ಕೊಲೆ ಮಾಡಲು ಮಾಸ್ಟರ್ ಪ್ಲಾನ್; ವಿದೇಶಕ್ಕೆ ಹೋಗದಂತೆ ತಡೆಯಲು ಭಾವಿ ಪತಿಯ ಪಾಸ್ಪೋರ್ಟ್ ಕದ್ದಿದ್ದ ಸಿಯಾ, ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲು
ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಸಾವನ್ನಪ್ಪಿದ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ ಅವರನ್ನು ಕಂದಕಕ್ಕೆ ತಳ್ಳಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರೆಂದು ಪೊಲೀಸರು ಆರೋಪಿಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಕರಣದ ಹಿಂದೆ ಆಸ್ತಿ ಹಾಗೂ ವಿಮಾ ಹಣದ ಉದ್ದೇಶವಿದೆಯೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ.
ಆರೋಪಿ ಸಿಯಾ ಗೋಯಲ್ -
ಪುಣೆ, ಜೂನ್ 24: ಮಹಾರಾಷ್ಟ್ರ (Maharashtra)ದ ಲೋಹಗಢ ಕೋಟೆ (Lohagad Fort)ಯ ಪ್ರಪಾತಕ್ಕೆ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿ 26 ವರ್ಷದ ಕೇತನ್ ವಿಶಾಲ್ ಅಗರ್ವಾಲ್ (Ketan Vishal Agrawal) ಸಾವನ್ನಪ್ಪಿದ ಪ್ರಕರಣವು ಈಗ ಭೀಕರ ಕೊಲೆ ಸಂಚಾಗಿ ಮಾರ್ಪಟ್ಟಿದೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chetan Choudhary) ಸೇರಿ ಈ ಉದ್ಯಮಿಯನ್ನು ಕಂದಕಕ್ಕೆ ತಳ್ಳಿ ಅಪಘಾತ ಎಂದು ಬಿಂಬಿಸಲು ಯತ್ನಿಸಿರುವುದು ಬಯಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಈ ಕುರಿತು ಮೃತನ ತಂದೆ ವಿಶಾಲ್ ಅಗರ್ವಾಲ್ ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. "ಜೂನ್ 6 ರಂದು ಕೇತನ್ ಮತ್ತು ಸಿಯಾ ಪ್ರಿ ವೆಡ್ಡಿಂಗ್ ಫೋಟೋಶೂಟ್ಗಾಗಿ ಇಂಡೋನೇಷ್ಯಾದ ಬಾಲಿಗೆ ಹೊರಡಬೇಕಿತ್ತು. ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗುವಾಗ ಕಾರಿನಲ್ಲಿ ಎಲ್ಲರ ಪಾಸ್ಪೋರ್ಟ್ಗಳು ಒಂದೇ ಪೌಚ್ನಲ್ಲಿದ್ದವು. ಮಧ್ಯದಲ್ಲಿ ಫುಡ್ ಮಾಲ್ವೊಂದರ ಬಳಿ ಕಾರು ನಿಲ್ಲಿಸಿದಾಗ, ಮೊಬೈಲ್ ಮರೆತಿದ್ದೇನೆ ಎಂದು ಸಿಯಾ ಕಾರಿನ ಬಳಿ ಒಬ್ಬಳೇ ಹೋಗಿದ್ದಳು. ಏರ್ಪೋರ್ಟ್ ತಲುಪಿದಾಗ ಕೇವಲ ಕೇತನ್ ಪಾಸ್ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು. ಇದರಿಂದಾಗಿ ಬಾಲಿಗೆ ಹೋಗಲಾಗದೆ ಆತ ಮರಳಬೇಕಾಯಿತು. ಇದು ಸಿಯಾಳ ಮೊದಲ ಸಂಚಾಗಿತ್ತು," ಎಂದು ತಂದೆ ಆರೋಪಿಸಿದ್ದಾರೆ.
ಬಾಲಿ ಪ್ರವಾಸ ರದ್ದಾದ ನಂತರ, ಜೂನ್ 19 ರಂದು ತನ್ನ ಜನ್ಮದಿನ ಎಂಬ ಕಾರಣಕ್ಕೆ ಜೂನ್ 18 ರಂದು ಪ್ರೀ-ಬರ್ತ್ಡೇ ಆಚರಣೆಗಾಗಿ ಸಿಯಾ ಹಠ ಹಿಡಿದು ಕೇತನ್ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಸುಮಾರು 400 ಅಡಿ ಆಳದ ಕಂದಕಕ್ಕೆ ಆತನನ್ನು ತಳ್ಳಲಾಗಿದೆ. ಆರಂಭದಲ್ಲಿ ಜೋರಾದ ಗಾಳಿಗೆ ಸಿಲುಕಿ ಆತ ಆಕಸ್ಮಿಕವಾಗಿ ಫೋಟೋ ತೆಗೆದುಕೊಳ್ಳುವಾಗ ಬಿದ್ದಿದ್ದಾನೆ ಎಂದು ಸಿಯಾ ಲೋನಾವಾಲಾ ಪೊಲೀಸರಿಗೆ ಕಥೆ ಕಟ್ಟಿದ್ದಳು.
ಆದರೆ ಕೇತನ್ ಶವ ತಂದಾಗ ಸಿಯಾಳ ಮುಖದಲ್ಲಿ ಯಾವುದೇ ದುಃಖದ ಭಾವನೆ ಇರಲಿಲ್ಲ. ಈ ನಡವಳಿಕೆಯೇ ನಮಗೆ ಮೊದಲ ಅನುಮಾನ ತರಿಸಿತು ಎಂದು ತಂದೆ ಹೇಳಿದ್ದಾರೆ. ರಾಜಸ್ಥಾನದ ಅರಮನೆಯೊಂದರಲ್ಲಿ ನವೆಂಬರ್ನಲ್ಲಿ ಇವರ ಭವ್ಯ ವಿವಾಹ ನಿಶ್ಚಯವಾಗಿತ್ತು. ಯುವತಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿರುವುದು ಸಿಯಾ ಕುಟುಂಬಕ್ಕೆ ತಿಳಿದಿದ್ದರೂ, ಆಕೆಯನ್ನು ಶ್ರೀಮಂತ ಉದ್ಯಮಿಯೊಂದಿಗೆ ಮದುವೆ ಮಾಡಿಸಿ ಆಸ್ತಿ ಹಸ್ತಾಂತರಿಸಿಕೊಳ್ಳಲು ಇಡೀ ಕುಟುಂಬವೇ ಈ ವ್ಯವಸ್ಥಿತ ಹಾಗೂ ಕ್ರೂರ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ಮೃತನ ತಂದೆ ದೂರಿದ್ದಾರೆ.
ಈ ಆಘಾತಕಾರಿ ಹತ್ಯೆಯ ಹಿಂದೆ ಕೇವಲ ಅನೈತಿಕ ಸಂಬಂಧ ಮಾತ್ರವಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ವಿಮಾ ಹಣವನ್ನು ಲೂಟಿ ಮಾಡುವ ವ್ಯವಸ್ಥಿತ ಪ್ಲಾನ್ ಇತ್ತೇ ಎಂಬ ಆಯಾಮದಲ್ಲೂ ಪುಣೆ ಗ್ರಾಮಾಂತರ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.