Varamahalakshmi festival: ವರಮಹಾಲಕ್ಷ್ಮೀ ಹಬ್ಬಕ್ಕೆ ಭಕ್ತರ ಖರೀದಿ ಸಂಭ್ರಮ; ಹೂವು, ಹಣ್ಣು-ಹಂಪಲುಗಳಿಗೆ ಭರ್ಜರಿ ಬೇಡಿಕೆ
ಮಳೆ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ದರ ಗಗನಮುಖಿಯಾಗಿದೆ. ವಾರದ ಹಿಂದೆ ಕೆ.ಜಿ.ಗೆ ರೂಪಾಯಿ 150ರಿಂದ 200 ರಷ್ಟಿದ್ದ ಮಲ್ಲಿಗೆ ಇದೀಗ ರೂಪಾಯಿ 1000ಕ್ಕೂ ಹೆಚ್ಚು ಮಾರಾಟವಾಗುತ್ತಿದೆ. ರೂಪಾಯಿ 400ರಿಂದ 500ರಷ್ಟಿದ್ದ ಕನಕಾಂಬರ ರೂಪಾಯಿ 2500ರಿಂದ 3000ಕ್ಕೆ ತಲುಪಿದೆ.
ಎಪಿಎಂಸಿ ಹೂ ಮಾರುಕಟ್ಟೆಯಲ್ಲಿ ಹೂವುಗಳ ಹರಾಜು ನಡೆಯುತ್ತಿರುವ ದೃಶ್ಯ. -
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರೂ ಶ್ರಾವಣ ಮಾಸದ ಪಾವನ ದಿನಗಳಲ್ಲಿ ವರಮಹಾಲಕ್ಷ್ಮೀ ಹಬ್ಬ(Varamahalakshmi festival)ದ ಸಂಭ್ರಮ ಮನೆ-ಮನಗಳಲ್ಲಿ ಕಳೆಗಟ್ಟಿದೆ. ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು-ಹಂಪಲು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ನಗರದ ಎಪಿಎಂಸಿ ಹೂ ಮಾರು ಕಟ್ಟೆ, ಟೌನ್ಹಾಲ್ ವೃತ್ತ, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ. ರಸ್ತೆಯಲ್ಲಿ ಜನಜಂಗುಳಿ ಕಂಡುಬಂತು.
ಮಳೆ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ದರ ಗಗನಮುಖಿಯಾಗಿದೆ. ವಾರದ ಹಿಂದೆ ಕೆ.ಜಿ.ಗೆ ರೂಪಾಯಿ 150ರಿಂದ 200ರಷ್ಟಿದ್ದ ಮಲ್ಲಿಗೆ ಇದೀಗ ರೂಪಾಯಿ 1000ಕ್ಕೂ ಹೆಚ್ಚು ಮಾರಾಟವಾಗುತ್ತಿದೆ. ರೂಪಾಯಿ 400ರಿಂದ 500ರಷ್ಟಿದ್ದ ಕನಕಾಂಬರ ರೂಪಾಯಿ 2500ರಿಂದ 3000ಕ್ಕೆ ತಲುಪಿದೆ. ಮಳ್ಳೆ ರೂಪಾಯಿ 1000ರಿಂದ 1400, ಕಾಕಡ ರೂಪಾಯಿ 1000ರಿಂದ 1500 ಹಾಗೂ ಗುಲಾಬಿ ರೂಪಾಯಿ 180ರಿಂದ 350ಕ್ಕೆ ಏರಿಕೆಯಾಗಿದೆ. ತಾವರೆ ಹೂವಿಗೆ ರೂಪಾಯಿ 80ರಿಂದ 100, ಕೇದಗೆಗೆ ರೂಪಾಯಿ 100ರಿಂದ 150ರವರೆಗೆ ದರವಿದೆ.
ಇದನ್ನೂ ಓದಿ: Varamahalaxmi Makeover 2026: ಹಬ್ಬದ ಅತ್ಯಾಕರ್ಷಕ ಮೇಕೋವರ್ಗೆ ಇಲ್ಲಿದೆ 5 ಐಡಿಯಾ
ಹೂವಿನ ವ್ಯಾಪಾರಿ ಅಶೋಕ್ ಕುಮಾರ್ ಮಾತನಾಡಿ, “ಮಳೆ ಕೊರತೆಯಿಂದ ಇಳುವರಿ ಕಡಿಮೆ ಯಾಗಿದೆ. ಹಬ್ಬದ ಬೇಡಿಕೆ ಹೆಚ್ಚಿರುವುದರಿಂದ ಕಳೆದ ಮೂರ್ನಾಲ್ಕು ದಿನಗಳಿಂದ ದರ ಏರಿಕೆ ಯಾಗಿದೆ. ಹಬ್ಬದ ದಿನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ” ಎಂದರು.
ಹಣ್ಣುಗಳ ದರವೂ ಏರಿಕೆಯಾಗಿದ್ದು, ಸೇಬು ಕೆ.ಜಿ.ಗೆ ರೂಪಾಯಿ 200ರಿಂದ 250, ಸೀಬೆ ರೂಪಾಯಿ 80ರಿಂದ 120, ದಾಳಿಂಬೆ ರೂಪಾಯಿ 160ರಿಂದ 250 ಹಾಗೂ ತೆಂಗಿನಕಾಯಿ ರೂಪಾಯಿ 35ರಿಂದ 70ಕ್ಕೆ ಮಾರಾಟವಾಗುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ಹಾಪ್ಕಾಮ್ಸ್ ಮಳಿಗೆಗಳಲ್ಲೂ ವಿವಿಧ ಹಣ್ಣುಗಳ ಪೂರೈಕೆಗೆ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದಲೂ ಹೂವುಗಳ ಖರೀದಿಗೆ ವ್ಯಾಪಾರಿಗಳು ಆಗಮಿಸುತ್ತಿದ್ದಾರೆ.
ಬೆಲೆ ಏರಿಕೆಯ ನಡುವೆಯೂ ಮಹಿಳೆಯರು ಶ್ರದ್ಧಾಭಕ್ತಿಯಿಂದ ಪೂಜಾ ಸಾಮಗ್ರಿ ಖರೀದಿಸಿ ವರಮಹಾಲಕ್ಷ್ಮೀ ವ್ರತದ ಸಿದ್ಧತೆಯಲ್ಲಿ ತೊಡಗಿರುವುದು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮೂಡಿಸಿದೆ.