ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HS Venkateshmurthy Passed Away: ಅಗಲಿದ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿಗೆ ಶೋಕದ ಮಹಾಪೂರ, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

ಅಗಲಿದ ಕವಿ ಎಚ್ ಎಸ್ ವೆಂಕಟೇಶಮೂರ್ತಿ (HS Venkateshmurthy Passed Away) ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಅಗಲಿದ ಕವಿ ಎಚ್‌ಎಸ್‌ವಿ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ

ಎಚ್‌ಎಸ್‌ವಿ

ಹರೀಶ್‌ ಕೇರ ಹರೀಶ್‌ ಕೇರ May 30, 2025 8:59 AM

ಬೆಂಗಳೂರು: ಕನ್ನಡದ ಖ್ಯಾತ ಕವಿ (Poet) ಎಚ್‌ ಎಸ್‌ ವೆಂಕಟೇಶಮೂರ್ತಿ ಇಂದು ಮುಂಜಾನೆ ನಮ್ಮನ್ನು (HS Venkateshmurthy Passed Away) ಅಗಲಿದ್ದು, ಗಣ್ಯರು, ಬಂಧುಮಿತ್ರರು ಹಾಗೂ ಅಪಾರ ಅಭಿಮಾನಿಗಳು ಶೋಕದ ಮಹಾಪೂರವನ್ನೇ ಹರಿಸಿದ್ದಾರೆ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ತಮ್ಮ ಹೃದಯಂಗಮ ಪದ್ಯಗಳಿಂದ ಎಲ್ಲ ಕ್ಷೇತ್ರಗಳ ಜನರನ್ನು ಮುಟ್ಟಿದ್ದ ಅವರ ಅಗಲಿಕೆಯಿಂದ ಕನ್ನಡದ ಸಾಹಿತ್ಯಾಭಿಮಾನಿಗಳು ತೀವ್ರವಾಗಿ ಶೋಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಚ್‌ಎಸ್‌ವಿ ಸಾವಿಗೆ ಶೋಕಸಂದೇಶಗಳು ವ್ಯಾಪಕವಾಗಿವೆ.

ಖ್ಯಾತ ನಿರ್ದೇಶಕ ಟಿ.ಎನ್‌ ಸೀತಾರಾಮ್‌ ಅವರು ʼನನ್ನ ಧಾರಾವಾಹಿಗಳ ಹಾಡುಗಳು ತಬ್ಬಲಿಯಾದವುʼ ಎಂದು ಬರೆದುಕೊಂಡಿದ್ದಾರೆ. ತಮ್ಮ ಕಿರುತೆರೆ ಧಾರಾವಾಹಿಗಳಿಗೆ ಎಚ್‌ಎಸ್‌ವಿ ಬರೆದುಕೊಟ್ಟ ಮುಕ್ತ ಮುಕ್ತ ಮುಕ್ತ, ದೂರದಿಂದಲೇ ಜೀವ ಹಿಂಡುತಿದೆ, ಊರ ಸೇರಬಹುದೇ ನೀನು ದಾರಿ ಮುಗಿಯದೇ ಮೊದಲಾದ ಹಾಡುಗಳನ್ನು ಅವರು ನೆನೆದುಕೊಂಡಿದ್ದಾರೆ.

"ಹಿರಿಯರಾದ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ 15 ವರ್ಷಗಳಿಂದ ಅವರ ಒಡನಾಟದ ಭಾಗ್ಯ ನನಗೆ ಸಿಕ್ಕಿತ್ತು. ಕೊನೆಯ ಗಳಿಗೆಯವರೆಗೂ ಸಾಹಿತ್ಯವನ್ನು ಜಪಿಸುತ್ತಾ, ಸಾಹಿತ್ಯ ರಚಿಸುತ್ತಾ ಇದ್ದ ಅವರ ಚೇತನ ನನಗೆ ಮಾದರಿ. ಕಳೆದ ತಿಂಗಳು ನಾವೊಂದಿಷ್ಟು ಜನ ಗೆಳೆಯರು ಅವರ ಮನೆಗೆ ಹೋಗಿ ಅವರನ್ನು ಮಾತಾಡಿಸಿ, ಪ್ರೀತಿ ತೋರಿಸಿ ಬಂದೆವು.‌ ಸಾಕಷ್ಟು ಕ್ಷೀಣರಾಗಿದ್ದರೂ ಉತ್ಸಾಹದಿಂದಲೇ‌ ತಮ್ಮ‌ ಬದುಕನ್ನು ಕುರಿತು ಮಾತಾಡಿದರು. ಅವರಿಗೆ ಅಂತಿಮ ನಮನ‌" ಎಂದು ಕತೆಗಾರ ವಸುಧೇಂದ್ರ ಬರೆದುಕೊಂಡಿದ್ದಾರೆ.

"ವ್ಯಕ್ತಿಯಾಗಿ, ಕವಿಯಾಗಿ ನನಗೆ ಇಷ್ಟವಾದ, ಕನ್ನಡದ ಮೇರು ಕವಿಗಳಲ್ಲೊಬ್ಬರಾದ ಎಚ್.ಎಸ್.ವೆಂಕಟೇಶಮೂರ್ತಿಯವರ ನಿಧನದ ಸುದ್ದಿ ದುಃಖಕರ. ಕನ್ನಡ ಕಾವ್ಯಲೋಕದ ಒಂದು ಅಪೂರ್ವ ನಕ್ಷತ್ರ ಜಾರಿದೆ. ಅಕ್ಷರಗಳಲ್ಲಿ ಜೀವ ತುಂಬಿದ ಎಚ್ಚೆಸ್ವಿ ಅವರ ಪದಗಳು, ಭಾವಗಳು ಹಾಗೂ ವಿಚಾರಗಳು ನಮ್ಮೊಳಗೆ ಸದಾ ಪ್ರತಿಧ್ವನಿಸುತ್ತಾ ಇರುತ್ತವೆ. ಅವರ ಸಾಹಿತ್ಯ ಸ್ಮರಣೆಯಾಗಿ ಉಳಿಯಲಿ, ಮೃತರಿಗೆ ಸದ್ಗತಿ ದೊರಕಲಿ" ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಬರೆದಿದ್ದಾರೆ.

ಎಚ್‌ಎಸ್‌ವಿ ಕವಿ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ, ನಾಟಕಕಾರ ಆಗಿದ್ದುದರ ಜೊತೆಗೆ ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆಗಿದ್ದರು. ಕನ್ನಡದ ಜನಪ್ರಿಯ ಕವಿಯಾಗಿದ್ದ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು (ಮೇ 30) ನಿಧನರಾದರು. ಅವರು ಇಬ್ಬರು ಮಕ್ಕಳು, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: HS Venkateshmurthy Passed Away: ತೂಗುಮಂಚದ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಇನ್ನಿಲ್ಲ