Rangaswamy Mookanahalli Column: ಕಿತ್ತಾಡದೇ ನಾವು ಬದುಕಬಲ್ಲೆವೇ ?
ಜಗತ್ತಿನೆಡೆ ಮನುಷ್ಯ ಸೇಮ್. ಅದೇ ರಾಗ ದ್ವೇಷ, ಅದೇ ನೋವು, ಹತಾಶೆ, ಸುಖ, ಸ್ವಾರ್ಥ.., ಸೇಮ್.. ಯಾವುದೂ ಬದಲಿಲ್ಲ. ಅವನ/ಅವಳ ಮೂಲ ಗುಣ ಕಿತ್ತಾಟ. ಅದಕ್ಕೆ ಕಾರಣಗಳು ಬೇಕಲ್ಲ, ಹೀಗಾಗಿ ಜಾತಿ, ಧರ್ಮ, ಭಾಷೆ ಸಾಧನವಾಗುತ್ತದೆ. ಅದು ಮುಗಿದ ಮೇಲೆ ಇನ್ನಷ್ಟು ಉಪಭಾಷೆ, ಉಪಪಂಗಡವಾಗಿ ಬೇರ್ಪಡುತ್ತಾನೆ.


ವಿಶ್ವರಂಗ
ನಾವು ಸಮಾಜವಾಗಿ ಒಂದಾಗಲು ಸಾಧ್ಯವಿದೆಯೇ? ಈ ಪ್ರಶ್ನೆ ನನ್ನ ಸದಾ ಕಾಡುತ್ತಲೇ ಇರುತ್ತದೆ. ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಬದುಕುವುದು ಬೇರೆ ಕಥೆ, ಒಂದಾಗಿ ಬಾಳುವುದು? ಅದು ನಮ್ಮಿಂದ ಸಾಧ್ಯವೇ? 23ರ ಹರಯದಲ್ಲಿ ಮನೆ ಬಿಟ್ಟು, ದೇಶ ಬಿಟ್ಟು ಹೋಗುವವರೆಗೆ ಲೋಕ ಜ್ಞಾನವಿರದ ನನಗೆ ಅನೇಕ ಸತ್ಯಗಳು ನಂತರದ ದಿನಗಳಲ್ಲಿ ಗೋಚರವಾಗುತ್ತಾ ಹೋಯ್ತು.
ಅದರಲ್ಲಿ ಪ್ರಮುಖವಾದದ್ದು ನಾನು, ನನ್ನದು ಎನ್ನುವುದು ಸುಲಭ, ನಮ್ಮದು, ನಮ್ಮವರು ಎನ್ನುವ ಇನ್ಕ್ಲೂಸಿವೆನೆಸ್ಸ್ ಭಾವನೆ ಬರುವುದು ಮಾತ್ರ ಸುಲಭವಲ್ಲ. ಕಚ್ಚಾಟ ಮನುಷ್ಯನ ಸಹಜ ಗುಣ. ಹೊಂದಾಣಿಕೆ, ಸಹಬಾಳ್ವೆ ಇವೆಲ್ಲವನ್ನೂ ಆತ/ಆಕೆ ಪ್ರಜ್ಞಾಪೂರ್ವಕವಾಗಿ ಕಲಿತಿದ್ದರೂ, ಮೂಲದಲ್ಲಿನ ಪಶುಪ್ರವೃತ್ತಿಯಿಂದ ಹೊರಬರುವುದು ಸುಲಭದ ಮಾತಲ್ಲ.
ಮನುಷ್ಯ ಏಕೆ ಜಗಳವಾಡುತ್ತಾನೆ? ಅದೇಕೆ ಆತ ಛಿದ್ರವಾಗುತ್ತಲೇ ಹೋಗುತ್ತಾನೆ? ನಂಬಿದ ತತ್ವಕ್ಕೆ ಬದ್ಧರಾಗಿ, ತತ್ವಕ್ಕೆ ವಿರುದ್ದವಿದ್ದವರ ವಿರುದ್ಧ ಜಗಳವಾಡುತ್ತಾನೆ, ದ್ವೇಷ, ಸಿಟ್ಟು, ಸೇಡು ಇವೆಲ್ಲವೂ ಉತ್ಪನ್ನವಾಗುತ್ತವೆ. ಹಾಗೆ ಧರ್ಮ, ಭಾಷೆ, ಹಣ, ಅಧಿಕಾರ , ಕಾಮ ಇತ್ಯಾದಿಗಳು ಕಚ್ಚಾಡಿ ಛಿದ್ರ ವಾಗಲು ಬೇಕಾಗುವ ಕಾರಣಗಳ ಸಾಲಿನಲ್ಲಿ ಕ್ಯೂ ನಿಲ್ಲುತ್ತವೆ.
ಆದರೆ ನೀವು ಗಮನಿಸಿ ನೋಡಿ ಆತ ಜಗಳವಾಡುವುದಕ್ಕೆ ಇವೆಲ್ಲವೂ ನಂತರದ ಕಾರಣಗಳು. ಮುಖ್ಯವಾದ ಕಾರಣ, ಆತನ ನೇಚರ್, ಗುಣವೇ ಜಗಳವಾಡುವುದು. ಒಟ್ಟಾಗಿರುವುದು ಆತನಿಗೆ/ಆಕೆಗೆ ಸಹಜ ಧರ್ಮವಲ್ಲ. ಕಿತ್ತಾಡುವುದೇ ಸಹಜ ಧರ್ಮ. ಇದಕ್ಕೆ ಪೂರಕವಾಗಿ ನನ್ನ ಬದುಕಿನಲ್ಲಿ ಕಂಡ ಅನೇಕ ವಿಷಯಗಳನ್ನ ಪ್ರಸ್ತಾಪಿಸುತ್ತಾ ಹೋಗುತ್ತೇನೆ.
ಇದನ್ನೂ ಓದಿ: Rangaswamy Mookanahalli Column: ಏನೂ ಮಾಡಲಿಕ್ಕಾಗದು, ಬೆಳಕಿನ ಕೆಳಗೆ ಸದಾ ಕತ್ತಲೆಯೇ..!
ಅಗೈನ್ ನಾನೇಳಿದ್ದೇ ಸತ್ಯ ಎನ್ನುವ ಧಾಡಸಿತನ ನನಗಿಲ್ಲ. ಉತ್ತಮ ಚರ್ಚೆಗೆ ಸದಾ ಸಿದ್ದ. ಭಾರತ ಬಿಟ್ಟು ಬೇರೆ ದೇಶಗಳಲ್ಲಿ ನೆಲೆಸಿದ ನಂತರ ಒಂದಷ್ಟು ಭಾರತೀಯರು ಸೇರಿದ ತಕ್ಷಣ, ಅಲ್ಲಿ ಒಂದು ಕಮ್ಯುನಿಟಿ, ಸಂಘ ಸ್ಥಾಪನೆಯಾಗುತ್ತದೆ. ಯಾವಾಗ ಅಲ್ಲಿ ಒಂದು ರಾಜ್ಯದವರು ಜಾಸ್ತಿಯಾಗುತ್ತಾ ಹೋಗುತ್ತಾರೆ, ಆಗ ಆ ರಾಜ್ಯದ ಸಂಘ ಶುರುವಾಗುತ್ತದೆ.
ಅದು ನಿಧಾನವಾಗಿ ಭಾಷೆಗಳಲ್ಲಿ ವಿಭಜನೆಯಾಗುತ್ತದೆ. ನಂತರದ್ದು ಜಾತಿ ಆಧಾರಿತ ಸಂಘಗಳು, ಉಪಪಂಗಡ, ಅಲ್ಲೂ ಮೇಲು ಕೀಳು ಶುರುವಾಗುತ್ತದೆ. ಉದಾಹರಣೆಗೆ ನಾನು ಕಂಡ ಕನ್ನಡ ಸಂಘ ನಂತರದ ದಿನಗಳಲ್ಲಿ ತುಳುವರ ಸಂಘ, ಬಂಟರ ಸಂಗ, ಗೌಡರ ಸಂಘ, ಹವ್ಯಕ ಕೂಟ, ಮುಲಕ ನಾಡು, ಇತ್ಯಾದಿಗಳಲ್ಲಿ ಪರ್ಯಾಯಗೊಂಡಿದೆ.
