IND vs ENG: ಹೆಡಿಂಗ್ಲೆ ಟೆಸ್ಟ್ ಸೋಲಿನ ಬಳಿಕ ಗೌತಮ್ ಗಂಭೀರ್ಗೆ ರವಿ ಶಾಸ್ತ್ರಿ ಮಹತ್ವದ ಸಲಹೆ!
ಹೆಡಿಂಗ್ಲೆ ಟೆಸ್ಟ್ನಲ್ಲಿ ಭಾರತದ ಸೋಲಿನ ನಂತರ ತಂಡದ ದುರ್ಬಲ ಫೀಲ್ಡಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ನಿರೂಪಕ ರವಿಶಾಸ್ತ್ರಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಕಟ್ಟುನಿಟ್ಟಿನ ಮನೋಭಾವ ಅಳವಡಿಸಿಕೊಳ್ಳುವಂತೆ ಮುಖ್ಯ ಕೋಚ್ ಗೌತಮ್ ಗಂಭೀರಗ್ಗೆ ಸಲಹೆ ನೀಡಿದ್ದಾರೆ.

ಗೌತಮ್ ಗಂಭರ್ಗೆ ಮಹತ್ವದ ಸಲಹೆ ನೀಡಿದ ರವಿ ಶಾಸ್ತ್ರಿ.

ಲೀಡ್ಸ್: ಇಲ್ಲಿನ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡ ಐದು ವಿಕೆಟ್ಗಳ ಸೋಲಿನ ನಂತರ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ತಂಡದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಕಠಿಣ ಮನೋಭಾವ ಅಳವಡಿಸಿಕೊಳ್ಳುವಂತೆ ಅವರು ಹೊಸ ಕೋಚ್ ಗೌತಮ್ ಗಂಭೀರ್ಗೆ (Gautam Gambhir) ಮನವಿ ಮಾಡಿದ್ದಾರೆ. ಗಂಭೀರ್ ತಂಡದ ಸಮಸ್ಯೆಗಳನ್ನು ಪತ್ತೆ ಮಾಡಿ ಎತ್ತಿ ಹಿಡಿಯಬೇಕು ಮತ್ತು ಪದೇ ಪದೇ ತಪ್ಪುಗಳನ್ನು ಮಾಡುತ್ತಿರುವ ಆಟಗಾರರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅಗತ್ಯವಿದ್ದರೆ, ಕೆಲವು ಆಟಗಾರರನ್ನು ಸಹ ಖಂಡಿಸಬೇಕು ಎಂದು ಶಾಸ್ತ್ರಿ ಸೂಚಿಸಿದ್ದಾರೆ.
ಈ ಪಂದ್ಯದಲ್ಲಿ ಫೀಲ್ಡಿಂಗ್ನಲ್ಲಿನ ಭಾರತ ತಂಡದ ತಪ್ಪುಗಳು ಮುನ್ನೆಲೆಗೆ ಬಂದಿವೆ. ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್ನಲ್ಲಿಯೇ ಭಾರತ ತಂಡದ ಆಟಗಾರರು ಐದು ಕ್ಯಾಚ್ಗಳನ್ನು ಕೈಬಿಟ್ಟಿದ್ದರು. ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಇಡೀ ಪಂದ್ಯದಲ್ಲಿ ನಾಲ್ಕು ಕ್ಯಾಚ್ಗಳನ್ನು ಬಿಟ್ಟಿದ್ದರು. ಇದು ಕೂಡ ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಇದರಿಂದಾಗಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಕಮ್ಬ್ಯಾಕ್ ಮಾಡಲು ಸಾಧ್ಯವಾಗಿತ್ತು. ಇದರ ಲಾಭವನ್ನು ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಪಡೆದಿತ್ತು. ಜೈಸ್ವಾಲ್ ನೀಡಿದ್ದ ಜೀವದಾನದಿಂದ ಬೆನ್ ಡಕೆಟ್ ಪ್ರಥಮ ಇನಿಂಗ್ಸ್ನಲ್ಲಿ ಅರ್ಧಶತಕ ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದರು. ಜೈಸ್ವಾಲ್ ಅವರ ಕಳಪೆ ಫೀಲ್ಡಿಂಗ್ನಿಂದಾಗಿ ಒಲ್ಲಿ ಪೋಪ್ ಕೂಡ ಪ್ರಥಮ ಇನಿಂಗ್ಸ್ನಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು.
IND vs ENG: ಎರಡನೇ ಟೆಸ್ಟ್ಗೂ ಮುನ್ನ ಇಂಗ್ಲೆಂಡ್ನಿಂದ ತವರಿಗೆ ಮರಳಿದ ಟೀಮ್ ಇಂಡಿಯಾ ಯುವ ವೇಗಿ?
ರವಿಶಾಸ್ತ್ರಿ ಹೇಳಿದ್ದೇನು?
ಪಂದ್ಯದ ನಂತರ ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವಿಶಾಸ್ತ್ರಿ, "ಇದರಲ್ಲಿ ಕೋಚಿಂಗ್ ಸಿಬ್ಬಂದಿಯ ಪಾತ್ರವೂ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಪಂದ್ಯದ ಸಕಾರಾತ್ಮಕ ಅಂಶಗಳನ್ನು ಖಂಡಿತವಾಗಿಯೂ ತೆಗೆದುಕೊಳ್ಳಬೇಕು. ನಾಯಕನಾಗಿ ಶುಭಮನ್ ಗಿಲ್ ತಮ್ಮ ಪಾತ್ರಕ್ಕಿಂತ ಹೆಚ್ಚಿನದನ್ನು ನೀಡಿದ್ದಾರೆ. ಅವರು ಒಂದು ಶತಕ ಗಳಿಸಿದರು ಮತ್ತು ಈ ಪಂದ್ಯದಲ್ಲಿ ಒಟ್ಟು ಐದು ಶತಕಗಳು ದಾಖಲಾಗಿವೆ. ಆದರೆ ನೀವು ಮೂಲಭೂತ ಸಂಗತಿಗಳನ್ನು ಸುಧಾರಿಸಬೇಕು. ಕ್ಯಾಚ್ಗಳನ್ನು ಕೈ ಚೆಲ್ಲುವುದು ಸೇರಿದಂತೆ ಕೆಲವು ವಿಷಯಗಳು ನಾಯಕನ ನಿಯಂತ್ರಣದಲ್ಲಿರುವುದಿಲ್ಲ. ಇಲ್ಲಿ ತಂಡವು ಒಟ್ಟಾಗಿ ಶ್ರಮಿಸಬೇಕಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
IND vs ENG: ಇಂಗ್ಲೆಂಡ್ ಎದುರು ಮೊದಲನೇ ಟಸ್ಟ್ ಪಂದ್ಯದಲ್ಲಿಯೇ ಎಡವಿದ ಭಾರತ!
ಗೌತಮ್ ಗಂಭೀರ್ಗೆ ಶಾಸ್ತ್ರಿ ಸಲಹೆ
"ನೀವು ಬ್ಯಾಟ್ ಮಾಡಲು ಬಂದಾಗ, ನಿಮ್ಮ ವಿಕೆಟ್ಗೆ ಪ್ರಾಮುಖ್ಯತೆ ನೀಡಿ. ನೀವು 550-600 ರನ್ಗಳನ್ನು ಕಲೆ ಹಾಕುವ ಅವಕಾಶವನ್ನು ಹೊಂದಿದ್ದರೆ, ಇದನ್ನು ಕಳೆದುಕೊಳ್ಳುವುದು ಸರಿಯಲ್ಲ. ಈ ಸಂದರ್ಭಗಳಲ್ಲಿ ಕೋಚ್ ಕೆಲವೊಮ್ಮೆ ತುಂಬಾ ಕಟ್ಟುನಿಟ್ಟಾಗಿರಬೇಕಾಗುತ್ತದೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಕಟ್ಟುನಿಟ್ಟಾಗಿ ವರ್ತಿಸಬೇಕಾಗುತ್ತದೆ. ಕೆಲವು ಆಟಗಾರರಿಗೆ ನೇರವಾಗಿ ಎಚ್ಚರಿಕೆ ನೀಡುವುದು ಅವಶ್ಯಕ," ಎಂದು ರವಿ ಶಾಸ್ತ್ರಿ ನೂತನ ಕೋಚ್ ಗೌತಮ್ ಗಂಭೀರ್ಗೆ ಸಲಹೆ ನೀಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ಯಾವಾಗ?
ಮೊದಲನೇ ಟೆಸ್ಟ್ ಪಂದ್ಯವನ್ನು ಸೋತು ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಪಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ, 0-1 ಹಿನ್ನಡೆಯನ್ನು ಅನುಭವಿಸಿದೆ.ಇದೀಗ ಉಭಯ ತಂಡಗಳು ಜುಲೈ 2 ರಂದು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿವೆ.