Chikkaballapur News: ನಂದಿ ಸರ್ಕಾರಿ ಪ್ರೌಢಶಾಲೆ 1994-95 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ಸಮರ್ಪಣೆ
ಸುಮಾರು 30 ವರ್ಷಗಳ ಬಳಿಕ ತಮ್ಮ ಬದುಕಿಗೆ ದಿಕ್ಕು ತೋರಿದ ಗುರುಗಳನ್ನು ಕಂಡ ವಿದ್ಯಾರ್ಥಿ ಗಳು ಶಾಲಾ ದಿನಗಳ ನೆನಪುಗಳಲ್ಲಿ ಮುಳುಗಿದರು. ಪಾಠಕ್ಕಷ್ಟೇ ಸೀಮಿತವಲ್ಲದೆ ಶಿಸ್ತು, ಮೌಲ್ಯ ಮತ್ತು ಬದುಕಿನ ಪಾಠಗಳನ್ನು ತಮಗೆ ಕಲಿಸಿದ ಗುರುಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಅವರನ್ನು ಗೌರವಯುತವಾಗಿ ಸತ್ಕರಿಸಿ ವಿದ್ಯಾರ್ಥಿಗಳೆಂದರೆ ಹೀಗಿರಬೇಕು ಎಂಬ ಭಾವವನ್ನು ಮೂಡಿಸಿದರು
-
ಚಿಕ್ಕಬಳ್ಳಾಪುರ: ತಾಲೂಕಿನ ಸುಲ್ತಾನ್ ಪೇಟೆಯ ಮನತೀರ ಹೆಸರಿನ ಆವರಣ ಭಾನುವಾರ ಲವಲವಿಕೆಯ ಕೇಂದ್ರವಾಗಿ ಎಲ್ಲರ ಗಮನ ಸೆಳೆಯಿತು. ಕಾಲದೊಂದಿಗೆ ದೂರವಾದ ಶಾಲಾ ದಿನಗಳು ಮತ್ತೆ ಜೀವಪಡೆದ ವೇದಿಕೆ ಅದಾಗಿತ್ತು. ಒಂದೇ ವೇದಿಕೆಯಲ್ಲಿ ಗುರುಶಿಷ್ಯರು ಒಂದಾದ ಅಪರೂಪದ ಸನ್ನಿವೇಶ ಅಲ್ಲಿತ್ತು. ಸಂತೋಷ, ಕಣ್ಣೀರು, ಅಪ್ಪುಗೆ ಆಶೀರ್ವಾದ ಎಲ್ಲವೂ ಏಕಕಾಲಕ್ಕೆ ಕಂಡು ಬಂದವು.
ಹೌದು. ನಂದಿ ಸರ್ಕಾರಿ ಪ್ರೌಢಶಾಲೆಯ 1994-95ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಗುರು–ಶಿಷ್ಯರ ನಡು ವಿನ ಅಮೂಲ್ಯ ಬಾಂಧವ್ಯವನ್ನು ಮತ್ತೊಮ್ಮೆ ಸ್ಮರಿಸಿ ಜಗತ್ತಿಗೆ ಮಾದರಿ ಸಂದೇಶವನ್ನು ರವಾ ನಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಸುಮಾರು 30 ವರ್ಷಗಳ ಬಳಿಕ ತಮ್ಮ ಬದುಕಿಗೆ ದಿಕ್ಕು ತೋರಿದ ಗುರುಗಳನ್ನು ಕಂಡ ವಿದ್ಯಾರ್ಥಿ ಗಳು ಶಾಲಾ ದಿನಗಳ ನೆನಪುಗಳಲ್ಲಿ ಮುಳುಗಿದರು. ಪಾಠಕ್ಕಷ್ಟೇ ಸೀಮಿತವಲ್ಲದೆ ಶಿಸ್ತು, ಮೌಲ್ಯ ಮತ್ತು ಬದುಕಿನ ಪಾಠಗಳನ್ನು ತಮಗೆ ಕಲಿಸಿದ ಗುರುಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಅವರನ್ನು ಗೌರವಯುತವಾಗಿ ಸತ್ಕರಿಸಿ ವಿದ್ಯಾರ್ಥಿಗಳೆಂದರೆ ಹೀಗಿರಬೇಕು ಎಂಬ ಭಾವವನ್ನು ಮೂಡಿಸಿದರು.
ಇದನ್ನೂ ಓದಿ: Chikkaballapur News: ಆರೋಗ್ಯ ವಿಚಾರಣೆ ನೆಪದಲ್ಲಿ ಜೆಡಿಎಸ್ ಮುಖಂಡರ ಭೇಟಿ ಸಮಾಲೋಚನೆ
ಕಾರ್ಯಕ್ರಮದಲ್ಲಿ ತಮಗೆ ಗುರುಗಳಾಗಿ ತಿದ್ದಿ ತೀಡಿ ಬುದ್ದಿ ಹೇಳಿ ಅಕ್ಷರಜ್ಞಾನವನ್ನು ಎದೆಗಳಿಗೆ ಧಾರೆಯೆರೆದ ಹತ್ತಕ್ಕೂ ಹೆಚ್ಚು ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಆತ್ಮೀಯವಾಗಿ ಮಕ್ಕಳು ತಂದೆತಾಯಿಯನ್ನು ಗೌರವಿಸುವ ಹಾಗೆ ಜೋರು ಕರತಾಡನದ ಮೂಲಕ ಸನ್ಮಾನಿಸಿದರು.
ಗುರುಗಳಾದ ನಾಗೇಂದ್ರ ಪ್ರಸಾದ್, ಎಸ್. ವೀರಣ್ಣ, ಸತ್ಯಪ್ಪ, ವಿ. ರಾಮಕೃಷ್ಣಪ್ಪ, ಹೆಚ್.ಜೆ. ಆಂಜಿನಪ್ಪ, ಎನ್. ಮಂಜುನಾಥ್, ಕೆ.ಹೆಚ್. ಪ್ರಸನ್ನಕುಮಾರ್, ಸತ್ಯನಾರಾಯಣ, ವೆಂಕಟೇಗೌಡ, ವೇದಾವತಿ, ಶೈಲಜಾ, ಗೋಪಾಲಕೃಷ್ಣ ಹಾಗೂ ಮುನಿಕೃಷ್ಣಪ್ಪ ಅವರು ಅಕ್ಷರಶಃ ಮಾತುಸೋತ ಕಾಮಧೇನುವಿನಂತೆ ಕಾಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಗಳು, ಹೊಟ್ಟೆಗೆ ಹಾಹಾಕಾರ, ಬಟ್ಟೆಗೆ ಬರವಿದ್ದ ಕಾಲದಲ್ಲಿ ನಮ್ಮಿಂದ ನೀವು ಪಾಠ ಕೇಳಿದ್ದೀರಿ. ಟಿ.ವಿ. ಮೊಬೈಲ್ ಇಲ್ಲದಿದ್ದ ಕಾಲದಲ್ಲಿ ನೀವು ಗುರುಗಳನ್ನು ನಂಬಿ ಅಕ್ಷರ ಕಲಿತ ಪರಿಣಾಮ, ಗುರುಗಳನ್ನು ಸತ್ಕರಿಸುವ ಸಂಸ್ಕಾರ ನಿಮ್ಮಲ್ಲಿ ಬೆಳೆದಿದೆ. ನಿಮ್ಮ ಮಕ್ಕಳಲ್ಲಿ ಇದೇ ಗುಣವನ್ನು ಬೆಳೆಸಿ. ಮಕ್ಕಳ ಎದುರು ಯಾವ ಗುರುಗಳನ್ನೇ ಆಗಲಿ ನಿಂದಿಸಬೇಡಿ. ಹೀಗಾದಲ್ಲಿ ಅಂತಹ ಮಕ್ಕಳು ಚೆನ್ನಾಗಿ ಓದುವುದಿರಲಿ ಪಾಠ ಹೇಳುವ ಗುರುಗಳಿಗೆ ಗೌರವ ಕೊಡುವು ದಿಲ್ಲ. ಶಿಕ್ಷಣದ ಅಧಃಪತನಕ್ಕೆ ಪೋಷಕರ ಇದೇ ಗುಣ ಕಾರಣವಾಗಿದೆ ಎಂದು ಶಿಷ್ಯರಿಗೆ ಕಿವಿ ಮಾತು ಹೇಳಿದರು.
ಅಂದು ಗುರುಗಳು ಬೆತ್ತದ ಜತೆ ತರಗತಿಯೊಳಗೆ ಬರುತ್ತಿದ್ದರೇ ವಿನಃ ಬರಿಗೈಯಲ್ಲಿ ಬಂದಿದ್ದೇ ಇಲ್ಲ. ಬಡಿದರೂ ಮಹಾಪ್ರಸಾದ ಎಂದು ಸ್ವೀಕರಿಸುವ ವಿದ್ಯಾರ್ಥಿ ಬಳಗ ಅಲ್ಲಿತ್ತು. ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ಚಿಂತೆಯೇ ಎಲ್ಲರಲ್ಲಿರುತ್ತಿತ್ತು. ಆದರಿಂದು ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಇಲಾಖೆಗೆ ಆನ್ಲೈನ್ನಲ್ಲಿ ಮಾಹಿತಿ ನೀಡುವುದೇ ದೊಡ್ಡ ಕೆಲಸವಾಗಿದೆ. ಇಂದು ಯಾವ ವಿದ್ಯಾರ್ಥಿ ಯನ್ನಾದರೂ ಹೊಡೆದರೆ, ಟಿ.ವಿ ಮತ್ತು ಪತ್ರಿಕಾ ವರದಿಗಾರರು ಶಾಲೆಯ ಬಳಿ ಠಳಾಯಿಸಿ ಶಿಕ್ಷಕ ರನ್ನು ಸಸ್ಪೆಂಡ್ ಮಾಡಿಸುವ ಪರಿಪಾಠ ಸಮಾಜದಲ್ಲಿ ಬೆಳೆದಿರುವುದು ವಿಷಾಧನೀಯ ಸಂಗತಿ. ಇಂತಹ ವಿಷಮಯ ಸನ್ನಿವೇಶದಲ್ಲಿ ಗುರುಗಳನ್ನು ಕರೆಸಿ ವಂದನೆ ಸಲ್ಲಿಸುತ್ತಿರುವುದು ಮಾದರಿ ನಡೆಯಾಗಿದೆ. ಭೋಗ ನಂದೀಶ್ವರ ನಿಮಗೆ ನೀಡಿರುವ ಈ ಸದ್ಭುದ್ದಿಯನ್ನು ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ನೀಡಲಿ ಎಂದು ಶುಭ ಹಾರೈಸಿದರು.
ಗುರುಗಳನ್ನು ಕರೆಸಿ ಗೌರವಿಸುವುದು ವಿರಳ. 30 ವರ್ಷಗಳ ಬಳಿಕ ಶಿಷ್ಯರು ಸ್ವಯಂಪ್ರೇರಿತರಾಗಿ ಗುರುವಂದನೆ ಸಲ್ಲಿಸಿರುವುದು ನೋಡಿ ಮನತುಂಬಿ ಬಂದಿದೆ ಮೇಲಾಗಿ ಸಮಾಜದಲ್ಲಿ ಗುರುವಿಗಿ ರುವ ಸ್ಥಾನವನ್ನು ನೆನಪಿಸಿದೆ. ಇದು ನಮ್ಮ ಶಿಕ್ಷಕರ ಜೀವನದ ಅತಿ ದೊಡ್ಡ ಸಂತೋಷ. ಈ ಕಾರ್ಯ ಕೈಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಭಗವಂತ ಆಯುರಾರೋಗ್ಯ ನೀಡಿ ಕಾಪಾಡಲಿ” ಎಂದು ಹಾರೈಸಿದರು.
ಹಳೆಯ ಸ್ನೇಹಿತರು, ಸಹಪಾಠಿಗಳ ಮಿಲನ, ಶಾಲಾ ದಿನಗಳ ಸ್ಮರಣೆ ಹಾಗೂ ಗುರುಗಳೊಂದಿಗೆ ನಡೆದ ಹೃದಯಸ್ಪರ್ಶಿ ಸಂಭಾಷಣೆ ಕಾರ್ಯಕ್ರಮಕ್ಕೆ ವಿಶೇಷ ಅರ್ಥವನ್ನಿತ್ತವು.
ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ರುಚಿಕಟ್ಟಾದ ಭೋಜನ ಬಡಿಸಿದರಲ್ಲದೆ, ಸ್ಮರಣೀಯ ಉಡುಗೊರೆಗಳನ್ನಿತ್ತು ಗೌರವಿಸಿದರು. ಭಾನುವಾರದ ಈ ಗುರುವಂದನಾ–ಸ್ನೇಹಸಮ್ಮಿಲನದಲ್ಲಿ 200ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ. ಗುರು–ಶಿಷ್ಯ ಸಂಬಂಧ ಕೇವಲ ಪಾಠಶಾಲೆಗೆ ಸೀಮಿತವಲ್ಲ, ಅದು ಜೀವನಪೂರ್ತಿ ಸಾಗುವ ಮೌಲ್ಯ ಎಂಬುದನ್ನು ಈ ಕಾರ್ಯಕ್ರಮ ಸ್ಪಷ್ಟವಾಗಿ ಪ್ರತಿಪಾದಿಸಿತು.
ಈ ವೇಳೆ 1994-95ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಗುರುಗಳು ಗ್ರಾಮಸ್ಥರು ಹಾಜರಿದ್ದರು.