ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akbar Column: ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ದೇವರಿಗೇ ಗೊತ್ತು !

ಮೊದಲ ವಿಶ್ವ ಮಹಾಯುದ್ಧದಲ್ಲಿ ಯಹೂದಿ ಸಂಘಟನೆಗಳು ಬ್ರಿಟಿಷ್ ಮತ್ತು ಫ್ರೆಂಚರ ಮೈತ್ರಿಕೂಟ ವನ್ನು ಬೆಂಬಲಿಸಿದ್ದವು. ಅದಕ್ಕೆ ಪ್ರತಿಫಲವಾಗಿ 1917ರ ನವೆಂಬರ್ 2ರಂದು ಅವುಗಳಿಗೆ ಬಾಲೋರ್ ಘೋಷಣೆಯ ಕೊಡುಗೆ ಲಭಿಸಿತು. 1922ರ ವೇಳೆಗೆ ಅಮೆರಿಕ ಮತ್ತು ಲೀಗ್ ಆಫ್‌ ನೇಷನ್ಸ್‌ನಿಂದಲೂ ಯಹೂದಿಗಳ ಭರವಸೆಯ ನಾಡಿಗೆ ಬೆಂಬಲ ದೊರೆಯಿತು.

ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ದೇವರಿಗೇ ಗೊತ್ತು !

Profile Ashok Nayak Jun 25, 2025 7:33 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಮೊದಲ ವಿಶ್ವ ಮಹಾಯುದ್ಧದಲ್ಲಿ ಯಹೂದಿ ಸಂಘಟನೆಗಳು ಬ್ರಿಟಿಷ್ ಮತ್ತು ಫ್ರೆಂಚರ ಮೈತ್ರಿಕೂಟವನ್ನು ಬೆಂಬಲಿಸಿದ್ದವು. ಅದಕ್ಕೆ ಪ್ರತಿಫಲವಾಗಿ 1917ರ ನವೆಂಬರ್ 2ರಂದು ಅವುಗಳಿಗೆ ಬಾಲೋರ್ ಘೋಷಣೆಯ ಕೊಡುಗೆ ಲಭಿಸಿತು. 1922ರ ವೇಳೆಗೆ ಅಮೆರಿಕ ಮತ್ತು ಲೀಗ್ ಆಫ್‌ ನೇಷನ್ಸ್‌ನಿಂದಲೂ ಯಹೂದಿಗಳ ಭರವಸೆಯ ನಾಡಿಗೆ ಬೆಂಬಲ ದೊರೆಯಿತು.

ವಿಶ್ವ ಮಹಾಯುದ್ಧ 2ರ ಬಳಿಕ ಇಸ್ರೇಲ್ ಎಂಬ ಕನಸು ಸಾಕಾರಗೊಂಡಿತು. 1947ರ ನವೆಂಬರ್ 29ರಂದು ವಿಶ್ವಸಂಸ್ಥೆಯು ಇಸ್ರೇಲ್‌ನ ಅಸ್ತಿತ್ವವನ್ನು ಅಧಿಕೃತವಾಗಿ ಅಂಗೀಕರಿಸಿತು. ಅದರೊಂದಿಗೆ ಇಸ್ರೇಲ್ ಎಂಬ ದೇಶ ಜಗತ್ತಿನ ಭೂಪಟದಲ್ಲಿ ಅಧಿಕೃತವಾಗಿ ಜನ್ಮ ತಾಳಿತು. ಆದರೆ ಒಬ್ಬ ಮನುಷ್ಯನ ಸುರಕ್ಷತೆಯು ಇನ್ನೊಬ್ಬ ಮನುಷ್ಯನ ಅಪಾಯ ಎಂಬಂಥ ಪರಿಸರದಲ್ಲಿ ಈ ಪುಟ್ಟ ದೇಶಕ್ಕೆ ಭದ್ರತೆಯ ಖಾತ್ರಿ ಯಾವ ರೀತಿಯಲ್ಲೂ ಲಭಿಸುವಂತಿರಲಿಲ್ಲ. ಇವತ್ತಿಗೂ ಮುಂದು ವರಿದಿರುವ ಯುದ್ಧಗಳು ಈ ಪ್ರದೇಶದ ಜನರ ರಕ್ತವನ್ನು ಹೀರುತ್ತಲೇ ಇವೆ.

