ಖಲಿಸ್ತಾನಿ ಉಗ್ರ ಪನ್ನೂನ್ ಹತ್ಯೆಗೆ ಸಂಚು; ಅಮೆರಿಕದ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಭಾರತೀಯ
ಅಮೆರಿಕದ ಪ್ರಜೆ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅಮೆರಿಕದ ಕೋರ್ಟ್ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಶ್ ಯಾದವ್ ಎಂಬಾತನ ಸೂಚನೆಯಂತೆ ನಿಖಿಲ್ ಗುಪ್ತಾ ಈ ಹತ್ಯೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿತ್ತು.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಅಮೆರಿಕದ ಪ್ರಜೆ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ (Gurpatwant Singh Pannun) ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅಮೆರಿಕದ ಕೋರ್ಟ್ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮ್ಯಾನ್ಹ್ಯಾಟನ್ ನ ನ್ಯಾಯಾಲಯದಲ್ಲಿ ಶುಕ್ರವಾರ ಹಾಜರಾದ 54 ವರ್ಷದ ಗುಪ್ತಾ, ಸುಪಾರಿ ಹಂತಕನ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ ಆರೋಪ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳನ್ನ ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕದ ಕೋರ್ಟ್ ತಿಳಿಸಿದೆ.
ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಶ್ ಯಾದವ್ ಎಂಬಾತನ ಸೂಚನೆಯಂತೆ ನಿಖಿಲ್ ಗುಪ್ತಾ ಈ ಹತ್ಯೆ ಸಂಚು ರೂಪಿಸಿದ್ದ. ಪನ್ನೂನ್ ಹತ್ಯೆಗಾಗಿ 1,00,000 ಅಮೆರಿಕನ್ ಡಾಲರ್ ಸುಪಾರಿ ನೀಡಲು ಗುಪ್ತಾ ಮುಂದಾಗಿದ್ದ. ಆದರೆ, ಅವರು ಸಂಪರ್ಕಿಸಿದ ವ್ಯಕ್ತಿ ಅಮೆರಿಕದ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಪರ ಕೆಲಸ ಮಾಡುತ್ತಿದ್ದ ಗುಪ್ತಚರನಾಗಿದ್ದರಿಂದ ಈ ಸಂಚು ಬಯಲಿಗೆ ಬಂದಿತ್ತು. ಜೂನ್ 2024 ರಲ್ಲಿ ಜೆಕ್ ಗಣರಾಜ್ಯದಿಂದ ಗುಪ್ತಾರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಅಮೆರಿಕದ ಪ್ರಾಸಿಕ್ಯೂಟರ್ಗಳ ಪ್ರಕಾರ, ಗುಪ್ತಾ ಅವರು ಭಾರತೀಯ ಸರ್ಕಾರಿ ಉದ್ಯೋಗಿಯ ನಿರ್ದೇಶನದ ಮೇರೆಗೆ ಕೆಲಸ ಮಾಡಿ ನ್ಯೂಯಾರ್ಕ್ನಲ್ಲಿ ನೆಲೆಸಿರುವ ವಕೀಲ ಮತ್ತು ರಾಜಕೀಯ ಕಾರ್ಯಕರ್ತರಾಗಿರುವ ಭಾರತೀಯ ಮೂಲದ ಅಮೆರಿಕದ ಪ್ರಜೆಯ ಹತ್ಯೆಗೆ ವ್ಯವಸ್ಥೆ ಮಾಡಿದ್ದರು.
ಭಾರತ ಸರ್ಕಾರ ಏನು ಹೇಳುತ್ತೆ?
ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ಮೊದಲೇ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯ ಅಧಿಕಾರಿ ವಿಕಾಶ್ ಯಾದವ್ ಅವರ ಹೆಸರೂ ಉಲ್ಲೇಖವಾಗಿದ್ದು, ಅವರು ಭಾರತದಲ್ಲಿಯೇ ಇರುವುದಾಗಿ ವರದಿಯಾಗಿದೆ.
"ದೆಹಲಿಯನ್ನು ಖಲಿಸ್ತಾನವನ್ನಾಗಿ ಮಾಡುತ್ತೇವೆ"; ಬೆಳ್ಳಂಬೆಳಗ್ಗೆ ಹತ್ತಾರು ಶಾಲೆಗಳಿಗೆ ಬಾಂಬ್ ಬೆದರಿಕೆ!
ಭಾರತದ ಅಧಿಕಾರಿಗಳು ಪನ್ನುನನ್ನು ಭಾರತದ ಪ್ರಾಥಮಿಕ ಭಯೋತ್ಪಾದನಾ ವಿರೋಧಿ ಕಾನೂನಾದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಎಂದು ಹೆಸರಿಸಿದ್ದಾರೆ. ಆತನ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಮತ್ತು ನವದೆಹಲಿಯು ಪ್ರತ್ಯೇಕ ಸಿಖ್ ರಾಜ್ಯವಾದ ಖಲಿಸ್ತಾನ್ ರಚನೆಗೆ ಕರೆ ನೀಡುವ ಮೂಲಕ ಹಿಂಸಾಚಾರ ಮತ್ತು ಪ್ರತ್ಯೇಕತಾವಾದವನ್ನು ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದೆ.