ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಇದು ಆತ್ಮನಿರ್ಭರತೆಗೆ ದಕ್ಕಿದ ಅದ್ಭುತ ಯಶಸ್ಸು

ಜಿಪಿಎಸ್ ಎನ್ನುವುದು ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದ್ದು (ಜಿಎನ್‌ಎಸ್‌ಎಸ್), ಇದು ಪ್ರಪಂಚದಾದ್ಯಂತದ ಮಿಲಿಟರಿ, ನಾಗರಿಕ ಮತ್ತು ವಾಣಿಜ್ಯ ಬಳಕೆದಾರರಿಗೆ ನಿಖರವಾದ ಸ್ಥಾನದ ಮಾಹಿತಿಯನ್ನು ಒದಗಿಸುತ್ತದೆ. ಕಾರ್ಗಿಲ್ ಯುದ್ಧದ ವೇಳೆ ಇದರ ಸೇವೆ ಲಭ್ಯವಿದ್ದಿದ್ದರೆ, ಕಳೆದು ಹೋದ ಅಥವಾ ಗಾಯಗೊಂಡ ಸೈನಿಕರನ್ನು ಪತ್ತೆಹಚ್ಚುವುದು ಸುಲಭವಾಗುತ್ತಿತ್ತು.

ಇದು ಆತ್ಮನಿರ್ಭರತೆಗೆ ದಕ್ಕಿದ ಅದ್ಭುತ ಯಶಸ್ಸು

Profile Ashok Nayak Jun 2, 2025 1:53 PM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ನಿಮಗೆ ಗೊತ್ತಿರಬೇಕು, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನಿಕರು ಆಕ್ರಮಿಸಿಕೊಂಡ ಪ್ರದೇಶಗಳ ನಿಖರವಾದ ಮಾಹಿತಿ ಕಲೆ ಹಾಕಿ, ಪರಿಣಾಮಕಾರಿಯಾಗಿ ಸೇನಾ ಕಾರ್ಯಾಚರಣೆ ನಡೆಸಲು ಅಗತ್ಯವಿದ್ದ ಸಾಧನ- ‘ಜಿಪಿಎಸ್’ ಅಂದರೆ ‘ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್’. ಶತ್ರುಗಳು ಬೀಡುಬಿಟ್ಟಿದ್ದ ನೆಲೆಗಳ ಮೇಲೆ ವೈಮಾನಿಕ ಅಥವಾ ಕ್ಷಿಪಣಿ ದಾಳಿ ಕೈಗೊಂಡು ಅವನ್ನು ತೆರವು‌ ಗೊಳಿಸಲು ‘ಜಿಪಿಎಸ್’ನ ಸಹಾಯ ಬೇಕಿತ್ತು. ಆದರೆ ಅಮೆರಿಕ, ತನ್ನ ನಿಯಂತ್ರಣದಲ್ಲಿದ್ದ ಜಿಪಿಎಸ್ ಸಾಧನವನ್ನು ಭಾರತವು ಬಳಸುವುದಕ್ಕೆ ಅನುಮತಿ ನೀಡಲು ನಿರಾಕರಿಸಿತು.

ಜಿಪಿಎಸ್ ಎನ್ನುವುದು ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದ್ದು (ಜಿಎನ್‌ಎಸ್‌ಎಸ್), ಇದು ಪ್ರಪಂಚದಾದ್ಯಂತದ ಮಿಲಿಟರಿ, ನಾಗರಿಕ ಮತ್ತು ವಾಣಿಜ್ಯ ಬಳಕೆದಾರರಿಗೆ ನಿಖರವಾದ ಸ್ಥಾನದ ಮಾಹಿತಿಯನ್ನು ಒದಗಿಸುತ್ತದೆ. ಕಾರ್ಗಿಲ್ ಯುದ್ಧದ ವೇಳೆ ಇದರ ಸೇವೆ ಲಭ್ಯವಿದ್ದಿದ್ದರೆ, ಕಳೆದು ಹೋದ ಅಥವಾ ಗಾಯಗೊಂಡ ಸೈನಿಕರನ್ನು ಪತ್ತೆಹಚ್ಚುವುದು ಸುಲಭವಾಗುತ್ತಿತ್ತು.

ಸೈನಿಕರ ಸಾವು-ನೋವು ಕೂಡ ಕಡಿಮೆಯಾಗಿ, ಕಾರ್ಗಿಲ್ ಕಾರ್ಯಾಚರಣೆ ಇನ್ನಷ್ಟು ಬೇಗ ಅಂತ್ಯ ಕಾಣುತ್ತಿತ್ತು.

‘ನಾವಿಕ್’ ನ್ಯಾವಿಗೇಷನ್ ಸಿಸ್ಟಮ್

ಕಾರ್ಗಿಲ್ ಯುದ್ಧದ ವೇಳೆ ಅಮೆರಿಕ ಕಲಿಸಿದ ಪಾಠದಿಂದ ತನ್ನದೇ ಆದ ನ್ಯಾವಿಗೇಷನ್ ವ್ಯವಸ್ಥೆ ಯನ್ನು ಇಸ್ರೋ ನೆರವಿನಿಂದ ಅಭಿವೃದ್ಧಿಪಡಿಸಲು ನಿರ್ಧರಿಸಿದ ಭಾರತವು 2015ರಲ್ಲಿ ‘ನಾವಿಕ್’ (‘ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್‌ಟೆಲ್ಲೇಷನ್’ ಅಂತ ಇದರ ಪೂರ್ಣರೂಪ) ಹೆಸರಿನಲ್ಲಿ ಈ ಉಪಗ್ರಹ ಆಧರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಯಿತು. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ‘ನಾವಿಕ್’, ಶತ್ರುವಿನ ನೆಲೆ ಗಳನ್ನು ಗುರುತಿಸಲು ನೆರವಾಗಿದ್ದರ ಜತೆಗೆ ಪ್ರತಿದಾಳಿ ನಡೆಸುವಲ್ಲೂ ಉಪಯುಕ್ತವಾಯಿತು.

ಇದನ್ನೂ ಓದಿ: Prakash Shesharaghavachar Column: ನೀವು ಒಮ್ಮೆಯಾದರೂ ಭಾರತದ ಪರ ನಿಲ್ಲಬೇಕಿತ್ತು !

ವೈಮಾನಿಕ ದಾಳಿಯ ಮೂಲಕ ಭಯೋತ್ಪಾದಕರ 8 ನೆಲೆಗಳನ್ನು ಧ್ವಂಸ ಮಾಡುವಲ್ಲಿ ‘ನಾವಿಕ್’ ನ ಪಾತ್ರ ಮಹತ್ವದ್ದಾಗಿತ್ತು. ‘ಆತ್ಮನಿರ್ಭರ್ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ’ ಎಂಬ ಎರಡು ಪ್ರಬಲ ಅಸ್ತ್ರಗಳು, ಆಪರೇಷನ್ ಸಿಂದೂರದ ವೇಳೆ ಅತ್ಯಾಧುನಿಕ ಮತ್ತು ಅತ್ಯುನ್ನತ ತಂತ್ರಜ್ಞಾನವು ಭಾರತೀಯ ಸೇನೆಯ ಕೈಗೆಟಕುವಂತೆ ಮಾಡಿದವು. ಭಾರತವು ಪರಾವಲಂಬಿ ಯಾಗದೆ ಸೇನಾ ಕಾರ್ಯಾಚರಣೆಯನ್ನು ತನ್ನ ಯೋಜನೆಯ ಪ್ರಕಾರವೇ ಕೈಗೆತ್ತಿಕೊಳ್ಳಲು ಸಾಧ್ಯ ವಾಗಿ ಆಪರೇಷನ್ ಸಿಂದೂರ ಯಶಸ್ವಿಯಾಯಿತು, ಭಾರತದ ಹಿರಿಮೆಯೂ ಮುಗಿಲಿನೆತ್ತರಕ್ಕೆ ಏರಿತು.

ಬ್ರಹ್ಮೋಸ್ ಕ್ಷಿಪಣಿ

ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಪ್ರಮುಖ ಅಸ್ತ್ರ ಎನಿಸಿ ಕೊಂಡಿದ್ದು ‘ಬ್ರಹ್ಮೋಸ್ ಮಿಸೈಲ್’. ಪಾಕಿಸ್ತಾನದ ವೈಮಾನಿಕ ನೆಲೆಗಳನ್ನು ಛಿದ್ರಗೊಳಿಸಲು ಇದನ್ನು ಬಳಸಲಾಯಿತು. ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ಇಂಥದೊಂದು ಭಾರಿ ಹಾನಿ‌ ಯಾಗಿರುವುದನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ.

ಭಾರತ ಮತ್ತು ರಷ್ಯಾದ ಜಂಟಿ ಸಹಯೋಗದಲ್ಲಿ ಈ ಮಿಸೈಲ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ, 1998ರಲ್ಲಿ ಐ.ಕೆ.ಗುಜ್ರಾಲ್ ಪ್ರಧಾನಿಯಾಗಿದ್ದಾಗ ಸಹಿ ಹಾಕಲಾಯಿತು. ಭಾರತದ ‘ಡಿಆರ್‌ಡಿಒ’ ಮತ್ತು ರಷ್ಯಾದ ಮಶಿನೊಸ್ಟ್ರೋಯೇನಿಯಾ ನಡುವೆ 1999ರಲ್ಲಿ ನಡೆದ ಮೊದಲ ಒಡಂಬಡಿಕೆಗೆ ವಾಜಪೇಯಿ ಸರಕಾರವು ಸಹಿ ಹಾಕಿತು. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮಸ್ಕ್‌ವಾ ನದಿಗಳ ಹೆಸರುಗಳನ್ನು ಸೇರಿಸಿ ಕ್ಷಿಪಣಿಗೆ ‘ಬ್ರಹ್ಮೋಸ್’ ಎಂದು ನಾಮಕರಣ ಮಾಡಲಾಯಿತು. ಭಾರತಕ್ಕಿದ್ದ ಕ್ಷಿಪಣಿ ಕೊರತೆಯನ್ನು ಬ್ರಹ್ಮೋಸ್ ನೀಗಿತು.

ವಿಶೇಷವೆಂದರೆ, ಬ್ರಹ್ಮೋಸ್ ತಯಾರಿಗೆ ಬೇಕಾಗುವ ಶೇ.85ರಷ್ಟು ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ. ಇದೀಗ ಹೊರದೇಶಗಳೂ ಬ್ರಹ್ಮೋಸ್‌ನ ಖರೀದಿಗೆ ಆಸಕ್ತಿ ತೋರಿದ್ದು, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ದೇಶಗಳು ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿವೆ. ಬೇಡಿಕೆ ಹೆಚ್ಚಾಗಿರುವ ಕಾರಣದಿಂದ ಮತ್ತೊಂದು ಉತ್ಪಾದನಾ ಘಟಕವು ಲಖನೌನ ರಕ್ಷಣಾ ಕಾರಿಡಾರ್‌ ನಲ್ಲಿ ತಲೆಯೆತ್ತುತ್ತಿದೆ.

ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ವೈಮಾನಿಕ ನೆಲೆಗಳನ್ನು ಧ್ವಂಸ ಗೊಳಿಸಲು ಬ್ರಹ್ಮೋಸ್ ಸೂಪರ್‌ಸಾನಿಕ್ ಮಿಸೈಲ್ ವ್ಯವಸ್ಥೆಯು ಬ್ರಹ್ಮಾಸದ ರೀತಿಯಲ್ಲಿ ಕೆಲಸ ಮಾಡಿತು. ವಾಯುಪಡೆಯು ಇದರ ನೆರವಿನಿಂದಾಗಿ, ಪಾಕಿಸ್ತಾನದ ಒಳಗೆ ಪ್ರವೇಶಿಸದೆಯೇ ಅದರ ನೆಲೆಗಳ ಮೇಲೆ ಮಾರಕ ದಾಳಿಯನ್ನು ನಡೆಸಲು ಸಾಧ್ಯವಾಯಿತು ಹಾಗೂ ಪಾಕಿಸ್ತಾನವು ಕೇವಲ ಮೂರೂವರೆ ದಿನದಲ್ಲೇ ಕದನವಿರಾಮಕ್ಕೆ ಗೋಗರೆಯುವಂತಾಯಿತು!