ಸೋವಿಯತ್ ಒಕ್ಕೂಟದ ಪತನ

1917ರಲ್ಲಿ ತ್ಸಾರ್‌ಗಳ ರಷ್ಯಾ ಸೋವಿಯತ್ ಒಕ್ಕೂಟವಾಯಿತು. ಇನ್ನೂ ನಿಕಷಕ್ಕೆ ಒಳಪಡದಿದ್ದ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತದ ಮೂಲಕ ರಷ್ಯನ್ನರಿಗೆ ಹಸಿವಿನಿಂದ ಮುಕ್ತಿ ದೊರಕಿಸಿ ಕೊಡುವುದಾಗಿ ಲೆನಿನ್ ಮತ್ತು ಸ್ಟಾಲಿನ್ ಭರವಸೆ ನೀಡಿದರು. ಅದಕ್ಕಾಗಿ ಅವರು ಏಷ್ಯಾ ಮತ್ತು ಕಕೇಶಿಯನ್ ಪ್ರದೇಶಗಳನ್ನು ವಸಾಹತುವಾಗಿಸಿಕೊಂಡು ಆಳ್ವಿಕೆ ನಡೆಸಲು ತಮ್ಮ ಸೇನೆಗಳನ್ನು ಕಳುಹಿಸಿದರು. ನಂತರ ಪೂರ್ವ ಯುರೋಪಿನ ಮೇಲೂ ದಂಡೆತ್ತಿ ಹೋದರು.

ಇದನ್ನೂ ಓದಿ: ‌M J Akbar Column: ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಡಾ.ಸ್ಟ್ರೇಂಜ್‌ ಲವ್ !

ಪರಿಣಾಮ, ಬರ್ಲಿನ್‌ನಿಂದ ಆರಂಭಿಸಿ ವ್ಲಾಡಿವೋಸ್ಟೋಕ್ ವರೆಗೆ ಬೃಹತ್ ಸಾಮ್ರಾಜ್ಯ ನಿರ್ಮಾಣ ವಾಯಿತು. 1945ರಲ್ಲಿ ಅಮೆರಿಕ ಕೂಡ ಕ್ರಿಮಿಯನ್ ನಗರವಾದ ಯಾಲ್ಟಾದಲ್ಲಿ ನಡೆದ ಪ್ರಸಿದ್ಧ ಸಮಾವೇಶದಲ್ಲಿ ರಷ್ಯನ್ ಸಾಮ್ರಾಜ್ಯವನ್ನು ಒಂದು ವಾಸ್ತವವೆಂದು ಸ್ವೀಕರಿಸಿತು. ಆದರೆ ಮಿಲಿಟರಿಯ ನಿಗಾದ ಒಳಗೆ ಲಾವಾದಂತೆ ಆರು ದಶಕಗಳ ಕಾಲ ಕುದಿಯುತ್ತಿದ್ದ ಸಾಮ್ರಾಜ್ಯ ಇನ್ನೂ ಹೆಚ್ಚು ಸಮಯ ಜೀವಂತವಾಗಿರಲು ಸಾಧ್ಯವಾಗಲಿಲ್ಲ.

1980ರ ದಶಕದಲ್ಲಿ ಶಿಥಿಲ ಕಮ್ಯುನಿಸ್ಟ್ ಒಕ್ಕೂಟ ಛಿದ್ರಗೊಂಡಿತು. ನ್ಯಾಟೋ ನೇತೃತ್ವದಲ್ಲಿ ಪಶ್ಚಿಮ ದೇಶಗಳ ಒಕ್ಕೂಟವು ಪೂರ್ವ ಯುರೋಪ್ ಮೂಲಕ 1990ರ ದಶಕದಲ್ಲಿ ಒಳನುಗ್ಗಿದವು.