ಅದು ಅಷ್ಟಕ್ಕೇ ನಿಲ್ಲುವುದಿಲ್ಲ ಅತಿ ಪುಟ್ಟ ಸಂಘದಲ್ಲಿ 25 ಜನ ಸೇರಿದರೆ ಸಾಕು ಅಲ್ಲಿನ ನಾಯಕತ್ವಕ್ಕೆ ಹೊಡೆದಾಟ ಶುರು. ಅಲ್ಲಿ ವೋಟಿಂಗ್ ಶುರು. ಆಯ್ಕೆಯಾದ ನಾಯಕನ ಮೇಲೆ ಕತ್ತಿ ಮಸೆಯುತ್ತಾ 25 ಜನರಲ್ಲಿ ಸಂಘ ಇಬ್ಬಾಗವಾಗುತ್ತದೆ. ಅರೆರೇ ಇದೇನಿದು? ನಿಮ್ಮ ಭಾಷೆ ಒಂದೇ, ಧರ್ಮವೊಂದೇ, ಜಾತಿಯೊಂದೇ, ಮುಕ್ಕಾಲುಪಾಲು ಜೀವನ ಶೈಲಿಯೊಂದೇ, ಹೀಗಿದ್ದೂ ಅದೇಕೆ ಇಬ್ಬಾಗವಾಯಿತು? ಉತ್ತರ ಸಿಂಪಲ್ ಮನುಷ್ಯ ಮೂಲಭೂತವಾಗಿ ಇರುವುದೇ ಹಾಗೆ.
ಒಗ್ಗಟ್ಟು ಎನ್ನುವುದು ಸೃಷ್ಟಿತ, ಸನ್ನಿವೇಶಕ್ಕೆ, ಬದುಕಿಗೆ, ಉಳಿವಿಗೆ ಬೇಕಾದಾಗ ಮಾತ್ರ ಮೇಲ್ಪದರಕ್ಕೆ ಬರುವ ಕ್ಷಣಿಕ ಭಾವ, ಕಿತ್ತಾಟ, ಛಿದ್ರವಾಗುವುದು ಸಹಜವಾಗಿ ಬಂದದ್ದು. ಅಯ್ಯೋ ಇವನೇನೋ ಭಾರತೀಯರ ಬಗ್ಗೆ, ಹಿಂದೂಗಳ ಬಗ್ಗೆ ಹೇಳಲು ಬಂದ. ಮುಸ್ಲಿಮರ ಬಗ್ಗೆ ಅಥವಾ ಕ್ರೈಸ್ತರ ಬಗ್ಗೆ ಹೇಳಿದರೆ ಕಾಲು ಮುರಿಯುತ್ತಾರೆ ಅದಕ್ಕೆ ಏನೂ ಹೇಳುವುದಿಲ್ಲ ಎನ್ನುವ ಭಾವನೆ ನಿಮ್ಮದಾಗಿದ್ದರೆ, ಸ್ವಲ್ಪ ನಿಧಾನಿಸಿ.

ಮೇಲಿನ ಸಾಲುಗಳು ಎಲ್ಲಾ ಮನುಷ್ಯರಿಗೂ ಅನ್ವಯ. ಇದರಲ್ಲಿ ನೀನು -ನಾನು -ಅವನು ಎನ್ನುವ ಯಾವ ಭೇದವೂ ಇಲ್ಲ. ಉದಾಹರಣೆ ಹೇಳುತ್ತೇನೆ ನೋಡಿ, ಸ್ಪೇನ್ ದೇಶದ ಒಂದು ರಾಜ್ಯ ಕತಲೂ ನ್ಯದ ಜನರು ಇನ್ನೊಂದು ರಾಜ್ಯ ಅಂದಲೂಸಿಯಾ ಜನರ ಬಗ್ಗೆ ಅವರು ಅತಿ ಭಾವುಕರು ಎನ್ನುತ್ತಾರೆ.
ಅಂದಲೂಸಿಯನ್ನರು ಇವರನ್ನು ಕಂಡು ಭಾರಿ ಲೆಕ್ಕಾಚಾರದ ಭಾವುಕತೆ ಇಲ್ಲದ ಜನ ಎನ್ನುತ್ತಾರೆ. 88 ಲಕ್ಷ ಜನಸಂಖ್ಯೆಯ ಕತಲೂನ್ಯ ನಾವು ಸ್ಪೇನ್ ದೇಶದ ಭಾಗವಲ್ಲ ಎನ್ನುತ್ತಾರೆ. ಸ್ಪೇನ್ನ ಇನ್ನೊಂದು ರಾಜ್ಯ ವಾಸ್ಕೋ ತನ್ನನ್ನ ತಾನು ದೇಶವೆಂದು ಕರೆದುಕೊಳ್ಳುತ್ತದೆ. ಸ್ಕಾಟ್ಲೆಂಡ್ ಯುನೈಟೆಡ್ ಕಿಂಗ್ಡಮ್ನಿಂದ ಹೊರಬರಬೇಕು ಎನ್ನುವ ಹವಣಿಕೆ ದಶಕಗಳಿಂದ ನಡೆಸುತ್ತಿದೆ, ಕಸೊವೊ ಎನ್ನುವ ಪುಟ್ಟ ಜಾಗ, ಜನ, ಸೆರ್ಬಿಯನ್ನರಿಂದ ಹೊರ ಬಂದು ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿದ್ದಾರೆ.
ಚೆಕ್, ಸ್ಕೆಸ್ಲೋವೇಕಿಯಾ ಬೇರೆಯಾಗಿವೆ, ಇಟಲಿಯ ರೋಮ್ನಲ್ಲಿರುವ ವ್ಯಾಟಿಕನ್ ಜಗತ್ತಿನ ಪುಟಾಣಿ ದೇಶವೆಂದು ಪ್ರಸಿದ್ದಿ ಹೊಂದಿದೆ. ಇದು ಮೈಸೂರಿನ ಯಾವುದಾದರೊಂದು ಪುಟಾಣಿ ಮೊಹಲ್ಲಗಿಂತ ಕಡಿಮೆ ವಿಸ್ತೀರ್ಣ ಹೊಂದಿದೆ. ಫ್ರಾನ್ಸ್ ದೇಶದಲ್ಲಿ ಸರಿಯಾಗಿ ಫಾರ್ಮುಲಾ ಒನ್ ಟ್ರ್ಯಾಕ್ ಮಾಡಲು ಆಗದ ಮೊನಾಕೊ ಎನ್ನುವ ಜಾಗ ದೇಶವಾಗಿದೆ. ಯೂರೋಪಿನ ಉದ್ದಗಲಕ್ಕೂ ನೋಡುತ್ತಾ ಬನ್ನಿ, ಅಲ್ಲ ಭಾಷೆಯ ಹೆಸರಿನಲ್ಲಿ , ನಂಬಿಕೆಯ ಹೆಸರಿನಲ್ಲಿ ದೇಶಗಳು ಛಿದ್ರವಾಗಿವೆ.
ಬೆಂಗಳೂರಿನ ಒಂದೆರಡು ಬಡಾವಣೆಗಳಷ್ಟು ಜನಸಂಖ್ಯೆ ಹೊಂದಿರದ ಪ್ರದೇಶಗಳು ಇಲ್ಲಿ ದೇಶದ ಪಟ್ಟ ಪಡೆದು ಕುಳಿತಿವೆ. ಇನ್ನು ರಷ್ಯಾ ಹತ್ತಾರು ದೇಶಗಳಾಗಿ ಛಿದ್ರವಾಗಿ ದಶಕಗಳು ಕಳೆದಿವೆ.
ಇರಾಕಿಯನ್ನರನ್ನು ಕಂಡರೆ, ಇರಾನಿಗರಿಗೆ ಆಗುವುದಿಲ್ಲ, ಸೌದಿ ಕಂಡರೆ ಕುವೈತ್ ಗೆ ಆಗುವುದಿಲ್ಲ, ಕತಾರ್ ವೇಗವಾಗಿ ಬೆಳೆಯುತ್ತಿರುವುದು ಸೌದಿಗೆ ಬೇಕಿಲ್ಲ. ಆಫ್ರಿಕಾದ ಕಥೆ ಹೇಳುವಂತಿಲ್ಲ. ನಂಬಿಕೆ ದ್ರೋಹ, ಅವಿಶ್ವಾಸ ಎನ್ನುವುದು ದೇಶ, ಭಾಷೆ, ಧರ್ಮ, ಜಾತಿಯನ್ನ ಮೀರಿ ಜಾಗತಿಕವಾಗಿ ಬೆಳೆದು ಕುಳಿತಿದೆ.
