ದಲಿತ ಸಹಾಯಕಿ ನೇಮಕವಾಗಿದ್ದಕ್ಕೆ ಅಂಗನವಾಡಿಯೇ ಬಂದ್ ! 3 ತಿಂಗಳ ಬಳಿಕ ಕೊನೆಗೂ ಮಕ್ಕಳನ್ನು ಕಳುಹಿಸಲು ಒಪ್ಪಿದ ಪಾಲಕರು
Odisha News: ದಲಿತ ಸಹಾಯಕಿ ನೇಮಕವಾಗಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಬಂದ್ ಆಗಿದ್ದ ಒಡಿಶಾದ ಅಂಗನವಾಡಿಯೊಂದು ಇದೀಗ ಕಾರ್ಯಾಚರಿಸಲು ಸಜ್ಜಾಗಿದೆ. ಒಡಿಶಾದ ಕೇಂದ್ರಪಾರದ ನುಗಾಂವ್ ಗ್ರಾಮದ ಅಂಗನವಾಡಿಯೊಂದಕ್ಕೆ ಸಹಾಯಕಿಯಾಗಿ ದಲಿತ ಮಹಿಳೆ ನೇಮಕವಾದ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿತು. ಪಾಲಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿರಲಿಲ್ಲ.
ಅಂಗನವಾಡಿ ಕೇಂದ್ರ. -
ಭುವನೇಶ್ವರ, ಫೆ. 15: ನಾವು ಪ್ರಸ್ತುತ 21ನೇ ಶತಮಾನದಲ್ಲಿದ್ದರೂ ಈಗಲೂ 100 ವರ್ಷಗಳ ಹಿಂದಿನ ಮನಸ್ಥಿತಿ ಹೊಂದಿದ್ದೇವೆ ಎನ್ನುವುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. ದಲಿತ ಸಹಾಯಕಿ ನೇಮಕವಾಗಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಅಂಗವಾಡಿಗೆ ಬೀಗ ಜಡಿದ ಅಮಾನುಷ ಘಟನೆ ಒಡಿಶಾದಲ್ಲಿ (Odisha News) ನಡೆದಿದೆ. ಇದೀಗ ಸ್ಥಳೀಯಾಡಳಿತದ ಮಧ್ಯ ಪ್ರವೇಶದಿಂದ ಅಂಗನವಾಡಿಯ ಬಾಗಿಲು ತೆರೆಯುವಂತಾಗಿದೆ (Odisha Anganwadi). ಹೌದು, ಕೊನೆಗೂ ಸರ್ಕಾರದ ನೆರವಿನಿಂದ ಸುಮಾರು 86 ದಿನಗಳ ಬಳಿಕ ಅಂಗನವಾಡಿ ಕಾರ್ಯ ನಿರ್ವಹಿಸಲು ಸಜ್ಜಾಗಿದೆ. ಸದ್ಯ ಈ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಒಡಿಶಾದ ಕೇಂದ್ರಪಾರದ ನುಗಾಂವ್ ಗ್ರಾಮದ ಅಂಗನವಾಡಿಯೊಂದಕ್ಕೆ ಸಹಾಯಕಿಯಾಗಿ ದಲಿತ ಮಹಿಳೆ ನೇಮಕವಾದ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಅಂಗನವಾಡಿಯನ್ನು ಮುಚ್ಚಬೇಕಾಯಿತು. ಇದೀಗ ಸ್ಥಳೀಯಾಡಳಿತ ಮಧ್ಯ ಪ್ರವೇಶಿಸಿ ಅಂಗನವಾಡಿ ತೆರೆಯಲು ಮುಂದಾಗಿದೆ. ರಾಜ್ಯ ಮಹಿಳಾ ಆಯೋಗದ ಸದಸ್ಯೆ ಕಲ್ಪನಾ ಮಲ್ಲಿಕ್, ಸಬ್-ಕಲೆಕ್ಟರ್ ಅರುಣ್ ನಾಯಕ್ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮನೆ ಮನೆಗೆ ಭೇಟಿ ನೀಡಿ ಮುಖಂಡರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ಮೂಲಗಳು ತಿಳಿಸಿವೆ.
ಅಂಗನವಾಡಿ ಸಹಾಯಕಿಯ ಮಾತು:
#WATCH | Odisha: In Nuagaon village of Kendrapara, families are allegedly not sending their children to an Anganwadi after the appointment of a Dalit cook.
