ಹಠಾತ್ ಪ್ರವಾಹ: ಸೇತುವೆ ಮುರಿದು ಕೊಚ್ಚಿ ಹೋದ ಬಿಆರ್ಒ ಚಾಲಕ; ಇಲ್ಲಿದೆ ನೋಡಿ ಭಯಾನಕ ವಿಡಿಯೊ
ಮೇಘಸ್ಪೋಟ ಮತ್ತು ಭಾರಿ ಮಳೆಯಿಂದಾಗಿ ಉತ್ತರಾಖಂಡದ ಚಮೋಲಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಸೇತುವೆ ಮುರಿದಿದೆ. ಇದನ್ನು ನೋಡುತ್ತಿದ್ದ ಬಿಆರ್ಒ ವಾಹನ ಚಾಲಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ವಾಹನ ಚಾಲಕನನ್ನು ಹುಡುಕಲು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸೇತುವೆ ಮುರಿದುದರಿಂದ ಸುಮಾರು 12ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ.
ಸಂಗ್ರಹ ಚಿತ್ರ -
ಉತ್ತರಾಖಂಡ: ಹಠಾತ್ ಪ್ರವಾಹ (Flash flood) ಉಂಟಾಗಿ ಬಿಆರ್ಒ ವಾಹನ ಚಾಲಕನೊಬ್ಬ (BRO driver) ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಸೋಮವಾರ ಉತ್ತರಾಖಂಡದ (uttarakhand) ಚಮೋಲಿಯಲ್ಲಿ (Chamoli district) ನಡೆದಿದೆ. ಇದರ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿದೆ. ಸೇತುವೆ ಕುಸಿದಿರುವುದರಿಂದ ಸುಮಾರು 12ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ವಾಹನ ಚಾಲಕನನ್ನು ಹುಡುಕಲು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಉತ್ತರಾಖಂಡದ ಕಣಿವೆ ಭಾಗಗಳಲ್ಲಿ ಭಾರೀ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಚಮೋಲಿ ಜಿಲ್ಲೆಯಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿದೆ. ಇದರಿಂದ ಕೆಲವೆಡೆ ಹಠಾತ್ ಪ್ರವಾಹ ಉಂಟಾಗಿದೆ. ಏಕಾಏಕಿ ತುಂಬಿ ಹರಿದ ತಮಕ್ ಚರಂಡಿಯ ಮೇಲೆ ನಿರ್ಮಿಸಲಾದ ಸೇತುವೆ ಕೊಚ್ಚಿ ಹೋಗಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಪೊಲೀಸ್, ಆಡಳಿತ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಸ್ವಾತಂತ್ರ್ಯೋತ್ಸವದಲ್ಲಿ ಹೊಸ ಸಂಪ್ರದಾಯ: ರಾಷ್ಟ್ರಗೀತೆಗೆ ಮುನ್ನ ಕೆಂಪುಕೋಟೆಯಲ್ಲಿ ಮೊಳಗಲಿದೆ ‘ವಂದೇ ಮಾತರಂ’
ಕುಸಿತಗೊಂಡಿರುವ ತಮಕ್ ಚರಂಡಿಯ ಬೈಲಿ ಸೇತುವೆಯು ಮಲಾರಿ- ನೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಇದು ಜ್ಯೋತಿರ್ಮಠವನ್ನು ಗಡಿ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಈ ಸೇತುವೆ ಕುಸಿದು ಬಿದ್ದಾಗ ಪ್ರವಾಹವನ್ನು ನೋಡುತ್ತಿದ್ದ ಬಿಆರ್ಒ ಚಾಲಕ, ಪಿಥೋರಗಢ ಜಿಲ್ಲೆಯ ನಿವಾಸಿ ಪಂಕಜ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಇನ್ನೊಂದು ವಾಹನ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
ಈ ಕುರಿತು ಮಾಹಿತಿ ನೀಡಿದ ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್ ಕೆ ಜೋಶಿ, ಸೇತುವೆ ಕುಸಿತದ ಬಳಿಕ ಹತ್ತಿರದ ಅಪಾಯಕಾರಿ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಆಡಳಿತ ತಂಡಗಳು ಹಾನಿ ಎಷ್ಟಾಗಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದೆ. ಒಂದೆರಡು ದಿನಗಳಲ್ಲಿ ಸಂಚಾರ ಪುನಃ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದರು.
तमक नाला उफनाने से नाले पर बना पुल क्षतिग्रस्त, मलारी से आगे आवाजाही बाधित। फिलहाल किसी जनहानि की सूचना नहीं है।
— Chamoli Police Uttarakhand (@chamolipolice) August 10, 2026
पुलिस, प्रशासन, SDRF व NDRF की टीमें मौके के लिए रवाना। स्थिति पर लगातार नजर रखी जा रही है। pic.twitter.com/0qgB4mngJx
ತಮಕ್ ಚರಂಡಿಯ ಬಳಿ ಕಳೆದ ಹಲವಾರು ವರ್ಷಗಳಿಂದ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿ ಜೋಶಿಮಠ- ನೀತಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಮಾತ್ರವಲ್ಲದೆ ಪ್ರವಾಹದಲ್ಲಿ ಕೊಚ್ಚಿ ಹೋಗುವ ಅವಶೇಷಗಳು ಹತ್ತಿರದ ಧೌಲಿ ಗಂಗೆಗೆ ಸೇರುತ್ತಿದೆ. ಇದರಿಂದ ನೀರಿನ ಸುಗಮ ಸಂಚಾರಕ್ಕೆ ಪದೇ ಪದೇ ಅಡ್ಡಿಯುಂಟಾಗುತ್ತದೆ.
12 ಹಳ್ಳಿಗಳಿಗೆ ಸಂಪರ್ಕ ಕಡಿತ
ಸೇತುವೆ ಸಂಪರ್ಕ ಕಡಿತವಾಗಿರುವುದರಿಂದ ಮುಖ್ಯ ಪಟ್ಟಣದೊಂದಿಗಿನ ಸುಮಾರು 12 ಹಳ್ಳಿಗಳಿಗೆ ಸಂಪರ್ಕ ದಾರಿ ಇಲ್ಲದಂತಾಗಿದೆ. ಪರಿಸ್ಥಿತಿ ಸುಧಾರಣೆಯಾಗುವವರೇ ಜನರು ಪ್ರಯಾಣವನ್ನು ಮುಂದೂಡಲು ಹಾಗೂ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಅಪಾಯವಿರುವುದರಿಂದ ನದಿ, ಹೊಳೆಗಳ ಬಳಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭಾರೀ ಮಳೆ ಮುಂದುವರಿದಿರುವುದರಿಂದ ಅಲಕನಂದಾ ನದಿ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಸುರಕ್ಷತಾ ದೃಷ್ಟಿಯಿಂದ ನದಿ ದಂಡೆಯಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪೊಲೀಸ್ ತಂಡಗಳು ಮನವಿ ಮಾಡುತ್ತಿರುವುದಾಗಿ ಚಮೋಲಿ ಪೊಲೀಸರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಉತ್ತರಾಖಂಡ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಅವರು ಭಾನುವಾರ ರಾತ್ರಿಯಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಡೆಹ್ರಾಡೂನ್, ಬಾಗೇಶ್ವರ, ನೈನಿತಾಲ್ ಮತ್ತು ಚಂಪಾವತ್ ಭಾಗದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ತಿಳಿಸಿದ್ದಾರೆ.
नीति घाटी में हुई भारी वर्षा के कारण अलकनंदा नदी का जलस्तर बढ़ गया है। सुरक्षा के दृष्टिगत पुलिस टीम द्वारा नदी किनारे रह रहे लोगों को लाउडस्पीकर/अनाउंसमेंट के माध्यम से सुरक्षित स्थानों पर जाने की अपील की जा रही है। pic.twitter.com/sqg8lXScQ6
— Chamoli Police Uttarakhand (@chamolipolice) August 10, 2026
ತುರ್ತು ಕ್ರಮಕ್ಕೆ ಸಿಎಂ ಸೂಚನೆ
ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವಂತೆ ಮತ್ತು ಪ್ರವಾಹದ ಅನಂತರ ಕೆಳ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸುತ್ತಮುತ್ತಲಿನ ಪ್ರದೇಶಗಳ ಹಳ್ಳಿಗಳಿಗೆ ಪಡಿತರ, ಆಹಾರ, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳ ಸರಬರಾಜಿನ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪಾಯದ ಬಗ್ಗೆ ಎಚ್ಚರಿಕೆ
ನಿರಂತರ ಮಳೆಯಾಗುತ್ತಿರುವ ನಡುವೆ ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಸೂಚನೆಯನ್ನು ಭಾರತ ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಸಂಜೆ 5.30ರವರೆಗೆ ಕೆಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ಉತ್ತರಾಖಂಡದ ಎಲ್ಲಾ 12 ಜಿಲ್ಲೆಗಳು, ಅಲ್ಮೋರಾ, ಬಾಗೇಶ್ವರ, ಚಮೋಲಿ, ಚಂಪಾವತ್, ಡೆಹ್ರಾಡೂನ್, ತೆಹ್ರಿ ಗರ್ವಾಲ್, ಹರಿದ್ವಾರ, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ಉತ್ತರಕಾಶಿ ಮತ್ತು ಪೌರಿ ಗರ್ವಾಲ್ಗಳ ಕೆಲವು ಭಾಗಗಳಲ್ಲಿ ಈ ಎಚ್ಚರಿಕೆ ನೀಡಲಾಗಿದೆ.