Dr Karaveeraprabhu Kyalakonada Column: ಮಾದಕವಸ್ತು ಬಳಕೆ: ಸಮಾಜಕ್ಕೆ ಶಾಪ
ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಒಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ವಾಗುತ್ತಿರುವ ಮಾದಕವಸ್ತು ಸೇವನೆ ಈಗಾಗಲೇ ನಮ್ಮ ದೇಶದ ನಗರಗಳನ್ನು ಕಬಳಿಸತೊಡಗಿದೆ. ಜನತೆ ಜಾಗೃತವಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಈ ಸಾಂಕ್ರಾಮಿಕ ರೋಗವು ದೇಶದ ಸಣ್ಣ ಪುಟ್ಟ ಹಳ್ಳಿಗಳಿಗೂ ಹರಡಿ ತಲೆಮಾರೊಂದು ಅದರ ಕರಿನೆರಳಲ್ಲಿಯೇ ಬದುಕಬೇಕಾದೀತು.


ಪ್ರಸ್ತುತ
ಡಾ.ಕರವೀರ ಪ್ರಭು ಕ್ಯಾಲಕೊಂಡ
ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಒಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ವಾಗುತ್ತಿರುವ ಮಾದಕವಸ್ತು ಸೇವನೆ ಈಗಾಗಲೇ ನಮ್ಮ ದೇಶದ ನಗರಗಳನ್ನು ಕಬಳಿಸತೊಡಗಿದೆ. ಜನತೆ ಜಾಗೃತವಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಈ ಸಾಂಕ್ರಾಮಿಕ ರೋಗವು ದೇಶದ ಸಣ್ಣ ಪುಟ್ಟ ಹಳ್ಳಿಗಳಿಗೂ ಹರಡಿ ತಲೆಮಾರೊಂದು ಅದರ ಕರಿನೆರಳಲ್ಲಿಯೇ ಬದುಕಬೇಕಾದೀತು.
ಮಾದಕವಸ್ತು ವ್ಯಕ್ತಿಯ ಮಾನವೀಯ ಮೌಲ್ಯಗಳನ್ನು ದೂರ ಇರಿಸುತ್ತದೆ. ಸುಖ, ಶಾಂತಿ, ಆನಂದವು ಮಾನವ ಜೀವನದ ಪ್ರಬಲ ಆಸೆಗಳು, ಆಕರ್ಷಣೆಗಳು ಎಂದಿದ್ದಾನೆ ಪ್ರಸಿದ್ಧ ಮನೋ ವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್.
ಚಟಕ್ಕೆ ಬಲಿಬೀಳುವವರ ಯಾರು?: ಕಲಿತ ಚಟಕ್ಕೆ ಕಲ್ಲು ಹಾಕಿದ ರೂ ಬಿಡುವುದಿಲ್ಲ ಎಂಬುದು ಮತ್ತಿನ ವಸ್ತುಗಳ ವಿಷಯದಲ್ಲಂತೂ ಸತ್ಯ. ಬಹಳ ಮಂದಿ ಆಗೊಮ್ಮೆ ಈಗೊಮ್ಮೆ ಮೋಜಿಗಾಗಿ, ಕುತೂಹಲಕ್ಕಾಗಿ, ಖುಷಿಗಾಗಿ ಮಾದಕವಸ್ತುಗಳನ್ನು ಸೇವಿಸುತ್ತಾರೆ, ಕೆಲವರು ಅದರ ದಾಸರಾಗು ತ್ತಾರೆ. ಮಾದಕವಸ್ತುಗಳ ಮಾಯಾಜಾಲದ ವ್ಯಾಮೋಹಕ್ಕೆ ಬಲಿಯಾಗುವವರನ್ನು ಮೊದಲೇ ಗಮನಿಸಿ, ಎಚ್ಚರ ವಹಿಸಿ, ಅವರು ಚಟಕ್ಕೆ ಬೀಳದಂತೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ.
ಇದನ್ನೂ ಓದಿ: Vishweshwar Bhat Column: ದುರಂತವೂ, ಭಾಷಾ ಸಮಸ್ಯೆಯೂ
ಜೈವಿಕ ಕಾರಣಗಳಿಂದ ಅಥವಾ ಬೆಳೆದ ವಾತಾವರಣದಲ್ಲಿನ ಕೆಟ್ಟ ಮಾದರಿ-ನ್ಯೂನತೆಗಳಿಂದ ಅಥವಾ ತಂದೆ-ತಾಯಿಯರ, ಅನಾರೋಗ್ಯಕರ ದ್ವಂದ್ವ ಧೋರಣೆಯ ಮತ್ತು ತಪ್ಪು ಪ್ರೋತ್ಸಾಹ, ಮಾರ್ಗದರ್ಶನಗಳಿಂದ ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಾಗಿ, ಆರೋಗ್ಯಕರವಾಗಿ ವಿಕಾಸ ವಾಗುವುದಿಲ್ಲ. ಅವನ ವ್ಯಕ್ತಿತ್ವ ದೋಷ ಪೂರ್ಣವಾಗಿ ದುರ್ಬಲವಾಗುತ್ತದೆ. ಆತ ವಿಪರೀತ ಸ್ವಾರ್ಥಿ, ಸುಖಲೋಲನಾಗಬಹುದು. ಮೈಮನಸ್ಸುಗಳ ಆಸೆಗಳನ್ನು ಹತೋಟಿಯಲ್ಲಿಡಲು ವಿಫಲನಾಗ ಬಹುದು.
ಇಂಥ ವ್ಯಕ್ತಿಗಳು ಮಾದಕವಸ್ತುವನ್ನು ಸೇವಿಸಲಾರಂಭಿಸಿದರೆ ಅದೊಂದು ಚಟವಾಗಬಲ್ಲದು. ಸರ್ವಸಾಮಾನ್ಯವಾಗಿ ಎಲ್ಲಡೆ ಉಪಯೋಗದಲ್ಲಿರುವ ಮಾದಕವಸ್ತುಗಳು
೧.ಕೇವಲ ಮಾನಸಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿಗಳು: ಕೊಕೇನ್, ಎಲ್.ಎಸ್. ಡಿ, ಸೈಲೋಸೈಬಿನ್, ಮಸ್ಕಾಲಿನ್, ಕೆನಾಬಿಸ್, ನಿಕೋಟಿನ್, ಕೆಫೀನ್
೨. ಸಂಪೂರ್ಣ ಮಾನಸಿಕ ಹಾಗೂ ಸಂದೇಹಾಸ್ಪದ ದೈಹಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿಗಳು. ಎ. ಅಪೀಮ ಪ್ರತಿರೋಧಕಗಳು: ನಲಾರ್ಫಿನ್,. ಲೆವಾಲಾರಫೆನ್, ಸೈಕ್ಲಜೋಸಿನ್.
ಬಿ.ಆಂಫಿಟಮಿನ್ಗಳು: ಆಂಫಿಟಮಿನ್, ಮೆಥಾಂಫಿಟಮಿನ್, ಫೆನ್ ಮೆಟ್ರಾಜೈನ್, ಮೀಥೈಲ್ ಫ್ಲೆನಿಡೇಟ್, ಪಿಪ್ರಡಾಲ್
೩. ಸಂಪೂರ್ಣ ಮಾನಸಿಕ ಹಾಗೂ ದೈಹಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿಗಳು
ಎ. ಅಪೀಮ ತರಹದವು: ಮಾರ್ಫಿನ್, ಕೋಡಿನ್, ಡೈಹೈಡ್ರೋ ಮಾರ್ಫಿನಾನ್, ಹೆರಾಯಿನ್, ಪೆಥಡಿನ್, ಮೆಥಾಡೋನ್, ಫೆನಾಜೋಸಿನ್, ಲೋಮೋಟಿಲ್ .
ಬಿ. ಮದ್ಯಸಾರ-ಬಾರ್ಬಿಚುರೇಟ್ ತರಹದವು: ಈಥೈಲ್ ಆಲ್ಕೋಹಾಲ್, ಬಾರ್ಬಿಚುರೇಟ್, ಪೆರಾಲ್ಡಿಹೈಡ್, ಕ್ಲೋರಾಲ್ ಹೈಡ್ರೇಟ್ , ಮೆಪ್ರೋಬಮೇಟ್, ಗ್ಲುಟಥೆಮಿಡ್, ಮಿಥೈಲ್ ಫ್ರೈಲಾನ್, ಎಥೀನ್ ಮೈಟ್, ಎಥಾಕ್ಲೋರ್ ವೈನಾಲ್, ಬೆಂಜೋಡಯಾಜಿಪೈನ್ಸ್, ಮೆಥಾಕ್ವಾಲೋನ್. ಇಂದು ಸಾಮಾನ್ಯವಾಗಿ ದುರುಪಯೋಗವಾಗುತ್ತಿರುವ ಔಷಧಿಗಳಲ್ಲಿ ಮುಖ್ಯವಾದವು ಆರು- ಆಂಫಿಟಮಿನ್, ಕೊಕೇನ್, ಕೆನಾಬಿಸ್ , ಬಾರ್ಬಿಚುರೇಟ್, ಅಪೀಮು, ಎಲ್.ಎಸ್.ಡಿ.
ಕಾರ್ಯನಿರ್ವಹಣೆ : ಇಂಜೆಕ್ಷನ್ ಮೂಲಕವಾಗಲಿ, ಗುಳಿಗೆಗಳನ್ನು ನುಂಗುವುದರಿಂದಾಗಲಿ, ಪಾನೀಯ ಸೇವಿಸುವುದರಿಂದಾಗಲಿ ದೇಹ ಸೇರುವ ಮಾದಕವಸ್ತುಗಳು ಅಂತಿಮ ಹಂತದಲ್ಲಿ ರಕ್ತದಲ್ಲಿ ಸಂಚರಿಸಿ, ಕಾರ್ಯನಿರ್ವಹಣೆಯ ದೇಹದ ಭಾಗದ ಕೇಂದ್ರಗಳಿಗೆ ಲಗ್ಗೆ ಹಾಕುತ್ತವೆ.
ಭ್ರಮಾಲೋಕದ ಬ್ರಹ್ಮಾಂಡದಲ್ಲಿ ಅವು ವಿಹರಿಸುವಂತೆ ಮಾಡುತ್ತವೆ. ಬುದ್ಧಿಮತ್ತೆಯ ಕಾರ್ಯಕಲಾಪಗಳ ಕೇಂದ್ರಗಳಿಗೆ ಕೀಲಿ ಹಾಕಿ, ಭಾವಾವೇಶದ ಬಾನಿನಲ್ಲಿ ಗೊತ್ತುಗುರಿಯಿಲ್ಲದೇ ಗರಿ ಬಿಚ್ಚಿ ಹಾರಾಡುವ ವಾತಾವರಣ ನಿರ್ಮಿಸುವುದರಿಂದಾಗಿ ಇದಕ್ಕೆ ವೈದ್ಯಕೀಯ ನಿರ್ವಾಣ ಎನ್ನುವರು. ನಿದ್ರಾಜನಕಗಳ ಪರಿಣಾಮಗಳು ಪ್ರಭಾವಶಾಲಿಯಾಗುವಲ್ಲಿ ನೆಮ್ಮದಿಕಾರಕಗಳು ನೆರವಾಗುತ್ತವೆ.
