ಮಗಳನ್ನು ಬೈದ ಎಂದು ಅಳಿಯ ಮೇಲೆ ಹಲ್ಲೆ ನಡೆಸಿ ಕೊಂದ ಮಾವ; ಸಹೋದರರು ಸಾಥ್!
ಕ್ಷುಲಕ ಕಾರಣಕ್ಕೆ ಮಾವ ಹಾಗೂ ಆತನ ಕುಟುಂಬಸ್ಥರು ಅಳಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 31 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ವಿನಯ್ ಗುಪ್ತಾ ಎಂದು ಗುರುತಿಸಲಾಗಿದೆ. ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ಮಗುವಿಗೆ ಔಷಧಿ ನೀಡುವ ಬಗ್ಗೆ ವಾಗ್ವಾದ ನಡೆದಿತ್ತು. ಈ ಸಂಬಂಧ ಕೊಲೆಯಾಗಿದೆ.
ಮೃತ ವಿನಯ್ ಹಾಗೂ ಆತನ ಪತ್ನಿ ರೇಖಾ (ಸಂಗ್ರಹ ಚಿತ್ರ) -
ನವದೆಹಲಿ: ಮಗಳನ್ನು ಬೈದ ಎನ್ನುವ ಕಾರಣಕ್ಕೆ ಮಾವ ಹಾಗೂ ಹೆಂಡತಿಯ ಕುಟುಂಬಸ್ಥರು ಅಳಿಯನನ್ನೇ ಕೊಂದ ಘಟನೆ (Delhi) ದೆಹಲಿಯಲ್ಲಿ (Murder Case) ನಡೆದಿದೆ. ಮೃತ ವ್ಯಕ್ತಿಯನ್ನು 31 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ವಿನಯ್ ಗುಪ್ತಾ ಎಂದು ಗುರುತಿಸಲಾಗಿದೆ. ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ಮಗುವಿಗೆ ಔಷಧಿ ನೀಡುವ ಬಗ್ಗೆ ವಾಗ್ವಾದ ನಡೆದಿತ್ತು. ಈ ಸಮಯದಲ್ಲಿ, ರೇಖಾ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆಯಿಂದ ಹೊರಟು ಹೋಗಿದ್ದಾಳೆ.
ನಂತರ ಆಕೆ ದೆಹಲಿಯ ನಿಹಾಲ್ ವಿಹಾರ್ನಲ್ಲಿರುವ ತನ್ನ ತವರು ಮನೆಗೆ ಹೋಗಿ ಇಬ್ಬರು ಸಹೋದರರು, ಅತ್ತಿಗೆ, ತಂದೆ ಮತ್ತು ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಪಸ್ ತನ್ನ ಮನೆಗೆ ಬಂದಿದ್ದಾಳೆ. ಕುಟುಂಬ ಸದಸ್ಯರೊಂದಿಗೆ ಮನೆಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳಲ್ಲಿ ರೇಖಾ ಕೆಂಪು ಸೂಟ್ ಧರಿಸಿದ್ದರೆ, ಅವರ ಅತ್ತಿಗೆ ನೀಲಿ ಸೂಟ್ ಧರಿಸಿರುವುದು ಕಂಡುಬಂದಿದೆ. ರೇಖಾ ಅವರ ಇಬ್ಬರು ಸಹೋದರರು, ಅವರ ತಂದೆ ಮತ್ತು ಇನ್ನೊಬ್ಬ ವ್ಯಕ್ತಿ ಕಾರಿನಲ್ಲಿರುವುದು ಸಹ ಈ ದೃಶ್ಯಗಳಲ್ಲಿ ಕಂಡುಬಂದಿದೆ.
ರೇಖಾ ಮನೆಗೆ ಬರುತ್ತಿದ್ದಂತೆ ಜೋರಾಗಿ ಕೂಗಾಡಲು ಪ್ರಾರಂಭಿಸಿದ್ದಾಳೆ. ಆಕೆಯ ಸಹೋದರರು ಹಾಗೂ ತಂದೆ ವಿನಯ್ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ವಿನಯ್ ತಾಯಿ ಹೇಳಿಕೆ ಪ್ರಕಾರ ಮನೆಗೆ ಬಂದ ಅತಿಥಿಗಳಿಗೆ ನೀರು ತರಲು ಒಳಗೆ ಹೋದಾಗ ವಿನಯ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ವಿನಯ್ ತೀವ್ರ ಅಸ್ವಸ್ಥರಾಗಿದ್ದರು. ಶೀಘ್ರವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.
ನಾಪತ್ತೆಯಾಗಿದ್ದ ವೃದ್ಧ ದಂಪತಿ ಮನೆಯಲ್ಲೇ ಶವವಾಗಿ ಪತ್ತೆ; ಜೋಡಿ ಕೊಲೆಗೆ ಬೆಚ್ಚಿಬಿದ್ದ ಸ್ಥಳೀಯರು
ವಿನಯ್ ನೋಯ್ಡಾ ಮೂಲದ ಸಾಫ್ಟ್ವೇರ್ ಕಂಪನಿಯಾದ ಅಡೋಬ್ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ವಾರ್ಷಿಕ ಸುಮಾರು 60 ಲಕ್ಷ ರೂ.ಗಳ ಪ್ಯಾಕೇಜ್ ಹೊಂದಿದ್ದರು. ಮೂರುವರೆ ವರ್ಷಗಳ ಹಿಂದೆ ರೇಖಾಳನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ದೆಹಲಿಯ ಮನೆಯಲ್ಲಿ, ವಿನಯ್ ಮತ್ತು ಅವನ ಹೆಂಡತಿ ಮನೆಯ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರೆ, ವಿನಯ್ ತಂದೆ ತಾಯಿ ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದರು. ಕುಟುಂಬಸ್ಥರ ಪ್ರಕಾರ ಈ ಹಿಂದೆಯೂ ರೇಖಾ ಹಲವು ವಿಷಯಕ್ಕೆ ಜಗಳ ಮಾಡುತ್ತಿದ್ದಳು. ಆಕೆಯ ಸಹೋದರ ಈ ಹಿಂದೆ ಸಣ್ಣಪುಟ್ಟ ಜಗಳಗಳಿಗೆ ವಿನಯ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಜನರನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.