ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದ ಮಧ್ಯೆ ಭಾರತದ ನೆರವಿಗೆ ಧಾವಿಸಿದ ರಷ್ಯಾ: ತೈಲ, ಅನಿಲ ರಫ್ತು ಹೆಚ್ಚಳ
US–Israel–Iran conflict: ಭಾರತಕ್ಕೆ ತೈಲ ಮತ್ತು ಅನಿಲ ರಫ್ತು ಹೆಚ್ಚಿಸಲಾಗುವುದು ಎಂದು ರಷ್ಯಾ ಉಪ ಪ್ರಧಾನಿ ಡೆನಿಸ್ ಮಂಟುರೊವ್ ಭರವಸೆ ನೀಡಿದ್ದಾರೆ. ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿದ ಅವರು ಮಾತುಕತೆ ನಡೆಸಿದರು. 2025ರ ಅಂತ್ಯದ ವೇಳೆಗೆ ರಷ್ಯಾ, ಭಾರತಕ್ಕೆ ಬೇಡಿಕೆಯಿರುವ ಖನಿಜ ರಸಗೊಬ್ಬರಗಳ ಸರಬರಾಜನ್ನು ಶೇ. 40ರಷ್ಟು ಹೆಚ್ಚಿಸಿದೆ.
ಮೋದಿ-ಪುಟಿನ್ (ಸಂಗ್ರಹ ಚಿತ್ರ) -
ನವದೆಹಲಿ, ಏ. 4: ಭಾರತಕ್ಕೆ ತೈಲ ಮತ್ತು ಅನಿಲ ರಫ್ತು ಹೆಚ್ಚಿಸುವುದಾಗಿ ಮಾಸ್ಕೋ ಭರವಸೆ ನೀಡಿದೆ ಎಂದು ರಷ್ಯಾದ ಉಪ ಪ್ರಧಾನಿ ಡೆನಿಸ್ ಮಂಟುರೊವ್ ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಅವರು ನವದೆಹಲಿಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡುವ ಮೊದಲು ಅವರು ಎನ್ಎಸ್ಎ ಅಜಿತ್ ದೋವಲ್ (Ajit Doval), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಜತೆ ಮಾತುಕತೆ ನಡೆಸಿದರು.
ಭೇಟಿಯ ಬಳಿಕ ಹೇಳಿಕೆ ನೀಡಿದ ರಷ್ಯಾ, ʼʼ2025ರ ಅಂತ್ಯದ ವೇಳೆಗೆ ರಷ್ಯಾ ಭಾರತಕ್ಕೆ ಖನಿಜ ರಸಗೊಬ್ಬರಗಳ ಸರಬರಾಜನ್ನು ಶೇ. 40ರಷ್ಟು ಹೆಚ್ಚಿಸಿದೆ. ಭಾರತದ ಅಗತ್ಯಗಳನ್ನು ಪೂರೈಸಲು ಸಿದ್ಧʼʼ ಎಂದು ತಿಳಿಸಿದೆ.
ʼʼಕಾರ್ಬಮೈಡ್ ಉತ್ಪಾದನೆಗೆ ಜಂಟಿ ಯೋಜನೆಯು ಅಭಿವೃದ್ಧಿ ಹಂತದಲ್ಲಿದೆ. ತೈಲ ಮತ್ತು ಅನಿಲ ವಲಯದಲ್ಲಿನ ಸಹಕಾರಕ್ಕೆ ಒತ್ತು ನೀಡಲಾಗಿದೆ. ಭಾರತೀಯ ಮಾರುಕಟ್ಟೆಗೆ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸರಬರಾಜನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ರಷ್ಯಾದ ಕಂಪನಿಗಳು ಹೊಂದಿವೆʼʼ ಎಂದು ಮಾಂಟುರೊವ್ ದೃಢಪಡಿಸಿದರು. ʼʼಪರಮಾಣು ಶಕ್ತಿಯಲ್ಲಿ ಎರಡೂ ಕಡೆಯವರು ತಮ್ಮ ಸಂಬಂಧಗಳನ್ನು ಹೆಚ್ಚಿಸುತ್ತಿದ್ದಾರೆʼʼ ಎಂದೂ ತಿಳಿಸಿದರು.
ಮೋದಿ ಅವರ ಎಕ್ಸ್ ಪೋಸ್ಟ್:
Pleased to meet Russia’s First Deputy PM Denis Manturov. We discussed our mutually beneficial cooperation in trade, fertilizers, connectivity and people-to-people ties. Welcomed the sustained efforts from both sides to implement the outcomes of the 23rd India-Russia Annual Summit… pic.twitter.com/zKymtXPWHG
— Narendra Modi (@narendramodi) April 2, 2026
ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಘಟಕಗಳನ್ನು ಅಳವಡಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ರಷ್ಯಾ ಒತ್ತು ನೀಡಿದೆ.
ಮೋದಿ ಹೇಳಿದ್ದೇನು?
ರಷ್ಯಾದ ಉಪ ಪ್ರಧಾನಿ ಡೆನಿಸ್ ಮಾಂಟುರೋವ್ ಅವರ ಭೇಟಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ʼʼರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೋವ್ ಅವರನ್ನು ಭೇಟಿ ಮಾಡಿದ್ದು ಸಂತಸ ತಂದಿದೆ. ವ್ಯಾಪಾರ, ರಸಗೊಬ್ಬರ, ಸಂಪರ್ಕ ಮತ್ತು ಸಂಬಂಧಗಳಲ್ಲಿ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಕಳೆದ ಡಿಸೆಂಬರ್ನಲ್ಲಿ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಸಮಯದಲ್ಲಿ ನಡೆದ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಫಲಿತಾಂಶಗಳನ್ನು ಕಾರ್ಯಗತಗೊಳಿಸಲು ಎರಡೂ ಕಡೆಯಿಂದ ನಡೆಸುತ್ತಿರು ನಿರಂತರ ಪ್ರಯತ್ನಗಳನ್ನು ಸ್ವಾಗತಿಸಲಾಯಿತುʼʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
7ನೇ ಎಲ್ಪಿಜಿ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟುತ್ತಿದ್ದಂತೆ ಭಾರತಕ್ಕೆ ವಿಶೇಷ ಸಂದೇಶ ರವಾನಿಸಿದ ಇರಾನ್
ಅಂಕಿಅಂಶಗಳ ಪ್ರಕಾರ ರಷ್ಯಾದಿಂದ ಭಾರತದ ತೈಲ ಖರೀದಿ ಮಾರ್ಚ್ನಲ್ಲಿ ಶೇ. 45ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ. ಫೆಬ್ರವರಿಯಲ್ಲಿ 1 ಮಿಲಿಯನ್ ಬಿಪಿಡಿ ಇದ್ದಿದ್ದು ಮಾರ್ಚ್ನಲ್ಲಿ 1.5 ಮಿಲಿಯನ್ ಬಿಪಿಡಿಗೆ ಏರಿದೆ. ಇನ್ನು ಭಾರತವು ರಷ್ಯಾದಿಂದ ಪ್ರಸ್ತುತ ನೈಸರ್ಗಿಕ ಅನಿಲವನ್ನು ಖರೀದಿಸುತ್ತಿಲ್ಲ. ಹೀಗಾಗಿ ರಷ್ಯಾದ ಉಪ ಪ್ರಧಾನಮಂತ್ರಿಯ ಹೇಳಿಕೆಯು ಮನ ಸೆಳೆದಿದೆ.
ಇಲ್ಲಿಯವರೆಗೆ, ಭಾರತವು ನೈಸರ್ಗಿಕ ಅನಿಲಕ್ಕಾಗಿ ಕತಾರ್ ಅನ್ನು ಅವಲಂಬಿಸಿದೆ. ಇದು ಭಾರತದ ನೈಸರ್ಗಿಕ ಅನಿಲದ ಸುಮಾರು ಶೇ. 40-50ರಷ್ಟು ಪೂರೈಸುತ್ತಿದೆ. ಭಾರತವು ರಷ್ಯಾದ ಅನಿಲವನ್ನು ಆರಿಸಿಕೊಂಡರೆ, ತನ್ನ ಅಗತ್ಯಕ್ಕಾಗಿ ಭಾರತ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸುವುದು ಕಡಿಮೆಯಾಗಲಿದೆ.
ರಷ್ಯಾದ ಸಂಸದೀಯ ನಾಯಕ ವ್ಲಾಡಿಮಿರ್ ಯಾಕುಶೇವ್ ನೇತೃತ್ವದ ಉನ್ನತ ಮಟ್ಟದ ರಷ್ಯಾದ ನಿಯೋಗವು ಸಂಸತ್ ಭವನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿತು. ನಿಯೋಗವನ್ನು ಸ್ವಾಗತಿಸಿದ ಬಿರ್ಲಾ, ಭಾರತ-ರಷ್ಯಾ ಸಂಸದೀಯ ಸಂಬಂಧಗಳ ಬಗ್ಗೆ ಮಾತನಾಡಿದರು.