ʻಟಾಕ್ಸಿಕ್ʼ ಸಿನಿಮಾದಲ್ಲಿ ತಂದೆ - ಮಗನ ಸೇಡಿನ ಸ್ಟೋರಿ; ಸಿಂಪಲ್ ಆಗಿ ಕಥೆ ಎಳೆಯನ್ನ ಬಾಯಿಬಿಟ್ಟ ʻರಾಯʼ ಯಶ್!
ಸಿನಿಮಾಕಾನ್ 2026ರಲ್ಲಿ ಭಾಗಿಯಾಗಿರುವ ನಟ ಯಶ್ ಅವರು, ಅಲ್ಲಿ ನೀಡಿದ ಸಂದರ್ಶನದಲ್ಲಿ 'ಟಾಕ್ಸಿಕ್' ಚಿತ್ರದ ಕಥೆಯ ಎಳೆಯನ್ನು ಬಹಿರಂಗಪಡಿಸಿದ್ದಾರೆ. ಇದೊಂದು ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆಯಾಗಿದ್ದು, ಗೋವಾದ ಹಿನ್ನೆಲೆಯಲ್ಲಿ ನಡೆಯುವ ಕಾಲ್ಪನಿಕ ಗ್ಯಾಂಗ್ಸ್ಟರ್ ಕಥೆಯಾಗಿದೆ ಎಂದು ಯಶ್ ತಿಳಿಸಿದ್ದಾರೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ʻಟಾಕ್ಸಿಕ್ʼ ಸಿನಿಮಾವು ವಿಶ್ವಾದ್ಯಂತ ಹವಾ ಮಾಡುತ್ತಿದೆ. ಸದ್ಯ ಸಿನಿಮಾಕಾನ್ 2026 ಕಾರ್ಯಕ್ರಮದಲ್ಲಿರುವ ನಟ ಯಶ್ ಅವರು, ತಮ್ಮ ಮುಂದಿನ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಜೊತೆಗೆ ಹಾಲಿವುಡ್ನ ಹಲವು ಜರ್ನಲಿಸ್ಟ್ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಸದ್ಯ ʻಟಾಕ್ಸಿಕ್ʼ ಚಿತ್ರದ ಅತೀ ಮುಖ್ಯ ವಿಚಾರವನ್ನೇ ಬಹಿರಂಗಪಡಿಸಿದ್ದಾರೆ ಯಶ್!
ʻಟಾಕ್ಸಿಕ್ʼ ಸಿನಿಮಾದ ಕಥೆಯನ್ನು ರಿವೀಲ್ ಮಾಡಿದ ಯಶ್
ಯಶ್ ಅವರು ಹಾಲಿವುಡ್ ರಿಪೋರ್ಟರ್ಗಳಿಗೆ ಸಂದರ್ಶನ ನೀಡುವಾಗ, ಟಾಕ್ಸಿಕ್ ಸಿನಿಮಾದ ಕಥೆಯ ಎಳೆಯನ್ನು ರಿವೀಲ್ ಮಾಡಿದ್ದಾರೆ. "ನನ್ನ ರಾಮಾಯಣಕ್ಕಿಂತ ಟಾಕ್ಸಿಕ್ ಸಂಪೂರ್ಣ ವಿಭಿನ್ನವಾದ ಸಿನಿಮಾ. ಇದೊಂದು ವೈಲ್ಡ್ ಅಂತ ಹೇಳಬಹುದು. ದೊಡ್ಡವರಿಗಾಗಿ ಮಾಡಿರುವ ಒಂದು ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ಸೇಡಿನ ಕಥೆ" ಎಂದು ಯಶ್ ಹೇಳಿದ್ದಾರೆ. ಆ ಮೂಲಕ ತಾವಿಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾಯ ಮತ್ತು ಟಿಕೆಟ್ ಪಾತ್ರಗಳು ತಂದೆ - ಮಗನಾಗಿ ಕಾಣಿಸಿಕೊಂಡಿವೆ ಎಂಬುದನ್ನು ಯಶ್ ಪರೋಕ್ಷವಾಗಿ ಹೇಳಿದಂತಾಗಿದೆ.
Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
ಇಡೀ ಕಥೆ ನಡೆಯೋದು ಗೋವಾದಲ್ಲಿ!
"ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೂ 1961ರವರೆಗೆ ಗೋವಾ ರಾಜ್ಯವು ಪೋರ್ಚುಗೀಸರ ವಶದಲ್ಲಿತ್ತು. ಆ ಸಮಯದಲ್ಲಿ ನಡೆಯುವ ಕಾಲ್ಪನಿಕ ಗ್ಯಾಂಗ್ಸ್ಟರ್ ಕಥೆ ಇದು. ಸಾಕಷ್ಟು ಇಂಟ್ರೆಸ್ಟಿಂಗ್ ಪಾತ್ರಗಳು, ದೃಶ್ಯಗಳು 'ಟಾಕ್ಸಿಕ್' ಚಿತ್ರದಲ್ಲಿ ಇರಲಿದೆ. ಇದು ಸಂಪೂರ್ಣ ವಿಭಿನ್ನವಾದ ಗ್ಯಾಂಗ್ಸ್ಟರ್ ಸಿನಿಮಾ. ಬರೀ ಆಕ್ಷನ್ ಇರಲ್ಲ. ಸೈಕಲಾಜಿಕಲ್ ವಿಚಾರಗಳಿವೆ. ಸಾಕಷ್ಟು ಭಾವೋದ್ವೇಗ ಇರುತ್ತೆ. ನಾನು ಆಕ್ಷನ್ ಹೀರೋ ಆಗಿ ಜನಪ್ರಿಯವಾಗಿರಬಹುದು, ಆದರೂ ನಾನು ಉತ್ತಮ ನಟ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ" ಎಂದು ಯಶ್ ಹೇಳಿಕೊಂಡಿದ್ದಾರೆ.
ಯಶ್ ಸಂದರ್ಶನ
Yash Boss confirms that Toxic is a father-son revenge saga. 🔥
— ROCKY⚡️ (@RakeshGouda1818) April 17, 2026
RAYA VS TICKET 🎫 🃏#Yash #ToxicTheMovie #YashBOSS pic.twitter.com/kCWn4Rf87m
ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ಸುದೇವ್ ನಾಯರ್ ಮುಂತಾದವರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಕೆ. ವೆಂಕಟ್ ನಾರಾಯಣ್ ಮತ್ತು ಯಶ್ ಜಂಟಿಯಾಗಿ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಜೂನ್ 4ರಂದು ಕನ್ನಡ, ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ ತೆರೆಗೆ ಬರಲಿದೆ.