Yadgir News: ವಡಗೇರಾ ಸರಕಾರಿ ಶಾಲೆ ಆವರಣದಲ್ಲಿಯೇ ವಿದ್ಯಾರ್ಥಿ ಆತ್ಯಹತ್ಯೆ; ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ
ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಸರಕಾರಿ ಶಾಲೆಯ ಆವರಣದಲ್ಲಿ ಘಟನೆ ನಡೆದಿದೆ. ಮರಕ್ಕೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಪವನ್ ಪೂಜಾರಿ. -
ಯಾದಗಿರಿ: ಜಿಲ್ಲೆಯ ವಡಗೇರಾ ಪಟ್ಟಣದ ಸರಕಾರಿ ಶಾಲೆಯ ಆವರಣದಲ್ಲಿಯೇ ನೇಣು ಬಿಗಿದುಕೊಂಡು (Student Suicide) ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಬುಧವಾರ ಪತ್ತೆಯಾಗಿದೆ. ವಿದ್ಯಾರ್ಥಿ ಪವನ್ ಪೂಜಾರಿ (15) ಮೃತ ದುರ್ದೈವಿ. ಶಾಲೆಯ ಆವರಣದಲ್ಲಿ ಹಿಂದುಗಡೆಯ ಮರಕ್ಕೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.
ಘಟನೆ ವಿವರ
ಶಾಲೆಯಲ್ಲಿ ಓದುತ್ತಿದ್ದ ಪವನ್, ಬೆಳಗ್ಗೆ ಶಾಲೆಯಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಭಾಗವಹಿಸಿದ್ದ. ಅಲ್ಲದೇ ತರಗತಿಗಳಿಗೂ ಹಾಜರಾಗಿ ಶಾಲೆಯಲ್ಲಿ ಆಯೋಜಿಸಿದ್ದ ಕಿರು ಪರೀಕ್ಷೆಯನ್ನು ಸಹ ಬರೆದಿದ್ದ. ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಶಾಲಾ ಕಟ್ಟಡದ ಹಿಂದೆ ಮೂತ್ರ ವಿಸರ್ಜನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದ ಪವನ್ ಮೃತ ದೇಹವನ್ನು ಕಂಡು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಲೇ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಕುಟುಂಬಸ್ಥರು ಜಮಾಯಿಸಿದ್ದಾರೆ. ಈ ವೇಳೆ ಮೃತ ಪವನ್ ಅವರ ತಂದೆ ಮಲ್ಲಪ್ಪ, ಅಜ್ಜ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ವೇಳೆ ಶಾಲಾ ಮುಖ್ಯಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಸುದ್ದಿ ತಿಳಿದ ಶಾಸಕ ಚನ್ನಾರೆಡ್ಡಿ ಪಾಟೀಲ್, ಡಿಸಿ ಹರ್ಷಲ್ ಬೋಯರ್ , ಎಸ್ ಪಿ ಪೃಥ್ವಿಕ್ ಶಂಕರ, ಜಿಪಂ ಸಿಇಒ ಲವೀಶ್ ಓರಡಿಯಾ, ಕಂದಾಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆಗಲೇ ಶಾಲಾ ಆವರಣ ಜನರಿಂದ ತುಂಬುತ್ತು. ಅಳುವ ಕೂಗು ಮುಗಿಲು ಮುಟ್ಟಿತ್ತು.
ಇನ್ನು ಘಟನಾ ಸ್ಥಳದಲ್ಲಿ ಪಟ್ಟಣದ ಮುಖಂಡರು, ಸಂಘಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಜಮಾಯಿಸಿ ನೈಜ ತನಿಖೆಯನ್ನು ನಡೆಸುವರ ಜತೆಗೆ ಮೃತ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮದುವೆಗೂ ಮುನ್ನವೇ ಗರ್ಭಿಣಿಯಾದ ಯುವತಿ; ಹುಟ್ಟಿದಾಕ್ಷಣ ಮಗುವಿನ ಕತ್ತು ಹಿಸುಕಿ ಕೊಂದ ಅಜ್ಜಿ?
ಕುಟುಂಬಸ್ಥರಿಗೆ ಪರಿಹಾರದ ಭರವಸೆ ನೀಡಿದ ಶಾಸಕ
ಈ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ, ಕುಟುಂಬಸ್ಥರಿಂದ ಅರ್ಜಿಯನ್ನು ಸ್ವೀಕರಿಸಿ ಸೂಕ್ತ ತನಿಖೆಯನ್ನು ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸರ್ಕಾರದ ಗಮನಕ್ಕೆ ತಂದು ಸರ್ಕಾರದಿಂದ ಸಿಗುವ ಪರಿಹಾರ ಹಾಗೂ ಕುಟುಂಬಸ್ಥರಿಗೆ ನೌಕರಿಯನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.