ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಂಜಾನ್‌ ದೇಣಿಗೆ ಹೆಸರಲ್ಲಿ ಭಯೋತ್ಪಾದನೆಗೆ ನೆರವು; ಅನಧಿಕೃತ ಸಂಸ್ಥೆಗಳ ವಿರುದ್ಧ ಕ್ರಮ

Ramadan Donations: ಭಯೋತ್ಪಾದನೆಗೆ ಹಣಕಾಸು ನೆರವು ತಡೆಯಲು ಅನಧಿಕೃತ ರಂಜಾನ್ ದೇಣಿಗೆಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅನುಮತಿ ಇಲ್ಲದೆ ಮನೆಮನೆಗೆ ಹೋಗಿ ಅಭಿಯಾನ ನಡೆಸುವುದು, ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಅಥವಾ ಡಿಜಿಟಲ್ ನಿಧಿ ಸಂಗ್ರಹಣಾ ಕಾರ್ಯಕ್ರಮಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಅನಧಿಕೃತ ರಂಜಾನ್ ದೇಣಿಗೆಗಳ ವಿರುದ್ಧ ಕಠಿಣ ಕ್ರಮ

ಸಾಂದರ್ಭಿಕ ಚಿತ್ರ -

Priyanka P
Priyanka P Feb 19, 2026 6:41 PM

ಶ್ರೀನಗರ, ಫೆ.19: ಭಯೋತ್ಪಾದನೆಗೆ ಹಣಕಾಸು ನೆರವು ತಡೆಯಲು ಅನಧಿಕೃತ ರಂಜಾನ್ ದೇಣಿಗೆಗಳ (Ramadan Donations) ವಿರುದ್ಧ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ರಂಜಾನ್ ದೇಣಿಗೆಗಳನ್ನು ಕಾನೂನುಬಾಹಿರ ಮತ್ತು ವಿಧ್ವಂಸಕ ಚಟುವಟಿಕೆಗಳಿಗೆ ತಿರುಗುವುದನ್ನು ತಡೆಯಲು ನಿರ್ದೇಶನಗಳನ್ನು ನೀಡಲಾಗಿದೆ. ವಿಶೇಷವಾಗಿ 2026ರ ರಂಜಾನ್ ಸಮಯದಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ತಡೆಯುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಅನುಮತಿ ಇಲ್ಲದೆ ಮನೆಮನೆಗೆ ಹೋಗಿ ಅಭಿಯಾನ ನಡೆಸುವುದು, ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಅಥವಾ ಡಿಜಿಟಲ್ ನಿಧಿ ಸಂಗ್ರಹಣಾ ಕಾರ್ಯಕ್ರಮಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಿಶ್ತ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಶರ್ಮಾ ಎಚ್ಚರಿಸಿದ್ದಾರೆ.

ರಂಜಾನ್ ಮಾಸದ ಅವಧಿಯಿಡೀ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಸಂಸ್ಥೆಗಳು ಹೈ ಅಲರ್ಟ್‌ನಲ್ಲಿರುವಂತೆ ಬಹು-ಪದರ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಧಾರ್ಮಿಕ ದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಅಕ್ರಮ ಹಣಕಾಸು ಜಾಲಗಳನ್ನು ತಡೆಗಟ್ಟಲು ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ.

Ramadan Eid 2025: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭ; ಏನಿದರ ಇತಿಹಾಸ? ಆಚರಣೆ ಹೇಗೆ?

ಈ ಕ್ರಮದ ಉದ್ದೇಶ ನಿಜವಾದ ದಾನಧರ್ಮ ಚಟುವಟಿಕೆಗಳನ್ನು ನಿರ್ಬಂಧಿಸುವುದಲ್ಲ. ಬದಲಾಗಿ, ರಂಜಾನ್‌ನ ಪವಿತ್ರತೆಯನ್ನು ಕಾಪಾಡುವುದು ಹಾಗೂ ಸಾರ್ವಜನಿಕ ಕೊಡುಗೆಗಳು ಅರ್ಹ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

ರಂಜಾನ್ -2026 ರ ಪವಿತ್ರ ತಿಂಗಳಲ್ಲಿ ದೇಣಿಗೆ ಸಂಗ್ರಹದ ಮೇಲಿನ ನಿಯಂತ್ರಣ, ಮೇಲ್ವಿಚಾರಣೆ ಎಂಬ ಶೀರ್ಷಿಕೆಯ ದಾಖಲೆಯಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳು, ದತ್ತಿ ಕೊಡುಗೆಗಳ ಸಂಗ್ರಹ ಮತ್ತು ಬಳಕೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ಖಚಿತಪಡಿಸಲು ಸಂರಚಿತ ಚಟುವಟಿಕೆ ಚೌಕಟ್ಟನ್ನು ರೂಪಿಸುತ್ತವೆ.

ಮಾರ್ಗಸೂಚಿಗಳ ಪ್ರಕಾರ, ರಂಜಾನ್ ಅವಧಿಯಲ್ಲಿ ದೇಣಿಗೆಗಳನ್ನು ಸಂಗ್ರಹಿಸಲು ಉದ್ದೇಶಿಸುವ ವ್ಯಕ್ತಿಗಳು, ಮಸೀದಿ ಸಮಿತಿಗಳು, ಟ್ರಸ್ಟ್‌ಗಳು, ಸರಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಅಥವಾ ಇತರ ಯಾವುದೇ ಸಂಘಟನೆಗಳು ನಿಗದಿತ ಕ್ರಮಗಳನ್ನು ಪಾಲಿಸಬೇಕು ಮತ್ತು ಅಗತ್ಯವಿರುವ ಸಂದರ್ಭಗಳಲ್ಲಿ ಸಂಬಂಧಿತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.

Mohammed Shami: ದೇಶಕ್ಕಾಗಿ ರಂಜಾನ್ ಉಪವಾಸ ಕೈಬಿಟ್ಟು ಪಂದ್ಯ ಆಡಿದ ಮೊಹಮ್ಮದ್ ಶಮಿ

ಅಸ್ಪಷ್ಟತೆಯನ್ನು ನಿವಾರಿಸಲು ಹಾಗೂ ಅನಧಿಕೃತ ನಿಧಿ ಸಂಗ್ರಹಣಾ ಅಭಿಯಾನಗಳನ್ನು ತಡೆಯಲು, ಸರಿಯಾದ ಗುರುತಿನ ಮಾಹಿತಿ, ದಾಖಲೆಪತ್ರಗಳು ಮತ್ತು ದೇಣಿಗೆ ಸಂಗ್ರಹಿಸುವ ಉದ್ದೇಶವನ್ನು ಕಡ್ಡಾಯಗೊಳಿಸಲಾಗಿದೆ. ಆಡಳಿತವು, ಎಲ್ಲಾ ದೇಣಿಗೆಗಳನ್ನು ಸರಿಯಾಗಿ ಲೆಕ್ಕಪತ್ರಗಳಲ್ಲಿ ದಾಖಲಿಸಿ, ಘೋಷಿಸಲಾದ ದಾನಧರ್ಮ ಅಥವಾ ಧಾರ್ಮಿಕ ಉದ್ದೇಶಗಳಿಗಷ್ಟೇ ಕಟ್ಟುನಿಟ್ಟಾಗಿ ಬಳಸಬೇಕು ಎಂದು ಒತ್ತಿಹೇಳಿದೆ.

ಸಾರ್ವಜನಿಕರು ಕೇವಲ ಅನುಮೋದಿತ ಮತ್ತು ಪರಿಶೀಲಿತ ಸಂಸ್ಥೆಗಳಿಗೆ ಮಾತ್ರ ದೇಣಿಗೆ ನೀಡಬೇಕು. ಯಾವುದೇ ಸಂಶಯಾಸ್ಪದ ಅಥವಾ ಅನಧಿಕೃತ ಸಂಗ್ರಹಣಾ ಚಟುವಟಿಕೆ ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.