? ಪುಟಿನ್ ಬಂದ ಮೇಲೆ ಸ್ಥಿರತೆ 2000ನೇ ಇಸ್ವಿಯಲ್ಲಿ ವ್ಲಾಡಿಮಿರ್ ಪುಟಿನ್ ಉಚ್ಛ್ರಾಯಕ್ಕೆ ಬರುವವ ರೆಗೂ ರಷ್ಯಾದಲ್ಲಿ ಸ್ಥಿರತೆ ಎಂಬುದಿರಲಿಲ್ಲ. ದೇಶದೊಳಗೇ ಒಂದು ಭಾಗವನ್ನು ಸ್ಥಳೀಯ ಶಕ್ತಿ ಕೇಂದ್ರವಾದ ಚೆಚೆನ್ಯಾ ಬಂಡುಕೋರರ ಕೈಗೆ ರಷ್ಯಾ ನೀಡಿತ್ತು. ನ್ಯಾಟೋವನ್ನು ಕಂಡರೆ ಪುಟಿನ್ ಕುದಿಯುತ್ತಿದ್ದರು. ಅದರ ಜತೆಗಿನ ಸಂಘರ್ಷವನ್ನು ತಪ್ಪಿಸಿಕೊಳ್ಳಲು ಉಕ್ರೇನ್‌ನ ಗಡಿಯಲ್ಲಿ ಒಂದು ರೇಖೆ ಎಳೆದು, ಇದನ್ನು ದಾಟಿ ನ್ಯಾಟೋದವರು ಮುಂದೆ ಬರುವಂತಿಲ್ಲ ಎಂದು ಷರತ್ತು ವಿಽಸಿದರು. ಉಕ್ರೇನ್ ದೇಶವು ರಷ್ಯಾ ಪಾಲಿಗೆ ಬ-ರ್ ಪ್ರದೇಶವಾಯಿತು.

ಹೀಗಾಗಿಯೇ ಪುಟಿನ್ 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಾಗಲೂ ಅಮೆರಿಕ ಮತ್ತು ಅದರ ಸ್ನೇಹಿತರು ಮೌನವಾಗಿ ನೋಡುತ್ತಾ ಕುಳಿತಿದ್ದರು. ಹೀಗಾಗಿ ಪುಟಿನ್‌ಗೊಂದು ಹುಂಬ ಧೈರ್ಯ ಪ್ರಾಪ್ತವಾಗಿತ್ತು. ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಧೈರ್ಯದಲ್ಲೇ ಅವರು 2022ರಲ್ಲಿ ಉಕ್ರೇನ್ ನೊಳಗೆ ರಷ್ಯನ್ ಭಾಷೆ ಮಾತನಾಡುತ್ತಿದ್ದ ಪ್ರದೇಶಗಳಿಗೆ ಸೇನೆಯನ್ನು ನುಗ್ಗಿಸಿದರು. ಆದರೆ ಅವರ ಊಹೆ ಸುಳ್ಳಾಗಿತ್ತು.

ಮಾಸ್ಕೋದಲ್ಲಿ ಪುಟಿನ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಸುಮಾರು ಒಂದು ವರ್ಷದ ನಂತರ ಇತಿಹಾಸ ಅನೂಹ್ಯ ರೀತಿಯಲ್ಲಿ ದೊಡ್ಡದೊಂದು ತಿಪ್ಪರಲಾಗ ಹಾಕಿತ್ತು. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲೆ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಬಹಳ ಸಿದ್ಧತೆಯೊಂದಿಗೆ ನಡೆಸಿದ 9/11ರ ದಾಳಿಯ ಬಳಿಕ ಅಮೆರಿಕದ ಆದ್ಯತೆಗಳು ಬದಲಾಗಿದ್ದವು. ಪುಟಿನ್ ಮೇಲೆ ಒತ್ತಡ ಬಿತ್ತು.

ಜಾರ್ಜ್ ಡಬ್ಲ್ಯು ಬುಷ್ ಅಫ್ಘಾನಿಸ್ತಾನಕ್ಕೆ ದಂಡಯಾತ್ರೆ ನಡೆಸಿದರು. ಅದಕ್ಕೆ ಜಗತ್ತು ಚಪ್ಪಾಳೆ ಹೊಡೆಯಿತು. ಬಳಿಕ ಇರಾಕ್ ಮೇಲೆ ದಾಳಿ ನಡೆಸಿದರು. ಅದನ್ನು ನೋಡಿ ಜಗತ್ತು ಗೊಂದಲಕ್ಕೆ ಬಿದ್ದಿತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಪ್ರಭಾವ ವಲಯವು ಅಶಾಂತಿಯ ವಲಯವಾಗಿ ಮಾರ್ಪಟ್ಟಿತು.

