Sandeep Sharma Column: ಯುವ ಮನಸ್ಸಿನ ನೈತಿಕ ಬತ್ತಳಿಕೆ ಖಾಲಿ
ಸಿನಿಮಾ ನಟರನ್ನು ಕಪೋಲ ಕಲ್ಪಿತ ನಾಯಕರನ್ನು ಕೇವಲ ನಮ್ಮಂತೆ ಮನುಷ್ಯರು ಎಂದು ಗೌರವಿ ಸುವ ಬದಲು ಅವರನ್ನು ಅತಿಮಾನುಷರನ್ನಾಗಿ ಪೂಜಿಸುವ ಪ್ರವೃತ್ತಿ ಮತ್ತು ಕ್ರಿಕೆಟ್ ಆಟಗಾರರನ್ನು ಕ್ರೀಡಾಪಟುಗಳೆಂದು ಕಾಣದೆ ಅತಿಯಾಗಿ ಪೂಜಿಸಿ ಉನ್ನತ ಮಟ್ಟಕ್ಕೇರಿಸುವ ಮನೋಭಾವ ಸಮಾಜ ದಲ್ಲಿ ವ್ಯಾಪಕವಾಗಿ ಗೋಚರಿಸುತ್ತಿದೆ.


ಪ್ರಸ್ತುತ
ಸಂದೀಪ್ ಶರ್ಮಾ ಮೂಟೇರಿ
ಇಂದಿನ ಯುವ ಪೀಳಿಗೆಯು ಕ್ರಿಕೆಟ್ ಆಟಗಾರರು ಮತ್ತು ಸಿನಿಮಾ ನಟರನ್ನು ಅತಿಯಾಗಿ ಆರಾಧಿಸುವ ಪ್ರವೃತ್ತಿ ಚಿಂತನಾರ್ಹವಾಗಿದೆ. ಈ ಎರಡು ವೃತ್ತಿಗಳಿಗೂ ಸಮಾಜದ ಇತರ ಮಹತ್ವದ ಪಾತ್ರಗಳಿಗೂ ನಡುವೆ ಸಮತೋಲನ ಕಾಪಾಡುವ ಸಂಸ್ಕೃತಿ ಮತ್ತು ವಿವೇಕವನ್ನು ಯುವಜನತೆಗೆ ಬೆಳೆಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ, ಸಮಾಜದ ದಿಕ್ಕು ತಪ್ಪಿ ಇನ್ನಷ್ಟು ಸೂತಕದ ಛಾಯೆ ಆವರಿಸುವುದರಲ್ಲಿ ಅತಿಶಯೋಕ್ತಿಯಿಲ್ಲ.
ಸಿನಿಮಾ ನಟರನ್ನು ಕಪೋಲ ಕಲ್ಪಿತ ನಾಯಕರನ್ನು ಕೇವಲ ನಮ್ಮಂತೆ ಮನುಷ್ಯರು ಎಂದು ಗೌರವಿಸುವ ಬದಲು ಅವರನ್ನು ಅತಿಮಾನುಷರನ್ನಾಗಿ ಪೂಜಿಸುವ ಪ್ರವೃತ್ತಿ ಮತ್ತು ಕ್ರಿಕೆಟ್ ಆಟಗಾರರನ್ನು ಕ್ರೀಡಾಪಟುಗಳೆಂದು ಕಾಣದೆ ಅತಿಯಾಗಿ ಪೂಜಿಸಿ ಉನ್ನತ ಮಟ್ಟಕ್ಕೇರಿಸುವ ಮನೋಭಾವ ಸಮಾಜದಲ್ಲಿ ವ್ಯಾಪಕವಾಗಿ ಗೋಚರಿಸುತ್ತಿದೆ. ಹೆಚ್ಚು ವಿಷಾದದ ಸಂಗತಿ ಎಂದರೆ, ಸಮಾಜಕ್ಕೆ ಬೇಕಾದ ಆದರ್ಶ ವ್ಯಕ್ತಿಗಳನ್ನು ಮರೆತು ತಮ್ಮ ಯುವ ಮನಸ್ಸುಗಳಿಂದ ಅದೃಶ್ಯ ರಾಗಿಸಿದ್ದಾರೆ.
ರಾಷ್ಟ್ರಕ್ಕೆ ಅನ್ನವನ್ನು ನೀಡುವ ರೈತನಿಗೆ ಗೌರವವಿಲ್ಲ. ದೇಶದ ರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸುವ ಸೈನಿಕ ನಿಜವಾದ ವೀರ, ಆದರೆ ಅವನು ನಕಲಿ ಹೀರೋ ಎನಿಸಿಕೊಂಡು ಜೀವನೋಪಾಯಕ್ಕಾಗಿ ಹಂಬಲಿಸುತ್ತಿರುವುದು ಕಡು ವಿಷಾದದ ಸಂಗತಿಯಾಗಿದೆ. ಜ್ಞಾನದೀಪವನ್ನು ಹಿಡಿದಿಡುವ ಶಿಕ್ಷಕರು ನಿಸ್ವಾರ್ಥ ಸೇವಕರು, ಆದರೆ ಅವರಿಗೆ ಸಮಾಜದಿಂದ ಸರಿಯಾದ ಮನ್ನಣೆ ದೊರಕುವುದಿಲ್ಲ, ಗೌರವ ವಂತು ದೂರದ ಮಾತಾಗಿಯೇ ಉಳಿದಿದೆ. ಇದಲ್ಲವೇ ವಿಪರ್ಯಾಸ! ಯಾರು ಯುವ ಪೀಳಿಗೆಯ ಆದರ್ಶರಾಗಿರಬೇಕೋ, ಅವರೆಲ್ಲರೂ ಜೀವನದ ಸಾಹಸದಲ್ಲಿ ಅಗೋಚರರಾಗಿದ್ದಾರೆ.
ಇದನ್ನೂ ಓದಿ: Ranjith H Ashwath Column: ಅತಿಯಾದ್ರೆ ʼಕಪ್ʼ ಕೂಡ ಕಪ್ಪಾಗುತ್ತೆ
ಇದೇ ಯುವ ಪೀಳಿಗೆಯ ಆದರ್ಶಗಳಾಗಬೇಕಾದವರ ಬದಲು, ಸಿನಿಮಾ ನಟರು ಮತ್ತು ಕ್ರಿಕೆಟ್ ಆಟಗಾರರು ಅವರ ಕಾಲ್ಪನಿಕ ಲೋಕದ ದೇವತೆಗಳಾಗಿ ಮಾರ್ಪಟ್ಟಿzರೆ. ಪರದೆಯ ಮೇಲೆ ಬಣ್ಣದ ವೇಷ ಧರಿಸಿ, ಬರೆಹಗಾರರ ಸಾಲುಗಳನ್ನು ಉಚ್ಚರಿಸುವ ನಟನಿಗಾಗಿ ಯುವಕರು ಉನ್ಮತ್ತ ರಾಗುತ್ತಾರೆ. ಅವನ ಅಭಿನಯಕ್ಕಾಗಿ ಟಿಕೆಟ್ ಕೊಂಡು ಸಿನಿಮಾ ನೋಡುವ ಪ್ರೇಕ್ಷಕರು ಅವನ ಅನ್ನದಾತರಾಗಿದ್ದರೂ, ಯುವ ಮನಸ್ಸುಗಳು ಅವನನ್ನು ಜೀವನದ ಮಾರ್ಗದರ್ಶಕನೆಂದು ಭ್ರಮಿಸುತ್ತವೆ. ಇದು ಎಂತಹ ವಿರೋಧಾಭಾಸ!
ಅತ್ತ ಆಟಗಾರರನ್ನು ಆಟಗಾರಂತೆ ನೋಡದೆ ತಮ್ಮ ಹರೆಯ ದಿನವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬೌದ್ಧಿಕ ದೌರ್ಬಲ್ಯ ಯುವ ಮನಸ್ಸುಗಳನ್ನು ಎತ್ತ ತಂದು ನಿಲ್ಲಿಸಿದೆ! ಸಿನಿಮಾ ನಾಯಕರು ಮಾಡುವ ಅಪರಾಧಗಳನ್ನು ಸಮಾಜ ಮರೆತುಬಿಡಬೇಕು ಅಥವಾ ಕ್ಷಮಿಸಬೇಕು ಎಂಬ ನಿರೀಕ್ಷೆ ಇಂದಿನ ಯುವಜನತೆಯಲ್ಲಿ ಕಂಡುಬರುವುದು ಶೋಚನೀಯ.
