NTR - ತ್ರಿವಿಕ್ರಮ್ ಕಾಂಬಿನೇಷನ್ನಲ್ಲಿ ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಅನೌನ್ಸ್: ಕಾರ್ತಿಕೇಯನ ಅವತಾರದಲ್ಲಿ ಬರ್ತಾರೆ ತಾರಕ್!
ಜೂನಿಯರ್ ಎನ್ಟಿಆರ್ - ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ನ ಹೊಸ ಬಿಗ್ ಬಜೆಟ್ ಪೌರಾಣಿಕ ಚಿತ್ರ ಜೂನ್ 29ರಂದು ಅಧಿಕೃತವಾಗಿ ಪ್ರಕಟವಾಗಿದೆ. 'ಎನ್ಟಿಆರ್ ಆರ್ಟ್ಸ್' ಹಾಗೂ 'ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ.
-
ಜೂನಿಯರ್ ಎನ್ಟಿಆರ್ ಮತ್ತು 'ಅಲಾ ವೈಕುಂಠಪುರಮುಲೋ' ಖ್ಯಾತಿಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಹಲವು ದಿನಗಳ ಚರ್ಚೆಗೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ಈ ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಬಿಗ್ ಬಜೆಟ್ನ ಮಹತ್ವಾಕಾಂಕ್ಷಿ ಪೌರಾಣಿಕ ಚಿತ್ರದ ಅಧಿಕೃತ ಘೋಷಣೆಯನ್ನು ಇಂದು (ಜೂನ್ 29) ಮಾಡಲಾಗಿದೆ.
'ಅರವಿಂದ ಸಮೇತ ವೀರ ರಾಘವ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಜೂನಿಯರ್ ಎನ್ಟಿಆರ್ ಮತ್ತು ತ್ರಿವಿಕ್ರಮ್ ಒಂದಾಗುತ್ತಿರುವ ಎರಡನೇ ಚಿತ್ರ ಇದಾಗಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರ 'ಎನ್ಟಿಆರ್ ಆರ್ಟ್ಸ್' ಹಾಗೂ ಎಸ್. ರಾಧಾಕೃಷ್ಣ ಅವರ 'ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್' ಬ್ಯಾನರ್ಗಳು ಜಂಟಿಯಾಗಿ ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ಜಾಗತಿಕ ಮಟ್ಟದಲ್ಲಿ ನಿರ್ಮಿಸುತ್ತಿವೆ. ಸದ್ಯಕ್ಕೆ ಈ ಚಿತ್ರಕ್ಕೆ ಯಾವುದೇ ಶೀರ್ಷಿಕೆ ನಿಗದಿಯಾಗಿಲ್ಲ.
Rukmini Vasanth: ಜೂ. ಎನ್ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
ಕುತೂಹಲ ಮೂಡಿಸಿದ ಪೋಸ್ಟರ್
ಜೂನಿಯರ್ ಎನ್ಟಿಆರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಚಿತ್ರದ ಅಧಿಕೃತ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ. "ಶಿವನ ಮಗ. ಪಾರ್ವತಿಯ ಹೆಮ್ಮೆ. ಶಾಶ್ವತ ಸೇನಾಧಿಪತಿ.. ಮತ್ತೊಮ್ಮೆ ತ್ರಿವಿಕ್ರಮ್ ಅವರೊಂದಿಗೆ.." ಎಂದು ಎನ್ಟಿಆರ್ ಬರೆದುಕೊಂಡಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಜ್ವಾಲೆಗಳಿಂದ ಆವೃತವಾದ, ಯುದ್ಧದಿಂದ ಧ್ವಂಸಗೊಂಡ ದೃಶ್ಯದ ಮಧ್ಯಭಾಗದಲ್ಲಿ ಬೃಹತ್ ತ್ರಿಶೂಲವೊಂದನ್ನು ತೋರಿಸಲಾಗಿದೆ.
ವಿಶೇಷವೆಂದರೆ, ಆ ತ್ರಿಶೂಲದ ಮಧ್ಯದ ದಂಡವು ಮಾನವನ ಡಿಎನ್ಎ (DNA) ಎಳೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದ್ದು, ಸಿನಿಮಾವು ಸೈನ್ಸ್ ಮತ್ತು ಮೈಥಾಲಜಿಯ ಸಮ್ಮಿಶ್ರಣವಾಗಿರಬಹುದು ಎಂಬ ಕುತೂಹಲ ಮೂಡಿಸಿದೆ.
ಕಾರ್ತಿಕೇಯನ ಕಥೆಯೇ 'ಷಣ್ಮುಖ'ನ ಜೀವಾಳ?
ಪೋಸ್ಟರ್ನ ದೃಶ್ಯಾವಳಿ ಹಾಗೂ ಕ್ಯಾಪ್ಷನ್ ಅನ್ನು ಗಮನಿಸಿದರೆ, ಈ ಸಿನಿಮಾವು ಶಿವ-ಪಾರ್ವತಿಯರ ಪುತ್ರ, ಯುದ್ಧ ದೇವತೆ ಕಾರ್ತಿಕೇಯನ (ಷಣ್ಮುಖ) ಕಥೆಯನ್ನು ಆಧರಿಸಿದೆ ಎಂಬ ಬಲವಾದ ಸುಳಿವು ಸಿಕ್ಕಿದೆ. ಚಿತ್ರತಂಡವು ಪೋಸ್ಟರ್ನಲ್ಲಿ, "ಉತ್ತರದಲ್ಲಿ ಜನಿಸಿ, ದೇಶದ ಹೃದಯಭಾಗದಲ್ಲಿ ಪಳಗಿ, ದಕ್ಷಿಣದಲ್ಲಿ ಪೂಜಿಸಲ್ಪಟ್ಟವನು. ಈಗ... ಇಡೀ ಬ್ರಹ್ಮಾಂಡಕ್ಕೆ ಸೇರಬೇಕಾದ ಕಥೆ" ಎಂದು ಬರೆಯಲಾಗಿದೆ.
ಈ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಶ್ರೀ ಸುಬ್ರಹ್ಮಣ್ಯ ಅಷ್ಟಕದ ಸಾಲುಗಳನ್ನು ಉಲ್ಲೇಖಿಸುತ್ತಾ, "ನನಗೆ ಪದಗಳ ಜ್ಞಾನವಿಲ್ಲ, ಅರ್ಥವೂ ಗೊತ್ತಿಲ್ಲ, ಪದ್ಯ-ಗದ್ಯಗಳನ್ನು ರಚಿಸಲೂ ಬಾರದು. ಆದರೂ ಆರು ಮುಖಗಳನ್ನು ಹೊಂದಿರುವ ಶ್ರೀ ಷಣ್ಮುಖ ನನ್ನ ಹೃದಯದಲ್ಲಿ ಹೊಳೆಯುತ್ತಾನೆ. ಅದಕ್ಕಾಗಿಯೇ ಅದ್ಭುತವಾದ ಸ್ತೋತ್ರಗಳು ನನ್ನ ಬಾಯಿಂದ ಸ್ವಾಭಾವಿಕವಾಗಿ ಹರಿಯುತ್ತವೆ" ಎಂದು ಚಿತ್ರದ ಕಥಾಹಂದರವನ್ನು ಆಧ್ಯಾತ್ಮಿಕವಾಗಿ ವಿವರಿಸಿದ್ದಾರೆ.
ಅನಿರುದ್ಧ್ ಸಂಗೀತ ನಿರ್ದೇಶನ
ಈ ಸಿನಿಮಾಗೆ ಸೌತ್ ಇಂಡಸ್ಟ್ರಿಯ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇವರ ಹಿನ್ನೆಲೆ ಸಂಗೀತವು ಚಿತ್ರಕ್ಕೆ ಹೊಸ ಆಯಾಮ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಸದ್ಯಕ್ಕೆ ತಾರಾಗಣ ಹಾಗೂ ತಾಂತ್ರಿಕ ವರ್ಗದ ಇತರೆ ವಿವರಗಳನ್ನು ಗೌಪ್ಯವಾಗಿಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಶೂಟಿಂಗ್ ಶೆಡ್ಯೂಲ್ ಹಾಗೂ ಇತರೆ ಅಪ್ಡೇಟ್ಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ.
ಎನ್ಟಿಆರ್ ಹಂಚಿಕೊಂಡ ಪೋಸ್ಟರ್
The Son of Shiva.
— Jr NTR (@tarak9999) June 29, 2026
The Pride of Parvathi.
The Eternal Commander.
And, once again with TRIVIKRAM.#NTRxTrivikram pic.twitter.com/oIW7o4PETu
ಬ್ಯಾಕ್-ಟು-ಬ್ಯಾಕ್ ಬಿಗ್ ಪ್ರಾಜೆಕ್ಟ್ಗಳಲ್ಲಿ ಎನ್ಟಿಆರ್
ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ 'ಡ್ರಾಗನ್' (Dragon) ಟೈಟಲ್ ಅನೌನ್ಸ್ಮೆಂಟ್ ಮೂಲಕ ಜೂನಿಯರ್ ಎನ್ಟಿಆರ್ ದೊಡ್ಡ ಹವಾ ಸೃಷ್ಟಿಸಿದ್ದರು. 2027ರ ಜೂನ್ನಲ್ಲಿ ರಿಲೀಸ್ ಆಗಲಿರುವ ಆ ಸಿನಿಮಾದಲ್ಲಿ ಎನ್ಟಿಆರ್ 'ಲೂಗರ್' ಎಂಬ ಹಂತಕನಾಗಿ ಕಾಣಿಸಿಕೊಳ್ಳುತ್ತಿದ್ದು, ಬಿಜು ಮೆನನ್, ರುಕ್ಮಿಣಿ ವಸಂತ್, ಖುಷ್ಬೂ ಸುಂದರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದರ ಬೆನ್ನಲ್ಲೇ ಈಗ ತ್ರಿವಿಕ್ರಮ್ ಜೊತೆಗಿನ ಪೌರಾಣಿಕ ಚಿತ್ರ ಪ್ರಕಟವಾಗಿರುವುದು ಎನ್ಟಿಆರ್ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದೆ.