Mirley Chandrashekher Column: ವರುಣ ಕರುಣಿಸಿದ್ದಾನೆ, ಬಾಗಿಲುಗಳು ಭದ್ರವಾಗಿವೆಯೇ ?!
ಬೆಂಗಳೂರಿನ ಅವ್ಯವಸ್ಥೆಯು ಜೋರು ಮಳೆ ಬಿದ್ದು ಎರಡು ದಿನ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಯಾಗಿ ಪ್ರಜ್ವಲಿಸುತ್ತದೆ, ಜನರ ಆಕ್ರೋಶವು ಕೇವಲ ಮೂರು ನಾಲ್ಕು ದಿನಗಳಲ್ಲಿ ಟುಸ್ ಪಟಾಕಿ ಆಗಿ ಬಿಡುತ್ತದೆ, ಎಂದಿನಂತೆ ಮತ್ತದೇ ಜೀವನ ಮರುಕಳಿಸುತ್ತದೆ, ಅದಕ್ಕಾಗಿಯೇ ಜನಪ್ರತಿನಿಧಿಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.


ವರುಣರಾಗ
ಮಿರ್ಲೆ ಚಂದ್ರಶೇಖರ
ಮಳೆಗಾಲ ನಿರೀಕ್ಷೆಗಿಂತ ಮುಂಚೆಯೇ ರಾಜ್ಯದಲ್ಲಿ ಪ್ರಾರಂಭವಾಗಿದೆ, ಒಂದೇ ಮಳೆಗೆ ಬೆಂಗಳೂರು ಮುಳುಗೇಳಿದ್ದು ಆಯಿತು. ರಾಜಕಾಲುವೆ ಹಾಗೂ ಮಳೆನೀರಿನ ಚರಂಡಿ ವ್ಯವಸ್ಥೆ ಸರಿ ಇಲ್ಲದಿರು ವುದು ಹಾಗೂ ನಗರದ ಮೇಲ್ಮೈ ಪೂರಾ ಕಾಂಕ್ರೀಟ್, ಡಾಂಬರು, ಚಪ್ಪಡಿ, ಟೈಲ್ಸ್ಗಳಂತಹ ಗಟ್ಟಿ ಪದರದಿಂದ ಆವರಿಸಿಕೊಂಡು ಅಂತರ್ಜಲಕ್ಕೆ ನೀರು ಇಳಿಯದಿರುವ ಕಾರಣ ನೀರಿನ ಮೇಲ್ಮೈ ಹರಿಯುವಿಕೆಯು ಹೆಚ್ಚಾಗಿ ರಸ್ತೆಗಳು ನದಿಗಳಾದವು, ಕೆಲವಡೆ ಹಳ್ಳಕ್ಕೆ ಹರಿಯದೆ ಮನೆಯೊಳಕ್ಕೆ ಹರಿದು ಅವಾಂತರ ಸೃಷ್ಟಿಸಿತು. ಸದ್ಯಕ್ಕೆ ಸಚಿವರೇ ಹೇಳಿದಂತೆ ಬ್ರಹ್ಮ ಬಂದರೂ ಸಮಸ್ಯೆ ಬಗೆಹರಿಯುವುದಿಲ್ಲ, ಬ್ರಹ್ಮಾಂಡ ಸಮಸ್ಯೆ ಯಾಗಿ ಬೆಂಗಳೂರು ನಾಗರಿಕರನ್ನು ಕಾಡುವುದು. ಇಷ್ಟಾಗಿಯೂ ಸಾವಿರಾರು ಕೋಟಿಗಳನ್ನು ವೈಟ್ ಟಾಪಿಂಗ್ಗಾಗಿ ವ್ಯಯಿಸಲಾಗುತ್ತಿದೆ.
ಬೆಂಗಳೂರಿನ ಅವ್ಯವಸ್ಥೆಯು ಜೋರು ಮಳೆ ಬಿದ್ದು ಎರಡು ದಿನ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಜ್ವಲಿಸುತ್ತದೆ, ಜನರ ಆಕ್ರೋಶವು ಕೇವಲ ಮೂರು ನಾಲ್ಕು ದಿನಗಳಲ್ಲಿ ಟುಸ್ ಪಟಾಕಿ ಆಗಿಬಿಡುತ್ತದೆ, ಎಂದಿನಂತೆ ಮತ್ತದೇ ಜೀವನ ಮರುಕಳಿಸುತ್ತದೆ, ಅದಕ್ಕಾಗಿಯೇ ಜನಪ್ರತಿನಿಧಿಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ಮಳೆ ಬಂದು ನಗರಗಳಲ್ಲಿನ ತಗ್ಗು ಪ್ರದೇಶದ ಮನೆಗಳ ನಿವಾಸಿಗಳು ಸ್ವಯಂಕೃತ ತಪ್ಪಿನಿಂದಾಗಿ ಸಂಕಷ್ಟಕ್ಕೆ ಒಳಗಾಗುತ್ತಾರೆ, ನಗರಗಳ ನಿರ್ಮಾಣದಲ್ಲಿ ನಿಯಮಬಾಹಿರ ನಿರ್ಮಾಣವನ್ನು ಕಟ್ಟು ನಿಟ್ಟಿನ ಕಾನೂನು ಜರುಗಿಸಿ ತಡೆದರೆ ಸಮಸ್ಯೆ ಬಗೆಹರಿಯದೆ ಇರುವಂತಹದ್ದೇನಲ್ಲ. ಏನ್ಮಾ ಡೋದು ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ, ರಕ್ಷಣೆಗೆ ಯಾರು ಬರುತ್ತಾರೆ?. ಬೇಸಿಗೆಯಲ್ಲಿ ಜಲಾಶಯಗಳ ಗೇಟು ಹಾಗೂ ಇತರೆ ಭಾಗಗಳನ್ನು ಪರೀಕ್ಷಿಸಿಕೊಂಡು ದುರಸ್ತಿ ಮಾಡಿಕೊಳ್ಳದೇ ಇದ್ದ ಕಾರಣದಿಂದಾಗಿ 2024 ಆಗಸ್ಟ್ 10ರಂದು ತುಂಗಭದ್ರಾ ಜಲಾಶಯದ ಗೇಟ್ ನಂ.19 ಮುರಿದು ಶೇಖರವಾಗಿದ್ದ ನೀರಿನಲ್ಲಿ 60 ಟಿಎಂಸಿ ಅಮೂಲ್ಯವಾದ ನೀರು ಕೃಷ್ಣರಾಜ ಸಾಗರ ಅಣೆಕಟ್ಟೆಯ ಶೇಖರಣಾ ಸಾಮರ್ಥ್ಯ-49.50 ಟಿಎಂಸಿ) ವ್ಯರ್ಥವಾಗಿ ಹರಿದು ಹೋಯಿತು, ಅದೃಷ್ಟವಶಾತ್ ದುರಸ್ತಿಯ ನಂತರ ಸಾಕಷ್ಟು ಮಳೆ ಬಂದಿದ್ದರಿಂದ ಮತ್ತೆ ತುಂಬಿಕೊಂಡಿತು.
ಇದನ್ನೂ ಓದಿ: Mirley Chandrashekher Column: ಹರ್ಷದ ಕೂಳಿಗೆ ಆಸೆಗೆ, ವರ್ಷದ ಕೂಳು ಕೈತಪ್ಪದಿರಲಿ
ವ್ಯವಸ್ಥೆಯಲ್ಲಿನ ಲೋಪಗಳೇ ಹೊರತು, ಇದಕ್ಕೆ ಇಂಜಿನಿಯರ್ಗಳಾಗಲಿ ಅಥವಾ ಎಪ್ಪತ್ತು ವರ್ಷದಿಂದ ತನ್ನ ಕರ್ತವ್ಯವನ್ನು ನಿಷ್ಟೆಯಿಂದ ನಿರ್ವಹಿಸಿಕೊಂಡು ಬಂದಿದ್ದ ಗೇಟ್ ನಂ.19 ಕಾರಣವಲ್ಲ. ಕ್ರೆಸ್ಟ್ ಗೇಟ್ಗಳಿಗೆ ಸಮನಾಂತರವಾಗಿ ಸ್ಟಾಪ್ಲಾಗ್ ಗೇಟುಗಳು ಇದ್ದಿದ್ದರೆ ನೀರಿನ ನಷ್ಟ ಆಗುತ್ತಿರಲಿಲ್ಲ, ಬಹುತೇಕ ಡ್ಯಾಂಗಳಲ್ಲಿ ಸ್ಟಾಪ್ಲಾಗ್ ಗೇಟುಗಳು ಇರುವುದಿಲ್ಲ, ಕಬಿನಿ ಡ್ಯಾಂನಲ್ಲೂ ಅಳವಡಿಸಿರುವುದಿಲ್ಲ. ಅಣೆಕಟ್ಟೆಗಳನ್ನು ಆಧುನೀಕ ಭಾರತದ ದೇವಾಲಯಗಳೆಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರು ಕರೆದರು, ಅವುಗಳ ರಕ್ಷಣೆಯು ಇಂದು ಆದ್ಯ ಕರ್ತವ್ಯವಾಗಬೇಕು.
