ಭಾರತ ತಂಡದಲ್ಲಿ ಆಕಿಬ್ ನಬಿಗೆ ಚಾನ್ಸ್ ನೀಡಿದ್ದ ಅಗರ್ಕರ್, ಗಂಭೀರ್ ವಿರುದ್ಧ ವಾಸೀಮ್ ಜಾಫರ್ ಕಿಡಿ!
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಾಳು ಜಸ್ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಆಕಿಬ್ ನಬಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಸಿಸಿಐ ಸೆಲೆಕ್ಟರ್ ಅಜಿತ್ ಅಗರ್ಕರ್ ಹಾಗೂ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಮಾಜಿ ಟೆಸ್ಟ್ ಆರಂಭಿಕ ವಾಸೀಮ್ ಜಾಫರ್ ಕಿಡಿಕಾರಿದ್ದಾರೆ.
ಆಕಿಬ್ ನಬಿಗೆ ಚಾನ್ಸ್ ನೀಡಿದ್ದಕ್ಕೆ ವಾಸೀಮ್ ಜಾಫರ್ ಆಕ್ರೋಶ. -
ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಜಸ್ಪ್ರೀತ್ ಬುಮ್ರಾ (Jasprit Bumrah) ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ (Auqib Nabi) ಅವರನ್ನು ಆಯ್ಕೆ ಮಾಡಿರುವ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಭಾರತದ ಮಾಜಿ ಬ್ಯಾಟರ್ ವಾಸೀಮ್ ಜಾಫರ್ (Wasim Jaffer) ಟೀಕಿಸಿದ್ದಾರೆ. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಕಿಬ್ ನಬಿ, ಬುಮ್ರಾ ಸಂಪೂರ್ಣ ಫಿಟ್ನೆಸ್ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಗಾಲೆ ಮತ್ತು ಕೊಲಂಬೊದಲ್ಲಿ ನಡೆಯಲಿರುವ ಟೆಸ್ಟ್ಗಳಿಗೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆದರೆ, ಜಸ್ಪ್ರೀತ್ ಬುಮ್ರಾ ಅವರ ಬದಲಿಯಾಗಿ ಆಕಿಬ್ ನಬಿ ಆಯ್ಕೆಯಾಗುವಷ್ಟು ಅರ್ಹತೆ ಇನ್ನೂ ಗಳಿಸಿಲ್ಲ ಎಂಬ ಅಭಿಪ್ರಾಯವನ್ನು ವಾಸೀಮ್ ಜಾಫರ್ ವ್ಯಕ್ತಪಡಿಸಿದ್ದಾರೆ. ಆದರೂ, "ತಡವಾಗಿ ಅವಕಾಶ ಸಿಕ್ಕರೂ ಪರವಾಗಿಲ್ಲ, ಅವಕಾಶ ಸಿಗದಿರುವುದಕ್ಕಿಂತ ಇದು ಉತ್ತಮ" ಎಂದು ಅವರು ಹೇಳಿದ್ದಾರೆ.
ಇದು ಆಕಿಬ್ ನಬಿಗೆ ದೊಡ್ಡ ಸಾಧನೆ ಮತ್ತು ಅತ್ಯಂತ ಸಂತೋಷದ ಕ್ಷಣ. ಇಷ್ಟು ಉತ್ತಮ ಪ್ರದರ್ಶನ ನೀಡಿದ ನಂತರ ಅವರು ಬದಲಿ ಆಟಗಾರನಾಗಿ ತಂಡಕ್ಕೆ ಬರಬೇಕಾದ ಪರಿಸ್ಥಿತಿ ಬರಬಾರದು," ಎಂದು ವಾಸೀಮ್ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
IND vs SL: ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶುಭಮನ್ ಗಿಲ್ರ ಗಾಯದ ಭೀತಿ!
ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಆಕಿಬ್ ನಬಿ 60 ವಿಕೆಟ್ಗಳನ್ನು ಕಬಳಿಸಿ, ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂತಹ ಪ್ರದರ್ಶನದ ಆಧಾರದ ಮೇಲೆ ಅವರನ್ನು ಆರಂಭದಲ್ಲೇ ಭಾರತ ತಂಡಕ್ಕೆ ಆಯ್ಕೆ ಮಾಡಬೇಕಾಗಿತ್ತು, ಬದಲಿ ಆಟಗಾರನಾಗಿ ಅಲ್ಲ ಎಂದು ಜಾಫರ್ ಅಭಿಪ್ರಾಯಪಟ್ಟರು.
"ತಡವಾದರೂ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ. ಅವರು ಆರಂಭಿಕ ತಂಡದಲ್ಲೇ ಸ್ಥಾನ ಪಡೆಯಲು ಸಂಪೂರ್ಣ ಅರ್ಹರಾಗಿದ್ದರು. ಅವರಿಗಾಗಿ ನನಗೆ ತುಂಬಾ ಸಂತೋಷವಾಗಿದೆ," ಎಂದು ಜಾಫರ್ ಹೇಳಿದ್ದಾರೆ. ಇದೀಗ ಆಕಿಬ್ ನಬಿ, ಕೊಲಂಬೊದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧ ನಡೆಯಲಿರುವ ಭಾರತ ತಂಡದ ಮೂರು ದಿನಗಳ ಅಭ್ಯಾಸ ಪಂದ್ಯದ ಮುನ್ನ ನೆಟ್ಗಳಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ.
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್ ಗವಾಸ್ಕರ್!
ದೇಶಿ ಕ್ರಿಕೆಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದ ಆಕಿಬ್ ನಬಿ, 2026ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಒಪ್ಪಂದ ಪಡೆದಿದ್ದರು. ಆದರೆ ಐದು ಪಂದ್ಯಗಳಲ್ಲಿ ಆಡಿದರೂ ಅವರಿಗೆ ಒಂದೇ ಒಂದು ವಿಕೆಟ್ ಕೂಡ ಸಿಗಲಿಲ್ಲ. ಇದರ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ 'ಎ' ತಂಡದಲ್ಲೂ ಅವರು ಸ್ಥಾನ ಪಡೆದಿದ್ದರು. ಅಲ್ಲಿ ನಡೆದಿದ್ದ ಎರಡು ನಾಲ್ಕು ದಿನಗಳ ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಕಬಳಿಸಿ ಗಮನ ಸೆಳೆದರು. ಆ ಸರಣಿಯನ್ನು ಭಾರತ 'ಎ' ತಂಡ 1-0 ಅಂತರದಿಂದ ತನ್ನದಾಗಿಸಿಕೊಂಡಿತ್ತು.
ಇದಕ್ಕೂ ಮುನ್ನ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಕಿಬ್ ನಬಿ ನೆಟ್ ಬೌಲರ್ ಆಗಿ ಭಾರತ ತಂಡದೊಂದಿಗೆ ಇದ್ದರು. ಇದೀಗ ಅವರ ನಿರಂತರ ಪರಿಶ್ರಮ ಮತ್ತು ದೇಶಿ ಕ್ರಿಕೆಟ್ನಲ್ಲಿನ ಉತ್ತಮ ಪ್ರದರ್ಶನವನ್ನು ಪರಿಗಣಿಸಿರುವ ಆಯ್ಕೆ ಸಮಿತಿ, ಮೊದಲ ಬಾರಿ ಭಾರತ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಅವರಿಗೆ ಅಧಿಕೃತ ಸ್ಥಾನ ನೀಡಿದೆ.