Vishwavani Editorial: ಮತ್ತೆ ಕವಿದ ಯುದ್ಧದ ಕಾರ್ಮೋಡ
ಒಂದು ಕಡೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಹಣಾಹಣಿಯಿನ್ನೂ ನಿಂತಿಲ್ಲ, ಮತ್ತೊಂದು ಕಡೆ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕಿನ್ನೂ ತಾರ್ಕಿಕ ಅಂತ್ಯ ದಕ್ಕಿಲ್ಲ. ಅಷ್ಟರ ಲ್ಲಾಗಲೇ ಮತ್ತೊಂದು ಯುದ್ಧದ ಪೆಡಂಭೂತ ಧುತ್ತನೆ ಎದ್ದು ನಿಂತಿದೆ, ಅದು ತೀವ್ರ ಸ್ವರೂಪ ವನ್ನೇ ತಳೆದಿದೆ.


ಒಂದು ಕಡೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಹಣಾಹಣಿಯಿನ್ನೂ ನಿಂತಿಲ್ಲ, ಮತ್ತೊಂದು ಕಡೆ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕಿನ್ನೂ ತಾರ್ಕಿಕ ಅಂತ್ಯ ದಕ್ಕಿಲ್ಲ. ಅಷ್ಟರ ಲ್ಲಾಗಲೇ ಮತ್ತೊಂದು ಯುದ್ಧದ ಪೆಡಂಭೂತ ಧುತ್ತನೆ ಎದ್ದು ನಿಂತಿದೆ, ಅದು ತೀವ್ರ ಸ್ವರೂಪ ವನ್ನೇ ತಳೆದಿದೆ.
ಇರಾನ್ನ ಪರಮಾಣು ಸ್ಥಾವರಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆಯು ಶುಕ್ರವಾರ ಮುಂಜಾನೆ ನಡೆಸಿದ ಭಾರಿ ವೈಮಾನಿಕ ದಾಳಿಯಲ್ಲಿ 78 ಮಂದಿ ಅಸು ನೀಗಿ, 320ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದರಿಂದಾಗಿ ಪ್ರತಿದಾಳಿಗೆ ಮುಂದಾದ ಇರಾನ್, ಇಸ್ರೇಲ್ನ ಕ್ಷಿಪಣಿ ನಿರೋಧಕ ಸಾಧನಗಳನ್ನು ನಿಷ್ಕ್ರಿಯಗೊಳಿಸಲು ಯತ್ನಿಸಿತು ಎಂಬುದು ಲಭ್ಯ ಸುದ್ದಿ. ಒಟ್ಟಿನಲ್ಲಿ ಉಭಯ ದೇಶಗಳ ನಡುವೆ ಈಗ ಕಾವೇರಿದ ವಾತಾವರಣ.
ಇದನ್ನೂ ಓದಿ: Vishwavani Editorial: ನಶೆಯ ವಿಷಜಾಲಕ್ಕೆ ಇದು ಪುರಾವೆ
ಇದಕ್ಕೆ ಪುಷ್ಟಿ ನೀಡುವಂತೆ ಇಸ್ರೇಲ್, ‘ಧಾರ್ಮಿಕ ಕೇಂದ್ರಗಳಿರುವ ಜೆರುಸಲೇಂ ಮೇಲೆಯೇ ನಡೆಸುತ್ತಿರುವ ದಾಳಿಯನ್ನು ಇಸ್ರೇಲ್ ನಿಲ್ಲಿಸದಿದ್ದರೆ, ಇರಾನಿನ ಟೆಹರಾನ್ ನಗರವನ್ನು ಸಂಪೂರ್ಣ ಸುಟ್ಟು ಭಸ್ಮ ಮಾಡಲಾಗುವುದು’ ಎಂದು ಅಬ್ಬರಿಸಿದೆ.
ಮತ್ತೊಂದೆಡೆ ಇರಾನ್, ‘ಇಸ್ರೇಲ್ ಮೇಲಿನ ನಮ್ಮ ಪ್ರತೀಕಾರದ ದಾಳಿಯನ್ನು ಹಿಮ್ಮೆಟ್ಟಿಸಲು ಅಮೆರಿಕ, ಬ್ರಿಟನ್, ಫ್ರಾನ್ಸ್ ದೇಶಗಳು ಒಂದೊಮ್ಮೆ ಯತ್ನಿಸಿದರೆ, ಈ ಮೂರೂ ದೇಶಗಳ ಪ್ರಾದೇಶಿಕ ಸೇನಾನೆಲೆಗಳ ಮೇಲೆ ದಾಳಿ ಮಾಡಲಾಗುವುದು’ ಎಂದು ಬೆದರಿಕೆ ಹಾಕಿದೆ. ಅಲ್ಲಿಗೆ, ಶಾಂತಿ-ನೆಮ್ಮದಿ ಯನ್ನು ಕಾಯ್ದುಕೊಳ್ಳುವ ಆಶಯ ಯಾರಲ್ಲೂ ಕೆನೆಗಟ್ಟಿಲ್ಲ ಅಂತಾಯ್ತು.
ವಿಶ್ವದ ವಿವಿಧೆಡೆಗಳಲ್ಲಿ ಹೀಗೆ ಯುದ್ಧದ ಕಾರ್ಮೋಡವು ಕವಿದುಬಿಟ್ಟರೆ, ಶಾಂತಿಪ್ರಿಯರು ನೆಮ್ಮದಿಯ ಆಶಾಕಿರಣವನ್ನು ಕಾಣುವುದಾದರೂ ಹೇಗೆ ಮತ್ತು ಎಲ್ಲಿಂದ? ಯಾವುದೇ ದೇಶಕ್ಕೆ ಮತ್ತೊಂದು ದೇಶದ ವಿರುದ್ಧ ಯುದ್ಧ ಮಾಡುವುದಕ್ಕೆ ಅದರದ್ದೇ ಆದ ಕಾರಣಗಳಿರಬಹುದು. ಆದರೆ ಹಾಗೆ ಶುರುಹಚ್ಚಿಕೊಂಡ ಯುದ್ಧವು ಮುಕ್ತಾಯವಾದ ನಂತರ, ಅದರಲ್ಲಿ ಗೆದ್ದ ಮತ್ತು ಸೋತ ಎರಡೂ ಬಣಗಳಿಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ವರ್ಷಗಳೇ ಹಿಡಿಯುತ್ತವೆ ಎಂಬುದು ಕಹಿವಾಸ್ತವ. ಇದನ್ನು ಅರಿತುಬಿಟ್ಟರೆ, ಯುದ್ಧಕ್ಕೆ ತೊಡೆತಟ್ಟುವಂಥ ಹಂತಕ್ಕೆ ಯಾವ ದೇಶವೂ ಹೋಗುವುದಿಲ್ಲ.