ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಜೀವ ಭಯವಿದೆʼʼ: ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ; ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ ಹೇಳಿದ್ದೇನು?

Hanur Encounter: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ವೇಳೆ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮಹಿಮಾ ದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಯಬಿಟ್ಟಿದ್ದಾನೆ. ಜತೆಗೆ ತನಗೆ ಜೀವ ಬೆದರಿಕೆ ಇದೆ ಎಂದಿದ್ದಾನೆ.

ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ

ಮಹಿಮಾ ದಾಸ್ ಮತ್ತು ಎನ್‌ಕೌಂಟರ್‌ ಖಂಡಿಸಿ ನಡೆದ ಪ್ರತಿಭಟನೆ -

Ramesh Ballamoole
Ramesh Ballamoole Aug 18, 2026 6:07 PM

ಬೆಂಗಳೂರು, ಆ. 18: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ (Hanur Encounter) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಎನ್‌ಕೌಂಟರ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಮಹಿಮ ದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಯಬಿಟ್ಟಿದ್ದಾನೆ. ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾನೆ (Viral Video). ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆಗಸ್ಟ್‌ 15ರಂದು ಬೆಳಗ್ಗಿನ ಜಾವ ನಡೆದ ಶೂಟೌಟ್ ವೇಳೆ ಮೃತ ಮೂವರ ಜತೆ ಇದ್ದ ಮಹಿಮ ದಾಸ್ ಬಳಿಕ ಪರಾರಿಯಾಗಿದ್ದ. ನಂತರ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಸಚಿವ ಪುಟ್ಟರಂಗಶೆಟ್ಟಿ ಕೂಡ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು. ಅದಾದ ಬಳಿಕ ಮಹಿಮ ದಾಸ್ ಮತ್ತೆ ನಾಪತ್ತೆಯಾಗಿದ್ದ. ಈಗಲೂ ಆತ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಾಗಿಲ್ಲ. ಆತ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಬಿಟ್ಟಿದ್ದಾನೆ. ಈ ವಿಡಿಯೊದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾವಿದ್ದು, ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳುವ ಸಾಧ್ಯತೆ ದಟ್ಟವಾಗಿದೆ.

ಮಹಿಮ ದಾಸ್ ವಿಡಿಯೊ:



ಮಹಿಮಾ ದಾಸ್‌ ಹೇಳಿದ್ದೇನು?

ʼʼಆಗಸ್ಟ್‌ 15ರ ಬೆಳಗಿನ ಜಾವ 5:30. ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಆಗಲೇ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಗುಂಡಿನ ದಾಳಿ ನಡೆಸಿದರು. ಇದರಿಂದ ಭಯಗೊಂಡು ಓಡಿ ಹೋದೆ. 5 ನಿಮಿಷ ಆದ್ಮೇಲೆ ಯಾವುದೇ ಶಬ್ದ ಇರಲಿಲ್ಲ. ಮನೆಗೆ ಓಡಿ ಬಂದಿದ್ದ ನನಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿದರು. ಇದೀಗ ಅರಣ್ಯ ಇಲಾಖೆಯವರು ಸಾಕ್ಷಿ ಆಗಲು ನನ್ನನ್ನು ಹುಡುಕುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ನನಗೆ ಭಯವಾಗುತ್ತಿದೆ. ಪೊಲೀಸರು ನನಗೆ ರಕ್ಷಣೆ ಕೊಡಬೇಕುʼʼ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೊ ಸಂಚಲನ ಮೂಡಿಸಿದೆ. ಮಹಿಮ ದಾಸ್‌ ಎಲ್ಲಿಂದ ಈ ವಿಡಿಯೊ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ.

ಹನೂರಿನಲ್ಲಿ ಮೂವರ ಎನ್‌ಕೌಂಟರ್‌: ಮೃತರ ಕುಟುಂಬಸ್ಥರ ಮನವೊಲಿಸಲು ಶಾಸಕ ಮಂಜುನಾಥ್‌ ಕೊನೆಗೂ ಯಶಸ್ವಿ

ಏನಿದು ಪ್ರಕರಣ?

ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆ ಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ಶನಿವಾರ (ಆಗಸ್ಟ್‌ 15) ಬೆಳಗಿನ ಜಾವ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿರುವ ಕುರಿತು ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೇಟೆಗಾರರನ್ನು ಹಿಡಿಯಲು ಮುಂದಾದಾಗ ಅವರು ಗುಂಡಿನ ದಾಳಿ ನಡೆಸಿದ್ದರು. ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆಯವರು ಪ್ರತಿದಾಳಿ ನಡೆಸಿದಾಗ ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂತೋನಿ ಸ್ವಾಮಿ, ಪೀಟರ್, ಕುಮಾ‌ರ್ ಮೃತಪಟ್ಟಿದ್ದರು.

ಚಾಮರಾಜನಗರ ಶೂಟೌಟ್‌: ಮೃತಪಟ್ಟವರು ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದ ಸಚಿವ ರಾಮಲಿಂಗಾ ರೆಡ್ಡಿ

ಸದ್ಯ ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ್ದು, ಮೃತರ ಕುಟುಂಬಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆರೋಪ ಹೊರಿಸಿದ್ದಾರೆ. ಮೃತರು ಕೃಷಿಕರಾಗಿದ್ದು, ಸಿಬ್ಬಂದಿ ಯಾವುದೇ ಪ್ರಚೀದನೆ ಇಲ್ಲದೆ ದಾಳಿ ನಡೆಸಿದ್ದರು ಎಂದಿದ್ದಾರೆ. ಇತ್ತ ಅಧಿಕಾರಿಗಳು ಸಾಕ್ಷಿ ಬಿಡುಗಡೆ ಮಾಡಿದ್ದು, ಮೃತರು ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶಿಸಿ ಬೇಟೆಯಾಡಿದ್ದರು ಎಂದು ಹೇಳಿದ್ದಾರೆ. ಸ್ಥಳದಲ್ಲಿ ವಶಪಡಿಸಿಕೊಂಡ ಜಿಂಕೆ ಮಾಂಸ, ಕೋವಿಗಳನ್ನು ಪ್ರದರ್ಶಿಸಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.