ಇಂಡೋನೇಷ್ಯಾದಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟ: 8 ವಿಮಾನ ನಿಲ್ದಾಣಗಳು ಬಂದ್, 1.70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ
ಇಂಡೋನೇಷ್ಯಾದಲ್ಲಿ 'ಅನಕ್ ಕ್ರಾಕಟಾವ' ಜ್ವಾಲಾಮುಖಿ ಭೀಕರವಾಗಿ ಸ್ಫೋಟಗೊಂಡಿದ್ದು, ಸಾವಿರಾರು ಅಡಿ ಎತ್ತರಕ್ಕೆ ದಟ್ಟ ಬೂದಿ ಹಾಗೂ ಹೊಗೆ ಚಿಮ್ಮಿದೆ. ಇದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ದೇಶದ 8 ಪ್ರಮುಖ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದ್ದು, 1,500ಕ್ಕೂ ಹೆಚ್ಚು ವಿಮಾನ ಸೇವೆಗಳು ಸಂಪೂರ್ಣ ರದ್ದಾಗಿವೆ. ಇದರಿಂದಾಗಿ ಸುಮಾರು 1.70 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿ ತೀವ್ರ ಪರದಾಡುವಂತಾಗಿದೆ.
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ -
ಜಕಾರ್ತ: ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವೆ ಇರುವ ಸುಂದಾ ಜಲಸಂಧಿಯ ಅಪಾಯಕಾರಿ 'ಅನಕ್ ಕ್ರಾಕಟಾವ' (Anak Krakatau) ಜ್ವಾಲಾಮುಖಿ ಬೃಹತ್ ಪ್ರಮಾಣದಲ್ಲಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಆಕಾಶಕ್ಕೆ ಸಾವಿರಾರು ಅಡಿ ಎತ್ತರಕ್ಕೆ (Indonesia volcano) ದಟ್ಟವಾದ ಜ್ವಾಲಾಮುಖಿ ಬೂದಿ ಮತ್ತು ಹೊಗೆ ಆವರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಜಕಾರ್ತದ ಸೋಕರ್ನೋ-ಹಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಒಟ್ಟು 8 ವಿಮಾನ ನಿಲ್ದಾಣಗಳ ಕಾರ್ಯಾಚರಣಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
1.70 ಲಕ್ಷ ಪ್ರಯಾಣಿಕರು ಪರದಾಟ, 1,500ಕ್ಕೂ ಹೆಚ್ಚು ವಿಮಾನ ರದ್ದು
ಭಾರೀ ಸ್ಫೋಟದಿಂದಾಗಿ ಆಕಾಶದಲ್ಲಿ ಸುಮಾರು 50,000 ಸಾವಿರ ಅಡಿ ಎತ್ತರದವರೆಗೆ ಬೂದಿ ಹಾಗೂ ಹೊಗೆ ಹರಡಿರುವುರಿಂದ ವಿಮಾನ ಹಾರಾಟಕ್ಕೆ ತೀವ್ರ ಅಡಚಣೆಯಾಗಿದೆ. ಇದರಿಂದಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಸೇವೆಗಳು ಸೇರಿದಂತೆ ಒಟ್ಟು 1,558ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಸುಮಾರು 1,70,000 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಜ್ವಾಲಾಮುಖಿಯ ತೀವ್ರತೆ
ಅನಾಕ್ ಕ್ರಾಕಟೌ ಜ್ವಾಲಾಮುಖಿಯು ಕಳೆದ ಶುಕ್ರವಾರದಿಂದ ಸಕ್ರಿಯವಾಗಿದ್ದು, ಸಣ್ಣ ಪ್ರಮಾಣದಲ್ಲಿ ಜ್ವಾಲಾಮುಖಿ ಚಿಮ್ಮುತಿತ್ತು. ನಂತರ ಭಾನುವಾರ ಬೆಳಗ್ಗೆ 3: 53ಕ್ಕೆ 30 ಸೆಕೆಂಡುಗಳ ಕಾಲ ಜ್ವಾಲಾಮುಖಿ ಸ್ಪೋಟಿಸಿತು. ಇದಾದ ಸುಮಾರು 3 ಗಂಟೆಗಳ ನಂತರ ಮತ್ತೆ ಎರಡನೇ ಭಾರಿ ಸಣ್ಣ ಪ್ರಮಾಣದಲ್ಲಿ ಸ್ಫೋಟ್ ಸಂಭವಿಸಿದೆ ಎಂದು ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆ ತಿಳಿಸಿದೆ. ಜ್ವಾಲಾಮುಖಿಯ ಲಾವಾರಸ ಹಾಗೂ ಬೂದಿಯ ಮೋಡಗಳು ಜಕಾರ್ತ, ಬಾಂಡುಂಗ್ ಮತ್ತು ಲಂಪುಂಗ್ ಪ್ರಾಂತ್ಯದವರೆಗೆ ಆವರಿಸಿಕೊಂಡಿದೆ.
ಜಕಾರ್ತದ ಸೋಕನೋ-ಹಟ್ಟಾ ಮತ್ತು ಹಲೋಮ್ ಪರ್ದಾನಕುಸುಮಾ, ಬಾಂಡುಂಗ್ನ ಹುಸೇನ್ ಶಾಸ್ತ್ರನಗರ ಹಾಗೂ ಲಂಪಂಗ್ನ ರಾದಿನ್ ಇಂಟೆನ್ II ಸೇರಿದಂತೆ 8 ನಿಲ್ದಾಣಗಳು ಸ್ಥಗಿತಗೊಂಡಿವೆ. ಬಾಲಿಯ ಬಾಲಿ ವಿಮಾಣ ನಿಲ್ದಾಣದ ಮೇಲೆಯೂ ಇದರ ಭಾಗಶಃ ಪರಿಣಾಮ ಬೀರಿದೆ. ಇದರೊಂದಿಗೆ ಸಿಂಗಾಪುರ, ಸಿಡ್ನಿ, ದೋಹಾ, ಬ್ಯಾಂಕಾಕ್ ಮುಂತಾದ ಪ್ರಮುಖ ನಗರಗಳ ಸಂಪರ್ಕ ಕಲ್ಪಿಸುವ ವಿಮಾಣ ಸೇವೆಗಳು ರದ್ದಾಗಿವೆ. ಜ್ವಾಲಾಮುಖಿ ಬೂದಿಯ ದಟ್ಟಣೆ ತೀವ್ರವಾಗಿರುವ ಪ್ರದೇಶಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸಲು ಸರ್ಕಾರ ಸೂಚಿಸಿದೆ. ಅಲ್ಲದೆ ಜ್ವಾಲಾಮುಖಿಯ ಸುತ್ತಲಿನ 3 ಕಿಲೋಮೀಟರ್ ವ್ಯಾಪ್ತಿಯನ್ನು ಅಪಾಯಕಾರಿ ವಲಯ ಎಂದು ಘೋಷಿಸಿ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ.
ವಿಮಾನಗಳ ಜೆಟ್ ಎಂಜಿನ್ಗಳಿಗೆ ಜ್ವಾಲಾಮುಖಿ ಬೂದಿ ಸಿಲುಕಿದರೆ ಎಂಜಿನ್ ಸಂಪೂರ್ಣವಾಗಿ ಕೈಕೊಡುವ ಹಾಗೂ ದೃಷ್ಟಿಗೋಚರತೆ ಶೂನ್ಯವಾಗುವ ಅಪಾಯವಿರುತ್ತದೆ. ಹೀಗಾಗಿ ಇಂಡೋನೇಷ್ಯಾದ ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ವಿಮಾನ ಸಂಚಾರವನ್ನು ತಡೆಹಿಡಿದಿದೆ. ವಾತಾವರಣ ತಿಳಿಯಾಗುವವರೆಗೆ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ಟಿಕೆಟ್ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ವಿನಂತಿಸಲಾಗಿದೆ.