CM Siddaramaiah: ದ್ವೇಷ ಭಾಷಣ ವಿಧೇಯಕ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ
ದ್ವೇಷ ಭಾಷಣ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ, ಮರಳಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು 19 ವಿಧೇಯಕಗಳಿಗೆ ಅಂಕಿತ ಹಾಕಿದ್ದರು. ಆದರೆ ದ್ವೇಷ ಭಾಷಣ ವಿಧೇಯಕಕ್ಕೆ ಯಾವುದೇ ವಿವರಣೆ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಸಿಎಂ ಸಿದ್ದರಾಮಯ್ಯ -
ಮಂಗಳೂರು, ಜ.11: ದ್ವೇಷ ಭಾಷಣ ವಿಧೇಯಕವನ್ನು (Hate Speech bill) ವಿಧಾನಮಂಡಲ ಸರ್ವಾನುಮತದಿಂದ ಅಂಗೀಕರಿಸಿದ್ದು, ರಾಜ್ಯಪಾಲರು (governor) ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಿನ್ನೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯ ಸಚಿವ ಸಂಪುಟ ಕಳುಹಿಸಿದ 19 ವಿಧೇಯಕಗಳಿಗೆ ಅಂಕಿತ ಹಾಕಿದ್ದರು. ಆದರೆ ದ್ವೇಷ ಭಾಷಣ ವಿಧೇಯಕಕ್ಕೆ ಯಾವುದೇ ವಿವರಣೆ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಸಿಎಂ ಉತ್ತರಿಸಿ, ನಾವು ಹಿಂದೆ ಪಾದಯಾತ್ರೆ ಮಾಡಿದ್ದು, ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಇವರು ಪಾದಯಾತ್ರೆ ಏಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಪ್ರಚೋದನೆ ಆಯಿತು ಎಂದರು. ಜನಾರ್ದನ ರೆಡ್ಡಿ , ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಕುರ್ಚಿ ಬಗ್ಗೆ ನಮ್ಮಲ್ಲಿ ಕಾಳಗವೇ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ದೀರ್ಘಾವಧಿ ಸಿಎಂ ದಾಖಲೆ ಹೊತ್ತಿನಲ್ಲೇ ವಿದಾಯದ ಮಾತುಗಳನ್ನಾಡಿದ ಸಿಎಂ ಸಿದ್ದರಾಮಯ್ಯ!