ಸದ್ದಾಂ ಹುಸೇನ್ ಎನ್ನವ ವ್ಯಕ್ತಿ ಲಕ್ಷಾಂತರ ಕುರ್ದಿಶ್ಗಳ ಮಾರಣ ಹೋಮಕ್ಕೆ ಕಾರಣನಾದ, ಕುರ್ದಿಶ್ರು ಕೂಡ ಮುಸ್ಲಿಮರೇ ಅಲ್ಲವೇನು? ಅಮಿಶ್ ಎನ್ನುವ ಒಂದು ಯಹೂದಿ ಸಮುದಾಯ ವಿದೆ. ಅಮೆರಿಕಾದ ಒಂದಷ್ಟು ಪ್ರಾಂತ್ಯದಲ್ಲಿ, ಯೂರೋಪಿನ ಒಂದೆರಡು ದೇಶಗಳಲ್ಲಿರುವ ಈ ಜನ, ಚರ್ಚಿನ ಆe ಮೀರಿ ಹೋದವರಿಗೆ ಇಂದಿಗೂ ಬಹಿಷ್ಕಾರ ಹಾಕುತ್ತದೆ.
ಗಡ್ಡ ಎಷ್ಟು ಸೆಂಟಿ ಮೀಟರ್ ಬಿಡಬೇಕು, ಬಿಡಬಾರದು ಎನ್ನುವ ಕುರಿತು ಚರ್ಚಿನಲ್ಲಿ ವಾದವಾಗಿ, ಅದು ಒಂದಷ್ಟು ಜನರ ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗುತ್ತದೆ. ನಾನ್ಯಾವುದೋ 18 ಶತಮಾನದ ಕಥೆಯನ್ನ ನಿಮಗೆ ಹೇಳುತ್ತಿಲ್ಲ, ಇದೆಲ್ಲವೂ ಅಮೆರಿಕಾ ದೇಶದಲ್ಲಿ ಒಂದೆರೆಡು ದಶಕದ ಹಿಂದೆ ನಡೆದಿದೆ, ನಡೆಯುತ್ತಿದೆ.
ಇನ್ನು ಮರಳಿ ಭಾರತದ ವಿಷಯಕ್ಕೆ ಬರುವುದಾದರೆ ಕಿತ್ತಾಟ ಎನ್ನುವುದು ಸದಾ ಇದ್ದದ್ದೇ, ನಾವು ಒಂದಾಗಿ ಶತ್ರು (!?)ವನ್ನು ಎದುರಿಸಿದ ಪುರಾವೆಗಳು ಮಾತ್ರ ಬೆರಳೆಣಿಕೆ. ಅದು ಕೂಡ ಸ್ವಲ್ಪ ಸಮಯದವರೆಗೆ ಮಾತ್ರ. ತಂದೆಯನ್ನ, ಅಣ್ಣನನ್ನ, ಚಿಕ್ಕಪ್ಪನ್ನ ಕೊಂದ ಕಥೆಗಳು ಅನೇಕ. ದಾಯಾದಿ ಕಲಹದ ವಿಷಯವನ್ನು ವಿವರಿಸಬೇಕಾದ ಅವಶ್ಯಕತೆ ಇದೆಯೇ? ಮೊಘಲರದ್ದು ಕೂಡ ಸೇಮ್ ಟು ಸೇಮ್ ಕಥೆ. ತಂದೆಯನ್ನ, ಅಣ್ಣ ತಮ್ಮಂದಿರನ್ನ ಕೊಂದು ರಾಜರಾದವರ ಕಥೆ ಬಹಳ ವಿದೆ.
ರಾಮಾಯಣ, ಮಹಾಭಾರದಲ್ಲೂ ಕಿತ್ತಾಟವೇ ಪ್ರಮುಖವಲ್ಲವೇ? ಇವತ್ತಿನ ವಿಷಯಕ್ಕೆ ಬರೋಣ, ಒಂದೈದು ಕೋಟಿ ಬೆಲೆ ಬಾಳುವ ಆಸ್ತಿ ಬಿಟ್ಟು ಪೋಷಕರು ವಿಲ್ ಬರೆಯದೆ ಹೋದರೆ ಆಗ ನೋಡಿ ಮುಕ್ಕಾಲು ಪಾಲು ಜನರ ಬಣ್ಣ ಬಯಲಿಗೆ ಬರುತ್ತದೆ. ಒಗ್ಗಟ್ಟು, ವಿನಯವಂತಿಕೆ ಇವೆಲ್ಲವೂ ಪ್ರಜ್ಞಾಪೂರ್ವಕವಾಗಿ ಬೆಳಸಿಕೊಂಡ ಗುಣವಾಗಿರುವುದರಿಂದ ಸಾಮಾನ್ಯ ಸಮಯದಲ್ಲಿ ಅದು ಕೆಲಸ ಮಾಡುತ್ತದೆ.
ಬದಲಾದ ಸನ್ನಿವೇಶದಲ್ಲಿ ಪಶು ಪ್ರವೃತ್ತಿ ಜಾಗೃತವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಅತ್ಯಂತ ಸಂಭಾವಿತರಾಗಿರುವ ಸ್ಪ್ಯಾನಿಶರು ಕೋವಿಡ್ ಸಮಯದಲ್ಲಿ ಬೆಡ್ಗಾಗಿ ಕೈ ಕೈ ಮಿಲಾಯಿಸಿರುವ ಉದಾಹರಣೆ ನಮ್ಮ ಮುಂದಿದೆ. ಅದು ಇಲ್ಲೂ ಆಗಿದೆ.
ಇವೆ ದೇಶ, ರಾಜ್ಯ, ಊರುಗಳ ಕಥೆಯಾದರೆ, ಕುಟುಂಬದ ಕಥೆ ವಿಭಿನ್ನವೇನಲ್ಲ. ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತಿದೆ. ಅದನ್ನು ಸತ್ಯ ಮಾಡುವಂತೆ ಮುಖೇಶ್ ಮತ್ತು ಅನಿಲ ಅಂಬಾನಿ ಸಿಗುತ್ತಾರೆ. ಅವರು ಪ್ರಸಿದ್ದರು ಎನ್ನುವ ಕಾರಣಕ್ಕೆ ಅವರ ಹೆಸರನ್ನು ಉಲ್ಲೇಖಿಸಿದೆ. ಇದು ಇಂದಿಗೆ ಮನೆಮನೆಯ ಕಥೆ. ಇನ್ನು ದ್ವಾಪರ ಯುಗ ಎಂದ ತಕ್ಷಣ ನಮಗೆ ನೆನಪಾಗುವುದೇ ದಾಯಾದಿಗಳ ಕಲಹ. ಇವೆಲ್ಲವನ್ನೂ ಒಂದು ಬದಿಗಿಟ್ಟು ಇಂದಿನ ಸಿನಿಮಾ ನೋಡಿ.
ಅದ್ಯಾವ ಭಾಷೆಯ ಸಿನಿಮಾ ಇರಲಿ ಅ ಸಿಗುವುದು ಹೊಡೆದಾಟ, ಕಚ್ಚಾಟ. ಭಾರತೀಯ ಸಿನೆಮಾ ಗಳಂತೂ ಕಳೆದ ಎರಡು ಮೂರು ವರ್ಷದಿಂದ ಕಿತ್ತಾಟ, ಬಡಿದಾಟ ಜನರಿಗೆ ಇಷ್ಟ ಎನ್ನುವುದನ್ನು ಅರಿತು ಅವವೇ ಚರ್ವಿತ ಚರ್ವಣ ಸಿನಿಮಾಗಳನ್ನು ಹೊಸೆಯುತ್ತಿವೆ. ಇವೆ ಏಕಾಗುತ್ತದೆ ಎಂದರೆ ನಮ್ಮ ನಿಜವಾದ, ಸಹಜವಾದ ಗುಣವೇ ಕಿತ್ತಾಟದ್ದು, ಉಳಿವಿಗಾಗಿ, ಬೆಳವಣಿಗೆಗಾಗಿ ಕಿತ್ತಾಡುವುದು ಪ್ರಾಣಿ ಧರ್ಮ, ಪ್ರಕೃತಿ ಧರ್ಮ.