— ANI (@ANI) February 14, 2026
Sarmistha Sethi, the cook, says, "... I joined on 20 November last year. Students are not coming here because I belong to… pic.twitter.com/fkRZvua9rl
ಇದರ ಜತೆಗೆ ಸ್ಥಳೀಯ ಜಾನಪದ ಕಲಾ ಪ್ರಕಾರ ಪಾಲಾ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಕಲಾವಿದರು ಹಾಡುಗಳು ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಸಂದೇಶ ಸಾರಿದರು. ಇದರ ಪರಿಣಾಮವಾಗಿ ದಲಿತ ಮಹಿಳೆಯ ನೇಮಕದಿಂದ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಿರಲು ನಿರ್ಧರಿಸಿದ ಹಲವು ಗ್ರಾಮಸ್ಥರು ಇದೀಗ ಮನಸ್ಸು ಬದಲಾಯಿಸಿದ್ದಾರೆ. ಸೋಮವಾರದಿಂದ (ಫೆಬ್ರವರಿ 16) ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಹೆಣ್ಣು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಿದ ಮಾವ; 21ನೇ ಶತಮಾನದಲ್ಲೂ ನಾಚಿಗೇಡಿನ ಕೃತ್ಯ
3 ತಿಂಗಳ ಹಿಂದೆ ವಿವಾದ ಆರಂಭ
ಸುಮಾರು 3 ತಿಂಗಳ ಹಿಂದೆ ಅಂಗನವಾಡಿ ಕೇಂದ್ರಕ್ಕೆ ದಲಿತ ಮಹಿಳೆ ಸಹಾಯಕಿಯಾಗಿ ನೇಮಕವಾಗುವ ಮೂಲಕ ವಿವಾದ ಆರಂಭವಾಯಿತು. ಅದಕ್ಕೂ ಮೊದಲು ಹಲವು ತಿಂಗಳ ಕಾಲ ಈ ಹುದ್ದೆ ಖಾಲಿ ಇದ್ದರೂ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಕೊನೆಗೂ ಅಂಗನವಾಡಿಗೆ ಸಹಾಯಕಿಯೊಬ್ಬರು ಸಿಕ್ಕರು ಎಂದು ಅಧಿಕಾರಿಗಳು ಸಮಾಧಾನಪಟ್ಟುಕೊಳ್ಳುವಷ್ಟರಲ್ಲೇ ನಿಜವಾದ ಸಮಸ್ಯೆ ಆರಂಭವಾಯ್ತು.
ದಲಿತ ಮಹಿಳೆ ನೇಮಕವಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಮಕ್ಕಳ ಪಾಲಕರು ಸಿಡಿದೆದ್ದರು. ಹಲವರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಲು ನಿರಾಕರಿಸಿದರು. ದಲಿತ ಮಹಿಳೆ ತಯಾರಿಸಿರುವ ಆಹಾರವನ್ನು ತಮ್ಮ ಮಕ್ಕಳು ಸೇವಿಸಬೇಕು ಎನ್ನುವುದೇ ಅವರ ಈ ವರ್ತನೆಗೆ ಕಾರಣ. ಅದಾಗ್ಯೂ ಅವರ ಮನವೊಲಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗೆ ತಿಂಗಳುಗಟ್ಟಲೆ ಅಂಗನವಾಡಿಗೆ ಬೀಗ ಜಡಿಯಲಾಯಿತು.
ರಾಜಕೀಯ ಕೆಸರೆರಚಾಟ
ಕೂಡಲೇ ಈ ಸುದ್ದಿ ರಾಜ್ಯ, ದೇಶಾದ್ಯಂತ ಸುದ್ದಿಯಾಯ್ತು. ರಾಜಕೀಯ ಕೆಸರೆರಚಾಟವೂ ಆರಂಭವಾಯ್ತು. ಕಾಂಗ್ರೆಸ್ ನಾಯಕಿ ದೇಬಸ್ಮಿತಾ ಶರ್ಮಾ ಘಟನೆಯನ್ನು ಭಯಾನಕ ಎಂದು ಬಣ್ಣಿಸಿ ಇದಕ್ಕೆ ರಾಜ್ಯ ಸರ್ಕಾರವನ್ನು ಹೊಣೆಯನ್ನಾಗಿಸಿದರು. ಮಲ್ಲಿಕಾರ್ಜುನ ಖರ್ಗೆ ಸಂಸತ್ನಲ್ಲೂ ಈ ಬಗ್ಗೆ ಪ್ರಸ್ತಾವಿಸಿ ಗಮನ ಸೆಳೆದರು. ಇದೀಗ ಕೊನೆಗೂ ವಿವಾದ ಬಗೆಹರಿದಿದೆ.