? ಇರಾನ್-ಇರಾಕ್ ಮಧ್ಯೆ ಶಾಂತಿ

ಇರಾಕ್ ಮೇಲೆ ಅಮೆರಿಕ ನಡೆಸಿದ ಯುದ್ಧದಲ್ಲಿ ಯಾರಾದರೂ ತಕ್ಷಣಕ್ಕೆ ಗೆದ್ದಿದ್ದರೆ ಅದು ಇರಾನ್. ಏಕೆಂದರೆ, ಅದು ಇರಾಕ್‌ನ ಬಹುಸಂಖ್ಯಾತ ಶಿಯಾಗಳನ್ನು ಸುನ್ನಿ ಸಾಮ್ರಾಜ್ಯಶಾಹಿ ಮತ್ತು ಸರ್ವಾಧಿಕಾರಿಗಳಿಂದ ಮುಕ್ತಗೊಳಿಸಿತು. ಅಮೆರಿಕವು ಇರಾಕ್ ಅನ್ನು ತೊರೆದು ಹೋದಾಗ ಅದು ಪ್ರಜಾಪ್ರಭುತ್ವದ ರೂಢಿಗತ ನಿಯಮಗಳನ್ನು ಪಾಲಿಸಲು ಇರಾಕ್‌ನ ಆಡಳಿತವನ್ನು ನಾಗರಿಕ ಸರಕಾರದ ಕೈಗೆ ಒಪ್ಪಿಸಿತು. ಅದರಲ್ಲಿ ಶಿಯಾಗಳೇ ಬಹುಸಂಖ್ಯಾತರಾಗಿದ್ದರು. ಅದು ಇರಾಕನ್ನು ಇರಾನ್‌ನ ಸಹವರ್ತಿಯನ್ನಾಗಿ ಮಾಡುವುದರ ಬದಲು ಆ ಪ್ರದೇಶದಲ್ಲಿನ ಅಶಾಂತಿಗೆ ಮಂಗಳ ಹಾಡಿತು.

ಇರಾಕ್‌ನ ಸದ್ದಾಂ ಹುಸೇನ್ ಅನಾಮತ್ತು ಎಂಟು ವರ್ಷಗಳ ಕಾಲ ಯುದ್ಧ ನಡೆಸಿ ಇರಾನ್‌ನಲ್ಲಿ ಅಯೋತೊಲ್ಲಾ ಸಾಮ್ರಾಜ್ಯವನ್ನು ನಾಶಪಡಿಸಿದ್ದ. ಅಮೆರಿಕನ್ನರು ಬಾಗ್ದಾದ್ ತೊರೆದು ಹೋದ ಮೇಲೆ ಶಿಯಾಗಳ ಜತೆಗೆ ಇರಾನ್ ವ್ಯೂಹಾತ್ಮಕ ಸ್ನೇಹಕೂಟ ರಚಿಸಿಕೊಂಡಿತು.

ಅದು ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾಗಳ ದಾಯಾದಿಗಳನ್ನೂ ತಲುಪಿತು. ಸಿರಿಯಾದಲ್ಲಿ ಕೂಡ ಶಿಯಾ ಮುಸ್ಲಿಮರ ಒಂದು ಪಂಗಡವಾಗಿರುವ ಅಲವೈಟ್‌ಗಳ ನಿಯಂತ್ರಣದಲ್ಲಿರುವ ಸರಕಾರ ವಿತ್ತು. ಹಫೀಜ್ ಮತ್ತು ಬಷರ್ ಅಲ್ ಅಸದ್ ಅದನ್ನು ಆಳುತ್ತಿದ್ದರು.

ಸಿರಿಯಾದಲ್ಲಿ ಅಧಿಕಾರ ಬದಲು

1963ರಿಂದ ಸಿರಿಯಾದಲ್ಲಿ ಬಾತ್ ಪಕ್ಷವೇ ಆಡಳಿತ ನಡೆಸುತ್ತಿತ್ತು. ಅದು ಶ್ರೀಮಂತರ, ಎಡಪಂಥೀಯ ಜಾತ್ಯತೀತ ಶಿಯಾ ಅಲವೈಟ್‌ಗಳ ನಿಯಂತ್ರಣದಲ್ಲಿತ್ತು. ಶಿಯಾ ಅಲವೈಟ್‌ಗಳು ಅಲ್ಪಸಂಖ್ಯಾತರು. ಸಿರಿಯಾದ ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ.15ರಷ್ಟಿತ್ತು. 1970ರಲ್ಲಿ ಹಫೀಜ್ ಅಲ್ ಅಸದ್ ಸಿರಿಯಾದ ಸರ್ವಾಧಿಕಾರಿಯಾದ. ಅವನ ನಂತರ ಮಗ ಬಷರ್ ಅಲ್ ಅಸದ್ ಅಧಿಕಾರಕ್ಕೆ ಬಂದ. 2024ರ ಡಿಸೆಂಬರ್‌ನಲ್ಲಿ, 42 ವರ್ಷದ ಅಹಮದ್ ಹುಸೇನ್ ಅಲ್ ಶರಾ ನೇತೃತ್ವದ ಸೇನೆಯು ಟರ್ಕಿಯ ಬೆಂಬಲದೊಂದಿಗೆ ಬಷರ್ ಅಲ್ ಅಸದ್‌ನನ್ನು ಕೆಳಗಿಳಿಸಿತು.

ಹುಸೇನ್ ಅಲ್ ಶರಾ ಸಿರಿಯಾದ ಅಧ್ಯಕ್ಷನಾಗಿ ಡಿಸೆಂಬರ್ 8ರಂದು ಪ್ರಸಿದ್ಧ ಉಮಯ್ಯಾದ್ ಮಸೀದಿ ಯಲ್ಲಿ ನಿಂತು ಜಗತ್ತನ್ನುದ್ದೇಶಿಸಿ ಭಾಷಣ ಮಾಡಿ, “ಇನ್ನುಮುಂದೆ ಇರಾನ್‌ನ ಉದ್ದೇಶ ಈಡೇರಿಕೆಗೆ ಸಿರಿಯಾ ಆಟದ ಮೈದಾನವಾಗಲು ನಾನು ಬಿಡುವುದಿಲ್ಲ" ಎಂದು ಘೋಷಿಸಿದ.

ಇಸ್ರೇಲ್ ತಕ್ಷಣ ಸಿರಿಯಾದ ಆಗ್ನೇಯದಲ್ಲಿರುವ ಗೋಲನ್ ಹೈಟ್ಸ್‌ನಿಂದ ಮುಂದೆ ಹೋಗಿ ಹೊಸ ಗಡಿ ಸ್ಥಾಪಿಸಲು ಮುಂದಾಯಿತು. ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಡಮಾಸ್ಕಸ್‌ ನಲ್ಲಿ ಅಸದ್‌ನ ಪತನದೊಂದಿಗೆ ಶಿಯಾದ ಅರ್ಧಚಂದ್ರದಲ್ಲಿ ಮೂಡಿದ ಬಿರುಕು ಕೂಡ ಬಹಳ ಮುಖ್ಯವಾದ ಕಾರಣಗಳಲ್ಲೊಂದು.

ಕಾಲ ಹೇಗೆ ಲಾಗ ಹಾಕುತ್ತದೆ ನೋಡಿ. 2006ರಿಂದ 2011ರವರೆಗೆ ಯಾರನ್ನು ಅಲ್‌ಖೈದಾ ಉಗ್ರ ಎಂದು ಅಮೆರಿಕದ ಸರಕಾರ ತನ್ನ ಜೈಲಿನಲ್ಲಿರಿಸಿತ್ತೋ ಅವನನ್ನೇ ಈಗ ಬೆಂಬಲಿಸುತ್ತಿದೆ. ಅಸದ್‌ನ ಆಳ್ವಿಕೆಯ ವಿರುದ್ಧ ಹೋರಾಡಲು ಅಹಮದ್ ಅಲ್ ಶರಾ ತನ್ನದೇ ಆದ ‘ಅಲ್ ನುಸ್ರಾ ಫ್ರಂಟ್’ ಎಂಬ ಸಂಘಟನೆ ಕಟ್ಟಿಕೊಂಡಿದ್ದ.

2016ರಲ್ಲಿ ಅವನು ಅಲ್‌ಖೈದಾದಿಂದ ಬೇರ್ಪಟ್ಟು ನುಸ್ರಾ ಸಂಘಟನೆಯನ್ನು ಹಯಾತ್ ತಹ್ರೀರ್ ಅಲ್ ಶಾಮ್‌ನಲ್ಲಿ ವಿಲೀನಗೊಳಿಸಿದ. ಪಶ್ಚಿಮದ ಕ್ರಿಶ್ಚಿಯನ್ನರ ವಿರುದ್ಧ ಜಿಹಾದ್ ನಡೆಸುವು ದಕ್ಕಿಂತ ಡಮಾಸ್ಕಸ್‌ನಲ್ಲಿ ಅಧಿಕಾರ ನಡೆಸುವುದು ಈ ಸೀಮಿತ ಬದುಕಿನಲ್ಲಿ ಒಳ್ಳೆಯ ಆಯ್ಕೆ ಯೆಂದು ಅವನಿಗೆ ಜ್ಞಾನೋದಯವಾಗಿತ್ತು.

ಅಧಿಕಾರಕ್ಕೆ ಬರುತ್ತಿದ್ದಂತೆ ಅವನು ಬದಲಾವಣೆಯನ್ನು ತೋರಿಸಲು ಸಿರಿಯಾದ ಎಲ್ಲಾ ಮಹಿಳೆ ಯರು ಬುರ್ಖಿನಿ ಧರಿಸಬೇಕು ಎಂದು ಆದೇಶ ನೀಡಿದ. ಪಶ್ಚಿಮದ ಪ್ರದೇಶಗಳಲ್ಲಿ ಅದಕ್ಕೆ ಸಣ್ಣ ಪ್ರಮಾಣದ ವಿರೋಧ ವ್ಯಕ್ತವಾಯಿತು. ಇಸ್ಲಾಂ ಧರ್ಮವನ್ನು ಬುರ್ಖಾದ ಜತೆಗೆ ಯಾವತ್ತೂ ಕನ್ ಫ್ಯೂಸ್ ಮಾಡಿಕೊಳ್ಳದೆ ಇದ್ದ ಬಷರ್ ಅಲ್ ಅಸದ್ ಈಗ ಪುಟಿನ್‌ನ ಆಶ್ರಯದಲ್ಲಿ ಮಾಸ್ಕೋದಲ್ಲಿ ದ್ದಾನೆ.

ಅರಬ್ ರಾಷ್ಟ್ರಗಳ ನಿರ್ಲಿಪ್ತ ನಡೆ

ಇಲ್ಲಿಯವರೆಗೆ, ಅರಬ್ ನೆರೆಹೊರೆಯ ಯಾವುದೇ ದೇಶ ಇಸ್ರೇಲ್‌ನ ರಾಡಾರ್‌ನಲ್ಲಿಲ್ಲ. ಹಮಾಸ್‌ನ ನೇತೃತ್ವದಲ್ಲಿರುವ ಪ್ಯಾಲೆಸ್ತೀನಿಯನ್ನರು ಕೂಡ ಅರಬ್ಬರೇ ಆಗಿದ್ದರೂ ಅರಬ್ ರಾಷ್ಟ್ರಗಳು ಈ ಸಂಘರ್ಷವನ್ನು ತಮ್ಮ ಯುದ್ಧವೆಂಬಂತೆ ನೋಡುತ್ತಿಲ್ಲ. ಅವರ ಪಾಲಿಗೆ ಹಮಾಸ್ ಮತ್ತು ಹೆಜ್ಬೊಲ್ಲಾಗಳು ಇರಾನ್‌ನ ಪಾಳಯದಲ್ಲಿದ್ದಾರೆ.

ಈಜಿಪ್ಟ್ ಮತ್ತು ಸೌದಿ ಅರೇಬಿಯಾಕ್ಕೆ ರಿಸ್ಕ್ ತೆಗೆದುಕೊಳ್ಳುವ ಮನಸ್ಸಿಲ್ಲ. ಜೋರ್ಡಾನ್ ಕೂಡ ತನ್ನ ಆಗಸದಲ್ಲಿ ಇರಾನ್‌ನ ಡ್ರೋನ್‌ಗಳು ಹಾರಾಟ ನಡೆಸುವುದನ್ನು ವಿರೋಧಿಸಿದೆ. ಸಿರಿಯಾ ತಟಸ್ಥ ವಾಗಿದೆ. ಅರಬ್‌ನ ಸಾರ್ವಜನಿಕ ಅಭಿಪ್ರಾಯವನ್ನು ನಿಯಂತ್ರಣದಲ್ಲಿ ಇರಿಸಲಾಗಿದೆ.

ಇರಾನ್‌ನ ಧೈರ್ಯ ನೋಡಿ ಅಚ್ಚರಿ

ಅಮೆರಿಕ ಗೊಂದಲದಲ್ಲಿದ್ದರೂ ಇರಾನ್ ಮೇಲೆ ದಾಳಿ ನಡೆಸುವಷ್ಟು ಆತ್ಮವಿಶ್ವಾಸವನ್ನು ಇಸ್ರೇಲ್ ತೋರಿದೆ. ಇದನ್ನು ಬರೆಯುವ ಹೊತ್ತಿಗೆ ಬೆಂಜಮಿನ್ ನೆತನ್ಯಾಹು ಅವರ ಶೌರ್ಯ ಹುರಿಗಟ್ಟಿತ್ತು. ಸರಿಯಾದ ಲೆಕ್ಕಾಚಾರ ಮತ್ತು ತಪ್ಪು ಲೆಕ್ಕಾಚಾರಗಳ ನಡುವಿನ ಜಾಗಕ್ಕೆ ಆಂತರಿಕ ಸಮೀಕ್ಷೆ ಯೊಂದು ಪ್ರವೇಶ ಪಡೆದಿತ್ತು. ಇಸ್ರೇಲ್‌ನ ಕ್ಷಿಪಣಿಗಳ ನಿಖರತೆ ಮತ್ತು ಸಾಮರ್ಥ್ಯವನ್ನು ನೋಡಿದರೆ ಯಾರಿಗೂ ಆಶ್ಚರ್ಯವಾಗಬೇಕಿಲ್ಲ. ಆದರೆ ಟೆಲ್ ಅವಿವ್, ಜೆರುಸಲೇಂ, ಹೈಫಾ ಮುಂತಾದ ಒಂದು ಡಜನ್ ಇಸ್ರೇಲಿ ನಗರಗಳಲ್ಲಿ ಆತಂಕ ಮನೆಮಾಡುವಂತೆ ಮಾಡಿದ ಇರಾನ್ ನ ಸಾಮರ್ಥ್ಯವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ.

ಇರಾನಿನ ಡ್ರೋನ್‌ಗಳನ್ನು ತಡೆಯಲು ಅಮೆರಿಕ ಮತ್ತು ಬ್ರಿಟನ್ನಿನ ನೆರವು ಕೇಳುವುದಕ್ಕೆ ನೆತನ್ಯಾಹುಗೆ ಬಹಳ ಕಷ್ಟವಾಗಿರಬಹುದು. ಇಸ್ರೇಲ್‌ಗೆ ಎಲ್ಲಾ ರೀತಿಯ ವಾಯುದಾಳಿಯಿಂದ ರಕ್ಷಣೆ ನೀಡುತ್ತಿದ್ದ ಜಗತ್ಪ್ರಸಿದ್ಧ ಐರನ್ ಡೋಮ್ ಧ್ವಂಸಗೊಂಡಿದೆ. ಇಸ್ರೇಲಿನ ಸೇನಾಪಡೆಗಳು “ಯುದ್ಧದಲ್ಲಿ ನೋವಿಗೆ ಬೆಲೆ ತೆರಲೇಬೇಕು" ಎಂದು ನಾಗರಿಕರಿಗೆ ಎಚ್ಚರಿಕೆ ನೀಡಿವೆ. ಸಂಘರ್ಷ ಹೇಗೆ ಮುಂದುವರಿಯುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ.