ನಾವು ಕಿತ್ತಾಡದೆ ಬದುಕಬವೇ? ಕಳೆದ 80 ವರ್ಷದಲ್ಲಿ ಅಂದರೆ ಎರಡನೇ ಮಹಾಯುದ್ಧದ ನಂತರ ಜಗತ್ತಿನಲ್ಲಿ ಕಿತ್ತಾಟ ಸಾಕಷ್ಟು ಕಡಿಮೆಯಾಗಿದೆ. ಕಿತ್ತಾಟ ಕಡಿಮೆಯಾದಾಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಆಗೆ ಕಲೆ, ಸಾಹಿತ್ಯ, ಸಂಗೀತ ಮುನ್ನೆಲೆಗೆ ಬರುತ್ತದೆ. ನಾಗರಿಕತೆ ಬೆಳೆಯುತ್ತದೆ. ಸಮಾಜ, ಜಗತ್ತು ಮತ್ತೆ ಮಗ್ಗುಲು ಬದಲಿಸುವ ಸಾಧ್ಯತೆಯಿರುವ ಈ ಸಮಯದಲ್ಲಿ ಕಚ್ಚಾಟದಿಂದ ಯಾವ ಪ್ರಯೋಜನವಿಲ್ಲ ಎಂದು ಕೂಗಿ ಹೇಳಬೇಕು ಎನ್ನಿಸುತ್ತಿದೆ.
ಆದರೆ ಹೇಳುವುದು ಯಾರಿಗೆ? ಹೇಳಿದರೂ ಕೇಳುವರಾರಿಲ್ಲಿ? ಕೊನೆಯದಾಗಿ: ಜಗತ್ತಿನೆಡೆ ಮನುಷ್ಯ ಸೇಮ್. ಅದೇ ರಾಗ ದ್ವೇಷ, ಅದೇ ನೋವು, ಹತಾಶೆ, ಸುಖ, ಸ್ವಾರ್ಥ.., ಸೇಮ್ .. ಯಾವುದೂ ಬದಲಿಲ್ಲ. ಅವನ/ಅವಳ ಮೂಲ ಗುಣ ಕಿತ್ತಾಟ. ಅದಕ್ಕೆ ಕಾರಣಗಳು ಬೇಕಲ್ಲ, ಹೀಗಾಗಿ ಜಾತಿ, ಧರ್ಮ, ಭಾಷೆ ಸಾಧನವಾಗುತ್ತದೆ.
ಅದು ಮುಗಿದ ಮೇಲೆ ಇನ್ನಷ್ಟು ಉಪಭಾಷೆ, ಉಪಪಂಗಡವಾಗಿ ಬೇರ್ಪಡುತ್ತಾನೆ, ನಂತರ ಮತ್ತದೇ ಪ್ರಶ್ನೆ, ಅಯ್ಯಗಳಿರಾ ನೀವೆಲ್ಲ ಒಂದೇ ಜಾತಿಯವರು. ಒಂದೇ ಕುಲ, ಗೋತ್ರದವರು. ನಿಮ್ಮ ಆಚಾರ ವಿಚಾರ ಎಲ್ಲವೂ ಸೇಮ್, ಮತ್ತೇಕೆ ಕಿತ್ತಾಡುತ್ತಿರಿ? ಏಕೆಂದರೆ ಅವನ /ಅವಳ ಗುಣವೇ ಕಿತ್ತಾಡು ವುದು.
ಅರ್ಥವಿಷ್ಟೆ, ನಾವು ಮನುಷ್ಯ ಜಾತಿ ಇರುವುದೇ ಹೀಗೆ, ಇಂದು ಜಗಳವಾಗಬೇಕಿರುವುದು/ ಹೋರಾಟವಾಗಬೇಕಿರುವುದು, ಹೆಚ್ಚುತ್ತಿರುವ ಅಸಮಾನತೆ ಬಗ್ಗೆ, ಹೆಣ್ಣು ಗಂಡಿನ ನಡುವಿನ ತಾರತಮ್ಯದ ಬಗ್ಗೆ, ನಾವಿರುವ ಮನೆಯನ್ನು ಕಾದ ಕಾವಲಿ ಮಾಡಿಕೊಂಡಿರುವ ಮುಟ್ಟಾಳತನದ ಬಗ್ಗೆ ! ಆದರೆ ನಮಗಿದಾವುದೂ ಬೇಡ. ನಮ್ಮಿಷ್ಟದ ಕಚ್ಚಾಟ ಮಾತ್ರ ನಮಗೆ ಸಾಕು.