ಮಾದಕ ಪಾನೀಯಗಳು ಯಕೃತ್ನಲ್ಲಿ ಉತ್ಕರ್ಷಣೆಗೊಳಗಾಗಿ ರಕ್ತದಲ್ಲಿ ಸಂಚರಿಸಿ, ಕೇಂದ್ರ ನರಮಂಡಲದ ಜೀವಕೋ ಶಗಳಿಗೆ ಮುತ್ತಿಗೆ ಹಾಕಿ, ದೈಹಿಕ ಮಾನಸಿಕ ಚಟುವಟಿಕಾ ಕೇಂದ್ರ, ವಿಚಾರಿಸುವ ಕೇಂದ್ರ, ಮಾತನಾಡುವ ಕೇಂದ್ರ, ಉಷ್ಣ ನಿಯಂತ್ರಣ ಕೇಂದ್ರಗಳ ಮೇಲೆ ಪ್ರಭಾವ ಬೀರಿ, ಕಾರ್ಯನಿರ್ವಹಣೆಯ ನಿಯಂತ್ರಣ ತಪ್ಪಿಸುತ್ತವೆ.
ಪ್ರಾರಂಭದಲ್ಲಿ ಅಲ್ಪ ಸ್ವಲ್ಪ ಪ್ರಮಾಣಕ್ಕೆ ಖುಷಿ ಕೊಡುವ ಮಾದಕವಸ್ತುಗಳು ಆ ಖುಷಿಯನ್ನು ದಿನಗಳೆದಂತೆ ಕೊಡುವಲ್ಲಿ ವಿಫಲವಾಗುತ್ತದೆ. ಮೊದಲಿನ ಖುಷಿಯನ್ನು ಪಡೆಯುವ ಮನೋ ಭಾವಕ್ಕೆ ಮಣಿದು ಹೆಚ್ಚು ಹೆಚ್ಚು ಪ್ರಮಾಣ ಸೇವಿಸುತ್ತ ಹೋಗುವುದು ಅನಿವಾರ್ಯವಾಗುತ್ತದೆ.
ಸ್ವಭಾವತಃ ಯಾರೂ ವ್ಯಸನಿಗಳಲ್ಲ. ಅವರು ಪರಿಸ್ಥಿತಿಯ ಕೈಗೊಂಬೆಯಾಗಿರುವುದು ಸಹಜ. ಮಾದಕವಸ್ತುಗಳು ಸೃಷ್ಟಿಸಿರುವ ಸಮಸ್ಯೆಗಳಿಗೆ ಏಕೈಕ ಉತ್ತರ ಅದನ್ನು ತಡೆಗಟ್ಟುವುದಾಗಿದೆ. ಜಗದ ಜಂಜಾಟದ ಬದುಕಿನಲ್ಲಿ ಜರ್ಜರಿತರಾಗಿ ಮಾದಕವಸ್ತುಗಳ ದಾಳಿಯ ಗಾಳಕ್ಕೆ ಸಿಕ್ಕಿಕೊಳ್ಳಬಾರದು. ಆ ದಿಶೆಯಲ್ಲಿಯ ಪ್ರಯತ್ನದಿಂದ ಅಸಾಧ್ಯವೇನಲ್ಲ ಎಂಬುದು ಸತ್ಯ. ರಚನಾತ್ಮಕ ಚಟುವಟಿಕೆ ಗಳಲ್ಲಿ ತೊಡಗಬೇಕು. ಇದರಿಂದ ಅಸ್ತಿತ್ವ ಗಟ್ಟಿಗೊಳ್ಳುವುದು. ವ್ಯಕ್ತಿತ್ವ ವಿಕಾಸಗೊಳ್ಳುವುದು.
ಮಾದಕವಸ್ತುಗಳ ಚಕ್ರವ್ಯೂಹ ಭೇದಿಸಿ ಹೊರಗೆ ಬರಲು ಮನಸ್ಸಿನ ದೃಢನಿರ್ಧಾರ ಅತ್ಯಗತ್ಯ, ಮನಸ್ಸಿದ್ದಲ್ಲಿ ಮಾರ್ಗವಿದೆ. ಡ್ರಗ್ ಒಂದು ಗೌಪ್ಯ ದಂದೆ. ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಸರಬರಾಜು. ಎಲ್ಲೂ ಸುಳಿವು ಸಿಗದಂತೆ ನಡೆಯುವ ದಂದೆ. ಡ್ರಗ್ ಪೆಡ್ಲರ್ಗಳಿಂದ ದಾಳಿ ವೇಳೆ ಪೋಲಿಸರಿಗೆ ಆ ಜಾಲದ ಮಾಹಿತಿ ಸಿಗುತ್ತದೆ. ಹಾಗೆ ನೋಡಿದರೆ ಡ್ರಗ್ ಮಾಫಿಯಾ ಈ ದೇಶದ ಹೊಸ ದಂದೆ ಏನಲ್ಲ, ಅದು ಬಹಳ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ಪೋಲಿಸ್ ದಾಳಿಗಳು, ವಶಪಡಿಸಿಕೊಳ್ಳುವಿಕೆ, ಬಂಧನ, ವಿಚಾರಣೆ, ಬಿಡುಗಡೆ, ಪ್ರತಿಷ್ಠಿತರ ಹೆಸರು ಎಲ್ಲವೂ ಹಳಸಲು ಸುದ್ದಿಗಳೆನಿಸುತ್ತದೆ.
ಡ್ರಗ್ ವಿಷಯವು ಆಗಾಗ ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡು ಬಹು ಚರ್ಚಿತವಾಗಿ ಮತ್ತೆ ತೆರೆಯ ಮರೆಗೆ ಸರಿಯುತ್ತದೆ. ಎಲ್ಲರೂ ಮರೆತಾಗ ಮತ್ತೆ ಸ್ವಚ್ಚಂದವಾಗಿ ತನ್ನ ಕದಂಬ ಬಾಹು ಚಾಚಿ ನಿರಾಳವಾಗಿ ತನ್ನ ವ್ಯವಹಾರ ಮುಂದುವರೆಸುತ್ತದೆ.
ಡ್ರಗ್ ಮಾಫಿಯಾವನ್ನು ಬೇರು ಸಹಿತ ಕಿತ್ತೊಗೆಯುವುದು ಬಲು ಕಷ್ಟ. ಇದರ ಕಡಿವಾಣಕ್ಕೆ , ಬಳಸುವವರೇ ಮನಸ್ಸನ್ನು ಬದಲಾಯಿಸಿ ತಿರಸ್ಕರಿಸಬೇಕು, ಅದರ ಜಾಲ ಬೇರು ಸಮೇತ ನಾಶ ವಾಗಬಹುದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಅದರ ದಾಸರಾಗಿ ದ್ದರು. ಆದರೆ ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್ ವುಡ್ಗಳಿಗೆ ಇದರ ಕರಿಛಾಯೆ ಮೂಡಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಗೂಢವಾಗಿ ಉಳಿಯುತ್ತಿದೆ.
ಏನು ಮಾಡಬೇಕು?: ಮೊಟ್ಟ ಮೊದಲು ಡ್ರಗ್ ದೂರವಿರಿಸುವ ಇಚ್ಛಾಶಕ್ತಿ ಬೇಕು. ಮುಂದಾಗುವ ಅನಾಹುತಗಳನ್ನು, ಅಪಾಯಗಳನ್ನು, ಗಂಡಾಂತರಗಳನ್ನು ತಡೆಗಟ್ಟಬೇಕಾದರೆ, ಅಗತ್ಯ ಕ್ರಮಗಳನ್ನು ತ್ವರಿತವಾಗಿ ತಗೆದುಕೊಂಡು ಅಕ್ರಮ ಜಾಲ ಭೇದಿಸುವುದು ಅನಿವಾರ್ಯವಾಗಿದೆ. ಸಮಗ್ರ ತನಿಖೆಯಾಗಿ, ಸರಿಯಾದ ನ್ಯಾಯ ಒದಗಿಸಿ ಜನರಿಗೂ ಅವುಗಳ ಮೇಲೆ ಭರವಸೆ ಮೂಡುವ ಹಾಗೆ ಮಾಡಿ, ಜನರು ನಿಟ್ಟುಸಿರು ಬಿಟ್ಟು, ನೆಮ್ಮದಿಯಿಂದ ಬದುಕುವ ಹಾಗೆ ಆಗಬೇಕಿದೆ..