ಅಮೆರಿಕ, ಇಸ್ರೇಲ್ ಎದುರು ನಾವು ಮಂಡಿಯೂರುವುದಿಲ್ಲ: ದೆಹಲಿಯಿಂದ ಎಚ್ಚರಿಕೆ ನೀಡಿದ ಇರಾನ್
ಅಮೆರಿಕ ಮತ್ತು ಇಸ್ರೇಲ್ ನಮ್ಮನ್ನು ಹೆದರಿಸಲು ಬಯಸುತ್ತವೆ. ಆದರೆ ನಾವು ಮಂಡಿಯೂರುವುದಿಲ್ಲ. ನಾವು ನಿರಂತರ ಹೋರಾಡುತ್ತೇವೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿದರು. ನವದೆಹಲಿಯಲ್ಲಿ ಶುಕ್ರವಾರ ಬ್ರಿಕ್ಸ್ ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಇರಾನ್ ಸಂಘರ್ಷದ ಕುರಿತು ಮಾತನಾಡಿ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಇಸ್ರೇಲ್ (Israel) ಮತ್ತು ಅಮೆರಿಕವನ್ನು (America) ಜೊತೆಯಾಗಿ ಇರಾನ್ (Iran war) ಎದುರಿಸುತ್ತಿದೆ. ಕಳೆದ ಮೇ ತಿಂಗಳ ಅಂತ್ಯದಿಂದ ಆರಂಭವಾಗಿರುವ ಯುದ್ಧದಲ್ಲಿ ಅವರ ವಿರುದ್ಧ ಯಶಸ್ವಿಯಾಗಿ ನಾವು ನಿಲ್ಲಲು ಸಾಧ್ಯವಾಗಿದೆ. ಅವರು ನಮ್ಮನ್ನು ನಿರಂತರ ಹೆದರಿಸಲು ಬಯಸುತ್ತಾರೆ. ಆದರೆ ನಾವು ಹೆದರುವುದಿಲ್ಲ.ಅವರ ಮುಂದೆ ನಾವು ಎಂದಿಗೂ ಮಂಡಿಯೂರುವುದಿಲ್ಲ. ಅವರು ನಮ್ಮ ಮೇಲೆ ಒತ್ತಡ ಹೇರಿದರೆ, ನಾವು ಹೋರಾಡುತ್ತೇವೆ. ನಾವು ಮಾನವ ಹಕ್ಕುಗಳ ಪ್ರತಿಪಾದಕರು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ (Iranian President Masoud Pezeshkian) ಹೇಳಿದರು. ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗ ಸಭೆಯಲ್ಲಿ (BRICS Summit) ಶುಕ್ರವಾರ ಅವರು ಮಾತನಾಡಿದರು.
ಬ್ರಿಕ್ಸ್ ಶೃಂಗ ಸಭೆಯ ಬಳಿಕ ಸಂಜೆ ಭಾರತದ ಧಾರ್ಮಿಕ ಮುಖಂಡರು, ಚಿಂತಕರು ಮತ್ತು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸ್ಕೃತಿ, ತಂತ್ರಜ್ಞಾನ, ವ್ಯಾಪಾರ, ವಿಜ್ಞಾನ ಮತ್ತು ಆರ್ಥಿಕತೆಯ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ವಿಷಯ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯು ಉಭಯ ದೇಶಗಳ ನಡುವೆ ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.
ಭಾರತ ಸರ್ಕಾರ ಮತ್ತು ಪ್ರಧಾನಿಯವರ ಅತ್ಯುತ್ತಮ ಆತಿಥ್ಯವನ್ನು ಶ್ಲಾಘಿಸುತ್ತೇನೆ ಎಂದ ಅವರು, ನಮ್ಮ ನಡುವೆ ಅತ್ಯುತ್ತಮ ಮಾತುಕತೆ ನಡೆದಿದೆ. ನಾವು ಒಟ್ಟಾಗಿ ಪರಸ್ಪರರ ಸಂಬಂಧಗಳು ಸಂಸ್ಕೃತಿ, ತಂತ್ರಜ್ಞಾನ, ವ್ಯಾಪಾರ, ವಿಜ್ಞಾನ, ಆರ್ಥಿಕತೆ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಮರುಜೀವ ನೀಡಬಹುದು ಎಂದು ತಿಳಿಸಿದರು.
From Bishkek to Delhi, the productive discussions continue.
— Narendra Modi (@narendramodi) September 11, 2026
Happy to have met Dr. Masoud Pezeshkian, the President of Iran. This visit is more special because it is his first visit to India.
We talked about the India-Iran friendship. We believe that we should move forward… pic.twitter.com/DtxWuhB9Ba
ಯುದ್ಧದ ವಿಷಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಹಾಗೂ ಇರಾನ್ ಅನ್ನು ಹೆದರಿಸಲು ಅವು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಇರಾನ್ ಎಂದಿಗೂ ಶರಣಾಗುವುದಿಲ್ಲ ಮತ್ತು ಪ್ರತಿಯಾಗಿ ಹೋರಾಡುತ್ತದೆ ಎಂದು ಅವರು ಹೇಳಿದರು.
ಅಮೆರಿಕ ಮತ್ತು ಇಸ್ರೇಲ್ ತಮ್ಮನ್ನು ತಾವು ಮಾನವ ಹಕ್ಕುಗಳ ಪ್ರತಿಪಾದಕರು ಎನ್ನುತ್ತಾರೆ. ವಾಸ್ತವದಲ್ಲಿ, ಅವರೇ ನಿಜವಾದ ಭಯೋತ್ಪಾದಕರು ಮತ್ತು ರಾಕ್ಷಸರು. ತಮ್ಮ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಒಂದೇ ಕ್ಷಣದಲ್ಲಿ 168 ಶಾಲಾ ಮಕ್ಕಳನ್ನು ಕೊಂದಿದ್ದಾರೆ. ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತೀರಾ? ಹಾಗಾದರೆ ಮನುಷ್ಯರನ್ನು ಕೊಲ್ಲುವ, ವಿಜ್ಞಾನಿಗಳ ಮೇಲೆ ಬಾಂಬ್ ದಾಳಿ ನಡೆಸುವ ಹಾಗೂ ಶಾಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡುವ ನಿಮ್ಮ ವಿಷಯವೇನು?" ಎಂದು ಪ್ರಶ್ನಿಸಿದರು.
ಧೈರ್ಯವಿದ್ದರೆ ಸೈನಿಕರು ಮತ್ತು ಮಿಲಿಟರಿ ಸಿಬ್ಬಂದಿಯೊಂದಿಗೆ ಮಾತ್ರ ಹೋರಾಡಿ. ಮೂಲಸೌಕರ್ಯ ಮತ್ತು ಜನರ ಜೀವನೋಪಾಯವನ್ನು ಏಕೆ ಗುರಿಯಾಗಿಸುತ್ತೀರಿ?. ಇರಾನ್ ಜನರು ಶರಣಾಗುವುದಿಲ್ಲ. ನಾವು ಮಾನವೀಯ ಮೌಲ್ಯಗಳನ್ನು ನಂಬುತ್ತೇವೆ ಮತ್ತು ಬದುಕಿರುವ ಪ್ರತಿಯೊಬ್ಬರೂ ಇಡೀ ಮಾನವಕುಲ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ನಂಬುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷರನ್ನು ಭೇಟಿಯಾದರು. ಎರಡು ವಾರಗಳಲ್ಲಿ ಇದು ಅವರಿಬ್ಬರ ಎರಡನೇ ಭೇಟಿಯಾಗಿದೆ. ಇದಕ್ಕೂ ಮೊದಲು ಅವರಿಬ್ಬರು ಆಗಸ್ಟ್ 31 ರಂದು ಬಿಷ್ಕೆಕ್ನಲ್ಲಿ ನಡೆದ ಎಸ್ಸಿಒ (SCO) ಶೃಂಗಸಭೆಯಲ್ಲಿ ಭೇಟಿಯಾಗಿದ್ದರು.
ಬ್ರಿಕ್ಸ್ ಸಂಬಂಧಿತ ಸಭೆಗಳಲ್ಲಿ ಇರಾನ್ನ ನಿರಂತರ ಮತ್ತು ಉನ್ನತ ಮಟ್ಟದ ಭಾಗವಹಿಸುವಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಧನ್ಯವಾದ ಅರ್ಪಿಸಿದರು. ಇಬ್ಬರು ನಾಯಕರು ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನ ಮಂತ್ರಿಗಳ ಕಚೇರಿಯ (PMO) ಪ್ರಕಟಣೆ ತಿಳಿಸಿದೆ.