ಹಾಲ್ ಟಿಕೆಟ್ನಲ್ಲಿ ಇರುವವರೇ ಯಾರೋ, ಪರೀಕ್ಷೆಗೆ ಬಂದವರೇ ಇನ್ಯಾರೋ! ನೀಟ್ ಬರೆಯಲು ಬಂದ 9 ವಂಚಕರು ಖೆಡ್ಡಾಕ್ಕೆ
ನೀಟ್ ಮರು ಪರೀಕ್ಷೆ ನಿನ್ನೆ ಭಾನುವಾರ (ಜೂ. 21) ಕ್ಕೆ ಮುಕ್ತಾಯಗೊಂಡಿದ್ದು, 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಬಿಹಾರದ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ಪರೀಕ್ಷೆ ಮತ್ತು ವಂಚನೆಯ ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣಗಳು ಬೆಳಕಿಗೆ ಬಂದ ನಂತರ ಜಿಲ್ಲಾಡಳಿತ ಮತ್ತು ಪೊಲೀಸರು 2026 ರ ನೀಟ್ ಯುಜಿ ಮರುಪರೀಕ್ಷೆಯ ಸಮಯದಲ್ಲಿ ಪ್ರಮುಖ ಕ್ರಮ ಕೈಗೊಂಡಿದ್ದಾರೆ.
ಸಂಗ್ರಹ ಚಿತ್ರ -
ಪಟನಾ: ನೀಟ್ ಮರು ಪರೀಕ್ಷೆ (NEET Re-Exam) ನಿನ್ನೆ ಭಾನುವಾರ (ಜೂ. 21) ಕ್ಕೆ ಮುಕ್ತಾಯಗೊಂಡಿದ್ದು, 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಬಿಹಾರದ (Bihar) ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ಪರೀಕ್ಷೆ ಮತ್ತು ವಂಚನೆಯ ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣಗಳು ಬೆಳಕಿಗೆ ಬಂದ ನಂತರ ಜಿಲ್ಲಾಡಳಿತ ಮತ್ತು ಪೊಲೀಸರು 2026 ರ ನೀಟ್ ಯುಜಿ ಮರುಪರೀಕ್ಷೆಯ ಸಮಯದಲ್ಲಿ ಪ್ರಮುಖ ಕ್ರಮ ಕೈಗೊಂಡಿದ್ದಾರೆ. ತಪಾಸಣೆಯ ಸಮಯದಲ್ಲಿ ಒಟ್ಟು 30 ಜನರನ್ನು ಬಂಧಿಸಲಾಗಿದೆ, ಇದರಲ್ಲಿ ಇತರ ಅಭ್ಯರ್ಥಿಗಳ ಬದಲಿಗೆ ಹಾಜರಾಗಿದ್ದ ಒಂಬತ್ತು ಆರೋಪಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಲಖಿಸರೈನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಆರ್ಕೆ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಒಬ್ಬ, ಕೇಂದ್ರೀಯ ವಿದ್ಯಾಲಯದಲ್ಲಿ ಏಳು ಮತ್ತು ಹಸನ್ಪುರ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ನಕಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳು ವಿವಿಧ ಜಿಲ್ಲೆಗಳವರು ಎಂದು ವರದಿಯಾಗಿದೆ. ಪರೀಕ್ಷಾ ವಂಚನೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ವಂಚಕರಲ್ಲದೆ, ಇತರ 21 ಜನರನ್ನು ಸಹ ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಎಸ್ಡಿಎಂ ಪ್ರಭಾಕರ್ ಕುಮಾರ್ ಮತ್ತು ಎಸ್ಡಿಪಿಒ ಶಿವಂ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ಸಮಯದಲ್ಲಿ ಪಡೆದ ಮಾಹಿತಿಯ ಆಧಾರದ ಮೇಲೆ, ವಿಶೇಷ ಪೊಲೀಸ್ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಸಂಭಾವ್ಯ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.
ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸುಳ್ಳು
ಜೂನ್ 21ರಂದು ನಡೆದ ನೀಟ್ ಯುಜಿ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿಯಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸ್ಪಷ್ಟಪಡಿಸಿದೆ. ಎಕ್ಸ್ ಜಾಲತಾಣದಲ್ಲಿ ಈ ಕುರಿತು ಅಧಿಕೃತ ಹೇಳಿಕೆ ಪ್ರಕಟಿಸಿರುವ ಎನ್ಟಿಎ, ನೀಟ್ ಮರು ಪರೀಕ್ಷೆಯನ್ನು ಸಮಗ್ರ ಭದ್ರತೆ ಮತ್ತು ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. 2026ರ ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಸಂಪೂರ್ಣವಾಗಿ ನಕಲಿಯಾಗಿದ್ದು, ಅದರಲ್ಲಿನ ಎಲ್ಲಾ ಹೇಳಿಕೆಗಳು ಸುಳ್ಳು ಎಂದು ತಿಳಿಸಿದೆ.
ಮೇ 03ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಭಾರಿ ವಿವಾದಕ್ಕೀಡಾಗಿ, ಪರೀಕ್ಷೆ ರದ್ದಾಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಪಾರದರ್ಶಕತೆಗೆ ಆದ್ಯತೆ ನೀಡುವ ಮೂಲಕ ಮರು ಪರೀಕ್ಷೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿತ್ತು.