ಎಸಿ ಸ್ಫೋಟದಿಂದ ದೆಹಲಿಯ ವಸತಿಗೃಹದಲ್ಲಿ ಭೀಕರ ಅಗ್ನಿ ದುರಂತ: 9 ಮಂದಿ ಸಾವು, ಹಲವರಿಗೆ ಗಾಯ
Fire Accident: ದೆಹಲಿಯ ವಿವೇಕ್ ವಿಹಾರ್ನ ವಸತಿ ಗೃಹದಲ್ಲಿ ಅಘಾತಕಾರಿ ಘಟನೆ ನಡೆದಿದ್ದು ಭೀಕರ ಅಗ್ನಿ ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಸಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ. ಸದ್ಯ ಇದರ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ದೆಹಲಿಯಲ್ಲಿ ಬೆಂಕಿ ಅವಘಡ -
ದೆಹಲಿ, ಮೇ 3: ರಾಷ್ಟ್ರ ರಾಜಧಾನಿದಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು, ದೆಹಲಿಯ ವಿವೇಕ್ ವಿಹಾರ್ನ ವಸತಿ ಗೃಹ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 9 ಜನ ಸಾವನ್ನಪ್ಪಿದ್ದಾರೆ. ಗಾಯಗೊಂಡ ಹಲವರನ್ನು ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸದ್ಯ ಇದರ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ರಾಷ್ಟ್ರ ರಾಜಧಾನಿಯ ಶಹದಾರಾದ ವಿವೇಕ್ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಶನಿವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವಾರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ ಸುಮಾರು 3:13ಕ್ಕೆ ಬೆಂಕಿ ತಗುಲಿದ್ದು ಅರ್ಧ ಗಂಟೆಯಲ್ಲಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ಸಿಕ್ಕಿದೆ.
ವಿಡಿಯೊ ನೋಡಿ:
#WATCH | Delhi: A fire broke out in a 4-storey building in Vivek Vihar, Shahdara. So far, 3-4 bodies have been found. Several fire tenders are on the spot. pic.twitter.com/4T0lxZeJPW
— ANI (@ANI) May 3, 2026
ವಿವೇಕ್ ವಿಹಾರ್ ಹಂತ-Iರಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡನೇ, ಮೂರನೇ ಮತ್ತು ನಾಲ್ಕನೇ ಮಹಡಿಗೂ ಹರಡಿ ಫ್ಲಾಟ್ಗಳು ಹಾನಿಗೊಳಗಾಗಿವೆ. ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ಸೇವೆಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ತಕ್ಷಣ ಸ್ಪಂದಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವು. ಬೆಂಕಿಯ ಜ್ವಾಲೆಗೆ ಹಲವು ನಿವಾಸಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ.
ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ
ಅಗ್ನಿಶಾಮಕ ಸಿಬ್ಬಂದಿ ಸುಮಾರು 10ರಿಂದ 15 ಜನರನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಕಟ್ಟಡದಲ್ಲಿದ್ದ ಎಸಿ ಸ್ಫೋಟಗೊಂಡಿದ್ದರಿಂದ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ದಟ್ಟವಾದ ಹೊಗೆಯಿಂದಾಗಿ ಮೇಲಿನ ಮಹಡಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಆರ್ಪಿ ಮೀನಾ ತಿಳಿಸಿದ್ದಾರೆ.
ವಿವರವಾದ ಪರಿಶೀಲನೆಯ ನಂತರ ಬೆಂಕಿಗೆ ನಿಖರ ಕಾರಣ ತಿಳಿದು ಬರಲಿದೆ. ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.