ಕ್ರಿಕೆಟ್ ಮೈದಾನದಲ್ಲಿ ಯಶಸ್ಸು ಸಾಧಿಸಿದರೆ ಅದು ಜೀವನದ ಸಾರ್ಥಕತೆ ಎಂಬ ಭ್ರಮೆ ಪಡೆದು, ಹಣಕ್ಕಾಗಿ ಆಡುವ ಕ್ರೀಡಾಪಟುಗಳನ್ನು ದೇವತಾ ಸ್ಥಾನದಲ್ಲಿ ಇಡುವ ಅತಾರ್ಕಿಕ ಭಕ್ತಿ ಇಂದಿನ ಯುವಜನರಲ್ಲಿ ಬೇರೂರಿದೆ. ಸರಕಾರಗಳು ಸಿನಿಮಾ ಮತ್ತು ಕ್ರಿಕೆಟ್ ಉದ್ಯಮಗಳಿಗೆ ಅನಾವಶ್ಯಕ ಪ್ರಾಶಸ್ತ್ಯ ನೀಡಿ, ಯುವಜನರ ಮನಸ್ಸಿನಲ್ಲಿ ತಪ್ಪು ಸಂದೇಶಗಳನ್ನು ಬಿತ್ತುತ್ತಿವೆ.
ಸಿನಿಮಾ ತಾರೆಗಳಿಗೆ ರಾಜ್ಯ ಪ್ರಶಸ್ತಿಗಳು, ಕ್ರಿಕೆಟ್ ಆಟಗಾರರಿಗೆ ಅತಿಯಾದ ಗೌರವಗಳು ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಯುವಜನರಿಗೆ ತಪ್ಪು ದಿಕ್ಕನ್ನು ತೋರಿಸುತ್ತಿವೆ. ಸಿನಿಮಾ ಮತ್ತು ಕ್ರಿಕೆಟ್ ಹೀರೋಗಳ ಕಾನೂನು ಉಲ್ಲಂಘನೆಗಳನ್ನು ಸಮಾಜ ಸಹಿಸಿಕೊಳ್ಳುವ ಮನೋ ಭಾವ ಹೆಚ್ಚು ಅಪಾಯಕಾರಿ. ಚಿನ್ನಸ್ವಾಮಿ ಕ್ರೀಡಾಂಗಣದ ದುರಂತದ ನಂತರವು ಸ್ಟೇಡಿಯಂ ಹೊರಗೆ ಜನರು ಪ್ರಾಣಬಿಡುತ್ತಿರುವಾಗಲೂ ಒಳಗೆ ಸಮಾರಂಭವನ್ನು ನಡೆಸುವ ನಿಷ್ಠುರತೆ ನೋಡಬೇಕಾಯಿತು.
ಇದಕ್ಕೆ ಜವಾಬ್ದಾರರಾದ ರಾಜ್ಯ ಸರಕಾರ, ಆರ್ಸಿಬಿ ಫ್ರಾಂಚೈಸಿ ಮತ್ತು ಕೆ.ಎಸ್ಸಿಎ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದರೂ, ಅಭಿಮಾನಿಗಳು ಇನ್ನೂ ಅವರನ್ನು ಸಮರ್ಥಿಸುವ ಮನೋಭಾವ ಹೊಂದಿರುವುದು ವಿಷಾದನೀಯ. ಕ್ರಿಕೆಟ್ ಕೂಡ ಎಲ್ಲಾ ಆಟಗಳಂತೆ ಅದು ಆಟ, ಕ್ರಿಕೆಟರ್ ಆಟಗಾರನೇ ಹೊರತು ಅತಿಮಾನುಷ ಶಕ್ತಿಯಲ್ಲ ಎನ್ನುವ ವಾಸ್ತವತೆಯನ್ನು ಈಗಿನ ಮಕ್ಕಳು, ಪ್ರೌಢರು ಹಾಗೂ ಯುವಕರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ.