Ranjith H Ashwath Column: ದಳಗಳನ್ನು ಒಗ್ಗೂಡಿಸುವುದು ಸುಲಭವೇ ?
ಸಂಘಟನೆಯಿಲ್ಲದೇ ನೇರವಾಗಿ ಜನಪ್ರತಿನಿಧಿಯಾಗುವ ಉತ್ಸಾಹದಲ್ಲಿದ್ದ ನಿಖಿಲ್ ಕುಮಾರಸ್ವಾಮಿ, ಸತತ ಮೂರು ಸೋಲುಗಳ ಬಳಿಕ ಇದೀಗ ಸಂಘಟನೆಯ ಮೂಲಕ ಪಕ್ಷದ ರಾಜಕೀಯದಲ್ಲಿ ಆಯ ಕಟ್ಟಿನ ಸ್ಥಾನದಲ್ಲಿ ಕೂರಬೇಕೆನ್ನುವ ಲೆಕ್ಕಾಚಾರ ಆರಂಭಿಸಿದ್ದಾರೆ. ಇದರ ಭಾಗವಾಗಿ ‘ಜನರೊಂದಿಗೆ ಜನತಾದಳ’ ಎನ್ನುವ ಅಭಿಯಾನ ಆರಂಭಿಸಿ ‘ಮಿಸ್ಡ್ ಕಾಲ್’ ಅಭಿಯಾನ ಹಾಗೂ ರಾಜ್ಯಾದ್ಯಂತ ಸಂಘಟನಾತ್ಮಕ ಪ್ರವಾಸ ಮಾಡಲು ಮುಂದಾಗಿದ್ದಾರೆ.


ಅಶ್ವತ್ಥಕಟ್ಟೆ
ranjith.hoskere@gmail.com
ರಾಜಕೀಯದಲ್ಲಿ ಆಡಳಿತಪಕ್ಷ-ಪ್ರತಿಪಕ್ಷದ ಸ್ಥಾನದಲ್ಲಿ ಕೂರುವುದು, ಸೋಲು-ಗೆಲುವುಗಳನ್ನು ನೋಡುವುದು ಸರ್ವೇ ಸಾಮಾನ್ಯ. ಪ್ರತಿ ಚುನಾವಣೆಯಲ್ಲಿಯೂ ‘ಬದಲಾವಣೆ’ಯ ನಿರೀಕ್ಷೆ ಯೊಂದಿಗೆ ಮತದಾನಕ್ಕೆ ಹೋಗುವ ಮತದಾರರಿರುವ ಕಡೆ ಶಾಶ್ವತವಾಗಿ ಆಡಳಿತದಲ್ಲಿರುವುದು ಅಸಾಧ್ಯ. ಆದರೆ ಅಧಿಕಾರ ಹಾಗೂ ಚುನಾವಣೆ ಎರಡೂ ಇಲ್ಲದಿರುವಾಗಲೂ ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳುವ, ಚುನಾವಣೆಯ ದೃಷ್ಟಿಯ ಹೊರತಾಗಿ ಕೇಡರ್ ಕಟ್ಟಲು ಬಯಸುವ ಪಕ್ಷಗಳು ದೀರ್ಘಾವಧಿಯಲ್ಲಿ ನೆಲೆ ಕಂಡುಕೊಳ್ಳುವುದು ಸತ್ಯ.
ಅಧಿಕಾರದಲ್ಲಿರಲಿ ಇಲ್ಲದಿರಲಿ ಸುದ್ದಿಯಲ್ಲಿರಬೇಕು, ಪಕ್ಷದ ಕೇಡರ್ ಅನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಾಗಬೇಕು ಎನ್ನುವ ಮನಸ್ಥಿತಿಯನ್ನು ಬಿಜೆಪಿ-ಕಾಂಗ್ರೆಸ್ ಸದಾ ಹೊಂದಿರುತ್ತವೆ. ಆದರೆ ಕರ್ನಾಟಕ ದಲ್ಲಿರುವ ಮೂರನೇ ಪ್ರಮುಖ ಪಕ್ಷವೆನಿಸಿರುವ ಜೆಡಿಎಸ್ ಈ ವಿಷಯದಲ್ಲಿ ಪ್ರತಿ ಬಾರಿಯೂ ಹಿಂದೆ ಬಿದ್ದಿದೆ.
ಅಧಿಕಾರದಲ್ಲಿದ್ದಾಗ ‘ಸದ್ದು’ ಮಾಡುವ ಅಥವಾ ಚುನಾವಣೆಗೆ ಆರು ತಿಂಗಳಿರುವಾಗ ಹೊರಬರುವ ಜೆಡಿಎಸ್ ನಾಯಕರು ಚುನಾವಣೆ ಮುಗಿಯುತ್ತಿದ್ದಂತೆ ‘ಬೆಚ್ಚಗೆ ಮನೆಯಲ್ಲಿ ಮಲಗುತ್ತಾರೆ’. ಈ ಮಾತನ್ನು ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Ranjith H Ashwath Column: ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ
ಹೀಗಿರುವಾಗ ವಿಧಾನಸಭಾ ಚುನಾವಣೆಗೆ ಮೂರು ವರ್ಷಗಳಿರುವಾಗಲೇ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಘಟನಾತ್ಮಕ ಪ್ರವಾಸ ಆರಂಭಿಸಿರುವುದು ಜೆಡಿಎಸ್ ಪಾಲಿಗೆ ‘ವಿಚಿತ್ರ’ ಬೆಳವಣಿಗೆ. ನಿಖಿಲ್ ಪ್ರವಾಸ ಆರಂಭಿಸಿರುವ ‘ಉದ್ದೇಶ’ ಉತ್ತಮ ವಾಗಿದ್ದರೂ, ಪಕ್ಷದ ಕಾರ್ಯಕರ್ತರು ನಿಖಿಲ್ರನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಉತ್ತರ ಪ್ರದೇಶಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಮೇಲೆ ತುಸು ಹೆಚ್ಚಿನ ಪ್ರೇಮವಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂಥ ರಾಜ್ಯಗಳಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಈಗಲೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಆಸರೆಯನ್ನು ಬಯಸುತ್ತಿವೆ. ಆದರೆ ಕರ್ನಾಟಕದ ರಾಜಕೀಯ ಮಾತ್ರ ಈ ವಿಷಯದಲ್ಲಿ ಭಿನ್ನ ಎಂದರೆ ತಪ್ಪಾಗುವುದಿಲ್ಲ.
ಕಳೆದ 15 ವರ್ಷಗಳಲ್ಲಿ ಜೆಡಿಎಸ್ನ ಚುನಾವಣಾ ಅಂಕಿ-ಅಂಶವನ್ನು ನೋಡಿದರೆ, ದಿನದಿಂದ ದಿನಕ್ಕೆ ಜೆಡಿಎಸ್ನ ಗ್ರಾಫ್ ಯಾವ ರೀತಿಯಲ್ಲಿ ಇಳಿಮುಖವಾಗುತ್ತಿದೆ ಎನ್ನುವುದು ತಿಳಿಯುತ್ತದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ರೇವಣ್ಣ ಕುಟುಂಬ ರಾಜಕೀಯದಿಂದ ದೂರ ಉಳಿದಿದ್ದರೆ, ದೇವೇಗೌಡರಿಗೆ ಪಕ್ಷವನ್ನು ಸಂಘಟಿಸಬೇಕೆಂಬ ಹಂಬಲ ಈ ಇಳಿವಯಸ್ಸಿನಲ್ಲಿದ್ದರೂ ಅವರ ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ.
ಅದರಲ್ಲಿಯೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯ ಸೋಲು ದೇವೇಗೌಡರಿಗೆ ಇನ್ನಷ್ಟು ಪೆಟ್ಟು ಕೊಟ್ಟಿದ್ದು ಸುಳ್ಳಲ್ಲ. ಇನ್ನು ಅನಾರೋಗ್ಯದ ಹೊರತಾಗಿಯೂ ಕೆಲ ವರ್ಷಗಳಿಂದ ರಾಜ್ಯಾದ್ಯಂತ ಪಕ್ಷ ಸಂಘಟಿಸಿದ್ದ ಕುಮಾರಸ್ವಾಮಿ, ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಅವರು ಕೇಂದ್ರ ಸಚಿವರಾಗಿ ದೆಹಲಿಗೆ ತೆರಳಿದ ಬಳಿಕ ರಾಜ್ಯ ಜೆಡಿಎಸ್ ಅನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ.
ಅಂಥ ಹಲವು ಪ್ರಶ್ನೆಗಳಿರುವ ಸಮಯದಲ್ಲಿಯೇ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಸಂಘಟನಾ ಪ್ರವಾಸ’ ವನ್ನು ಸೋಮವಾರದಿಂದ ಆರಂಭಿಸಿದ್ದಾರೆ.
ತಾತ-ಅಪ್ಪನ ಬಳಿಕ ಪಕ್ಷದ ‘ಮಾಸ್ ನಾಯಕ’ನಾಗಿ ಕಾಣಿಸಿಕೊಳ್ಳಲು ಈ ಪ್ರವಾಸವನ್ನು ‘ಬೇಸ್’ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಈ ಪ್ರವಾಸದಲ್ಲಿ ಎಷ್ಟರ ಮಟ್ಟಿಗೆ ನಿಖಿಲ್ಗೆ ಯಶ ಸಿಗುತ್ತದೆ ಎನ್ನುವುದಕ್ಕಿಂತ ಕುಮಾರಸ್ವಾಮಿ ದೆಹಲಿಗೆ ತೆರಳಿದ ಬಳಿಕ ಸಂಘಟನೆಯನ್ನೇ ಮರೆದಿದ್ದ ಜೆಡಿಎಸ್ ಪಾಲಿಗೆ ಇದು ಉತ್ತಮ ಸಮಾಚಾರ ಎಂದರೆ ತಪ್ಪಾಗುವುದಿಲ್ಲ.
ಸಂಘಟನೆಯಿಲ್ಲದೇ ನೇರವಾಗಿ ಜನಪ್ರತಿನಿಧಿಯಾಗುವ ಉತ್ಸಾಹದಲ್ಲಿದ್ದ ನಿಖಿಲ್ ಕುಮಾರಸ್ವಾಮಿ, ಸತತ ಮೂರು ಸೋಲುಗಳ ಬಳಿಕ ಇದೀಗ ಸಂಘಟನೆಯ ಮೂಲಕ ಪಕ್ಷದ ರಾಜಕೀಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಕೂರಬೇಕೆನ್ನುವ ಲೆಕ್ಕಾಚಾರ ಆರಂಭಿಸಿದ್ದಾರೆ. ಇದರ ಭಾಗವಾಗಿ ‘ಜನರೊಂದಿಗೆ ಜನತಾದಳ’ ಎನ್ನುವ ಅಭಿಯಾನ ಆರಂಭಿಸಿ ‘ಮಿಸ್ಡ್ ಕಾಲ್’ ಅಭಿಯಾನ ಹಾಗೂ ರಾಜ್ಯಾದ್ಯಂತ ಸಂಘಟನಾತ್ಮಕ ಪ್ರವಾಸ ಮಾಡಲು ಮುಂದಾಗಿದ್ದಾರೆ.
ಸತತ ಸೋಲುಗಳ ಬಳಿಕವೂ ಅವರನ್ನು ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು; ಇದೀಗ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನಿಖಿಲ್ರನ್ನು ನೇಮಿಸುವ ಬಗ್ಗೆ ಸ್ವಪಕ್ಷದಲ್ಲಿಯೇ ಶುರುವಾಗಿದ್ದ ಅಕ್ಷೇಪಗಳಿಗೆ ‘ಕಾರ್ಯಕರ್ತರ ಬಲ’ವನ್ನು ತೋರಿಸಿ ಪಟ್ಟಕಟ್ಟುವ ಲೆಕ್ಕಾಚಾರವೂ ಈ ಅಭಿಯಾನದ ಹಿಂದಿದೆ. ಹಾಗೆ ನೋಡಿದರೆ, ಜೆಡಿಎಸ್ಗೆ ಕಾರ್ಯಕರ್ತರ ಅಥವಾ ಸಾಂಪ್ರದಾಯಿಕ ಮತದಾರರ ಕೊರತೆಯಿಲ್ಲ.
ಕೇವಲ ಹಳೇ ಮೈಸೂರು ಭಾಗ ಮಾತ್ರವಲ್ಲದೇ, ದೇವೇಗೌಡರು ನೀಡಿರುವ ನೀರಾವರಿ ಯೋಜನೆ ಹಾಗೂ ಜನತಾದಳದ ಮೂಲಬೇರುಗಳಿಗಾಗಿ ಉತ್ತರ ಕರ್ನಾಟಕದಲ್ಲಿ ಈಗಲೂ ಸಾಂಪ್ರದಾಯಿಕ ಮತದಾರರಿದ್ದಾರೆ. ಆದರೆ ಅವರನ್ನು ಮಾತನಾಡಿಸುವವರು ಇಲ್ಲದಿರುವುದು, ಜೆಡಿಎಸ್ನ ಇಂದಿನ ಸಂಘಟನಾ ವೈಫಲ್ಯಕ್ಕೆ ಕಾರಣ. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಆರಂಭಿಸಿರುವ ಈ ಎರಡು ತಿಂಗಳ ಪ್ರವಾಸದಲ್ಲಿ ಎಲ್ಲಿಯೂ ಕುಮಾರಸ್ವಾಮಿ ಅವರಾಗಲಿ, ದೇವೇಗೌಡರಾಗಲಿ ಭಾಗವಹಿಸುತ್ತಿಲ್ಲ.
ಹೀಗಿರುವಾಗ, ದೇವೇಗೌಡರಿಗಾಗಿ ಪಕ್ಷದೊಂದಿಗೆ ಉಳಿದುಕೊಂಡಿರುವ ಕಾರ್ಯಕರ್ತರು, ನಿಖಿಲ್ ರನ್ನು ನೋಡಿಕೊಂಡು ಮತ್ತೆ ಸಕ್ರಿಯರಾಗುವರೇ ಎನ್ನುವ ಪ್ರಶ್ನೆಗೆ ಮುಂದಿನ ಎರಡು ತಿಂಗಳಲ್ಲಿ ಉತ್ತರ ಸಿಗಲಿದೆ. ವರ್ಷದಿಂದ ವರ್ಷಕ್ಕೆ ಜೆಡಿಎಸ್ನ ಪ್ರಭಾವ ಕುಸಿಯುತ್ತಿದ್ದರೂ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ರಾಷ್ಟ್ರಮಟ್ಟದಲ್ಲಿ ತನ್ನ ಸ್ಥಾನವನ್ನು ಅದು ಭದ್ರಪಡಿಸಿಕೊಳ್ಳುತ್ತಿದೆ.
ಎನ್ಡಿಎಗೆ ಜೆಡಿಎಸ್ನ ಕೊಡುಗೆ ಎಷ್ಟಿದೆ ಎನ್ನುವುದಕ್ಕಿಂತ, ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮೋದಿ ಹಾಗೂ ಅಮಿತ್ ಶಾಗಿರುವ ಅಭಿಪ್ರಾಯ ಹಾಗೂ ರಾಜ್ಯದಲ್ಲಿರುವ ಬಿಜೆಪಿಯ ಆಂತರಿಕ ಸಂಘರ್ಷಗಳು ಜೆಡಿಎಸ್ಗೆ ಲಾಭ ಮಾಡಿಕೊಟ್ಟಿವೆ. ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಯ ಕನಿಷ್ಠ ಐದು ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಪ್ರಮುಖ ಪಾತ್ರವಹಿಸಿವೆ ಎನ್ನುವುದು ಜೆಡಿಎಸ್ ಗಿರುವ ಬಹುದೊಡ್ಡ ಲಾಭ.
ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಮೈತ್ರಿ ಬಲದೊಂದಿಗೆ ಜೆಡಿಎಸ್ ಹೋಗುವುದರಿಂದ, ‘ಟಿಕೆಟ್ ಯಾರಿಗೇ ಸಿಗಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು’ ಎನ್ನುವ ಸಂದೇಶವನ್ನು ಕಾರ್ಯಕರ್ತರಿಗೆ ಈ ಪ್ರವಾಸದಲ್ಲಿ ತಲುಪಿಸುವುದಾಗಿ ನಿಖಿಲ್ ಹೇಳಿಕೊಂಡಿದ್ದಾರೆ. ನಿಖಿಲ್ ನೀಡುವ ಈ ಸಂದೇಶ ಬಿಜೆಪಿ ಹಾಗೂ ಜೆಡಿಎಸ್ನ ನಾಯಕರಿಗೆ ಖುಷಿ ತರಿಸಬಹುದು. ಆದರೆ ತಳಮಟ್ಟದಲ್ಲಿರುವ ಕಾರ್ಯಕರ್ತರ ನಡುವಿನ ಸಂಘರ್ಷಗಳು ಈ ಒಂದು ಹೇಳಿಕೆಯಿಂದ ಸರಿಹೋಗುವುದೇ? ಮೇಲ್ನೋಟಕ್ಕೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಕುಮಾರಸ್ವಾಮಿ ಹಾಗೂ ನಿಖಿಲ್ ಅನ್ಯೋನ್ಯವಾಗಿದ್ದರೂ, ಚನ್ನಪಟ್ಟಣದ ಉಪಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಕಾರಣರ್ಯಾರು? ಸಿ.ಪಿ.ಯೋಗೇಶ್ವರ ಬಿಜೆಪಿಯಿಂದ ಕಾಂಗ್ರೆಸ್ ಹೋಗಿ, ಗೆಲುವು ಸಾಧಿಸಿದ್ದು ಹೇಗೆ? ಎನ್ನುವುದರ ಅರಿವಿದೆ.
ರಾಜ್ಯ ಬಿಜೆಪಿ ನಾಯಕರಿಂದ ಜೆಡಿಎಸ್ಗೆ ಬಿದ್ದಿರುವ ‘ಒಳಯೇಟಿ’ಗೆ ಪ್ರತಿಯೇಟು ನೀಡುವುದಕ್ಕಾಗಿ ಸ್ವತಃ ಎಚ್ಡಿಕೆ ಕಾಯುತ್ತಿರುವಾಗ, ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಸರಿ ಹೋಗಲು ಸಾಧ್ಯವೇ? ಹೋದ ಕಡೆಯಲ್ಲಿ ಟಿಕೆಟ್ ಜೆಡಿಎಸ್ಗೆ ಸಿಗುವುದಾ ಎನ್ನುವ ಪ್ರಶ್ನೆಗೆ ಈ ಹಂತದಲ್ಲಿ ಯಾವುದೇ ‘ಆಶ್ವಾಸನೆ’ ಕೊಡುವ ಪರಿಸ್ಥಿತಿಯಲ್ಲಿ ನಿಖಿಲ್ ಇಲ್ಲದಿರುವಾಗ ಯಾವ ರೀತಿಯಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲವಿದೆ.
ನಿಖಿಲ್ ಕುಮಾರಸ್ವಾಮಿ ಆರಂಭಿಸಿರುವ ಈ ಸಂಘಟನಾ ಪ್ರವಾಸದ ಸಮಯದಲ್ಲಿ ಬಹಿರಂಗ ಸಮಾವೇಶಗಳಿರುವುದಿಲ್ಲ. ಬದಲಿಗೆ ಕೇಡರ್ ಅನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುತ್ತದೆ ಎನ್ನುವುದು ಜೆಡಿಎಸ್ ಮೂಲಗಳ ಮಾತಾಗಿದೆ. ಮುಂದಿನ ಮೂರು ವರ್ಷಗಳ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಈಗಿನಿಂದಲೇ ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಘಟಿಸ ಲಾಗುತ್ತದೆ, ಅಗತ್ಯವಿರುವಲ್ಲಿ ಜಿಲ್ಲಾಧ್ಯಕ್ಷರ, ತಾಲೂಕು ಅಧ್ಯಕ್ಷರ ಬದಲಾವಣೆಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎನ್ನಲಾಗುತ್ತಿದೆ.
ನಿಖಿಲ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಚುನಾವಣೆಗೆ ಅಭ್ಯರ್ಥಿಗಳಾಗಲು ಬಯಸುವ ಆಕಾಂಕ್ಷಿಗಳ ಮೊದಲ ಹಂತದ ‘ಸಂದರ್ಶನ’ವನ್ನೂ ಇದೇ ಸಮಯದಲ್ಲಿ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಬಹುತೇಕರಲ್ಲಿರುವ ಪ್ರಶ್ನೆ, ಆಕಾಂಕ್ಷಿಗಳ ಸಂದರ್ಶನವನ್ನು ಯಾವ ಆಧಾರದಲ್ಲಿ ಮಾಡುತ್ತಾರೆ? ರಾಜ್ಯದ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಟಿಕೆಟ್ ಸಿಗುವುದು ‘ಸುಲಭ’.
ಆದರೆ ಮೈತ್ರಿಪಕ್ಷ ಬಿಜೆಪಿಗೆ ಬಹುತೇಕ ಕ್ಷೇತ್ರದಲ್ಲಿ ಒಂದು ಟಿಕೆಟ್ಗೆ 10 ಆಕಾಂಕ್ಷಿಗಳು ಟವೆಲ್ ಹಾಕಿರುವ ಉದಾಹರಣೆಯಿದೆ. ಅದರಲ್ಲಿಯೂ ಮೊದಲ ಹಂತದಲ್ಲಿ ನಿಖಿಲ್ ನಡೆಸುತ್ತಿರುವ ಪ್ರವಾಸದಲ್ಲಿ ಬರುವ ಬಹುತೇಕ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳ ರೀತಿಯಲ್ಲಿವೆ. ಹೀಗಿರುವಾಗ, ನಿಖಿಲ್ ಕುಮಾರಸ್ವಾಮಿ ಹೋಗಿ,
ಆಕಾಂಕ್ಷಿಗಳ ಪಟ್ಟಿಯನ್ನು ಕೇಳಿದರೆ ಮೈತ್ರಿಪಕ್ಷ ಬಿಜೆಪಿಯ ನಾಯಕರು ಸುಮ್ಮನಿರುವರೇ? ಈ ಪ್ರವಾಸ ಜೆಡಿಎಸ್ನ ಆಂತರಿಕ ವಿಷಯ ಎಂದಾದರೂ, ಮೈತ್ರಿಪಕ್ಷದ ಟಿಕೆಟ್ ವಿಷಯ ಎನ್ನುವುದು ಮುನ್ನೆಲೆಗೆ ಬಂದಾಗ ಸಹಜವಾಗಿಯೇ ಸ್ಥಳೀಯ ಬಿಜೆಪಿಗರಿಗೆ ‘ಕಿರಿಕಿರಿ’ಯಾಗುವುದು ಸಹಜ. ಈ ಕಿರಿಕಿರಿಯನ್ನು ರಾಜ್ಯ ನಾಯಕರಿಗೆ ಸ್ಥಳೀಯರು ವರ್ಗಾಯಿಸಿದರೆ ದೆಹಲಿಯಲ್ಲಿ ಅದರ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಒಂದು ವೇಳೆ ಕೇವಲ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಈ ಪ್ರವಾಸವೆಂದು ಜೆಡಿಎಸ್ ಹೇಳಿದರೆ, ಜೆಡಿಎಸ್ ನಲ್ಲಿರುವ ಆಕಾಂಕ್ಷಿಗಳು ಭ್ರಮನಿರಸನವಾಗುವ ಸಾಧ್ಯತೆಯಿದೆ. ಟಿಕೆಟ್ ಸಿಗದಿದ್ದರೂ ಮೈತ್ರಿಧರ್ಮ ಪಾಲಿಸಲು ಪಕ್ಷವನ್ನು ಸಂಘಟಿಸಿ ಎನ್ನುವ ವಾದವನ್ನು ಅನೇಕರು ಒಪ್ಪುವುದಿಲ್ಲ. ಇನ್ನೊಬ್ಬರಿಗೆ ಟಿಕೆಟ್ ಕೊಡಿಸಲು ಅಥವಾ ಬಿಜೆಪಿಯಿಂದ ನಿಲ್ಲುವ ಅಭ್ಯರ್ಥಿಯನ್ನು ಗೆಲ್ಲಿಸುವು ದಕ್ಕಾಗಿ ಮೂರು ವರ್ಷ ಸಂಘಟನೆ ಏಕೆ ಮಾಡಬೇಕು? ಅದರಲ್ಲಿಯೂ ಯಾವುದೇ ಪ್ರತಿಫಲವಿಲ್ಲದೇ ಮೂರು ವರ್ಷಗಳ ಕಾಲ ಕ್ಷೇತ್ರಗಳಲ್ಲಿ ‘ಕಾರ್ಯಕರ್ತ’ರನ್ನು ಸಾಕುವುದು ‘ಆರ್ಥಿಕ’ ವಾಗಿಯೂ ಹೇಳಿದಷ್ಟು ಸುಲಭವಲ್ಲ.
ಹೀಗಿರುವಾಗ ಪ್ರವಾಸದ ಮೂಲಕ ಸಂಘಟನೆ ಮಾಡಲು ಹೊರಟಿರುವ ನಿಖಿಲ್ ಸ್ಥಳೀಯ ನಾಯಕ ರನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ ಹಾಗೂ ಕುತೂಹಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ‘ವರ್ಚಸ್ಸಿ’ನ ಮೇಲೆ ನಡೆದುಕೊಂಡು ಹೋಗುತ್ತಿರುವ ಜೆಡಿಎಸ್ನ ಭವಿಷ್ಯದ ನಾಯಕ ಯಾರು ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಹೊರತು ಸಂಘಟನೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುತ್ತದೆ ಎನ್ನುವ ನಂಬಿಕೆಯಿಲ್ಲ.
ಹೀಗಿರುವಾಗ, ಗೌಡರ ಕುಟುಂಬದ ಮೂರನೇ ಕುಡಿ ನಿಖಿಲ್ ಕುಮಾರಸ್ವಾಮಿ, ತಂದೆ-ತಾತನ ನೆರವಿಲ್ಲದೇ ಸಂಘಟನೆ ಪ್ರವಾಸ ಆರಂಭಿಸಿದ್ದಾರೆ. ಇದು ಪಕ್ಷದ ಸಂಘಟನೆಗೆ ಎಷ್ಟರ ಮಟ್ಟಿಗೆ ‘ನೆರವಾಗಲಿದೆ’ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.