ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ಭೌತಿಕವಾದ ಸೇತುವೆ ಕಣ್ಣಿಗೆ ಕಾಣಿಸುತ್ತದೆ, ಭಾವನೆಯ ಸೇತುವೆ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಸೇತುವೆ ಸ್ಥಳಗಳನ್ನು ಜೋಡಿಸಿದರೆ ಕಾಣದಿದ್ದದ್ದು ಮನಸ್ಸನ್ನು, ಭಾವನೆಯನ್ನು ಬೆಸೆಯುತ್ತದೆ. ಗೋಚರಿಸುವ ಸೇತುವೆ ಸ್ಥಿರವಾಗಿದ್ದರೆ ಭೂಮಿಯೊಂದಿಗೆ ಬಂಧ, ಅಗೋಚರ ಸೇತು ಗಟ್ಟಿಯಾಗಿದ್ದರೆ ಭಾವದೊಂದಿಗೆ ಬಂಧನ ಬಲಿಷ್ಠವಾಗಿರುತ್ತದೆ.

ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ವಿದೇಶವಾಸಿ

dhyapaa@gmail.com

“ಇದನ್ನು ಅದೃಷ್ಟ ಎನ್ನಿ, ಹಣೆಬರಹ ಎನ್ನಿ, ಆಗಾಗ ನಿಮ್ಮೊಂದಿಗೆ ಕೈಜೋಡಿಸುವ, ಕೆಲವು ಯೋಜನೆಗಳಲ್ಲಿ ಭಾಗಿಯಾಗುವ ಅವಕಾಶ ನನಗೆ ಒದಗಿ ಬಂದಿತ್ತು. ಕಾಕತಾಳೀಯ ಎಂಬಂತೆ ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ, 2014ರಲ್ಲಿ, ಇದೇ ಜಾಗದಲ್ಲಿ ಭಾಗವಹಿಸಿದ ಕಾರ್ಯಕ್ರಮ ನನ್ನ ಕೊನೆಯ ಸರಕಾರಿ ಕಾರ್ಯಕ್ರಮವಾಗಿತ್ತು.

ಆ ಸಂದರ್ಭದಲ್ಲಿಯೂ ನೀವು ವೇದಿಕೆಯ ಮೇಲಿದ್ದಿರಿ. ಆಗ ನೀವು ಮೊದಲ ಬಾರಿ ಪ್ರಧಾನಿ ಯಾಗಿದ್ದಿರಿ. ಇಲ್ಲಿಯ ಕತ್ರಾ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದಿರಿ. ನಂತರ ಪುನಃ ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ನೀವು ಪ್ರಧಾನಿಯಾಗಿ ಮುಂದುವರಿದಿದ್ದೀರಿ. ಇಂದು ಪುನಃ ಒಂದು ರೈಲಿನ ಕಾರ್ಯಕ್ರಮಕ್ಕೆ ಬಂದಿದ್ದೀರಿ.

ಕಾಶ್ಮೀರವನ್ನು ಭಾರತದ ಇತರ ಭಾಗಗಳಿಗೆ ರೈಲಿನ ಮುಖಾಂತರ ಜೋಡಿಸುವ ಕನಸನ್ನು ಬಹಳ ಮಂದಿ ಕಂಡಿದ್ದರು. ನಮ್ಮನ್ನು ಆಳಿದ ಬ್ರಿಟಿಷರೂ ಈ ಕನಸನ್ನು ಕಂಡವರೇ ಆಗಿದ್ದರೂ, ಅವರಿಂದಲೂ ಇದು ಸಾಧ್ಯವಾಗಿರಲಿಲ್ಲ. ಯಾವ ಬ್ರಿಟಿಷರಿಂದ ಸಾಧ್ಯವಾಗಿರಲಿಲ್ಲವೋ, ಆ ಕೆಲಸ ಇಂದು ಪೂರ್ಣಗೊಂಡಿದೆ. ಕಾಶ್ಮೀರದ ಕಣಿವೆ ಇಂದು ಭಾರತದ ಇತರ ಭಾಗಗಳೊಂದಿಗೆ ರೈಲಿನ ಮೂಲಕ ಸಂಪರ್ಕ ಸಾಧಿಸುವಂತಾಗಿದೆ.... “ಈ ಸಂದರ್ಭದಲ್ಲಿ ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ನೆನಪಿಸಿಕೊಳ್ಳದಿದ್ದರೆ, ಅವರಿಗೆ ಧನ್ಯವಾದ ಹೇಳದಿದ್ದರೆ ದೊಡ್ಡ ತಪ್ಪಾಗುತ್ತದೆ.

ಇದನ್ನೂ ಓದಿ: Kiran Upadhyay Column: ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ಏಕೆಂದರೆ, 1983ರಲ್ಲಿಯೇ ಈ ಯೋಜನೆಯ ಕುರಿತು ಮಾತನಾಡಲಾಗುತ್ತಿತ್ತು. ಆ ಕಾಲದಲ್ಲಿ ನಾನು ಎಂಟನೆಯ ತರಗತಿಯ ವಿದ್ಯಾರ್ಥಿಯಾಗಿದ್ದೆ. ಈಗ ನಾನು ಐವತ್ತೈದು ವರ್ಷದವನಾಗಿದ್ದೇನೆ. ನನ್ನ ಮಕ್ಕಳು ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಇಷ್ಟು ವರ್ಷಗಳ ನಂತರ ನಮ್ಮ ಕನಸು ನನಸಾಗಿದೆ.

ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇದನ್ನು ‘ರಾಷ್ಟ್ರದ ಮಹತ್ವದ ಯೋಜನೆ’ ಎಂದು ಘೋಷಿಸಿ, ಬಜೆಟ್‌ನಲ್ಲಿ ಇದಕ್ಕಾಗಿಯೇ ಹಣವನ್ನಿಟ್ಟಿದ್ದರಿಂದ ಇದು ಸಾಕಾರವಾಗಿದೆ. ಇದರಿಂದಾಗಿ ಈ ಪ್ರಾಂತ್ಯದ ಜನರ ಪ್ರಯಾಣದ ಸಮಯದಲ್ಲಿ ಅರ್ಧದಷ್ಟು ಕಮ್ಮಿಯಾಗಿದೆ. ಅದರಿಂದ ದೇಶದ ಇತರ ಭಾಗಗಳಿಗೆ ನಮ್ಮ ಭಾಗದ ಸೇಬು ಮತ್ತು ಇತರ ಹಣ್ಣುಗಳು ಇನ್ನೂ ಬೇಗ ತಲುಪುವಂತಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ರಸ್ತೆಗಳು ಮುಚ್ಚಿಹೋಗಿ ಪ್ರಯಾಣವೇ ನಿಂತು ಹೋಗುತ್ತಿತ್ತು. ಆ ಸಂದರ್ಭಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತಿತ್ತು.

ಅದರ ದುರುಪಯೋಗ ಪಡೆದು ಅವರೂ ಪ್ರಯಾಣದ ದರವನ್ನು ಹೆಚ್ಚಿಸುತ್ತಿದ್ದರು. ಈ ಒಂದು ಸೇತುವೆಯ ನಿರ್ಮಾಣದಿಂದಾಗಿ ಅದಕ್ಕೆಲ್ಲ ಕಡಿವಾಣ ಬಿದ್ದಂತಾಗಿದೆ. ಇದೇ ರೀತಿಯ ಇನ್ನೂ ಕೆಲವು ಯೋಜನೆಗಳು ಜಮ್ಮು-ಕಾಶ್ಮೀರದಲ್ಲಿ ಶೀಘ್ರಗತಿಯಲ್ಲಿ ಮುನ್ನಡೆಯುತ್ತಿವೆ.

7 R

ಈ ಸಂದರ್ಭದಲ್ಲಿ ನಾನು ಜಮ್ಮು ಕಾಶ್ಮೀರದ ಜನರ ಪರವಾಗಿ ನಿಮಗೆ ಹೃದಯಾಂತರಾಳದಿಂದ ಶುಭಾಶಯ ಕೋರುತ್ತೇನೆ, ಧನ್ಯವಾದ ಸಮರ್ಪಿಸುತ್ತೇನೆ". ಇದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದು ಅವರ ಭಾಷಣದ ಪ್ರಮುಖ ಅಂಶ. ಮೊನ್ನೆ ಮೊನ್ನೆಯಷ್ಟೇ ನಡೆದ ಚೆನಾಬ್ ರೈಲು ಸೇತುವೆಯ ಉದ್ಘಾಟನೆಯ ಸಂದರ್ಭ. ಅವರು ‘ನಿಮಗೆ’ ಎಂದು ಸಂಬೋಧಿಸಿದ್ದು ಪ್ರಧಾನಿ ಮೋದಿಯವರಿಗೆ.

ನಿಜ ಹೇಳಬೇಕೆಂದರೆ ಇದು ದೇಶದಾದ್ಯಂತ ದೊಡ್ಡ ಸುದ್ದಿಯಾಗಬೇಕಾಗಿದ್ದ ವಿಷಯವಾಗಿತ್ತು. ಆದರೆ ಐಪಿಎಲ್ ಅಂತಿಮ ಪಂದ್ಯದ ಗದ್ದಲ, ನಂತರದ ವಿಜಯೋತ್ಸವದ ಆಚರಣೆಯಲ್ಲಿ ನಡೆದ ದುರಂತದ ನಡುವೆ ಈ ವಿಷಯ ಸಂದಿ-ಮೂಲೆಯಲ್ಲಿ ಬಿದ್ದು ಕಳೆದು ಹೋಯಿತು.

ಇದು ಖಾಲಿ-ಪೀಲಿ ಸೇತುವೆಯಲ್ಲ. ಇದನ್ನು ಹತ್ತರ ಜತೆ ಇನ್ನೊಂದು ಎಂದು ಪರಿಗಣಿಸ ಲಾಗುವುದಿಲ್ಲ. ಒಮರ್ ಅಬ್ದುಲ್ಲಾರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರ ಮಹತ್ವದ ಅರಿವಾಗುತ್ತದೆ. ಭಾರತದಂಥ ದೇಶದಲ್ಲಿ ಒಂದು ಸೇತುವೆ ನಿರ್ಮಾಣವಾಗಲು ಅಷ್ಟು ದಶಕಗಳು ಬೇಕಾಗಿತ್ತೇ ಎಂಬ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡಬಹುದು.

ನಮ್ಮಲ್ಲಿ ಪ್ರತಿಭೆಗೆ ಯಾವ ಕೊರತೆಯೂ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಇಂಥ ಯೋಜನೆಗಳಲ್ಲಿ ಪ್ರತಿಭೆಯೊಂದೇ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದೂ ಸತ್ಯ. ಹಣಕಾಸು, ಬದ್ಧತೆ, ರಾಜಕೀಯ ಇಚ್ಛೆ-ಆಸಕ್ತಿ ಇತ್ಯಾದಿಗಳೆಲ್ಲ ಪ್ರತಿಭೆಯನ್ನು ಕೊಂದುಬಿಡುತ್ತವೆ.

ಅದನ್ನೆಲ್ಲ ಮೀರಿ, ಎಲ್ಲವೂ ಒಂದಾದಾಗ ಮಾತ್ರ ಇಂಥ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಪರ್ಕ ಕಲ್ಪಿಸುವ, ಕೇವಲ ಭೌಗೋಳಿಕವಾಗಿರದೇ, ಜನರ ಭಾವನೆಗಳನ್ನೂ ಬೆಸೆಯುವ ಸೇತುವೆ ನಿರ್ಮಾಣಗೊಳ್ಳುತ್ತದೆ. ಚೆನಾಬ್ ನದಿಯ ಹೆಸರು ಎಲ್ಲರ ಮನಸ್ಸಲ್ಲಿ ಇನ್ನು ಹಸಿರಾಗಿಯೇ ಇದೆ ಅಲ್ಲವೇ? ಅದೇ ಕೆಲವು ವಾರಗಳ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು, ಅದಕ್ಕೆ ಬದಲಾಗಿ ಮೊದಲ ಹೆಜ್ಜೆ ಎಂಬಂತೆ ಚೆನಾಬ್ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡದಂತೆ ತಡೆಯಲು ಭಾರತ ಸರಕಾರ ನಿರ್ಣಯಿಸಿತ್ತು; ಅದರಿಂದ ಪಾಕಿಸ್ತಾನಕ್ಕೆ ಸಾಕಷ್ಟು ತೊಂದರೆಯೂ ಆಯಿತು, ನದಿಯ ನೀರನ್ನು ಬಿಡುವಂತೆ ಪಾಕಿಸ್ತಾನ ಈಗಾಗಲೇ ನಾಲ್ಕು ಬಾರಿ ಭಾರತವನ್ನು ಕೇಳಿಕೊಂಡಿದ್ದೂ ಆಯಿತು.

ಆದರೆ ಸದ್ಯಕ್ಕಂತೂ ಭಾರತ ಆ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಯಾವ ಲಕ್ಷಣ ಗಳೂ ಕಾಣುತ್ತಿಲ್ಲ. ಆ ವಿಷಯ ಒಂದು ಕಡೆ ಇರಲಿ. ಚೆನಾಬ್ ಹೆಸರು ಮೊನ್ನೆ ಮೊನ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಭಾರತ-ಪಾಕಿಸ್ತಾನದ ನಡುವೆ ಇರುವ ತಂಟೆ-ತಕರಾರಲ್ಲ, ಬದಲಾಗಿ ಕಾಶ್ಮೀರದ ಜನರ ಜೀವನ ಇನ್ನಷ್ಟು ಹಸನಾಗಲು, ಸುಗಮಗೊಳ್ಳಲು ಅನುಕೂಲಕರ ವಾದ ರೈಲ್ವೆ ಸೇತುವೆಯೊಂದು ತಯಾರಾಗಿ ಲೋಕಾರ್ಪಣೆಗೊಂಡಿದೆ.

ಒಂದು ಕಾಲದಲ್ಲಿ ಅಭಿವೃದ್ಧಿಯನ್ನೇ ಕಾಣದ, ಭಯೋತ್ಪಾದನೆ, ಕಲ್ಲು ತೂರಾಟ ಇತ್ಯಾದಿಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದ ಕಾಶ್ಮೀರ ಮತ್ತು ಅಲ್ಲಿಯ ಜನ ಇಂದು ಪ್ರಗತಿಯ ಮುಖವನ್ನು ಕಾಣು ತ್ತಿದ್ದಾರೆ. ಅಲ್ಲಿಯ ಜನರಲ್ಲಿ ಭರವಸೆಯ ಭಾವ ಮೂಡುತ್ತಿದೆ. ಇತ್ತೀಚಿಗೆ ಲೋಕಾರ್ಪಣೆಗೊಂಡ ಚೆನಾಬ್ ಸೇತುವೆ ವಿಶ್ವದ ಅತಿ ಎತ್ತರದ ಕಮಾನು ಸೇತುವೆ ಎಂಬ ಹೆಮ್ಮೆಗೆ ಪಾತ್ರವಾಗಿದೆ.

ಇದು ಇತ್ತೀಚಿನ ದಿನಗಳಲ್ಲಿ ಭಾರತ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಡಲು ಹಿಡಿದ ಕನ್ನಡಿಯಾಗಿದೆ. ಈ ಸೇತುವೆಯ ಕುರಿತಾಗಿ ಚಿಕ್ಕದಾಗಿ ಹೇಳುವು ದಾದರೆ, ಇದು ಕಣಿವೆ ರಾಜ್ಯದ ಬಾರಾಮು, ಶ್ರೀನಗರ, ಉಧಮಪುರ್ ಪಟ್ಟಣಗಳನ್ನು ಸೇರಿಸುತ್ತದೆ.

ಒಟ್ಟೂ ಇನ್ನೂರ ಎಪ್ಪತ್ತೆರಡು ಕಿಲೋಮೀಟರ್ ರೈಲು ಮಾರ್ಗದಲ್ಲಿ, ಸೇತುವೆಯ ಉದ್ದ ಒಂದೂ ಕಾಲು ಕಿಲೋಮೀಟರ್ ಗಳಿಗಿಂತಲೂ ಸ್ವಲ್ಪ ಹೆಚ್ಚು. ಎತ್ತರ ಮುನ್ನೂರೈವತ್ತು ಮೀಟರ್‌ಗಿಂತಲೂ ಹೆಚ್ಚಾಗಿದ್ದು, ಯೋಜನೆಯ ವೆಚ್ಚ ಸಾವಿರದ ನಾಲ್ಕುನೂರು ಕೋಟಿ ರೂಪಾಯಿ. ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ರೈಲು ಸಂಚಾರಕ್ಕೆ ಅನುಕೂಲಕರವಾಗಿರುವ ಈ ಸೇತುವೆಯ ಆಯುಷ್ಯ ಸುಮಾರು ನೂರ ಇಪ್ಪತ್ತು ವರ್ಷಗಳು.

ಇದರ ಜತೆಗೆ, ಈ ಸೇತುವೆ ಗಂಟೆಗೆ ಇನ್ನೂರ ಅರವತ್ತು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಗೆ ಜಗ್ಗದೆ ನಿಲ್ಲುವಷ್ಟು ಬಲಿಷ್ಠವಾಗಿದ್ದು, ರಿಕ್ಟರ್ ಮಾಪನದಲ್ಲಿ ಎಂಟರವರೆಗಿನ ಭೂಕಂಪಕ್ಕೆ ಪ್ರತಿರೋಧವನ್ನೊಡ್ಡಲು ಸಶಕ್ತವಾಗಿದೆ, ಬಾಂಬ್ ಸೋಟಗಳನ್ನೂ ತಡೆದುಕೊಳ್ಳಬಲ್ಲದ್ದಾಗಿದೆ.

ಅಂದಂತೆ, ಬೆಂಗಳೂರಿನ ಐಐಎಸ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸಂಸ್ಥೆ ಈ ಸೇತುವೆ ಯನ್ನು ವಿನ್ಯಾಸಗೊಳಿಸಿದೆ ಎನ್ನುವುದು ಕನ್ನಡಿಗರು ಹೆಮ್ಮೆ ಪಡಬಹುದಾದ ವಿಷಯ. ಅದರೊಂದಿಗೆ ಇನ್ನೂ ಒಂದು ಖುಷಿಯ ವಿಚಾರ ಎಂದರೆ, ಈ ಸೇತುವೆಯ ಅಡಿಪಾಯದ ಉಸ್ತುವಾರಿ ಹೊತ್ತು ಕಳೆದ ಹದಿನೇಳು ವರ್ಷಗಳಿಂದ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಐಐಎಸ್‌ನ ಪ್ರಾಧ್ಯಾಪಕಿ ಮಾಧವಿ ಲತಾ ಕೂಡ ಕನ್ನಡತಿ.

“ಈ ಸೇತುವೆಯ ಚಿತ್ರ ನೋಡಿದರೆ ಅದರ ಅನುಭವವಾಗುವುದಿಲ್ಲ. ಸೇತುವೆಯನ್ನು ಕಣ್ಣಾರೆ ಕಂಡಾಗ ಮಾತ್ರ ಅದರ ಅಗಾಧತೆಯ ಅರಿವಾಗುತ್ತದೆ" ಎನ್ನುತ್ತಾರೆ ಮಾಧವಿ. ಅದೇ ದಿನ ಇದೇ ಸೇತುವೆಯ ದಕ್ಷಿಣಕ್ಕೆ ಇರುವ ಅಂಜಿ ಸೇತುವೆಯನ್ನು ಕೂಡ ಲೋಕಾರ್ಪಣೆ ಮಾಡಲಾಯಿತು. ಇದರ ವಿಶೇಷತೆ ಎಂದರೆ, ಇದು ಭಾರತದ ಮೊದಲ ರೈಲ್ವೆ ತಂತಿ ಸೇತುವೆ (ಕೇಬಲ್ ಬ್ರಿಜ್). ತೊಂಬ‌ ತ್ತಾರು ತಂತಿಗಳನ್ನು ಬಳಸಿ ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ತಂತಿ ಸೇತುವೆ ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳಬಲ್ಲದಾಗಿದೆ.

ನಮಗೆಲ್ಲ ತಿಳಿದಿರುವಂತೆ ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿ ಕೊರೆಯುವ ಚಳಿ ಇರುತ್ತದೆ. ತಾಪಮಾನ -20 ಡಿಗ್ರಿ ಸೆ.ವರೆಗೆ ಇಳಿದರೂ ಈ ಸೇತುವೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವು ದಿಲ್ಲ. ಈ ಸೇತುವೆ ನಿರ್ಮಾಣದಿಂದಾಗಿ ಜಮ್ಮು ಮತ್ತು ಶ್ರೀನಗರದ ನಡುವಿನ ಪ್ರಯಾಣದ ಅವಧಿ ಮೂರು ಗಂಟೆ ಕಡಿಮೆಯಾಗಿದೆ. ಮೊದಲು ಆರು ತಾಸು ಬೇಕಾಗಿದ್ದ ಜಾಗದಲ್ಲಿ ಈಗ ಮೂರು ತಾಸಿನಲ್ಲಿ ತಲುಪಬಹುದಾಗಿದೆ.

ಅದೇ ದಿನ ‘ವಂದೇ ಭಾರತ್’ ರೈಲು ಕೂಡ ಲೋಕಾರ್ಪಣೆಗೊಂಡಿದ್ದು, ಪ್ರವಾಸಿಗರಿಗೆ ಅನುಕೂಲ ಕರವಾಗಿದೆ. ಜತೆಗೆ ವ್ಯಾಪಾರ, ವ್ಯವಹಾರಕ್ಕೂ ಇದು ಉತ್ತೇಜನ ನೀಡುತ್ತದೆ. ಅಷ್ಟೆಲ್ಲ ಖರ್ಚುಮಾಡಿ, ಆ ಗುಡ್ಡಗಾಡಿನಲ್ಲಿ ಕಷ್ಟಪಡುವುದಕ್ಕಿಂತ, ಅದೇ ದುಡ್ಡಿನಲ್ಲಿ ಸುಸೂತ್ರವಾಗಿರುವ ಜಾಗದಲ್ಲಿ ಸುಲಭದಲ್ಲಿ ಹತ್ತು ಸೇತುವೆ ನಿರ್ಮಿಸಬಹುದಿತ್ತಲ್ಲ ಎಂದು ಕೆಲವರು ಹೇಳಬಹುದು.

ಆದರೆ, ಕಾಶ್ಮೀರದಲ್ಲಾಗಲೀ, ಪೂರ್ವಾಂಚಲದ ರಾಜ್ಯಗಳಲ್ಲಾಗಲೀ, ಗುಡ್ಡಗಾಡಿನ ಪ್ರದೇಶ, ಕಷ್ಟದ ಕೆಲಸ ಎಂದು ಕಡೆಗಣಿಸಲಾಗುವುದಿಲ್ಲ. ಅವು ನಮ್ಮ ದೇಶದ ಒಂದು ಭಾಗ ಎಂಬ ಭಾವನೆ ಬರಬೇಕಾದರೆ ಆ ಪ್ರದೇಶಗಳೊಂದಿಗೆ ಸಂಪರ್ಕವೂ ಅಷ್ಟೇ ಪ್ರಮುಖವಾಗುತ್ತದೆ. ಇಲ್ಲವಾದರೆ, ಅವು ಭೌಗೋಳಿಕವಾಗಿ ನಮ್ಮ ಭಾಗವೇ ಆದರೂ ಹೆಸರಿಗೆ ಮಾತ್ರ ನಮ್ಮದಾಗಿರುತ್ತವೆ.

ಕನ್ಯಾಕುಮಾರಿಗೆ ಅಂಡಮಾನ್ ಸಮೀಪದಲ್ಲಿದ್ದರೂ ದೂರದ ದಿಲ್ಲಿ, ಪಂಜಾಬ್ ಹತ್ತಿರವಾಗುತ್ತವೆ. ಅಲ್ಲಿ ಭೌತಿಕ ಸೇತು ಇಲ್ಲವಾದರೂ ಭಾವದ ಸೇತುವೆ ಕೆಲಸ ಮಾಡುತ್ತದೆ. ಬಹುಶಃ ಅದಕ್ಕಾಗಿಯೇ ಇರಬೇಕು, ತಿಳಿದವರು, ಕವಿಗಳು ಸಂಬಂಧದ ’ಸೇತುವೆ’ ಎಂದರೇ ಹೊರತು ಸಂಬಂಧದ ರಸ್ತೆ, ಭಾವದ ವಿಮಾನ ಎಂದು ಹೇಳಲಿಲ್ಲ. ಭೌತಿಕವಾದ ಸೇತುವೆ ಕಣ್ಣಿಗೆ ಕಾಣಿಸುತ್ತದೆ, ಭಾವನೆಯ ಸೇತುವೆ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಸೇತುವೆ ಸ್ಥಳಗಳನ್ನು ಜೋಡಿಸಿದರೆ ಕಾಣದಿ ದ್ದದ್ದು ಮನಸ್ಸನ್ನು, ಭಾವನೆಯನ್ನು ಬೆಸೆಯುತ್ತದೆ.

ಗೋಚರಿಸುವ ಸೇತುವೆ ಸ್ಥಿರವಾಗಿದ್ದರೆ ಭೂಮಿಯೊಂದಿಗೆ ಬಂಧ, ಅಗೋಚರ ಸೇತು ಗಟ್ಟಿಯಾಗಿ ದ್ದರೆ ಭಾವದೊಂದಿಗೆ ಬಂಧನ ಲಿಷ್ಠವಾಗಿರುತ್ತದೆ.

ಭೌತಿಕ ಸೇತುವೆಯ ನಿರ್ಮಾಣದ ಕೆಲಸವನ್ನು ಸರಕಾರಗಳು ಮಾಡುತ್ತವೆ. ಮನುಷ್ಯ ಮನುಷ್ಯರ ನಡುವಿನ ಭಾವವನ್ನು ಬೆಸೆಯಬೇಕಾದ ಸೇತುವೆಯನ್ನು ಯಾರು ನಿರ್ಮಿಸಬೇಕು? ಮನುಷ್ಯರೇ ತಾನೆ? ಇಂದು ನಾವು ಆ ಕೆಲಸ ಮಾಡುತ್ತಿದ್ದೇವೆಯೇ? “ನಾವು ಸಾಕಷ್ಟು ಗೋಡೆಗಳನ್ನು ಕಟ್ಟು ತ್ತೇವೆ, ಆದರೆ ಸೇತುವೆಯನ್ನಲ್ಲ" ಎಂದು ಐಸಾಕ್ ನ್ಯೂಟನ್ ಹೇಳಿದ್ದರು.

ಒಂದನ್ನೊಂದು ಕೂಡಿಸುವುದು ಸೇತುವೆ, ಕಡಿಯುವುದು ಗೋಡೆ. ಅದಕ್ಕಾಗಿಯೇ ವಿಶ್ವವಿಖ್ಯಾತ ಚೀನಾದ ಗೋಡೆಗಿಂತಲೂ ಸಣ್ಣ ಸೇತುವೆ ಆಕರ್ಷಕ ಎನ್ನಿಸುತ್ತದೆ. ಸೇತುವೆ ನಿರ್ಮಿಸುವುದು ಕಷ್ಟದ ಕೆಲಸ. ಅದಕ್ಕೆ ಶ್ರಮ ಹೆಚ್ಚು ಬೇಕು. ಸೇತುವೆಗೆ ಹೋಲಿಸಿದರೆ ಗೋಡೆ ಕಟ್ಟುವುದು ತೀರಾ ಸುಲಭದ ಕಾರ್ಯ. ಆದರೆ ಕಷ್ಟದ ನಂತರ ಸಿಗುವ ಸುಖಕ್ಕೆ ಸಿಹಿ ಹೆಚ್ಚು. ಸುಲಭವಾಗಿ ಕಟ್ಟಿದ ಗೋಡೆಯನ್ನು ದಾಟಬೇಕಾದರೆ ಮೇಲೆ ಹತ್ತಿ ಜಿಗಿಯಬೇಕು.

ಅದೇ ಕಷ್ಟಪಟ್ಟು ಕಟ್ಟಿದ ಸೇತುವೆಯನ್ನು ದಾಟಬೇಕಾದರೆ ಸುಮ್ಮನೆ ನಡೆದರೂ ಸಾಕು, ಇಲ್ಲ, ಉರುಳಿದರೂ ಸಾಕು. ಇಂದು ತಡೆಗೋಡೆ ಉರುಳಿಸಿ ಸೇತುವೆ ನಿರ್ಮಿಸುವ ಕೆಲಸ ಆಗಬೇಕಾಗಿದೆ.