Maarnami Teaser: ಕರಾವಳಿ ಭಾಗದ ಪ್ರೇಮಕಥೆ 'ಮಾರ್ನಮಿ'ಗೆ ರಮ್ಯಾ ಸಾಥ್; ನಾಯಕಿ ಚೈತ್ರಾ ಆಚಾರ್ ಪಾತ್ರ ರಿವೀಲ್
Chaithra J. Achar: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಚೈತ್ರಾ ಜೆ. ಆಚಾರ್ ಕೂಡ ಒಬ್ಬರು. ಇದೀಗ ಅವರು'ಮಾರ್ನಮಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ʼಮಾರ್ನಮಿʼ ಸಿನಿಮಾದಲ್ಲಿ ಚೈತ್ರಾ ಜೆ. ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರ ಪರಿಚಯಿಸುವ ಟೀಸರ್ ಅನ್ನು ಮೋಹಕ ತಾರೆ ರಮ್ಯಾ ಬಿಡುಗಡೆ ಮಾಡಿದ್ದಾರೆ.


ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಚೈತ್ರಾ ಜೆ. ಆಚಾರ್ (Chaithra J. Achar) ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಈಗ 'ಮಾರ್ನಮಿ' (Maarnami) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ʼಮಾರ್ನಮಿʼ ಸಿನಿಮಾದಲ್ಲಿ ಚೈತ್ರಾ ಜೆ. ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ.
ಗುನಾಧ್ಯ ಪ್ರೊಡಕ್ಷನ್ಸ್ ಯುಟ್ಯೂಬ್ ಚಾನಲ್ನಲ್ಲಿ ಚೈತ್ರಾ ಪಾತ್ರದ ಝಲಕ್ ಬಿಡುಗಡೆ ಮಾಡಲಾಗಿದೆ. ಮಾರ್ನಮಿಯಲ್ಲಿ ಚೈತ್ರಾ ದೀಕ್ಷಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ತನ್ನ ಪ್ರೀತಿ, ಮದುವೆ ಬಗ್ಗೆ ಕರಾವಳಿ ಭಾಷೆಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಡಿ ಗ್ಲಾಮ್ ಲುಕ್ನಲ್ಲಿ ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದು, ಮೋಹಕ ತಾರೆ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
'ಮಾರ್ನಮಿ' ಚಿತ್ರದ ಟೀಸರ್:
ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ʼಮಾರ್ನಮಿʼ ಸಿನಿಮಾದ ಸೂತ್ರಧಾರ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಜತೆಗೆ ಪ್ರೇಮಕಥೆ, ಆ್ಯಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ 'ಮಾರ್ನಮಿ' ಚಿತ್ರವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂಸಿನಿಮಾದಲ್ಲಿದೆ. ಚರಣ್ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Ragini Dwivedi: ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಾಗಿಣಿ ದ್ವಿವೇದಿ
ತಮಿಳಿಗೂ ಕಾಲಿಟ್ಟ ಚೈತ್ರಾ
2023ರಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್-ಹೇಮಂತ್ ರಾವ್ ಕಾಂಬಿನೇಷನ್ನ ʼಸಪ್ತ ಸಾಗರಾಚೆ ಎಲ್ಲೋʼ ಕನ್ನಡ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ಗಮನ ಸೆಳೆದಿದ್ದರು. ಸುರಭಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಇದೀಗ ಅವರು ʼ3 ಬಿಎಚ್ಕೆʼ (3BHK) ಸಿನಿಮಾ ಮೂಲಕ ಕಾಲಿವುಡ್ಗೆ ಕಾಲಿಟ್ಟಿದ್ದಾರೆ. ಶ್ರೀ ಗಣೇಶ್ ನಿರ್ದೇಶನದ ಈ ಸಿನಿಮಾದಲ್ಲಿ ಸಿದ್ಧಾರ್ಥ್, ಆರ್.ಶರತ್ಕುಮಾರ್, ದೇವಯಾನಿ, ಯೋಗಿ ಬಾಬು ಜತೆಗೆ ಚೈತ್ರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ʼಮೈ ಲಾರ್ಡ್ʼ ತಮಿಳು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಜತೆಗೆ ಕೆಲವು ಕನ್ನಡ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುದು ಬಹು ನಿರೀಕ್ಷಿತ ʼಉತ್ತರಕಾಂಡʼ ಚಿತ್ರ. ಡಾ.ಶಿವ ರಾಜ್ಕುಮಾರ್, ಡಾಲಿ ಧನಂಜಯ್, ಐಶ್ವರ್ಯಾ ರಾಜೇಶ್, ಭಾವನಾ ಮೆನನ್ ಮತ್ತಿತರ ಬಹು ತಾರಾಗಣವಿರುವ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರ ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ರಮ್ಯಾ ಆಯ್ಕೆಯಾಗಿದ್ದರು. ಬಳಿಕ ಕಾರಣಾಂತರದಿಂದ ಹೊರ ನಡೆದಿದ್ದರು.