Supreme Court: ಐಐಟಿ ಖರಗ್ಪುರ, ಶಾರದಾ ವಿವಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ; ಸುಪ್ರೀಂ ಕೋರ್ಟ್ನಿಂದ ಸ್ವಯಂಪ್ರೇರಿತ ವಿಚಾರಣೆ
ಐಐಟಿ ಖರಗ್ಪುರ ಮತ್ತು ಶಾರದಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಿನ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ. ತನಿಖೆಯಲ್ಲಿ ಯಾವುದೇ ತಪ್ಪು ಅಥವಾ ಸಾಂಸ್ಥಿಕ ವೈಫಲ್ಯ ಕಂಡುಬಂದರೆ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಸುಪ್ರೀಂ ಕೋರ್ಟ್

ನವದೆಹಲಿ: ಐಐಟಿ ಖರಗ್ಪುರ (IIT Kharagpur) ಮತ್ತು ಶಾರದಾ ವಿಶ್ವವಿದ್ಯಾಲಯದಲ್ಲಿ (Sharda University) ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ (Student Suicides) ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ. ತನಿಖೆಯಲ್ಲಿ ಯಾವುದೇ ತಪ್ಪು ಅಥವಾ ಸಾಂಸ್ಥಿಕ ವೈಫಲ್ಯ ಕಂಡುಬಂದರೆ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿರಿಯ ವಕೀಲೆ ಅಪರ್ಣಾ ಭಟ್ ಅವರನ್ನು ಈ ವಿಷಯದಲ್ಲಿ ಸಹಾಯಕ್ಕಾಗಿ ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗಿದೆ.
ಐಐಟಿ ಖರಗ್ಪುರ ವಿದ್ಯಾರ್ಥಿ ಆತ್ಮಹತ್ಯೆ
ಜುಲೈ 18ರಂದು ಐಐಟಿ ಖರಗ್ಪುರದ ಕ್ಯಾಂಪಸ್ನ ಹಾಸ್ಟೆಲ್ ಕೊಠಡಿಯಲ್ಲಿ ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿ ರೀತಂ ಮೊಂಡಾಲ್ (21) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೋಲ್ಕತ್ತಾದ ಈ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ, ಜುಲೈ 17ರ ರಾತ್ರಿ ಊಟದ ಬಳಿಕ ತನ್ನ ಕೊಠಡಿಗೆ ಹಿಂತಿರುಗಿದ್ದ. ಆತನ ಸಹಪಾಠಿಯೊಬ್ಬರ ಪ್ರಕಾರ, ಆ ರಾತ್ರಿ ಆತನ ವರ್ತನೆಯಲ್ಲಿ ಯಾವುದೇ ಅಸಾಮಾನ್ಯತೆ ಕಂಡಿರಲಿಲ್ಲ. ಬೆಳಗ್ಗೆ ಪದೇ ಪದೇ ಬಾಗಿಲು ಬಡಿದರೂ ಉತ್ತರ ಬಾರದಿದ್ದಾಗ, ಕ್ಯಾಂಪಸ್ನ ಔಟ್ಪೋಸ್ಟ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಬಾಗಿಲನ್ನು ಒಡೆದಾಗ ನೇಣು ಹಾಕಿಕೊಂಡಿರುವುದನ್ನು ಕಂಡಿದ್ದಾರೆ. ಐಐಟಿಯಿಂದ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶಾರದಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಆತ್ಮಹತ್ಯೆ
ಶಾರದಾ ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಜುಲೈ 18ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಹರಿಯಾಣದ ಗುರಗ್ರಾಮದ ಈ ವಿದ್ಯಾರ್ಥಿನಿ ಶಿಕ್ಷಕರಿಂದ ನಿರಂತರ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಇಬ್ಬರು ಶಿಕ್ಷಕರಾದ ಮಹೇಂದರ್ ಸರ್ ಮತ್ತು ಶೈರಗ್ ಮೇಡಮ್ ಕಾರಣ ಎಂದು ಆರೋಪಿಸಿರುವ ಕೈ ಬರಹದ ಪತ್ರ ಪತ್ತೆಯಾಗಿದೆ. ಫೊರೆನ್ಸಿಕ್ ತಂಡ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಸಿಟ್ಟಿನಲ್ಲಿ ಲೆಹೆಂಗಾ-ಬ್ಲೌಸ್ ಕತ್ತರಿಸಿ ಗ್ರಾಹಕನ ಅಟ್ಟಹಾಸ; ಈ ವಿಡಿಯೊ ನೋಡಿ
ಈ ಎರಡು ಘಟನೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿವೆ. ಸುಪ್ರೀಂ ಕೋರ್ಟ್ನ ಈ ಕ್ರಮವು ಸಂಸ್ಥೆಗಳ ಜವಾಬ್ದಾರಿಯನ್ನು ಪರಿಶೀಲಿಸಲಿದೆ.