"10 ನಿಮಿಷ ಸಿಕ್ಕಿದ್ರೆ" : ಭಾರತಕ್ಕೆ ನುಸುಳಿದ ಬಗೆಯನ್ನು ಬಿಚ್ಚಿಟ್ಟ ಬಾಂಗ್ಲಾದೇಶಿಯರು
ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರಳುತ್ತಿರುವ ಕೆಲವು ಬಾಂಗ್ಲಾದೇಶಿ ಅಕ್ರಮ ವಲಸಿಗರು, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿಧಾನ, ನಕಲಿ ದಾಖಲೆಗಳನ್ನು ಪಡೆದ ರೀತಿ ಹಾಗೂ ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಗಡಿ ಭದ್ರತೆಯ ಲೋಪದೋಷಗಳನ್ನು ಬಳಸಿಕೊಂಡು ಕೇವಲ 10 ನಿಮಿಷಗಳಲ್ಲಿ ಭಾರತ ಪ್ರವೇಶ ಸಾಧ್ಯವೆಂದು ಕೆಲವರು ಹೇಳಿದ್ದು, ಈ ಬೆಳವಣಿಗೆ ಗಡಿ ಭದ್ರತೆ ಮತ್ತು ಅಕ್ರಮ ವಲಸೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಎಐ ರಚಿತ ಚಿತ್ರ -
ನವದೆಹಲಿ: ಬಂಧನದ ಭೀತಿಯಿಂದಾಗಿ ನೂರಾರು ಬಾಂಗ್ಲಾದೇಶಿ ಅಕ್ರಮ ವಲಸಿಗರು (Bangladeshi illegal immigrants) ಈಗ ಪಶ್ಚಿಮ ಬಂಗಾಳದ ಗಡಿ ಭಾಗಗಳಿಗೆ ಮತ್ತು ಸಾರಿಗೆ ನಿಲ್ದಾಣಗಳಿಗೆ ಧಾವಿಸುತ್ತಿದ್ದಾರೆ. ದಶಕಗಳಿಂದ ಭಾರತದಲ್ಲೇ ನೆಲೆಸಿರುವ ಇವರು, ತಾವು ಅಕ್ರಮವಾಗಿ ಗಡಿ ದಾಟಿದ ಹಾಗೂ ನಕಲಿ ಭಾರತೀಯ ದಾಖಲೆಗಳನ್ನು ಪಡೆದ ವಿಧಾನವನ್ನು ಬಹಿರಂಗಪಡಿಸಿದ್ದಾರೆ.
ಕೆಲವರು ನದಿಗಳನ್ನು ದಾಟಿ ಬಂದರೆ, ಇನ್ನು ಕೆಲವರು ಮಧ್ಯವರ್ತಿಗಳ (ದಲಾಲ್) ಸಹಾಯದಿಂದ ಕತ್ತಲೆಯಲ್ಲಿ ಗಡಿ ದಾಟಿದ್ದಾಗಿ ಹೇಳಿದ್ದಾರೆ. ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಗಸ್ತು ತಿರುಗುವಿಕೆಯಲ್ಲಿ ಸಣ್ಣ ಬಿಡುವು ಸಿಕ್ಕರೆ ಸಾಕು, ಕೇವಲ 10 ನಿಮಿಷಗಳಲ್ಲಿ ಭಾರತದೊಳಗೆ ನುಸುಳಬಹುದು ಎಂದು ವಲಸಿಗನೊಬ್ಬ ತಿಳಿಸಿದ್ದಾನೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ತಮಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳನ್ನು ಮಾಡಿಸಿಕೊಡಲು ಸಹಾಯ ಮಾಡಿದರು ಮತ್ತು ಇದರಿಂದ ಸರ್ಕಾರಿ ಕಲ್ಯಾಣ ಯೋಜನೆಗಳ ಹಣದ ಸೌಲಭ್ಯ ಪಡೆದು ಮತದಾನವನ್ನೂ ಮಾಡಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.
ಈ ಬೆಳವಣಿಗೆಯು ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರ ವಿರುದ್ಧ ನಡೆಯುತ್ತಿರುವ ಕಠಿಣ ಕ್ರಮಗಳ ನಡುವೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಅಕ್ರಮ ವಲಸಿಗರಿಗೆ ಆಶ್ರಯ ನೀಡದೆ ನೇರವಾಗಿ ಬಿಎಸ್ಎಫ್ಗೆ ಒಪ್ಪಿಸಬೇಕು ಎಂದು ಘೋಷಿಸಿದ್ದಾರೆ. ಬಿಜೆಪಿ ಸರ್ಕಾರವು ಅಕ್ರಮ ವಲಸಿಗರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಗುರುತಿಸಿ ಕಡಿತಗೊಳಿಸುತ್ತಿದೆ.
ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ‘ಟೈಮ್ ಬಾಂಬ್’: ಡಿಕೆಶಿ-ರಾಹುಲ್ಗೆ ಜಾತಿ ಗಣತಿ ಸವಾಲು!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವಲಸಿಗರು ತಾವಾಗಿಯೇ ಮರಳುತ್ತಿರುವುದರಿಂದ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕಾರ್ಪೆಂಟರ್ ಒಬ್ಬ ತಾನು ಮಧ್ಯವರ್ತಿಗೆ ರೂ. 7,೦೦೦ ದಿಂದ 8,೦೦೦ ನೀಡಿ ಗಡಿ ದಾಟಿದ್ದಾಗಿ ಹೇಳಿದ್ದಾನೆ. ಬೆಂಗಳೂರಿನಲ್ಲಿದ್ದ ಮತ್ತೊಬ್ಬ ವಲಸಿಗ ರೂ. 2೦,೦೦೦ ನೀಡಿ ಏಜೆಂಟರ ಸಹಾಯದಿಂದ ಬಂದಿರುವುದಾಗಿ ತಿಳಿಸಿದ್ದಾನೆ.
ಭಾರತ-ಬಾಂಗ್ಲಾದೇಶದ 4,೦96 ಕಿಮೀ ಗಡಿಯಲ್ಲಿ ನದಿಗಳು ಮತ್ತು ದಟ್ಟ ಜನಸಂಖ್ಯೆಯ ಪ್ರದೇಶಗಳಿದ್ದು, ಮಾನವ ಕಳ್ಳಸಾಗಣೆದಾರರು ಈ ಲೋಪದೋಷಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಗೃಹ ಸಚಿವಾಲಯದ ಪ್ರಕಾರ, ಈಗಾಗಲೇ ಶೇ. 79 ರಷ್ಟು ಗಡಿ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಟಿಎಂಸಿ ಆಡಳಿತಾವಧಿಯಲ್ಲಿ ತಮಗೆ ಲಕ್ಷ್ಮೀರ್ ಭಂಡಾರ್ ಯೋಜನೆಯ ಲಾಭ ಸಿಕ್ಕಿತ್ತು ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ. ಆದರೆ ಸುವೇಂದು ಅಧಿಕಾರಿಯವರು ಇಂತಹ 3೦ ಲಕ್ಷ ನಕಲಿ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ರದ್ದುಗೊಳಿಸಲಾಗಿದೆ ಎಂದಿದ್ದಾರೆ. ಬಂಧನ ಕೇಂದ್ರಗಳ ಭೀತಿಯಿಂದಾಗಿ ಕಾರ್ಪೆಂಟರ್, ಮೇಸ್ತ್ರಿ ಹಾಗೂ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದ ಅನೇಕ ಬಾಂಗ್ಲಾದೇಶಿಯರು ಈಗ ಸ್ವಇಚ್ಛೆಯಿಂದ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ಈ ಇಡೀ ಜಾಲವು ಭಾರತದ ಆಡಳಿತ ಮತ್ತು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ.