Vishweshwar Bhat Column: ಹೆಬ್ಬಾವುಗಳ ಮ್ಯೂಸಿಯಂ
ಒಂದು ಕ್ಷಣ ಎದೆಯಲ್ಲಿ ಸಣ್ಣ ನಡುಕ ಹುಟ್ಟಿದರೂ, ಆ ಜೀವಿಗಳ ಕಣ್ಣುಗಳಲ್ಲಿರುವ ತಣ್ಣನೆಯ ಧ್ಯಾನಸ್ಥ ನೋಟ ನಮ್ಮೊಳಗಿನ ಭಯವನ್ನು ಕರಗಿಸಿಬಿಡುತ್ತದೆ. ಹಾವು ಎಂದರೆ ನಮ್ಮ ಸಂಸ್ಕೃತಿ ಯಲ್ಲಿಯೂ ಭಯ ಮತ್ತು ಭಕ್ತಿಯ ಮಿಶ್ರಣ. ಆದರೆ ಈ ವಿದಾದ ಮಣ್ಣಿನಲ್ಲಿ ಅದು ಕೇವಲ ಪೂಜೆಯ ವಸ್ತುವಲ್ಲ, ಮನೆಯ ಒಳಗಿನ ಸದಸ್ಯನಂತೆ. ಈ ರಾಯಲ್ ಹೆಬ್ಬಾವುಗಳಿಗೆ ವಿಷವಿಲ್ಲ.
-
ಸಂಪಾದಕೀಯ ಸದ್ಯಶೋಧನೆ
ಸಮುದ್ರದ ಉಪ್ಪುಗಾಳಿ ಮತ್ತು ಮಣ್ಣಿನ ಹಸಿವಾಸನೆ ಬೆರೆತ ವಿದಾ ನಗರದ ಮುಸ್ಸಂಜೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಎದುರಾಗುವ ದೃಶ್ಯವೇ ಒಂದು ಜೀವಂತ ಕವಿತೆಯಂತೆ ತೋರುತ್ತದೆ. ಪಶ್ಚಿಮ ಆಫ್ರಿಕಾದ ಪುಟ್ಟ ದೇಶ ಬೆನಿನ್ನ ಕರಾವಳಿ ತೀರದ ಈ ವಿದಾ ಕೇವಲ ಒಂದು ಊರಲ್ಲ. ಅದು ನೂರಾರು ವರ್ಷಗಳ ನೋವು, ಕಣ್ಣೀರು ಮತ್ತು ಮನುಷ್ಯ-ಪ್ರಕೃತಿಯ ನಡುವಿನ ಅಚ್ಚರಿಯ ನಂಟನ್ನು ಹೊತ್ತು ನಿಂತಿರುವ ಒಂದು ನೆನಪಿನ ಮ್ಯೂಸಿಯಂ. ಅಟ್ಲಾಂಟಿಕ್ ಸಾಗರದ ಅಲೆಗಳು ತೀರಕ್ಕೆ ಬಂದು ಮರಳಿ ಹೋಗುವ ಹೊತ್ತಿಗೆ, ಇಲ್ಲಿನ ಮಣ್ಣಿನ ಓಣಿಗಳಲ್ಲಿ ಕತ್ತಲು ಹಗುರವಾಗಿ ಜಾರಿಕೊಳ್ಳುತ್ತದೆ.
ಆ ಸಣ್ಣ ಚೌಕದ ಮೂಲೆಯಲ್ಲಿರುವ ಮಣ್ಣಿನ ಗೋಡೆಗಳ, ಹುಲ್ಲಿನ ಮಾಡಿನ ಪುಟ್ಟ ಗುಡಿಯೇ ‘ಟೆಂಪಲ್ ಆಫ್ ಪೈಥಾನ್ಸ್’. ಬಾಗಿಲಿಗೆ ಯಾವುದೇ ಸರಪಳಿಗಳಿಲ್ಲ, ಕಾವಲುಗಾರರ ಬಿಗಿಯಾದ ಮೊಗ ಗಳಿಲ್ಲ. ಒಳಗೆ ಕಾಲಿಟ್ಟಾಗ ದೇವಸ್ಥಾನದ ಗರ್ಭಗುಡಿ ಎನ್ನುವ ಕಲ್ಪನೆಯೇ ಕಳಚಿ ಬೀಳುತ್ತದೆ. ಮಣ್ಣಿನ ನೆಲದ ಮೇಲೆ, ನೆರಳಿನ ತಂಪಿನಲ್ಲಿ ಒಂದರ ಮೇಲೊಂದು ಸುರುಳಿ ಸುತ್ತಿಕೊಂಡು ಮಲಗಿರುವ ಹತ್ತಾರು ರಾಯಲ್ ಹೆಬ್ಬಾವುಗಳು. ಅವುಗಳ ಮೈಮೇಲಿನ ಹಳದಿ, ಕಂದು ಬಣ್ಣದ ವೃತ್ತಾಕಾರದ ಚಿತ್ತಾರಗಳು ಕತ್ತಲಲ್ಲೂ ನವಿರಾಗಿ ಮಿನುಗುತ್ತವೆ.
ಇದನ್ನೂ ಓದಿ: Vishweshwar Bhat Column: ಜಾಯುಸ್ ಅಂದರೆ…
ಒಂದು ಕ್ಷಣ ಎದೆಯಲ್ಲಿ ಸಣ್ಣ ನಡುಕ ಹುಟ್ಟಿದರೂ, ಆ ಜೀವಿಗಳ ಕಣ್ಣುಗಳಲ್ಲಿರುವ ತಣ್ಣನೆಯ ಧ್ಯಾನಸ್ಥ ನೋಟ ನಮ್ಮೊಳಗಿನ ಭಯವನ್ನು ಕರಗಿಸಿಬಿಡುತ್ತದೆ. ಹಾವು ಎಂದರೆ ನಮ್ಮ ಸಂಸ್ಕೃತಿ ಯಲ್ಲಿಯೂ ಭಯ ಮತ್ತು ಭಕ್ತಿಯ ಮಿಶ್ರಣ. ಆದರೆ ಈ ವಿದಾದ ಮಣ್ಣಿನಲ್ಲಿ ಅದು ಕೇವಲ ಪೂಜೆಯ ವಸ್ತುವಲ್ಲ, ಮನೆಯ ಒಳಗಿನ ಸದಸ್ಯನಂತೆ. ಈ ರಾಯಲ್ ಹೆಬ್ಬಾವುಗಳಿಗೆ ವಿಷವಿಲ್ಲ.
ಅವು ಯಾರನ್ನೂ ಕಚ್ಚಿ ಗಾಯಗೊಳಿಸುವುದಿಲ್ಲ. ಶತಮಾನಗಳಿಂದ ಮನುಷ್ಯನ ಸಹವಾಸದಲ್ಲಿ ಪಳಗಿದ ಈ ಜೀವಿಗಳ ಚರ್ಮ ಮುಟ್ಟಿದರೆ ತಣ್ಣನೆಯ, ರೇಷ್ಮೆಯಂಥ ಮೃದುತ್ವದ ಸ್ಪರ್ಶ ಸಿಗುತ್ತದೆ. ಮನುಷ್ಯನ ರಕ್ತದ ಬಿಸಿಗೆ, ಆ ಹಾವಿನ ಮೈಯ ತಂಪು ಒಂದು ವಿಚಿತ್ರ ಸಮಾಧಾನ ತರುತ್ತದೆ. ಪರಸ್ಪರ ನಂಬಿಕೆಯ ಅದೃಶ್ಯ ಸೇತುವೆಯೊಂದು ಅಲ್ಲಿ ಅರಳುತ್ತದೆ. ಈ ಗುಡಿಯ ಹುಟ್ಟಿನ ಹಿಂದೆ ಒಂದು ಪುರಾತನ ಯುದ್ಧದ ದಂತಕಥೆಯಿದೆ. ಹದಿನೇಳನೇ ಶತಮಾನದಲ್ಲಿ ಸ್ಥಳೀಯ ರಾಜನೊಬ್ಬ ಶತ್ರು ಸೈನ್ಯಕ್ಕೆ ಹೆದರಿ ದಟ್ಟ ಕಾಡಿನಲ್ಲಿ ಅಡಗಿಕೊಂಡಿದ್ದನಂತೆ.
ಸಾವು ಬೆನ್ನಟ್ಟಿದ ಆ ಕ್ಷಣದಲ್ಲಿ, ಈ ಹೆಬ್ಬಾವುಗಳು ಕಾಡಿನಿಂದ ಹೊರಬಂದು ರಾಜನನ್ನು ಸುತ್ತು ವರಿದು, ಶತ್ರುಗಳಿಗೆ ಕಾಣದಂತೆ ರಕ್ಷಣೆ ನೀಡಿದವಂತೆ. ಅಂದು ಯುದ್ಧ ಗೆದ್ದ ರಾಜ, ತನ್ನನ್ನು ಕಾಪಾಡಿದ ಆ ಮೌನಿ ಜೀವಿಗಳಿಗೆ ಕೃತಜ್ಞತೆಯಾಗಿ ಈ ಗುಡಿಯನ್ನು ಕಟ್ಟಿಸಿದ. ಅಂದಿನಿಂದ ಇಂದಿ ನವರೆಗೂ ವಿದಾದ ಜನರಿಗೆ ಹೆಬ್ಬಾವು ಕೇವಲ ಒಂದು ಪ್ರಾಣಿಯಲ್ಲ, ಆಪತ್ತಿನಲ್ಲಿ ಜತೆಯಾಗಿ ನಿಂತ ಪರಂಪರೆಯ ದೈವಿಕ ರಕ್ಷಕ.
ಈ ದೇವಾಲಯದಲ್ಲಿ ಯಾವುದೇ ಕಠಿಣ ನಿಯಮಗಳಿಲ್ಲ. ಹಗಲಿನಲ್ಲಿ ಗುಡಿಯ ಅಂಗಳದಲ್ಲಿ, ಮಣ್ಣಿನ ಗೂಡುಗಳಲ್ಲಿ ವಿಶ್ರಮಿಸುವ ಈ ಹೆಬ್ಬಾವುಗಳು ಸಂಜೆಯಾಗುತ್ತಿದ್ದಂತೆ ತಮಗೆ ಇಷ್ಟ ಬಂದಂತೆ ಊರೊಳಗೆ ತಿರುಗಾಡಲು ಹೊರಡುತ್ತವೆ. ಗಿಡ-ಮರಗಳನ್ನು ಹತ್ತಿ ಇಳಿಯುತ್ತಾ, ಕೆಂಪು ಮಣ್ಣಿನ ರಸ್ತೆಯನ್ನು ದಾಟುತ್ತಾ, ಅಕ್ಕಪಕ್ಕದ ಮನೆಗಳ ಬಾಗಿಲು ತಳ್ಳಿ ಒಳಗೆ ನುಗ್ಗುತ್ತವೆ.
ಯಾವುದೇ ಮನೆಯೊಳಗೆ ಹೆಬ್ಬಾವು ಕಾಲಿಟ್ಟರೆ ಆ ಮನೆಯವರು ಭಯದಿಂದ ಕಿರುಚುವುದಿಲ್ಲ, ಕೋಲು ತಂದು ಹೊಡೆಯುವುದಿಲ್ಲ. ಬದಲಿಗೆ ಮನೆಗೊಬ್ಬ ಹಿರಿಯ ಅತಿಥಿ ಬಂದಂತೆ ಕೈಮುಗಿದು ಸ್ವಾಗತಿಸುತ್ತಾರೆ. ಮನೆಯ ಜಗುಲಿಯ ಮೇಲೋ, ಅಡುಗೆಮನೆಯ ಮೂಲೆಯ ಸುರುಳಿ ಸುತ್ತಿ ಮಲಗಿರುವ ಹಾವನ್ನು ನೋಡಿ ಮಕ್ಕಳು ಆಟವಾಡುತ್ತಿರುತ್ತಾರೆ.
ರಾತ್ರಿ ಕಳೆದು ಬೆಳಗಾಗುವಾಗ ಆ ಹಾವು ತಾನಾಗಿಯೇ ಹೊರಟು ಹೋದರೆ ಸರಿ, ಇಲ್ಲವಾದರೆ ಮನೆಯ ಯಜಮಾನ ಅತ್ಯಂತ ಗೌರವದಿಂದ, ಪ್ರೀತಿಯಿಂದ ಅದನ್ನು ಎತ್ತಿಕೊಂಡು ಬಂದು ಮರಳಿ ದೇವಸ್ಥಾನದ ಅರ್ಚಕರಿಗೆ ಒಪ್ಪಿಸುತ್ತಾನೆ. ‘ನಮ್ಮ ಮನೆಗೆ ದೇವತೆ ಬಂದು ಹರಸಿ ಹೋಯಿತು’ ಎಂದು ಹಿರಿಹಿರಿ ಹಿಗ್ಗುತ್ತಾನೆ. ಇಂಥ ಸಹಬಾಳ್ವೆಯ ದೃಶ್ಯಗಳು ಜಗತ್ತಿನ ಇನ್ಯಾವ ಮೂಲೆಯಲ್ಲೂ ಸಿಗುವುದು ದುರ್ಲಭ.
ಇಲ್ಲಿನ ಅರ್ಚಕರು ಈ ಹಾವುಗಳನ್ನು ಕೇವಲ ದೇವರೆಂದು ಪೂಜಿಸುವುದಿಲ್ಲ, ಮಗುವಿನಂತೆ ಆರೈಕೆ ಮಾಡುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಇವುಗಳಿಗೆ ದೇವಸ್ಥಾನದ ಆವರಣದಲ್ಲಿಯೇ ಪವಿತ್ರ ಸ್ನಾನ ಮಾಡಿಸಲಾಗುತ್ತದೆ, ವಿಶಿಷ್ಟ ಗಿಡಮೂಲಿಕೆಗಳ ಹೊಗೆ ಹಾಕಿ ರಕ್ಷಿಸಲಾಗುತ್ತದೆ. ಅವುಗಳಿಗೆ ಹಸಿವಾದಾಗ ನೈಸರ್ಗಿಕ ಆಹಾರವನ್ನು ಒದಗಿಸಿ, ಪ್ರಕೃತಿಯ ಚಕ್ರಕ್ಕೆ ಭಂಗ ಬಾರದಂತೆ ನೋಡಿ ಕೊಳ್ಳುತ್ತಾರೆ. ಜೀವವೊಂದರ ಜೀವಿಸುವ ಹಕ್ಕನ್ನು ಮನುಷ್ಯ ಗೌರವಿಸುವುದು ಎಂದರೆ ಬಹುಶಃ ಇದೇ ಇರಬೇಕು.