ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿ? 20 ಸಂಸದರು ಬಿಜೆಪಿ ಸಂಪರ್ಕದಲ್ಲಿ ಎಂಬ ವರದಿಯಿಂದ ರಾಜಕೀಯ ಸಂಚಲನ

ಪಶ್ಚಿಮ ಬಂಗಾಳ ಚುನಾವಣಾ ಹಿನ್ನಡೆಯ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಹೆಚ್ಚುತ್ತಿರುವ ಸೂಚನೆಗಳು ಕಂಡುಬಂದಿವೆ. ಪಕ್ಷದ ಸುಮಾರು 20 ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ರಾಜಕೀಯ ಸಂಚಲನಕ್ಕೆ ಕಾರಣವಾಗಿವೆ. ಇದೇ ವೇಳೆ ಕೆಲವು ಸಂಸದರು ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿರುವ ಮಾಹಿತಿ ಪಕ್ಷದೊಳಗಿನ ಭಿನ್ನಮತದ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಟಿಎಂಸಿಯಲ್ಲಿ ಭಿನ್ನಮತ ಸ್ಫೋಟ? 20 ಸಂಸದರು ಬಿಜೆಪಿ ಸಂಪರ್ಕದಲ್ಲಿ ಎಂಬ ವರದಿ

ಮಮತಾ ಬ್ಯಾನರ್ಜಿ -

Profile
Sushmitha Jain Jun 8, 2026 1:20 PM

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (Assembly Elections) ತೃಣಮೂಲ ಕಾಂಗ್ರೆಸ್ (Trinamool Congress - TMC) ಅನುಭವಿಸಿದ ಹಿನ್ನಡೆಯ ಬಳಿಕ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗತೊಡಗಿದ್ದು, ಇದೀಗ ಪಕ್ಷದಲ್ಲಿ ಭಿನ್ನಮತದ ಚಟುವಟಿಕೆಗಳು ತೀವ್ರಗೊಂಡಿರುವ ಸೂಚನೆಗಳು ಕಂಡುಬರುತ್ತಿವೆ. ಪಕ್ಷದ ಕೆಲವು ಸಂಸದರು ಮತ್ತು ಶಾಸಕರು ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದು, ಬಿಜೆಪಿ (BJP) ಜತೆ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

ಮೂಲಗಳ ಪ್ರಕಾರ, ಟಿಎಂಸಿಯ ಹಿರಿಯ ಸಂಸದರೊಬ್ಬರು ಮುಂಬೈನಿಂದ ಕೋಲ್ಕತ್ತಾಗೆ ತೆರಳುವ ವೇಳೆ ಅನಿರೀಕ್ಷಿತವಾಗಿ ನವದೆಹಲಿಯಲ್ಲಿ ಕೆಲ ಗಂಟೆಗಳ ಕಾಲ ತಂಗಿದ್ದರು. ಈ ಅವಧಿಯಲ್ಲಿ ಅವರು ಕೆಲ ಪ್ರಮುಖ ವ್ಯಕ್ತಿಗಳನ್ನು ರಹಸ್ಯವಾಗಿ ಭೇಟಿ ಮಾಡಿ ಪಕ್ಷದ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೋಲ್ಕತ್ತಾ ಸುತ್ತಮುತ್ತಲಿನ ಕ್ಷೇತ್ರವನ್ನು ಪ್ರತಿನಿಧಿಸುವ ಈ ಸಂಸದರ ದೆಹಲಿ ಭೇಟಿ ಪಕ್ಷದೊಳಗಿನ ಅಸಮಾಧಾನದ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಪಕ್ಷದ ಸುಮಾರು 20 ಸಂಸದರು ಟಿಎಂಸಿ ನಾಯಕತ್ವದ ವಿರುದ್ಧ ಒಗ್ಗೂಡಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದ್ದು, ಪಕ್ಷದ ಕಾರ್ಯವೈಖರಿ ಮತ್ತು ನಿರ್ಧಾರಗಳ ವಿರುದ್ಧ ಧ್ವನಿ ಎತ್ತಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ, ಟಿಎಂಸಿಯ 41 ಸಂಸದರಲ್ಲಿ ಕನಿಷ್ಠ 20 ಮಂದಿ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಎಂಕೆ, ಎಎಪಿ ಇಲ್ಲದೆ ನಡೆಯಲಿದೆ ಇಂಡಿಯಾ ಮೈತ್ರಿಕೂಟ ಸಭೆ

ಇದರ ಜೊತೆಗೆ, ಪಕ್ಷದ 80ಕ್ಕೂ ಹೆಚ್ಚು ಶಾಸಕರ ಪೈಕಿ ಸುಮಾರು 60 ಮಂದಿ ಬಂಡಾಯ ನಾಯಕನಾಗಿ ಹೊರಹೊಮ್ಮಿರುವ ಶಾಸಕ ರಿತಬ್ರತ ಬ್ಯಾನರ್ಜಿ ಅವರ ಬಣಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಪಕ್ಷದ ಸಭೆಗಳು ಮತ್ತು ಕಾರ್ಯಕ್ರಮಗಳಿಗೆ ಗೈರುಹಾಜರಾಗಿರುವುದು ಪಕ್ಷದೊಳಗಿನ ಅಸಮಾಧಾನವನ್ನು ಸ್ಪಷ್ಟವಾಗಿ ತೋರಿಸಿದೆ.

ಈ ಬೆಳವಣಿಗೆಗಳ ನಡುವೆ, ಟಿಎಂಸಿಯ ನಟ-ಸಂಸದರಲ್ಲಿ ಒಬ್ಬರು ಕೂಡ ದೆಹಲಿಗೆ ಭೇಟಿ ನೀಡಿದ್ದು, ಅವರು ಕಳೆದ ಕೆಲವು ತಿಂಗಳುಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಉತ್ತರ ಬಂಗಾಳದ ಇಬ್ಬರು ಸಂಸದರ ಹೆಸರೂ ಪಕ್ಷದೊಳಗಿನ ಈ ಭಿನ್ನಮತದ ಬೆಳವಣಿಗೆಗಳೊಂದಿಗೆ ಕೇಳಿಬರುತ್ತಿದೆ.

ಈ ಎಲ್ಲಾ ಬೆಳವಣಿಗೆಗಳು ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಮಹತ್ವದ ಸಭೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲೇ ನಡೆದಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಟಿಎಂಸಿಯೊಳಗಿನ ಅಸಮಾಧಾನ ಹೊರಬಂದಿರುವುದು ಪಕ್ಷದ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಟಿಎಂಸಿಯ ಸಂಸತ್ತಿನ ಬಲ, ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣಗಳು ಹಾಗೂ ಇಂಡಿಯಾ ಮೈತ್ರಿಕೂಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಈ ವರದಿಗಳ ಬಗ್ಗೆ ಟಿಎಂಸಿ ನಾಯಕತ್ವದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.