India-Pakistan Tensions: ಸಿಎ ಅಂತಿಮ, ಮಧ್ಯಂತರ, ಅರ್ಹತಾ ಕೋರ್ಸ್ ಪರೀಕ್ಷೆ ಮುಂದೂಡಿಕೆ
ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ದಾಳಿ ಮಾಡಿತ್ತು. ಜಮ್ಮು ವಿಮಾನ ನಿಲ್ದಾಣ, ಕೆಲವು ಮಿಲಿಟರಿ ನೆಲೆಗಳು ಸೇರಿದಂತೆ ಜಮ್ಮುವಿನ ಹಲವಾರು ಸ್ಥಳಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್ನ ಕೆಲವು ಭಾಗಗಳ ಮೇಲೆ ರಾಕೆಟ್, ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು.


ನವದೆಹಲಿ: ಭಾರತ-ಪಾಕ್ ನಡುವೆ ಉದ್ವಿಗ್ನತೆ(India-Pakistan Tensions) ತಾರಕಕ್ಕೇರಿರುವ ಬೆನ್ನಲ್ಲೇ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಮೇ 9 ರಿಂದ 14 ರವರೆಗೆ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ, ಮಧ್ಯಂತರ ಮತ್ತು ನಂತರದ ಅರ್ಹತಾ ಕೋರ್ಸ್ ಪರೀಕ್ಷೆಗಳ ಉಳಿದ ಪತ್ರಿಕೆಗಳನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ ಎಂದು ಐಸಿಎಐ(ICAI) ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
'ದೇಶದಲ್ಲಿನ ಉದ್ವಿಗ್ನತೆ ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಚಾರ್ಟರ್ಡ್ ಅಕೌಂಟೆಂಟ್ಗಳ ಅಂತಿಮ, ಮಧ್ಯಂತರ ಮತ್ತು ನಂತರದ ಅರ್ಹತಾ ಕೋರ್ಸ್ ಪರೀಕ್ಷೆಗಳ ಉಳಿದ ಪತ್ರಿಕೆಗಳನ್ನು 9 ಮೇ 2025 ರಿಂದ 14 ಮೇ 2025 ರವರೆಗೆ ಮುಂದೂಡಲಾಗಿದೆ ಎಂದು ಸಾಮಾನ್ಯ ಮಾಹಿತಿಗಾಗಿ ಘೋಷಿಸಲಾಗಿದೆ. ಪರಿಷ್ಕೃತ ದಿನಾಂಕಗಳನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು. ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ www.icai.org ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ' ಎಂದು ಐಸಿಎಐ ತಿಳಿಸಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಪಾಕಿಸ್ತಾನ 2 ಸಲ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿ, ತನ್ನ ಸ್ವಯಂರಕ್ಷಣೆ ಮಾಡಿಕೊಂಡು ಪ್ರತಿದಾಳಿ ನಡೆಸಿದೆ. ಈ ಮೂಲಕ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅಧಿಕೃತವಾಗಿಯೇ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗಿದೆ ಹಾಗೂ ಒಟ್ಟು 2 ಹಂತಗಳಲ್ಲಿ ಗುರುವಾರ ವಾಯು ಸಂಘರ್ಷ ನಡೆದಿದೆ.
ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ದಾಳಿ ಮಾಡಿತ್ತು. ಜಮ್ಮು ವಿಮಾನ ನಿಲ್ದಾಣ, ಕೆಲವು ಮಿಲಿಟರಿ ನೆಲೆಗಳು ಸೇರಿದಂತೆ ಜಮ್ಮುವಿನ ಹಲವಾರು ಸ್ಥಳಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್ನ ಕೆಲವು ಭಾಗಗಳ ಮೇಲೆ ರಾಕೆಟ್, ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಭಾರತವು ಈ ಮೂರೂ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಿದೆ ಹಾಗೂ ಎಸ್-400 ವಾಯುರಕ್ಷಣಾ ವ್ಯವಸ್ಥೆ 8 ಪಾಕ್ ಕ್ಷಿಪಣಿ ಹಾಗೂ 2 ಡ್ರೋನ್ ನಾಶ ಮಾಡಿದೆ. ಈ ಮೂಲಕ ಹಾನಿಯನ್ನು ತಡೆದಿದೆ.