ಕೇಂದ್ರೀಯ ಜಲ ಆಯೋಗದ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 231 ದೊಡ್ಡ ಅಣೆಕಟ್ಟೆಗಳು ಕಾರ್ಯನಿರ್ವಹಿಸುತ್ತಿವೆ, ಇವುಗಳಲ್ಲಿ 75 ಅಣೆಕಟ್ಟೆಗಳು ಜಲಸಂಪನ್ಮೂಲ ಇಲಾಖೆ, 135 ಅಣೆಕಟ್ಟೆಗಳು ಸಣ್ಣ ನೀರಾವರಿ ಇಲಾಖೆ ಮತ್ತು 21 ಅಣೆಕಟ್ಟೆಗಳನ್ನು ಇಂಧನ ಇಲಾಖೆಯ ವ್ಯಾಪ್ತಿ ಯಲ್ಲಿ ಬರುವುದು. ಅಣೆಕಟ್ಟೆಗಳ ನಿರ್ವಹಣೆಯನ್ನು ಆಯಾ ಇಲಾಖೆಗಳೇ ತಮ್ಮಲ್ಲಿರುವ ಇಂಜಿನಿಯರ್ಗಳ ಮೂಲಕ ಮಾಡಿಕೊಂಡು ಬರುತ್ತಿವೆ.
ಕಳೆದ ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಕ್ರೆಸ್ಟ್ ಗೇಟ್ ಮುರಿದು ಸಂಭವಿಸಿದ ಅನಾಹುತದಿಂದ ಜಲಸಂಪನ್ಮೂಲ ಇಲಾಖೆಯು ಪಾಠ ಕಲಿತು ಸೂಕ್ತ ಎಚ್ಚರಿಕೆ ಕ್ರಮ ಕೈಗೊಂಡಿದ್ದರೆ ಒಳ್ಳೆಯದು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವ ಇದೆ, ಈಗಾಗಲೇ ಮಳೆ ಪ್ರಾರಂಭವಾಗಿ ನದಿಗಳು ಜೀವ ಪಡೆದುಕೊಳ್ಳುತ್ತಿವೆ, ಬಹುಶಃ ಜುಲೈಗೇ ಅಣೆಕಟ್ಟೆಗಳು ತುಂಬುವ ಲಕ್ಷಣಗಳು ಕಂಡು ಬರುತ್ತಿದೆ.
ಇಲ್ಲಿ ಪ್ರಶ್ನೆ ಇರುವುದು ಅಣೆಕಟ್ಟೆಗಳ ನಿರ್ವಹಣೆಗೆ ನಿಯೋಜಿಸಿರುವ ಇಂಜಿನಿಯರ್ಗಳು ಅಣೆಕಟ್ಟೆಯ ಬಗ್ಗೆ ತಾಂತ್ರಿಕ ಪರಿಣಿತಿ ಹೊಂದಿದ್ದಾರೆಯೇ?, ಹೊಂದಿದ್ದರೂ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದೆಯೇ? ಎಂಬುದು. ಈಗಲೂ ಸಮಯವಿದೆ, ರಾಜ್ಯದ ಅಣೆಕಟ್ಟೆಗಳ ಉಸ್ತುವಾರಿ ಯಲ್ಲಿ ಇರುವ ಇಂಜಿನಿಯರ್ ಗಳ ಮಾಹಿತಿಯನ್ನು ಕ್ರೋಢೀಕರಿಸಿ ಅರ್ಹತೆ ಇರುವವರನ್ನು ಮಾತ್ರ ಬಿಟ್ಟು ಉಳಿದವರನ್ನು ಅವರಲ್ಲಿರುವ ಪರಿಣಿತಿಗೆ ತಕ್ಕ ಸ್ಥಳಗಳಿಗೆ ವರ್ಗಾಹಿಸುವುದು ಅಣೆಕಟ್ಟೆಗಳ ಸುಭದ್ರತೆ ಹಾಗೂ ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಸೂಕ್ತ.
ನಾವು ಎಡವುತ್ತಿರುವುದು ಇಲ್ಲಿಯೇ, ವೈದ್ಯರಾದವರು ತಮ್ಮ ಪರಿಣಿತಿಯ ವ್ಯಾಪ್ತಿ ಮೀರಿ ಬೇರೆ ರೋಗಕ್ಕೆ ಚಿಕಿತ್ಸೆ ಕೊಡುವುದಿಲ್ಲ, ಹೃದಯ ತಜ್ಞ ಎಂದಿಗೂ ಮಕ್ಕಳ ಹೆರಿಗೆ ವಿಭಾಗಕ್ಕೆ ಹೋಗುವು ದಿಲ್ಲ, ಪ್ರಸೂತಿ ತeಯಾದವಳು ಮೂತ್ರಪಿಂಡ ಅಥವಾ ನರರೋಗ ವಿಭಾಗಕ್ಕೆ ಚಿಕಿತ್ಸೆ ನೀಡುವು ದಿಲ್ಲ. ದುರಂತವೆಂದರೆ ಇಂಜಿನಿಯರಿಂಗ್ ಇಲಾಖೆಗಳಲ್ಲಿ ಒಬ್ಬ ಇಂಜಿನಿಯರ್ ಸಮಗ್ರವಾದ ಪರಿಣಿತಿ ಇಲ್ಲದಿದ್ದರೂ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುತ್ತಾನೆ.
ಮುನ್ಸಿಪಾಲಿಟಿ, ಕಾರ್ಪೊರೇಷನ್, ಜಿಲ್ಲಾ ಪಂಚಾಯತ್ ಮುಂತಾದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನೀರಾವರಿ ಕ್ಷೇತ್ರದಲ್ಲಿ ಗಂಧಗಾಳಿ ಇಲ್ಲದ ಇಂಜಿನಿಯರ್ಗಳನ್ನು ಅಣೆಕಟ್ಟೆಯ ನಿರ್ವಹಣೆಯ ವಿಭಾಗಕ್ಕೆ ನಿಯೋಜಿಸುತ್ತಾರೆ, ಪ್ರವಾಹ ಬಂದ ಪರಿಸ್ಥಿತಿಯಲ್ಲಿ ಅಣೆಕಟ್ಟೆಗಳನ್ನು ನಿರ್ವಹಿಸುವ ರೀತಿರಿವಾಜುಗಳ ತಿಳಿಯದವನು ಏನು ಮಾಡಲಿಕ್ಕೆ ಸಾಧ್ಯ?. ರಸ್ತೆ ಮಾಡಿಸುತ್ತಿದ್ದ ವರು, ಮುನ್ಸಿಪಾಲಿಟಿಯಲ್ಲಿ ಕಸವಿಲೇವಾರಿ ಮಾಡಿಕೊಂಡಿದ್ದವರಿಗೆ ಬಾರಿ ಅಣೆಕಟ್ಟೆಯ ನಿರ್ವಹಣೆಯನ್ನು ಕೊಟ್ಟರೆ ಜಲಾಶಯದ ಸುರಕ್ಷತೆಯನ್ನು ನಿರೀಕ್ಷಿಸಲು ಆದೀತೆ?.
ಆಶ್ಚರ್ಯ ಎನಿಸಬಹುದು ಅಣೆಕಟ್ಟೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದು ಹಾಗೂ ಜಲಾಶಯದಲ್ಲಿ ಶೇಖರವಾಗುವ ನೀರಿನ ಸಾಮರ್ಥ್ಯಕ್ಕೆ ಅನುಸಾರ ಗೇಟ್ಗಳನ್ನು ಹೇಗೆ ಆಪರೇಟ್ ಮಾಡಬೇಕು ಎನ್ನುವ ಪೂರ್ಣ ಜ್ಞಾನವನ್ನು ಗೇಟ್ ಆಪರೇಟರ್ ಆದವನು ಹೊಂದಿರುತ್ತಾನೆ, ಅಲ್ಲಿನ ಇಂಜಿನಿಯರ್ಗಳಿಗೂ ಅವನಷ್ಟು ಗೊತ್ತಿರುವುದಿಲ್ಲ, ಕಾರಣ ಅಣೆಕಟ್ಟೆಯ ಮಾಹಿತಿ ಯನ್ನುತಿಳಿದುಕೊಳ್ಳುವಷ್ಟರಲ್ಲಿ ಎತ್ತಂಗಡಿಯಾಗಿರುತ್ತಾನೆ.
ಬೇಕಿರುವ ಸ್ಥಳಕ್ಕೆ ವರ್ಗಾಹಿಸಿಕೊಳ್ಳುವ ಶಕ್ತಿ ಇಲ್ಲದೆ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕೆಲಸ ಮಾಡಲು ಯಾರೂ ಇಷ್ಟಪಡದ ಅಣೆಕಟ್ಟೆ ವಿಭಾಗಕ್ಕೆ ಬಂದಿರುವ ಇಂಜಿನಿಯರ್ಗಳು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲವೇ?, ಹುದ್ದೆಗೆ ಬಂದ ಇಂಜಿನಿಯರ್ಗಳೆಲ್ಲಾ ಗೇಟ್ ಆಪರೇಟರ್ಗಳನ್ನೇ ಅವಲಂಬಿಸಬೇಕಾಗುತ್ತದೆ. ಹಲವು ವರ್ಷಗಳಿಂದ ಬೇರೆ ಎಲ್ಲಿಯೂ ವರ್ಗಾವಣೆಗೊಳ್ಳದೆ ಒಂದೇ ಸ್ಥಳದಲ್ಲಿ ಇರುವುದರಿಂದ ಅವನು ಅಣೆಕಟ್ಟೆಯ ಸೂಕ್ಷ್ಮ ವಿಚಾರ ಗಳನ್ನು ಬಲ್ಲವನಾಗಿರುತ್ತನೆ.. ರಾಜ್ಯದಲ್ಲಿ ಇರುವ ಅಣೆಕಟ್ಟೆಗಳಲ್ಲಿ ಬಹುತೇಕವುಗಳು 50 ವರ್ಷ ಗಳನ್ನು ದಾಟಿವೆ. ಕನ್ನಂಬಾಡಿ ಅಣೆಕಟ್ಟೆಯು ನೂರು ವರ್ಷಗಳನ್ನು ಕಾಣುತ್ತಿದೆ. ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣಿಯವರ ದೂರದೃಷ್ಟಿಯ ಫಲವಾಗಿ 1897ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ವಾಣಿವಿಲಾಸ ಸಾಗರ ಜಲಾಶಯವು 125 ವರ್ಷಗಳನ್ನು ಕಂಡಿದೆ.
ಇದು ರಾಜ್ಯದ ಪ್ರಥಮ ಅಣೆಕಟ್ಟೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತೀಚೆಗೆ ನಿರ್ಮಾಣ ಗೊಂಡಿರುವ ಹೊಸ ಅಣೆಕಟ್ಟೆಗಳು ಬಹುಶಃ ಯಾವೂ ಇದ್ದಂತಿಲ್ಲ. ಜಲಾಶಯಗಳಿಗೆ ವಯಸ್ಸು ಆದಂತೆ ಅವುಗಳನ್ನು ಬಹಳವೇ ಸೂಕ್ಷ್ಮವಾಗಿ ಶಿಶುವಿನಂತೆ ನೋಡಿಕೊಳ್ಳಬೇಕಾಗುತ್ತದೆ, ಎಚ್ಚರ ತಪ್ಪಿದರೆ ಅನಾಹುತಗಳನ್ನು ಊಹಿಸುವುದಕ್ಕೂ ಸಾಧ್ಯವಾಗದು.
ಪರಿಣಾಮಗಳನ್ನು ತಿಳಿದೆ ಕೇಂದ್ರ ಸರ್ಕಾರವು ವಿಶ್ವಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ 2012ರಲ್ಲಿ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆಯನ್ನು ಕೈಗೊಂಡಿತು, ಇದರಡಿ ಹಲವು ಅಣೆಕಟ್ಟೆಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿತು, ಈ ಯೋಜನೆಯಡಿ ಬಹಳಷ್ಟು ಅಣೆಕಟ್ಟೆಗಳು ಇನ್ನೂ ಸುಧಾರಣೆ ಯನ್ನು ಕಾಣಬೇಕಾಗಿದೆ.
ಅಣೆಕಟ್ಟೆಗಳ ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ಕೇಂದ್ರೀಯ ಜಲ ಆಯೋಗವು ಸರಿ ಸುಮಾರು 17 ಕೈಪಿಡಿ ಹಾಗೂ ಮಾರ್ಗಸೂಚಿಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಿದೆ, ಇವೆಲ್ಲವುಗಳ ಪೂರ್ಣ ಮಾಹಿತಿಯು ಅಣೆಕಟ್ಟೆಗಳ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ನೋಡಿಕೊಳ್ಳುವ ಸಹಾಯಕ ಇಂಜಿನಿಯರ್ನಿಂದ ಹಿಡಿದು ಮುಖ್ಯ ಇಂಜಿನಿಯರ್ರವರೆಗೂ ಇರಬೇಕಾಗುತ್ತದೆ.
ಆದರೆ ಪ್ರಶ್ನೆ ಇರುವುದು ಎಷ್ಟು ಜನ ಇಂಜಿನಿಯರ್ಗಳು ಈ ಕೈಪಿಡಿಗಳನ್ನು ತಿರುವಿ ಹಾಕಿದ್ದಾರೆ, ಆಗುವುದಿಲ್ಲ ಕಾರಣ ಅದನ್ನು ತಿಳಿದುಕೊಳ್ಳುವಷ್ಟು ಕಾಲಾವಕಾಶವನ್ನು ಸರ್ಕಾರ ಅವರಿಗೆ ಕೊಡುವುದಿಲ್ಲವೆ!.
Guide lines for Safety Inspection of Dams ಕೈಪಿಡಿಯಲ್ಲಿ ಅಣೆಕಟ್ಟೆಗಳ ಪರಿವೀಕ್ಷಣೆಯ ಕುರಿತಾಗಿ ಸ್ಪಷ್ಟವಾಗಿ ವಿವರಿಸಲಾಗಿದೆ. ಕೈಪಿಡಿಯ ಪುಟ 217ರಲ್ಲಿ 45 ಪುಟಗಳ ಚೆಕ್ಲಿಸ್ಟನ್ನು ಕೊಡಲಾಗಿದೆ. ಅದರ ಅನುಸಾರ ಕ್ರಮ ತೆಗೆದುಕೊಂಡರೆ ತುಂಗಭದ್ರೆಯ ಮಾದರಿ ಅನಾಹುತಗಳು ಡ್ಯಾಂಗಳಲ್ಲಿ ಆಗುವುದಿಲ್ಲ, ಒಮ್ಮೊಮ್ಮೆ ಪ್ರಕೃತಿಯ ವಿಕೋಪಕ್ಕೆ ಕೈಮೀರಿ ಆಗುವುದನ್ನು ಯಾರೂ ತಡೆಯಲಾಗದು.
ಚೆಕ್ಲಿಸ್ಟ್ ಅನುಸಾರ ಮಾನ್ಸೂನ್ ಪ್ರಾರಂಭ ಆಗುವುದಕ್ಕೆ ಮೊದಲು ಸರ್ಕಾರ ವಾರ್ಷಿಕ ನಿರ್ವಹಣೆಗಾಗಿ ಚೌಕಾಸಿ ಮಾಡದೆ ಅಗತ್ಯ ಇರುವಷ್ಟು ಅನುದಾನ ನೀಡಬೇಕು, ಅನುದಾನವನ್ನು ಬಳಸಿಕೊಂಡು ಚೆಕ್ ಲಿಸ್ಟ್ನಲ್ಲಿ ನಮೂದಿಸಿರುವ ಅಂಶಗಳನ್ನು ಪರಿಗಣಿಸಿ ಎಲ್ಲವೂ ಮುಖ್ಯ ವೆಂದು ದುರಸ್ತಿ ಅಥವಾ ನಿರ್ವಹಣೆ ಮಾಡಬೇಕಾಗುತ್ತದೆ, ನಂತರ ನಮೂನೆಯಲ್ಲಿರುವ ಪ್ರತೀ ಐಟಂಗಳನ್ನು ಮೇಲಾಽಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು, ಈ ಹಂತದಲ್ಲೂ ನಮ್ಮ ಮೇಲಾಽಕಾರಿಗಳು ನಿರ್ಲಕ್ಷ್ಯ ಮಾಡುವ ಅವಕಾಶಗಳಿವೆ.
ಕಂಪ್ಯೂಟರ್ ಬಳಕೆಗೆ ಬಂದನಂತರ ಚೆಕ್ಲಿಸ್ಟ್ ಕಾಪಿಪೆಸ್ಟ್ ಮಾಡಿ ಮೇಲಿನ ಕಛೇರಿಗಳಿಗೆ ಸಲ್ಲಿಸುವ ಸಂಭವವೇ ಹೆಚ್ಚು. ಕೈಪಿಡಿಯ ಅದ್ಯಾಯ 7 ಪುಟ 145ರಲ್ಲಿ ಸಮಗ್ರವಾಗಿ ಪರಿಶೀಲಿಸುವ ಮಾರ್ಗ ಸೂಚಿಗಳನ್ನು ಕೊಡಲಾಗಿದೆ. ಇದರಲ್ಲಿ ಜಲಾಶಯದ ಪ್ರದೇಶ, ಮುಳಗಡೆ ಆಗಬಹುದಾದ ಪ್ರದೇಶ ಗಳು, ಜಲಾನಯನ ಹಾಗೂ ಉಪನದಿಗಳು, ಯಾಂತ್ರಿಕ ಮತ್ತು ವಿದ್ಯುತ್ ವ್ಯವಸ್ಥೆಗಳು, ಅಣೆಕಟ್ಟೆ ಯ ಕೆಳಭಾಗದ ಅಪಾಯಗಳು, ಕಾಲುವೆ ಮತ್ತು ನದಿಗಳ ಅಡತಡೆಗಳು, ಅಣೆಕಟ್ಟೆಯ ಎರಡೂ ಬದಿಗಳ ಸ್ಥಿತಿ, ಮಣ್ಣಿನ ಏರಿ, ಸ್ಲೂಯಿಸ್ಗಳು ಮುಂತಾದವುಗಳನ್ನು ಮಾನ್ಸೂನ್ಗಿಂತ ಮೊದಲು ಮತ್ತು ನಂತರ ಅಧಿಕಾರಿಗಳು ಪರಿವೀಕ್ಷಣೆ ಮಾಡಲೇಬೇಕು.
ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಅಣೆಕಟ್ಟೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಸಾಧ್ಯವಿಲ್ಲ, ಇದು ಆಗಬೇಕಾದರೆ ರಾಜ್ಯದ ಎಲ್ಲಾ ಡ್ಯಾಂಗಳಿಗೂ ಒಬ್ಬ ನುರಿತ ಮುಖ್ಯ ಇಂಜಿನಿಯರ್ ನೇಮಿಸಿ ಇವರ ವ್ಯಾಪ್ತಿಯಲ್ಲಿ ಪ್ರತೀ ಅಣೆಕಟ್ಟೆಗೆ ಕಾರ್ಯ ಪಾಲಕ ಇಂಜಿನಿಯರ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಹಾಗೂ ವಿದ್ಯುತ್ ಇಂಜಿನಿಯರ್ ಗಳನ್ನು ನಿಯೋಜಿಸಿ, ನಿರ್ವಹಿಸುವ ಕರ್ತವ್ಯವನ್ನು ಅಣೆಕಟ್ಟೆ ಕಾರ್ಯವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸ ಬೇಕು.
ಇಷ್ಟಾದರೆ ಸಾಕಾಗದು ನಿಶ್ಚಿತವಾಗಿ ಅಗತ್ಯವಿರುವ ಅನುದಾನವನ್ನು ಮಾನ್ಸೂನ್ ಪ್ರಾರಂಭ ಆಗುವ ಮೊದಲು ಕಾಮಗಾರಿ ನಿರ್ವಹಿಸಲು ಬೇಕಾಗುವ ಅವದಿಗೆ ಮುಂಚೆ ಕಡ್ಡಾಯವಾಗಿ ನೀಡಬೇಕು. ಕಾಮಗಾರಿಯನ್ನು ನಿರ್ವಹಿಸುವ ಗುತ್ತಿಗೆದಾರರಿಗೆ ಅಣೆಕಟ್ಟೆಗಳ ಕಾಮಗಾರಿಗಳನ್ನು ಮಾಡಿದ ಅನುಭವ ಇರಬೇಕು. ಅನುಭವ ಇಲ್ಲದ ಸ್ಥಳೀಯ ಗುತ್ತಿಗೆದಾರರಿಗೆ ಸಹಾಯ ಮಾಡುವ ಉದ್ದೇಶದಿಂದ ಅಣೆಕಟ್ಟೆ ಕಾಮಗಾರಿಗಳನ್ನು ನೀಡಕೂಡದು.
ತುಂಗಭದ್ರಾ ಅಣೆಕಟ್ಟೆಯ ಗೇಟ್ಗೆ ಆಗಿರುವ ದುಸ್ಥಿತಿಯು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಹಾಗೂ ಲಕ್ಷಾಂತರ ಎಕರೆ ಅಚ್ಚುಕಟ್ಟಿಗೆ ಆದಾರವಾಗಿರುವ ಕಬಿನಿ ಮತ್ತು ಕೃಷ್ಣರಾಜಸಾಗರ ಅಣೆಕಟ್ಟೆಗಳಿಗೆ ಬಾರದಿರಲಿ ಎರಡೂ ಜಲಾಶಯಗಳಿಗೂ ಐವತ್ತು ವರ್ಷ ತುಂಬಿವೆ. ಈಗಲೇ ಎಚ್ಚರಿಕೆ ವಹಿಸಿ ನುರಿತ ಅಣೆಕಟ್ಟೆ ತಜ್ಞರ ಸಲಹೆಗಳನ್ನು ಪಡೆದು ಕಟ್ಟುನಿಟ್ಟಾಗಿ ವಾರ್ಷಿಕ ನಿರ್ವಹಣೆ ಮಾಡಲಿ, ಉದಾಸೀನತೆ ತೋರಿದರೆ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳು ಬಾರಿ ಸಂಕಷ್ಟ ಎದುರಿಸಬೇಕಾಗುತ್ತದೆ..
ಕಳೆದ ವರ್ಷದಲ್ಲಿ ಸಂಭವಿಸಿದ ತುಂಗಭದ್ರ ದುರ್ಘಟನೆಯ ಪರಿಣಾಮದಿಂದಲೂ ನಾವು ಎಚ್ಚೆತ್ತು ಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ನೀರನ್ನು ಉತ್ಪಾದಿಸ ಲಾಗದು, ಮಳೆಯ ನೀರೇ ನಮಗೆ ಆದಾರ, ಮಳೆಯೂ ನಮ್ಮೊಂದಿಗೆ ಆಗಾಗ್ಗೆ ಆಟ ಆಡುವುದುಂಟು, ಅದು ಕರುಣಿಸಿದಾಗ ನೀರನ್ನು ಬುದ್ದಿವಂತಿಕೆಯಿಂದ ಶೇಖರಿಸಿಟ್ಟುಕೊಳ್ಳುವುದು ಒಳಿತು, ಶೇಖರಿ ಸಿಟ್ಟ ನೀರನ್ನು ಅಷ್ಟೇ ಜೋಪಾನ ಮಾಡುವುದು ಮುಖ್ಯ. 92 ಕೋಟಿ ಖರ್ಚು ಮಾಡಿ ಕಾವೇರಿ ಆರತಿ ಮಾಡಿದರೆ ಕನ್ನಂಬಾಡಿ ಕಟ್ಟೆ ಗಟ್ಟಿಯಾಗುವುದೇ?.