ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RSS march in Chittapur: ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ; ಹೊಸ ಅರ್ಜಿ ಸಲ್ಲಿಸಲು ಸೂಚನೆ

Chittapur News: ನ್ಯಾಯಾಲಯದ ಸೂಚನೆಯನ್ನು ಅನುಸರಿಸಿ, ಆರ್.ಎಸ್.ಎಸ್ ಪರ ಅರ್ಜಿದಾರರು ಪಥಸಂಚಲನವನ್ನು ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲು ಸಮ್ಮತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ರಂದು ಮಧ್ಯಾಹ್ನ 2:30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ತಡೆ

ಸಾಂದರ್ಭಿಕ ಚಿತ್ರ -

Prabhakara R Prabhakara R Oct 19, 2025 2:13 PM

ವಿಶ್ವವಾಣಿ ಸುದ್ದಿಮನೆ, ಕಲಬುರಗಿ, ಅ.19: ಕಾನೂನು ಮತ್ತು ಸುವ್ಯವಸ್ಥೆ ನೆಪವೊಡ್ಡಿ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪಥಸಂಚಲನಕ್ಕೆ (RSS march in Chittapur) ಅನುಮತಿ ನಿರಾಕರಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಅಕ್ಟೋಬರ್ 18ರಂದು ಚಿತ್ತಾಪುರ ತಹಶೀಲ್ದಾರ್ ನೀಡಿದ್ದ ಆದೇಶವನ್ನು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ಭಾನುವಾರ ತುರ್ತು ವಿಚಾರಣೆ ನಡೆಸಿ, ನ್ಯಾಯಾಲಯವು ಅರ್ಜಿದಾರರ ಹಕ್ಕುಗಳನ್ನು ಎತ್ತಿಹಿಡಿದಿದ್ದು, ಕಾರ್ಯಕ್ರಮಕ್ಕಾಗಿ ಸೂಕ್ತ ಸ್ಥಳ ಮತ್ತು ಮಾರ್ಗವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

ಮಾರ್ಗ ಪರಿಗಣನೆ ಕಡ್ಡಾಯ:

ನ್ಯಾಯಾಲಯದ ನಿರ್ದೇಶನದಂತೆ, ರಾಜ್ಯವು ಪಥಸಂಚಲನಕ್ಕೆ ನಿಗದಿತ ಸ್ಥಳವನ್ನು ಖಚಿತಪಡಿಸಬೇಕು ಮತ್ತು ಅರ್ಜಿದಾರರು (ಆರ್.ಎಸ್.ಎಸ್) ಸಲ್ಲಿಸುವ ಮಾರ್ಗವನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಆ ಮಾರ್ಗವು ಸಂಘಟಕರಿಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಬೇಕು.

ಹೊಸ ಅರ್ಜಿ ಸಲ್ಲಿಕೆಗೆ ಸೂಚನೆ:

ಆರ್.ಎಸ್.ಎಸ್ ಸಂಘಟಕರು ತಮ್ಮ ಇಚ್ಛೆಯ ಮಾರ್ಗ ಮತ್ತು ಸಮಯದ ವಿವರಗಳೊಂದಿಗೆ ಕಲಬುರಗಿ ಉಪ ಆಯುಕ್ತರಿಗೆ (DC) ಹೊಸ ಅರ್ಜಿ ಸಲ್ಲಿಸಬೇಕು ಮತ್ತು ಇದರ ಪ್ರತಿಯನ್ನು ತಹಶೀಲ್ದಾರ್ ಅವರಿಗೆ ಕಳುಹಿಸಬೇಕು. ಜಿಲ್ಲಾಡಳಿತವು ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸ್ಥಳವನ್ನು ನಿರ್ಧರಿಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

ನವೆಂಬರ್ 2ಕ್ಕೆ ಕಾರ್ಯಕ್ರಮ ಮುಂದೂಡಿಕೆ:

ನ್ಯಾಯಾಲಯದ ಸೂಚನೆಯನ್ನು ಅನುಸರಿಸಿ, ಆರ್.ಎಸ್.ಎಸ್ ಪರ ಅರ್ಜಿದಾರರು ಪಥಸಂಚಲನವನ್ನು ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲು ಸಮ್ಮತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ರಂದು ಮಧ್ಯಾಹ್ನ 2:30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ರಾಜಕೀಯ ಸೂಕ್ಷ್ಮ ಪ್ರದೇಶವಾದ ಚಿತ್ತಾಪುರದಲ್ಲಿನ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಆರೆಸ್ಸೆಸ್ ಪಥಸಂಚಲನಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಣೆ

ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಇಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6.30ರ ವರೆಗೆ ಆಯೋಜನೆ ಮಾಡಿದ್ದ ಪಥಸಂಚಲನಕ್ಕೆ ಅನುಮತಿ ನೀಡಲು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನಿರಾಕರಿಸಿದ್ದಾರೆ. ಶನಿವಾರ ರಾತ್ರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.

ಆರೆಸ್ಸೆಸ್ ಜಿಲ್ಲಾ ವ್ಯವಸ್ಥಾಪಕ ಪ್ರಹ್ಲಾದ ವಿಶ್ವಕರ್ಮ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಅವರು, ಇದೇ ದಿನ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ ಸಂಘಟನೆಗಳೂ ಸಹ ಚಿತ್ತಾಪುರ ಪಟ್ಟಣದಲ್ಲೇ ಪಥಸಂಚಲನ ನಡೆಸಲು ಅನುಮತಿ ಕೋರಿರುವುದರಿಂದ, ಒಂದೇ ಸಮಯದಲ್ಲಿ ಹಲವು ಸಂಘಟನೆಗಳ ಮೆರವಣಿಗೆ ನಡೆಯುವುದು ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟುಮಾಡುವ ಸಂಭವ ಇದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಸಹ ಇದೇ ಕುರಿತು ವರದಿ ಸಲ್ಲಿಸಿದ್ದು, ಶಾಂತಿ ಭದ್ರತೆ ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ತಹಶೀಲ್ದಾರ್ ಅವರು ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | RSS procession: ಪ್ರಿಯಾಂಕ್‌ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್‌; ಮಹತ್ವದ ಆದೇಶ

ಪಟ್ಟಣದಲ್ಲಿ ಎರಡು ವಿಭಿನ್ನ ಸಂಘಟನೆಗಳ ಮೆರವಣಿಗೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.