ʻಬಲರಾಮನ ದಿನಗಳುʼ ಚಿತ್ರದ ʻಕ್ವಾಟರುʼ ಸಾಂಗ್ ರಿಲೀಸ್ ಮಾಡಿದ ನಟಿ ತಾರಾ ಅನುರಾಧ; ಸಿನಿಮಾ ವಿತರಣೆಗೆ ಸಾಥ್ ನೀಡಿದ ಕೆವಿಎನ್ ಪ್ರೊಡಕ್ಷನ್ಸ್
ಕೆ.ಎಂ. ಚೈತನ್ಯ ನಿರ್ದೇಶನದ, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ ‘ಬಲರಾಮನ ದಿನಗಳು’ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು..’ ಹಾಡನ್ನು ನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದ್ದಾರೆ. ‘ಆ ದಿನಗಳು’ ಚಿತ್ರದ 19 ವರ್ಷಗಳ ಬಳಿಕ ಅಂಡರ್ವರ್ಲ್ಡ್ ಸಂಶೋಧನೆ ನಡೆಸಿ ಈ ಬೃಹತ್ ಬಜೆಟ್ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.
-
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ಬಲರಾಮನ ದಿನಗಳು’ ಚಿತ್ರದ 3ನೇ ಹಾಡು ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ರೇಟ್ರೋ ಶೈಲಿಯ ಪೆಪ್ಪಿ ಸಾಂಗ್ ʻಕ್ವಾಟರ್ರು..ʼ ಅನ್ನು ನಟಿ ತಾರಾ ಅನುರಾಧಾ ಅವರು ಬಿಡುಗಡೆ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಜೂನ್ 26ರಂದು ಈ ಸಿನಿಮಾ ತೆರೆಗೆ ಬರಲಿದೆ.
ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ
ಖ್ಯಾತ ನಿರ್ದೇಶಕ ಕೆ. ಎಂ. ಚೈತನ್ಯ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ಕಾಲಿವುಡ್ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು, ಈ ವಿಶೇಷ ಹಾಡಿಗೆ ನಟಿ ವಂದಿತಾ ಗೌಡ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ‘ಟೈಗರ್’ ವಿನೋದ್ ಪ್ರಭಾಕರ್ ಮತ್ತು ಪ್ರಿಯಾ ಆನಂದ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಜಂಟಿಯಾಗಿ ನಿರ್ಮಿಸಿದ್ದಾರೆ.
‘ಬಲರಾಮನ ದಿನಗಳು’ ಚಿತ್ರಕ್ಕೆ ತಾರಾ ಹಾರೈಕೆ
‘ಬಲರಾಮನ ದಿನಗಳು’ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ನಟಿ ತಾರಾ, "ಹಾಡು ತುಂಬಾ ಆಕರ್ಷಕವಾಗಿ ಮೂಡಿಬಂದಿದೆ. ನಿರ್ಮಾಪಕ ಶ್ರೇಯಸ್ಗೆ ಸಿನಿಮಾ ಹಾಗೂ ವಿನೋದ್ ಪ್ರಭಾಕರ್ ಎಂದರೆ ಅಪ್ರತಿಮ ಪ್ರೀತಿ. ಮತ್ತೊಬ್ಬ ನಿರ್ಮಾಪಕಿ ಪದ್ಮಮ್ಮ ಇಡೀ ಚಿತ್ರತಂಡಕ್ಕೆ ತಾಯಿಯಂತಿದ್ದಾರೆ. ಮೂವರೂ ಸೇರಿ ಸಿನಿಮಾವನ್ನು ತುಂಬಾ ಚೆನ್ನಾಗಿ ಮುನ್ನಡೆಸಿದ್ದಾರೆ. ದುಬಾರಿ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್ ಅವರನ್ನು ಕರೆತಂದು ಕೆಲಸ ಮಾಡಿಸಿರುವುದು ವಿಶೇಷ. ಟಿ-ಸೀರೀಸ್ನಂತಹ ದೊಡ್ಡ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿರುವುದೇ ಚಿತ್ರದ ಕ್ವಾಲಿಟಿಗೆ ಸಾಕ್ಷಿ. ಸಿನಿಮಾ ದೊಡ್ಡ ಚರಿತ್ರೆ ಸೃಷ್ಟಿಸಲಿದ್ದು, ನಾನೇ ಮೊದಲು ನೋಡಲು ಕಾಯುತ್ತಿದ್ದೇನೆ" ಎಂದು ಹೇಳಿದರು.
ರಿಲೀಸ್ ಮಾಡಲು ಕೆವಿಎನ್ ಸಾಥ್
"ಮಾದೇವ ಚಿತ್ರದ ನಂತರ ನಾನು ಒಪ್ಪಿಕೊಂಡ ಸಿನಿಮಾವಿದು. ಇದೊಂದು ಕಾಲ್ಪನಿಕ ಕಥೆಯಾಗಿದ್ದು, ನನ್ನ ಸಿನಿಮಾ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಬಜೆಟ್ನ ಚಿತ್ರವಾಗಿದೆ. ಬಯೋಪಿಕ್ ಮಾಡುವಾಗ ಸಣ್ಣದೊಂದು ಭಯವಿರುತ್ತದೆ, ಆದರೆ ಇಲ್ಲಿ ನಟನಾಗಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ರಿಲೀಸ್ ಮಾಡುತ್ತಿರುವುದು ನಮ್ಮ ತಂಡಕ್ಕೆ ಆನೆಬಲ ತಂದಿದೆ" ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
‘ಆ ದಿನಗಳು’ ಚಿತ್ರದ 19 ವರ್ಷಗಳ ನಂತರ ಮತ್ತೊಂದು ವರ್ಷನ್
"ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಇದು ಮೂರನೇ ಸಾಂಗ್. ನನ್ನ ನಿರ್ದೇಶನದ ಸೂಪರ್ ಹಿಟ್ ‘ಆ ದಿನಗಳು’ ಸಿನಿಮಾ ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಓದಿ, ಅಂಡರ್ವರ್ಲ್ಡ್ (ಭೂಗತ ಲೋಕ) ಬಗ್ಗೆ ಸಂಶೋಧನೆ ನಡೆಸಿ ಈ ಕಥೆ ಬರೆದಿದ್ದೇನೆ. ಅದರ ಮತ್ತೊಂದು ವರ್ಷನ್ ಇದಾಗಿದೆ. ವಿನೋದ್ ಅದ್ಭುತ ಪ್ರತಿಭಾವಂತ ನಟ, ಈ ಸಿನಿಮಾದ ಅಸಲಿ ಫೀಲ್ ಸಿಗಬೇಕಾದರೆ ಥಿಯೇಟರ್ನಲ್ಲೇ ನೋಡಬೇಕು" ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಹೇಳಿದ್ದಾರೆ.
ನಿರ್ಮಾಪಕ ಶ್ರೇಯಸ್ ಸದ್ಯದಲ್ಲೇ ಮತ್ತೊಂದು ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಇರುವುದಾಗಿ ತಿಳಿಸಿದರೆ, ನಿರ್ಮಾಪಕಿ ಪದ್ಮಾವತಿ ಜಯರಾಮ್ ಅವರು ನಿರ್ದೇಶಕರ ಮೇಲಿರುವ ವಿಶ್ವಾಸದಿಂದಾಗಿ ಚಿತ್ರದ ಗೆಲುವಿನ ಬಗ್ಗೆ ಯಾವುದೇ ಭಯವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಚಿತ್ರಕ್ಕೆ ಎಚ್. ಸಿ. ವೇಣು ಛಾಯಾಗ್ರಹಣ ಮಾಡಿದ್ದಾರೆ.