2004ರಿಂದ 2018ರವರೆಗೆ, ಈ ಮಿಸೈಲ್ ಸಿದ್ಧವಾದ ತರುವಾಯ ಹಲವು ಬಗೆಯ ಪರೀಕ್ಷೆಗೆ ಒಳಪಟ್ಟಿತ್ತು. ಅಂತಿಮವಾಗಿ, ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಈ ಕ್ಷಿಪಣಿಯು ಪೂರ್ಣಪ್ರಮಾಣದ ಸೇನಾಸೇವೆಗೆ ಸೇರ್ಪಡೆಯಾಯಿತು. ಆಕಾಶ್ ಕ್ಷಿಪಣಿ ಇದು ಭಾರತದ ಡಿಆರ್‌ ಡಿಒ ಸಂಸ್ಥೆ ಅಭಿವೃದ್ಧಿಪಡಿಸಿದ ಮತ್ತೊಂದು ಅಸ್ತ್ರ. ಮೇ 8ರ ರಾತ್ರಿ ಪಾಕಿಸ್ತಾನವು ಅಲೆ ಅಲೆಯಾಗಿ ರವಾನಿಸಿದ ಡ್ರೋನ್‌ಗಳನ್ನು ಹೊಡೆದುರುಳಿಸಿ ಭಾರತದ ಆಸ್ತಿಗಳನ್ನು ಕಾಪಾಡುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸಿತು. ಕೇವಲ 2.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕ್ಷಿಪಣಿಯು ದೇಶದ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರವಾಗಿ ಹೊರ ಹೊಮ್ಮಿದೆ.

ಡಿ-4 ವ್ಯವಸ್ಥೆ

ಇದೊಂದು ಡ್ರೋನ್ ನಿರೋಧಕ ವ್ಯವಸ್ಥೆ. ಇದನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದರೆ, ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಬಿಇಎಲ್ ಸಂಸ್ಥೆ ಇದನ್ನು ನಿರ್ಮಿಸುತ್ತಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯ ವೇಳೆ, ಪಾಕಿಸ್ತಾನವು ತೂರಿಬಿಡುತ್ತಿದ್ದ ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವಲ್ಲಿ ಹಾಗೂ ಪಾಕ್ ಸೇನೆಯ ರಣತಂತ್ರವನ್ನು ನಿಷ್ಪಲ ಗೊಳಿಸಿ ನಮ್ಮ ವೈಮಾನಿಕ ವ್ಯವಸ್ಥೆಗಳನ್ನು ಕಾಪಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು. ಅಪ್ಪಟ ಭಾರತೀಯ ತಂತ್ರಜ್ಞಾನದಿಂದ ತಯಾರಾದ ಈ ಡ್ರೋನ್-ನಿರೋಧಕ ವ್ಯವಸ್ಥೆಯು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ಮತ್ತೊಂದು ಕೊಡುಗೆಯಾಗಿದೆ.

ನೇತ್ರ ಎಂಬ ಪ್ರತ್ಯಸ್ತ್ರ

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ‘ನೇತ್ರ’ AEWC ವ್ಯವಸ್ಥೆಯು, ಆಪರೇಷನ್ ಸಿಂದೂರ ಕಾರ್ಯಾ ಚರಣೆಯ ಸಮಯದಲ್ಲಿ ವಾಯುಗಾಮಿ ಕಣ್ಗಾವಲು ಮತ್ತು ಸಮನ್ವಯ ಸಾಧಿಸಲು ಅನಿವಾರ್ಯ ವಾಗಿತ್ತು. ಪಾಕಿಸ್ತಾನದ ವಿರುದ್ಧದ ಸಂಘರ್ಷವು ಏಕಕಾಲದಲ್ಲಿ ಬಹುವಲಯಗಳಿಗೆ ಹರಡುವ ಬೆದರಿಕೆಯಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಭಾರತದ ಸ್ಥಳೀಯ ‘ನೇತ್ರ’ ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ (AEWC) ವ್ಯವಸ್ಥೆಯು ಶತ್ರುಗಳ ಚಲನವಲನಗಳ ಮೇಲೆ ನಿಗಾ ಇರಿಸಿ ಪ್ರತಿದಾಳಿಗೆ ಸಜ್ಜುಗೊಳಿಸುತ್ತಿತ್ತು.

ಸ್ಕೈ ಸ್ಟ್ರೈಕರ‍್ಸ್ ಡ್ರೋನ್

ಭಾರತ ಮತ್ತು ಇಸ್ರೇಲ್‌ನ ಜಂಟಿ ಸಹಯೋಗದಲ್ಲಿ ರೂಪುಗೊಂಡಿರುವ ಈ ಡ್ರೋನ್‌ಗಳನ್ನು, ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ಅಡ್ಡಾಗಳ ಮೇಲೆ ದಾಳಿ ಮಾಡಲು ಬಳಸಲಾಗಿತ್ತು. ಯುದ್ಧಭೂಮಿಯ ಮೇಲೆ ಸುಳಿದಾಡಲು, ಶತ್ರು ಗುರಿಗಳನ್ನು ಪತ್ತೆ ಹಚ್ಚಲು ಮತ್ತು ಆನ್‌ಬೋರ್ಡ್ ಸ್ಫೋಟಕಗಳಿಂದ ಅವನ್ನು ನಾಶಗೊಳಿಸಲು ಅನುವಾಗು ವಂತೆ ಈ ಮಾನವರಹಿತ ವಾಯುವಾಹನಗಳನ್ನು (ಯುಎವಿ) ವಿನ್ಯಾಸಗೊಳಿಸಲಾಗಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯ ವೇಳೆ, ದೇಶೀಯವಾಗಿ ನಿರ್ಮಿಸಿದ ಈ ಡ್ರೋನ್‌ಗಳ ಅಟ್ಟಹಾಸಕ್ಕೆ ಪಾಕಿಸ್ತಾನಿಗಳು ನಿರುತ್ತರರಾಗಿದ್ದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ.

ರಫೆಲ್ ಖರೀದಿ

“ಫೈಟರ್ ಜೆಟ್ ಖರೀದಿಸಲು ಭಾರತದ ಬಳಿ ಹಣವೆಲ್ಲಿದೆ?" ಎನ್ನುವ ಮೂಲಕ 2013ರಲ್ಲಿ ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಜೆಟ್ ಖರೀದಿ ವಿಷಯದಲ್ಲಿ ದೇಶಕ್ಕೆ ‘ತಾರಮ್ಮಯ್ಯ’ ಮಾಡಿ ದ್ದರು. ಆದರೆ 2014ರಲ್ಲಿ ಬಂದ ಮೋದಿ ಸರಕಾರ ನೇರವಾಗಿ ಫ್ರೆಂಚ್ ಸರಕಾರದೊಂದಿಗೆ ಖರೀದಿ ಸಂಬಂಧದ ಒಡಂಬಡಿಕೆಗೆ ಸಹಿ ಹಾಕಿ, 28 ರಫೆಲ್ ವಿಮಾನಗಳನ್ನು ಖರೀದಿಸಿತು. ಪಾಕಿಸ್ತಾನದ ಮೇಲಿನ ಪ್ರತಿದಾಳಿಗೆ ಭಾರತದ ವೈಮಾನಿಕ ಪಡೆಗೆ ವಿಶೇಷ ಮೊನಚು ನೀಡಿದ್ದು ಈ ರಫೆಲ್ ವಿಮಾನಗಳೇ.

ಎಸ್-400 ವ್ಯವಸ್ಥೆ

ರಷ್ಯಾದಿಂದ ಖರೀದಿಸಲಾಗಿರುವ ‘ಎಸ್-400’ ಸಾಧನವು ಅತ್ಯಂತ ಮುಂದುವರಿದ ವಾಯರಕ್ಷಣಾ ವ್ಯವಸ್ಥೆ. ಇದಕ್ಕೆ ಭಾರತವು ‘ಸುದರ್ಶನ ಚಕ್ರ’ ಎಂದು ಮರುನಾಮಕರಣ ಮಾಡಿದೆ. ಇದೊಂದು ಕ್ಷಿಪಣಿ ವ್ಯವಸ್ಥೆಯಾಗಿದ್ದು, ರಹಸ್ಯ ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚಿ, ಅದರ ಹಿಂದೆ ಬಿದ್ದು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ರಷ್ಯಾ ಉತ್ಪಾದಿಸುವ ಈ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ರಾಷ್ಟ್ರಗಳ ಮೇಲೆ ಅಮೆರಿಕವು ಆರ್ಥಿಕ ದಿಗ್ಬಂಧನವನ್ನು ಹೇರುತ್ತಿತ್ತು. ಆದರೆ, ಭಾರತದ ಸುರಕ್ಷತೆಗೆ ಇದರ ಅಗತ್ಯವಿರುವುದನ್ನು ಮೋದಿಯವರು ಮನವರಿಕೆ ಮಾಡಿಕೊಟ್ಟರು ಹಾಗೂ ಇದು ಎಂಥ ಅದ್ಭುತ ಕೆಲಸ ಮಾಡುತ್ತದೆ ಎಂಬುದನ್ನು ಮೂರೇ ದಿನಗಳಲ್ಲಿ ಜಗತ್ತಿಗೆ ತೋರಿಸಿಕೊಟ್ಟರು.

‘ಆತ್ಮನಿರ್ಭರ್ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ’ ಎಂಬ ಎರಡು ಉಪಕ್ರಮಗಳು ಕೂಡ ಪ್ರಮುಖ ವಿರೋಧ ಪಕ್ಷಗಳ ಟೀಕೆಗೆ ಒಳಗಾಗಿದ್ದವು. ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡುತ್ತಾ, “ಮೇಕ್ ಇನ್ ಇಂಡಿಯಾ ಯಶಸ್ವಿಯಾಗಲು ಅಸಾಧ್ಯ" ಎಂದು ಬಲವಾಗಿ ಪ್ರತಿಪಾದಿಸಿದ್ದರು ಹಾಗೂ ‘ಆತ್ಮನಿರ್ಭರ್ ಭಾರತ್’ ಅನ್ನು ‘ಚೀನಾ ನಿರ್ಭರ್ ಭಾರತ್’ ಎಂದು ಲೇವಡಿ ಮಾಡಿದ್ದರು.

ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದಾಗಿ, ಭಾರತೀಯ ರಕ್ಷಣಾ ಉಪಕರಣಗಳಿಗೆ ವಿಶ್ವದ ಬಾಗಿಲು ತೆರೆದಂತಾಗಿದೆ. ಅತ್ಯಾಧುನಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಸುವರ್ಣ ಕಾಲ ಪ್ರಾಪ್ತವಾಗಿದೆ. ಆತ್ಮನಿರ್ಭರತೆಯ ಮಂತ್ರಜಪದಿಂದಾಗಿ ಭಾರತದ ರಕ್ಷಣಾ ವ್ಯವಸ್ಥೆಗೆ ಇತರ ದೇಶವನ್ನು ಅಂಗಲಾಚುವ ಪರಿಸ್ಥಿತಿ ಇಲ್ಲದಾಗಿದೆ.

ನಮ್ಮ ರಕ್ಷಣೆಯು ನಮ್ಮ ಹೊಣೆ ಮಾತ್ರವೇ, ಅದಕ್ಕಾಗಿ ಬಲಿಷ್ಠ ರಾಷ್ಟ್ರಗಳನ್ನು ನಂಬಿಕೊಂಡು ಕೂರುವ ಕಾಲವಿದಲ್ಲ. ಭಾರತವು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಽಸುತ್ತಿರುವುದರಿಂದ, ಇತರ ದೇಶಗಳು ನಮ್ಮ ಮೇಲೆ ಒತ್ತಡ ಹಾಕುವುದಕ್ಕೆ ಅಥವಾ ತುರ್ತು ಸಮಯದಲ್ಲಿ ಸೇವೆ ನೀಡಲು ಕೈಕೊಡುವಂಥ ಚೇಷ್ಟೆಗೆ ಅವಕಾಶವಿಲ್ಲದಾಗಿದೆ.

ಇದಕ್ಕೆಲ್ಲಾ ಕಾರಣ, ನಮ್ಮ ಕಾಲ ಮೇಲೆ ನಾವು ನಿಲ್ಲಲು ಆಗಿರುವುದೇ ಆಗಿದೆ. ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳು ಇದರ ನೇಪಥ್ಯದಲ್ಲಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ, ಅಲ್ಲವೇ?!

(ಲೇಖಕರು ಬಿಜೆಪಿಯ ವಕ್ತಾರರು)