ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Encounter In Chhattisgarh: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; 50 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ಮುಖಂಡನ ಹತ್ಯೆ

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 50 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ನಾಯಕನೊಬ್ಬ ಹತನಾಗಿದ್ದಾನೆ. ಹತನನ್ನು ತೆಲಂಗಾಣ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಚಟುವಟಿಕೆ ನಡೆಸುತ್ತಿದ್ದ, ಮೋಸ್ಟ್‌ ವಾಂಟೆಡ್‌ ಮಾವೋವಾದಿ ನಾಯಕ ನಾರ್‌ ಸಿಂಗಾಛಲಂ ಆಲಿಯಾಸ್‌ ಸುಧಾಕರ್‌ ಎಂದು ಗುರುತಿಸಲಾಗಿದೆ.

ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; ಮಾವೋವಾದಿ ಮುಖಂಡನ ಹತ್ಯೆ

ಸಾಂದರ್ಭಿಕ ಚಿತ್ರ.

Profile Ramesh B Jun 5, 2025 5:30 PM

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 50 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ನಾಯಕನೊಬ್ಬ (Maoist Leader) ಹತನಾಗಿದ್ದಾನೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ (Encounter In Chhattisgarh). ಛತ್ತೀಸ್‌ಗಢ ಬಿಜಾಪುರದ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹತನನ್ನು ತೆಲಂಗಾಣ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಚಟುವಟಿಕೆ ನಡೆಸುತ್ತಿದ್ದ, ಮೋಸ್ಟ್‌ ವಾಂಟೆಡ್‌ ಮಾವೋವಾದಿ ನಾಯಕ ನಾರ್‌ ಸಿಂಗಾಛಲಂ ಆಲಿಯಾಸ್‌ ಸುಧಾಕರ್‌ (Nar Singhachalam alias Sudhakar) ಎಂದು ಗುರುತಿಸಲಾಗಿದೆ.

ಸುಧಾಕರ್‌ನ ಹಡೆಮುರಿ ಕಟ್ಟಲು ಪೊಲೀಸರು ಹಲವು ಸಮಯಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ಆತ ಇದುವರೆಗೆ ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಆತನ ಸುಳಿವು ನೀಡಿದರೆ 50 ಲಕ್ಷ ರೂ. ಬಹುಮಾನ ಕೊಡುವುದಾಗಿಯೂ ಘೋಷಿಸಲಾಗಿತ್ತು. ಇದೀಗ ಕೊನೆಗೂ ಆತನನ್ನು ಹೊಡೆದುರುಳಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Naxal Encounter‌: ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; ನಕ್ಸಲ್‌ ಕಮಾಂಡರ್‌ ಸೇರಿ 30 ಮಾವೋವಾದಿಗಳ ಎನ್‌ಕೌಂಟರ್‌

ಗುಂಡಿನ ಚಕಮಕಿ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಆರ್‌ಜಿ, ಕೋಬ್ರಾ ಮತ್ತು ಎಸ್‌ಟಿಎಫ್ ಒಳಗೊಂಡ ಜಂಟಿ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ.

ಕಳೆದ ತಿಂಗಳು ಬಸ್ತಾರ್ ಮತ್ತು ಅಬುಜ್ಮದ್ ಅನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮಾವೋವಾದಿ ನಾಯಕ ಬಸವರಾಜುವನ್ನು ಹತ್ಯೆ ಮಾಡಲಾಗಿತ್ತು. ಈ ಎನ್‌ಕೌಂಟರ್ ನಾರಾಯಣಪುರ-ಬಿಜಾಪುರ ಗಡಿಯಲ್ಲಿ 50 ಗಂಟೆಗಳಿಗೂ ಹೆಚ್ಚು ಕಾಲ ನಡೆದಿತ್ತು. ಈ ವೇಳೆ ಅನೇಕ ಮಾವೋವಾದಿಗಳು ಶರಣಾಗಿದ್ದರು. ಇನ್ನು ಕಳೆದ ತಿಂಗಳ ಕೊನೆಯಲ್ಲಿ ಬಿಜಾಪುರ ಜಿಲ್ಲೆಯಲ್ಲಿ 28.50 ಲಕ್ಷ ರೂ. ಇನಾಮು ಹೊಂದಿದ್ದ 14 ಮಂದಿ ಸೇರಿದಂತೆ 24 ಮಾವೋವಾದಿಗಳು ಶರಣಾಗಿದ್ದರು.

"ಆಪರೇಷನ್ ಬ್ಲಾಕ್ ಫಾರೆಸ್ಟ್ ಪೂರ್ಣಗೊಂಡ ನಂತರ ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 54 ನಕ್ಸಲರನ್ನು ಬಂಧಿಸಲಾಗಿದೆ ಮತ್ತು 84 ನಕ್ಸಲರು ಶರಣಾಗಿದ್ದಾರೆ. 2026ರ ಮಾ. 31ರ ಮೊದಲು ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರ ದೃಢನಿಶ್ಚಯ ಮಾಡಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸುಕ್ಮಾ ಜಿಲ್ಲೆಯಲ್ಲಿ 18 ನಕ್ಸಲರು ಶರಣು

ಕೆಲವು ದಿನಗಳ ಹಿಂದೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮುಂದೆ 18 ನಕ್ಸಲರು ಶರಣಾಗಿದ್ದರು. ಅವರಲ್ಲಿ 10 ನಕ್ಸಲರು 38 ಲಕ್ಷ ರೂ. ಬಹುಮಾನವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ದೌರ್ಜನ್ಯದಿಂದ ನಿರಾಶೆಗೊಂಡ ನಕ್ಸಲರು ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದರು ಎಂದು ಸುಕ್ಮಾ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕಿರಣ್ ಚವಾಣ್ ಮಾಹಿತಿ ನೀಡಿದ್ದರು.

ಮೇ 21ರಂದು ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ 30 ನಕ್ಸಲರು ಹತರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿ ಭಾಗವಹಿಸಿದ್ದರು.