UP Crime: ಅಶ್ಲೀಲ ಕೃತ್ಯವನ್ನು ಪ್ರಶ್ನಿಸಿದ್ದೇ ತಪ್ಪಾಯಿತು: ದಂಪತಿಯ ಹತ್ಯೆಗೈದ ʼಮೆಂಟಲ್ʼ
ಮಹಿಳೆಯರೊಂದಿಗೆ ಅಶ್ಲೀಲ ಕೃತ್ಯದಲ್ಲಿ ತೊಡಗಿರುವುದನ್ನು ಪ್ರಶ್ನಿಸಿದ್ದ ದಂಪತಿಯನ್ನು ಹತ್ಯೆಗೈದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ 'ಮೆಂಟಲ್’ ಎಂದೇ ಕರೆಯಲ್ಪಡುವ ಆಕಾಶ್ ಶರ್ಮಾ ಎಂದು ಗುರುತಿಸಲಾಗಿದೆ. ‘ಗ್ಯಾಂಗ್ಸ್ ಆಫ್ ವಾಸ್ಸೇಪುರ್’ ಚಿತ್ರದ ಸರ್ದಾರ್ ಖಾನ್ನಂತೆ ಈತ ಕೂಡ ಮಹಿಳಾ ಲಂಪಟನಾಗಿದ್ದು, ಹಲವಾರು ಅಪರಾಧದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ.

ಲಖನೌ: ಮಹಿಳೆಯರೊಂದಿಗೆ ಅಶ್ಲೀಲ ಕೃತ್ಯದಲ್ಲಿ ತೊಡಗಿರುವುದನ್ನು ಪ್ರಶ್ನಿಸಿದ್ದ ದಂಪತಿಯನ್ನು ಹತ್ಯೆಗೈದ ವ್ಯಕ್ತಿಯನ್ನು ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ಪೊಲೀಸರು ಬಂಧಿಸಿದ್ದಾರೆ. ಆರೋಪಿ ʼಮೆಂಟಲ್’ (Mental) ಎಂದೇ ಕರೆಯಲ್ಪಡುವ ಆಕಾಶ್ ಶರ್ಮ ಎಂದು ಗುರುತಿಸಲಾಗಿದೆ. ‘ಗ್ಯಾಂಗ್ಸ್ ಆಫ್ ವಾಸ್ಸೇಪುರ್’ (Gangs of Wasseypur) ಚಿತ್ರದ ಸರ್ದಾರ್ ಖಾನ್ನಂತೆ ಈತ ಕೂಡ ಮಹಿಳಾ ಲಂಪಟನಾಗಿದ್ದು, ಹಲವಾರು ಅಪರಾಧದಲ್ಲಿ ಭಾಗಿಯಾಗಿದ್ದ.ಈತ ತನ್ನ ಸಹಚರರೊಂದಿಗೆ ಸೇರಿ ದಂಪತಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆಕಾಶ್ ಶರ್ಮ ಮತ್ತು ಆತನ ಇಬ್ಬರು ಸಹಚರರು ಜೂನ್ 3ರಂದು ರಾತ್ರಿ 10.30ರ ಸುಮಾರಿಗೆ ನಿರ್ಮಾಣ ಹಂತದ ಮನೆಯೊಂದರ ತಾರಸಿಯಲ್ಲಿ ಅಪರಿಚಿತ ಮಹಿಳೆಯರೊಂದಿಗೆ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದರು. ಇವರು ಮದ್ಯದ ಅಮಲಿನಲ್ಲಿದ್ದರು. ಇಲ್ಲಿಂದ ಬರುತ್ತಿದ್ದ ಶಬ್ದ ಕೇಳಿ ಎಚ್ಚರಗೊಂಡ ಹತ್ತಿರದ ನಿವಾಸಿಗಳಾದ ಶಿವಶಕ್ತಿ ಪಾಠಕ್ (31) ಮತ್ತು ಅವರ ಪತ್ನಿ ಪೂಜಾ ತಮ್ಮ ಮನೆಯಿಂದ ಹೊರಗೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ.
ತಮ್ಮ ಚಟುವಟಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿಗಳು ಶಿವಶಕ್ತಿ ಅವರ ಮನೆಗೆ ನುಗ್ಗಿ ಅವರು ಮತ್ತು ಅವರ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಶಿವಶಕ್ತಿ ಅವರ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಭಾನುವಾರ ಸಾವನ್ನಪ್ಪಿದ್ದರು. ಈ ಕುರಿತು ಶಿವಶಕ್ತಿ ಅವರ ಸಹೋದರ ಸುಧಾಂಶು ಪಾಠಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಧಾಂಶು ಚೇತನಾ ಕಾಲೋನಿಯ ನಿವಾಸಿಯಾಗಿದ್ದ ಆರೋಪಿಗಳಾದ ಆಕಾಶ್ ಶರ್ಮಾ, ದೀಪಕ್ ಯಾದವ್ ಹಾಗೂ ಇನ್ನೋರ್ವ ಪಿಲಿಭಿತ್ ಸಮೀಪದ ನಕತಿಯಾ ಗ್ರಾಮದವನೆಂದು ಶಂಕಿಸಲಾಗಿದ್ದು, ಇದರಲ್ಲಿ ಆಕಾಶ್ ಶರ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಕ್ಯಾಂಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Israel Attack: ಇರಾನ್ ಸೇನಾ ನೆಲೆಗಳು, ಪರಮಾಣು ಶಸ್ತ್ರಾಸ್ತ್ರಗಾರಗಳ ಮೇಲೆ ಇಸ್ರೇಲ್ ದಾಳಿ
ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆಕಾಶ್ ಶರ್ಮಾನ ಬಗ್ಗೆ ಸ್ಥಳೀಯರಲ್ಲಿ ಭಯವಿದೆ ಎನ್ನಲಾಗಿದೆ. ದಂಪತಿಯ ಹತ್ಯೆ ಪ್ರಕರಣ ಅನುಮಾನಾಸ್ಪದವಾಗಿದೆ. ಯಾಕೆಂದರೆ ಮರಣೋತ್ತರ ವರದಿಯಲ್ಲಿ ಸಾವಿನ ಕಾರಣ ದೃಢಪಟ್ಟಿಲ್ಲ ಎಂದು ಇನ್ಸ್ಪೆಕ್ಟರ್ ರಾಜೇಶ್ ಕುಮಾರ್ ತಿಳಿಸಿದ್ದು, ಈ ಬಗ್ಗೆ ಸ್ಥಳೀಯರು ಯಾವುದೇ ಮಾಹಿತಿ ನೀಡದಿರುವುದು ಕೂಡ ತನಿಖೆಯಲ್ಲಿ ಸವಾಲಾಗಿದೆ ಎಂದು ಹೇಳಿದ್ದಾರೆ.