ʻಲೂಸ್ ಮಾದʼ ಯೋಗಿ ಈಗ ʻಕರುನಾಡ ಸುಲ್ತಾನʼ; 50ನೇ ಸಿನಿಮಾಕ್ಕೆ ʻಕಿಂಗ್ʼ ಟೈಟಲ್, ಹಾರೈಸಿದ ಶಿವರಾಜ್ಕುಮಾರ್!
Loose Mada Yogi 50th Movie: ‘ದುನಿಯಾ’ ಮೂಲಕ ಚಿತ್ರರಂಗಕ್ಕೆ ಬಂದ ಯೋಗಿ ಈಗ ತಮ್ಮ 50ನೇ ಸಿನಿಮಾ ‘ಕಿಂಗ್’ (King) ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಶೀರ್ಷಿಕೆಯನ್ನು ನಟ ಶಿವರಾಜ್ಕುಮಾರ್ ಅನಾವರಣಗೊಳಿಸಿದ್ದು, ಯೋಗಿಗೆ ಅಭಿಮಾನಿಗಳು ‘ಕರುನಾಡ ಸುಲ್ತಾನ’ ಎಂಬ ಹೊಸ ಬಿರುದು ನೀಡಿದ್ದಾರೆ.
-
ʻದುನಿಯಾʼ ಸಿನಿಮಾದಿಂದ ಕನ್ನಡ ಚಿತ್ರರಂಗ ವಿಲನ್ ಆಗಿ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ, ಇದೀಗ ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ್ದಾರೆ. ಅಲ್ಲದೆ, ಅವರೀಗ 50ನೇ ಸಿನಿಮಾದ ಗಡಿಯನ್ನು ತಲುಪಿದ್ದಾರೆ. ಹೌದು, ಯೋಗಿ ನಟನೆಯ 50ನೇ ಚಿತ್ರ ʻಕಿಂಗ್ʼ ಘೋಷಣೆ ಆಗಿದೆ. ಅದನ್ನು ಶಿವರಾಜ್ಕುಮಾರ್ ಲಾಂಚ್ ಮಾಡಿ, ಚಿತ್ರತಂಡ ಶುಭ ಹಾರೈಸಿದ್ದಾರೆ. ಇದೇ ವೇಳೆ ಯೋಗಿಗೆ ಅಭಿಮಾನಿಗಳು ʻಕರುನಾಡ ಸುಲ್ತಾನʼ ಅಂತ ಬಿರುದು ಕೊಟ್ಟಿದ್ದಾರೆ.
ಯೋಗಿ ಬಗ್ಗೆ ಶಿವಣ್ಣ ಮಾತು
"ಕಿಂಗ್ ಚಿತ್ರದಲ್ಲಿ ರಕ್ತ ಸಿಕ್ತ ಅಧ್ಯಾಯ ಮಾತ್ರ ಅಲ್ಲ, ಎಮೋಷನ್ ಕೂಡ ಇದೆ ಅನ್ನೋದು ನನಗೆ ಕಾಣಿಸ್ತು. ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ. ಅಪ್ಪು ಜೊತೆ ಹುಡುಗರು, ಯಾರೇ ಕೂಗಾಡಲಿ ಸಿನಿಮಾಗಳಲ್ಲಿ ಯೋಗಿ ನಟಿಸಿದ್ದರು, ನನ್ನ ಜೊತೆಗೆ ಲೀಡರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈಗ ಹೊಸ ಸಿನಿಮಾ ಬೇಲ್ನಲ್ಲಿಯೂ ಅವರಿದ್ದಾರೆ. ಯೋಗಿ ಉತ್ತಮ ನಟ. ಅವರಿಗೆ ಯಾವಾಗಲೂ ಒಳ್ಳೆಯದಾಗಬೇಕು" ಎಂದು ಶಿವಣ್ಣ ಮನಸಾರೆ ಹಾರೈಸಿದ್ದಾರೆ.
50ನೇ ಸಿನಿಮಾದಲ್ಲಿ ಹೊಸ ಲುಕ್
"ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಮತ್ತೊಂದು ಲೆಕ್ಕ. ನನ್ನ ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದೇನೆ. ಕಿಂಗ್ ವೃತ್ತಿ ಜೀವನದ 50ನೇ ಚಿತ್ರ, ಈ ಸಿನಿಮಾದಲ್ಲಿ ನಾನು ಬೇರೆ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರವನ್ನು ಜಾಕ್ ನಿರ್ದೇಶನ ಮಾಡುತ್ತಿದ್ದಾರೆ. ನಾನಂತೂ ಇದರ ಬಜೆಟ್ ಕೇಳಿಯೇ ಒಂದು ಕ್ಷಣ ಥ್ರಿಲ್ ಆದೆ. ಖಂಡಿತ ಎಲ್ಲರಿಗೂ ಇಷ್ಟವಾಗುವ ಸಿನಿಮಾ ನೀಡುತ್ತೇವೆ" ಎಂದು ಭರವಸೆ ನೀಡುತ್ತಾರೆ ಲೂಸ್ ಮಾದ ಯೋಗಿ.
"ನಾನು ಸಣ್ಣ ವಯಸ್ಸಿನಲ್ಲಿಯೇ ಹೀರೋ ಆದೆ. ಸೋಲು-ಗೆಲುವು ಎಲ್ಲವನ್ನೂ ಕಂಡೆ. ಮತ್ತೆ ಪುಟಿದೇಳಲು ಸಿದ್ದನಾಗಿದ್ದೇನೆ. ಅದಕ್ಕೆ ʻಕಿಂಗ್ʼ ಸಿನಿಮಾ ಪೂರಕವಾಗಲಿದೆ, ಆರಂಭದಲ್ಲಿ ನಾವು ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡೋಣ ಅಂತ ನಿರ್ಧರಿಸಿದ್ದೆವು. ಆನಂತರ ತೆಲುಗು, ತಮಿಳಿನಲ್ಲಿಯೂ ಈ ಚಿತ್ರ ಮಾಡಲು ನಿರ್ಧರಿಸಿದ್ದೇವೆ" ಎನ್ನುತ್ತಾರೆ ಯೋಗಿ.
Gramayana Movie: ವಿನಯ್, ಮೇಘಾ ಶೆಟ್ಟಿ ʻಗ್ರಾಮಾಯಣʼಮೂವಿ ಸಾಂಗ್ ಔಟ್: ಶಿವರಾಜ್ಕುಮಾರ್ ಸಾಥ್
ʻಕಿಂಗ್ʼ ಸಿನಿಮಾದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಕಲಾವಿದರು ನಟಿಸಲಿದ್ದಾರೆ. ದೊಡ್ಡ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ಕನ್ನಡ ಜೊತೆಗೆ ತಮಿಳು, ತೆಲುಗು ಭಾಷೆಗಳಲ್ಲಿಯೂ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಇದೆ. ಇದರಲ್ಲಿ ನಟ ಪ್ರತಾಪ್ ನಾರಾಯಣ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಗೀತ ನಿರ್ದೇಶನವನ್ನು ಶಶಾಂಕ್ ಶೇಷಗಿರಿ ಮಾಡುತ್ತಿದ್ದು, ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್, ವಿಶಾಲ್ ಪ್ರಸಾದ್, ಮಲ್ಲಿಕಾರ್ಜುನ ಸ್ವಾಮಿ ನಿರ್ಮಾಣ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.