ಎಲ್ಲಾ ರೀತಿಯ ಊಹೆಗಳೂ ತಲೆಕೆಳಗಾಗುತ್ತಿವೆ. ಒಂದಂತೂ ನಿಜ. ಭವಿಷ್ಯದಲ್ಲಿ ಬಹಳ ಕಾಲ ದವರೆಗೆ ಈ ಯುದ್ಧವನ್ನು ಅಧ್ಯಯನ ಮಾಡಲಾಗುತ್ತದೆ.

ಯುದ್ಧ ಎಲ್ಲಿಗೆ ಹೋಗಿ ನಿಲ್ಲುತ್ತದೆ?

ಇರಾನ್ ಈವರೆಗೂ ಯಾವುದೇ ದೇಶದ ಬಳಿ ಮಿಲಿಟರಿ ನೆರವು ಕೇಳಿಲ್ಲ. ಆದರೆ ಅಮೆರಿಕದ ಜತೆಗಿನ ಸಂಘರ್ಷ ತೀವ್ರವಾದರೆ ರಷ್ಯಾ ಮತ್ತು ಚೀನಾದ ಬಳಿ ನೆರವು ಕೇಳಬಹುದು. ಬಹಳ ಆಶ್ಚರ್ಯ ವೆಂಬಂತೆ ಈ ಬಾರಿ ಚೀನಾ ಸ್ಪಷ್ಟವಾದ ನಿಲುವು ತಾಳಿದೆ. ಇಸ್ರೇಲ್‌ನ ದಾಳಿಯನ್ನು ಅದು ನೇರವಾಗಿ ಖಂಡಿಸಿದೆ. ಬಹುಶಃ ಪಶ್ಚಿಮ ಏಷ್ಯಾ ಮಾತ್ರ ದಿನಪತ್ರಿಕೆಗಳ ಮುಖಪುಟದಿಂದ ಉಕ್ರೇನನ್ನು ಒಳಪುಟಕ್ಕೆ ಕಳುಹಿಸಿರಬಹುದು. ಆದರೆ ಅಲ್ಲಿ ಇನ್ನೂ ಬೆಂಕಿ ಉರಿಯುತ್ತಿದೆ. ಉಕ್ರೇನ್‌ನಿಂದ ಆಡೆನ್ ವರೆಗಿನ ಭೂಗೋಳ ಬಹಳ ಅಪಾಯಕಾರಿ, ಏಕೆಂದರೆ ಅಲ್ಲಿ ಸಿಡಿಯು ತ್ತಿರುವ ಸಣ್ಣ ಸಣ್ಣ ಬೆಂಕಿಯ ಕಿಡಿಗಳು ದೊಡ್ಡ ಜ್ವಾಲೆಯೊಡನೆ ಸೇರಿಕೊಳ್ಳಬಹುದು. ಉಕ್ರೇನ್, ಚೆಚೆನ್ಯಾ, ಕಕಾಸಸ್, ಕುರ್ದಿಸ್ತಾನ್, ಇರಾನ್, ಸಿರಿಯಾ, ಲೆಬನಾನ್, ಇಸ್ರೇಲ್, ಜೋರ್ಡನ್ ಹಾಗೂ ಕೆಂಪು ಸಮುದ್ರದಿಂದ ಕೆಳಗೆ ಆಡೆನ್‌ವರೆಗಿನ ಪ್ರದೇಶದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು.

ಯುದ್ಧದ ಆರಂಭವನ್ನು ಗುರುತಿಸಲು ನಾವು ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಲು ಸಾಧ್ಯವಿದೆ. ಆದರೆ, ಅದು ಯಾವಾಗ ಮುಗಿಯುತ್ತದೆ ಎಂಬುದು ದೇವರಿಗೇ ಗೊತ್ತು. ಪಾಪ, ಆ ದೇವರಿಗೆ ಈ ಬ್ರಹ್ಮಾಂಡದಲ್ಲಿ ಎಷ್ಟೊಂದು ಕೆಲಸಗಳಿವೆ.

(ಲೇಖಕರು ಹಿರಿಯ ಪತ್ರಕರ್ತರು)