ನ ಮುಂದೆ ಇನ್ನೂ ದೀನನಾಗಿ ನಿಂತಿದ್ದ ಆ ಮನುಷ್ಯನನ್ನು ಕುರಿತು ಮಾತು ಮುಂದುವರೆಸಿದ, “ಆ ನದಿಯನ್ನ ನೋಡು, ಪ್ರತಿ ಕ್ಷಣ ಎಷ್ಟೊಂದು ನೀರು ಹರಿದು ಹೋಗುತ್ತಿದೆ. ಆ ಘಟನೆ ನಡೆದು ಇಪ್ಪತ್ನಾಲ್ಕು ಗಂಟೆಯಾಗಿ ಹೋಯ್ತು, ಯಾವ ಭಾವ ಆ ಸಮಯದಲ್ಲಿ ನಿನ್ನಲ್ಲಿ ಇತ್ತೋ ಅದನ್ನು ಇನ್ನೂ ಯಾಕೆ ಹೊತ್ತು ಕೊಂಡಿರುವೆ, ಮರೆತು ಬಿಡು ಆಗಿ ಹೋದದ್ದನ್ನ".
ಬುದ್ದ ತನ್ನ ಮಾತು ಮುಂದುವರೆಸಿದ, “ನನಗೆ ನಿನ್ನ ಮೇಲೆ ನಿಜವಾಗಿಯೂ ಸಿಟ್ಟು ಬಂದಿರಲಿಲ್ಲ ಹಾಗಾಗಿ ನಾನು ನಿನ್ನ ಕ್ಷಮಿಸುವುದು ಹೇಗೆ? ಕ್ಷಮಿಸುವುದು ಕೂಡ ಒಂದು ಬಗೆಯ ಸೊಕ್ಕು ಅದನ್ನು ಸಿಟ್ಟು ಬಂದವ ಮಾತ್ರ ಮಾಡಬಲ್ಲ. ನಿನಗೆ ನಿಜವಾಗಿಯೂ ಕ್ಷಮೆ ಬೇಕನಿಸಿದರೆ, ಆನಂದನ ಕ್ಷಮೆ ಕೇಳು, ಅವನಿಗೆ ನಿನ್ನನ್ನು ಕ್ಷಮಿಸುವುದು ಸಾಧ್ಯವಾಗಬಹುದು".
ನಿಜವೇ ಅಲ್ಲವೇ? ನಾವು ಯಾರಿಗಾದರೂ ಸಹಾಯ ಮಾಡಿದ್ದೀವಿ ಎಂದು ಹೇಳಿಕೊಳ್ಳುವುದು, ಕ್ಷಮಿಸಿದ್ದೀವಿ ಎಂದು ಸಮಾಧಾನ ಮಾಡುವುದು ಎಲ್ಲವೂ ನಾವು ಮಾಡಿದ ಕೆಲಸವನ್ನ ಮತ್ತೆ ಎತ್ತಿ ಹಿಡಿಯುವಂತಹವು. ಇಂತಹ ಕ್ರಿಯೆಗಳಿಂದ ಮಾಡಿದ ಕೆಲಸದ ಮಹತ್ವ ಕೂಡ ಕಳೆದು ಹೋಗು ತ್ತದೆ. ಬದುಕನ್ನು ಅರ್ಥ ಮಾಡಿಕೊಂಡು ಮಾಗಿದಷ್ಟೂ ಹೆಚ್ಚು ಜಾಗೃತರಾಗುತ್ತಾ ಹೋಗುತ್ತೇವೆ. ಇಂತಹ ಅಂತರ್ಪ್ರಜ್ಞೆ ನಮ್ಮೆಲ್ಲರಲ್ಲೂ ಜಾಗೃತವಾಗಲಿ.