ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vidyashankar Sharma Column: ದ್ವೇಷವನ್ನು ಗೆಲ್ಲುವ ಬಗೆ

ಇಂದಿನ ಜಗತ್ತು ಬಹು ವೇಗವಾಗಿ ಓಡುತ್ತಿದೆ. ಮನುಷ್ಯನು ದಿನವೂ ಹೊಸ ಹೊಸ ಆವಿಷ್ಕಾರ ಗಳನ್ನು ಮಾಡುತ್ತಾ, ತನ್ನ ಸುಖದ ಅನುಭವವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾನೆ. ಇವೆಲ್ಲವುಗಳ ಮಧ್ಯದಲ್ಲಿ ಮಾನವ ಸಹಜ ‘ರಾಗ-ದ್ವೇಷ’ಗಳು ಕೂಡ ಏರುಗತಿಯಲ್ಲಿವೆ. ಅದರಲ್ಲೂ ದ್ವೇಷದ ಕಿಚ್ಚುಇಡೀ ಪ್ರಪಂಚವನ್ನು ಕಾಡುತ್ತಿದೆ.

ದ್ವೇಷವನ್ನು ಗೆಲ್ಲುವ ಬಗೆ

Profile Ashok Nayak Jun 23, 2025 7:01 AM

ಸುವಿಚಾರ

ವಿದ್ಯಾಶಂಕರ ಶರ್ಮ

ಇಂದಿನ ಜಗತ್ತು ಬಹು ವೇಗವಾಗಿ ಓಡುತ್ತಿದೆ. ಮನುಷ್ಯನು ದಿನವೂ ಹೊಸ ಹೊಸ ಆವಿಷ್ಕಾರ ಗಳನ್ನು ಮಾಡುತ್ತಾ, ತನ್ನ ಸುಖದ ಅನುಭವವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಶ್ರಮಿಸು ತ್ತಿದ್ದಾನೆ. ಇವೆಲ್ಲವುಗಳ ಮಧ್ಯದಲ್ಲಿ ಮಾನವಸಹಜ ‘ರಾಗ-ದ್ವೇಷ’ಗಳು ಕೂಡ ಏರುಗತಿ ಯಲ್ಲಿವೆ. ಅದರಲ್ಲೂ ದ್ವೇಷದ ಕಿಚ್ಚುಇಡೀ ಪ್ರಪಂಚವನ್ನು ಕಾಡುತ್ತಿದೆ.

ಇಂಥ ಮನಸ್ಥಿತಿಯ ಬದಲಾವಣೆಗೆಂದು ನಮ್ಮ ಮೂಲ ಚಿಂತನೆಗೆ ಹೊಳಪು ನೀಡಬೇಕಾದ ಅವಶ್ಯಕತೆ ಇದೆ. ನಾವು ಯಾವುದೇ ಕ್ಷೇತ್ರದಲ್ಲಿರಲಿ, ಅಲ್ಲಿನ ನಮ್ಮ ಕಾರ್ಯಕ್ಷಮತೆ ಅಥವಾ ಸಾಧನೆಯ ಮಟ್ಟ ಕೆಳಗಿಳಿಯುತ್ತಿದೆ ಎಂದು ನಮಗೆ ಅನಿಸಿದಾಗ, ನಮ್ಮ ಕಲಿಕೆಯ ಮೂಲಕ್ಕೆ ನಾವು ಹೋಗಬೇಕಾಗುತ್ತದೆ- ‘ಮೂಲಕ್ಕೆ ತೆರಳು’ ಎನ್ನುವಂತೆ. ಭಾರತೀಯ ಸಂಸ್ಕೃತಿಯ ಮೂಲ ಚಿಂತನೆಯು ಇಡೀ ಜಗತ್ತಿಗೆ ಮಾದರಿಯಾಗಿದೆ. ನಾವು ಇತರರನ್ನು, ನಮಗಿಂತ ಭಿನ್ನವಾಗಿ ನೋಡುವುದರಲ್ಲಿಯೇ ದ್ವೇಷದ ಮೂಲ ಬೇರು ಇದೆ ಎನ್ನಬಹುದು.

ನಾವು ಎಲ್ಲರನ್ನೂ ನಮ್ಮಂತೆಯೇ ಕಂಡಾಗ, ಈ ದ್ವೇಷ-ಅಸೂಯೆ ಎಂಬ ನಕಾರಾತ್ಮಕ ಅಂಶಗಳು ತಾನೇ ತಾನಾಗಿ ಕರಗಿ ಹೋಗುತ್ತವೆ. ‘ಈಶಾವಾಸ್ಯ ಉಪನಿಷತ್’ನಲ್ಲಿ, “ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ | ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||" ಎಂದು ಹೇಳಲಾಗಿದೆ.

ಇದನ್ನೂ ಓದಿ: R T Vittalmurthy Column: ವಿಜಯೇಂದ್ರ ಅವರಿಗೆ ಲಾಸ್ಟ್‌ ಚಾನ್ಸು ?

ಅಂದರೆ, ಯಾರು ಎಲ್ಲರಲ್ಲೂ ತನ್ನ ಆತ್ಮವನ್ನೇ ಕಾಣುತ್ತಾನೋ, ಅವನು ಯಾರ ಬಗ್ಗೆಯೂ ದ್ವೇಷ, ನಿಂದನೆ ಹೊಂದುವುದಿಲ್ಲ; ಎಲ್ಲರಲ್ಲೂ ಪ್ರೇಮಭಾವವನ್ನು ಹೊಂದಿರುತ್ತಾನೆ ಎಂದರ್ಥ. ಎಂಥ ಉದಾತ್ತ ಚಿಂತನೆ ಅಲ್ಲವೇ? ಎಲ್ಲರಲ್ಲಿ ಅಡಕವಾಗಿರುವ ಆತ್ಮಚೈತನ್ಯವು ಒಂದೇ ಆಗಿರುವಾಗ, ಪರಸ್ಪರ ದ್ವೇಷ, ಅಸೂಯೆಗಳಿಗೆ ಜಾಗವಿರದು.

ಪ್ರಸ್ತುತ ಇಂಥ ವಿಚಾರಧಾರೆಯ ತುರ್ತು ಅವಶ್ಯಕತೆಯಿದೆ. ಯಾವಾಗ ನಮಗೆ, ಇತರರು ನಮಗಿಂತ ಬೇರೆಯವರು/ಭಿನ್ನರು ಎಂಬ ಭಾವನೆ ಬರುತ್ತದೋ, ಆಗ ಅವರಲ್ಲಿ ನಮಗೆ ದೌರ್ಬಲ್ಯಗಳು, ದುರ್ಗುಣಗಳು ಕಾಣಿಸಲಾರಂಭಿಸುತ್ತವೆ. ಯಾವಾಗ ವಿಶ್ವದ ಜನರೆಲ್ಲ ಸಮದರ್ಶಿಗಳಾಗುವರೋ ಆಗ ಎಲ್ಲ ಬಗೆಯ ಭಾವವಿಕಾರಗಳೂ ನಾಶವಾಗುತ್ತವೆ.

‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂಬ ಸರ್ವಜ್ಞನ ಮಾತಿನಲ್ಲೂ ಈ ಭಾವವೇ ಇರುವುದು. ‘ನಮ್ಮಂತೆಯೇ ಎಲ್ಲರೂ, ನಮ್ಮೆಲ್ಲರನ್ನು ಬೆಳಗುವ ಚೈತನ್ಯ ಒಂದೇ’ ಎಂಬ ಸತ್ಯದ ಅರಿವಾದಾಗ, ಇಡೀ ಮಾನವಕುಲವು ಸುಖ ಮತ್ತು ಶಾಂತಿಯ ಬದುಕಿನೆಡೆಗೆ ಸಾಗಬಲ್ಲದು. ಉಪ ನಿಷತ್ತಿನ ಮತ್ತು ಸರ್ವಜ್ಞನ ಮಾತುಗಳು ದೇಶ, ಕಾಲ, ಜಾತಿ, ಮತದ ಎಲ್ಲೆಗಳಿಗೆ ಸೀಮಿತವಾಗಿಲ್ಲ.

ಇಂಥ ಲೋಕಕಲ್ಯಾಣಕರ ವಿಚಾರಗಳಿಂದ ಜನರು ಇಂದು ದೂರವಾಗಿರುವುದೇ ಎಲ್ಲ ವಿಪ್ಲವಗಳಿಗೆ ಮೂಲವಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ನಿಲ್ಲುತ್ತಿಲ್ಲ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆದ ಭೀಕರ ಹಣಾಹಣಿಯಿಂದಾಗಿ ಸಾವಿರಾರು ಜನರು ಸತ್ತರು, ಗಣನೀಯ ಸಂಖ್ಯೆಯ ಜನರು ಗಾಯಗೊಂಡರು. ಈಗ ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಹಣಾಹಣಿ ನಡೆಯುತ್ತಿದೆ, ಇದಕ್ಕೆ ಅಮೆರಿಕವೂ ಈಗ ಸೇರ್ಪಡೆಗೊಂಡಿದೆ. ಶಾಂತಿ ಮತ್ತು ನೆಮ್ಮದಿ ಯ ಅರ್ಥ ಗೊತ್ತಿಲ್ಲದವರು ಮಾತ್ರ ಇಂಥ ಕಿತ್ತಾಟಗಳಿಗೆ ಶುರುವಿಟ್ಟುಕೊಳ್ಳುತ್ತಾರೆ ಹಾಗೂ ಮುಂದುವರಿಸಿಕೊಂಡು ಹೋಗುತ್ತಾರೆ.

ಪ್ರಪಂಚದ ಎಲ್ಲ ಗೋಜಲು ಮತ್ತು ಗೊಂದಲಗಳನ್ನು ಸೃಷ್ಟಿಮಾಡುವವನೇ ಮನುಷ್ಯ. ಅವನ ವಿಚಾರಧಾರೆಯಲ್ಲಿ ಹೊಳಪು ಬರಬೇಕು, ಅಲ್ಲಿಯವರೆಗೆ ದ್ವೇಷ-ದಳ್ಳುರಿಗಳಿಗೆ ಅಂತ್ಯ ಸಿಗದು. ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ಮೌಲ್ಯವು ಜಗತ್ತಿನ ತುಂಬ ಆವರಿಸಿದರೆ, ಇಡೀ ಪ್ರಪಂಚದ ಜನರು ತಮ್ಮ ಬದುಕಿನ ಹಾದಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದು.

(ಲೇಖಕರು ಹವ್ಯಾಸಿ ಬರಹಗಾರರು)